Advertisement

ರೈತರು- ಜನರ ಅಭಿವೃದ್ದಿಗೆ ಯಡಿಯೂರಪ್ಪ ಯಾವುದೇ ರೀತಿ ಹಿಂದೆ ಬಿದ್ದಿಲ್ಲ: ಅಮಿತ್ ಶಾ

03:08 PM Jan 17, 2021 | Team Udayavani |

ಬಾಗಲಕೋಟೆ: ರೈತರು- ಜನರ ಅಭಿವೃದ್ದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಾವುದೇ ರೀತಿಯಲ್ಲೂ ಹಿಂದೆ ಬಿದ್ದಿಲ್ಲ. ಕೇಂದ್ರದ ಎಲ್ಲಾ ಯೋಜ‌ನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪಸರ್ಕಾರದ ಆಡಳಿತವನ್ನು ಹಾಡಿ ಹೊಗಳಿದರು.

Advertisement

ಜಿಲ್ಲೆಯ ಕೆರಕಲಮಟ್ಟಿಯಲ್ಲಿ ನಿರಾಣಿ ಸಂಸ್ಥೆಯ ಕಾರ್ಖಾನೆಗೆ ಚಾಲನೆ ನೀಡಿದ ಬಳಿಕ ಅಮಿತ್ ಶಾ ಮಾತನಾಡಿದರು.

ಬಾಗಲಕೋಟೆ ಕ್ಷೇತ್ರದ ಪುಣ್ಯಭೂಮಿಗೆ ವಂದಿಸುತ್ತೇನೆ ಎಂದು ಭಾಷಣ ಆರಂಭಿಸಿದ ಅವರು, ಇಲ್ಲಿಯ ಜನರು ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ರೈತರಿಗೆ ಕೋಟಿ ಕೋಟಿ ವಂದನೆಗಳು. ಮಕರ ಸಂಕ್ರಾಂತಿ ರೈತರ ಪಾಲಿನ ದೊಡ್ಡ ಹಬ್ಬ, ಸೂರ್ಯ ಪಥ ಬದಲಿಸುವ ಸಮಯ. ರೈತರಿಗೆ ಸಂಕ್ರಾಂತಿಯ ಶುಭ ಕಾಮನೆಗಳು ಎಂದರು.

ಎಥೆನಾಲ್ ಮೂಲಕ ಇಂಧನ ಸಮಸ್ಯೆ ಪರಿಹಾರದ ಕೆಲಸವಾಗಲಿದೆ. ಈ ನಿಟ್ಟಿನಲ್ಲಿ ನಿರಾಣಿ ಗ್ರೂಪ್ಸ್‌ ಕೆಲಸ ಮಾಡಲಿದೆ. ಎಥೆನಾಲ್ ಘಟಕಕ್ಕಿದ್ದ ಜಿಎಸ್‌ಟಿ ಕಡಿತಗೊಳಿಸಿದ್ದೇವೆ. ಎಥೆನಾಲ್‌ನಿಂದ ಇಂಧನ ಆಮದು ಇಳಿಕೆಯಾಗಲಿದೆ ಎಂದರು.

Advertisement

ಕರ್ನಾಟಕ ಜನರು 2014-2019 ರಲ್ಲಿ ನರೇಂದ್ರ ಮೋದಿಯವರಿಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ಮುಂಬೈ ಕರ್ನಾಟಕ ಕೂಡ ಬಿಜೆಪಿಯನ್ನ ಬೆಂಬಲಿಸುತ್ತ ಬಂದಿದೆ. ನಾವು ಅವರಿಗೆ ಆಭಾರಿಯಾಗಿದ್ದೇವೆ ಎಂದರು.

ಇದನ್ನೂ ಓದಿ:ಕೆವಾಡಿಯಾ ಏಕತಾ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಪ್ರಧಾನಿ ಚಾಲನೆ

ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದಾಗ, ಕಾಂಗ್ರೆಸ್‌ನವರು ನಮ್ಮನ್ನು ಗೇಲಿ ಮಾಡಿದ್ದರು. ಆದರೆ, ಈಗ ಕೇಂದ್ರದಿಂದ ರೈತರ ಆದಾಯ ದ್ವಿಗುಣಗೊಳಿಸಲು ಕೆಲಸವಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಹಣ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಮಂಡಿಗಳಲ್ಲಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ರೈತರಿಗಾಗಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ರೈತರ ಪರವಾಗಿ ಮಾತನಾಡಲು ಆರಂಭಿಸಿರುವ ಕಾಂಗ್ರೆಸ್ ನಾಯಕರಿಗೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ನೀವೇಕೆ ರೈತರಿಗೆ ವರ್ಷಕ್ಕೆ ರೂ. 6,000 ಗಳನ್ನು ನೀಡಲಿಲ್ಲ? ನೀವು ಅಧಿಕಾರದಲ್ಲಿದ್ದಾಗ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಅಥವಾ ಎಥೆನಾಲ್ ನೀತಿಯನ್ನೇ ತಿದ್ದುಪಡಿ ಮಾಡಲಿಲ್ಲ? ಏಕೆಂದರೆ ನಿಮ್ಮ ಉದ್ದೇಶ ಸರಿಯಾಗಿಲ್ಲ ಎಂದು ಶಾ ಕಿಡಿಕಾರಿದರು.

ಜಮ್ಮು ಕಾಶ್ಮೀರದಲ್ಲಿ 371 ಆರ್ಟಿಕಲ್ ತೆಗೆಯುವ ಧೈರ್ಯ ಯಾರೂ ಮಾಡಿರಲಿಲ್ಲ. ಮೋದಿಯವರು ಅದನ್ನು ರದ್ದು ಮಾಡಿದರು. ಈಗ ಕಾಶ್ಮೀರ ಯಾವತ್ತೂ ನಮ್ಮದೇ ಎಂದರು.

ಬಾಗಲಕೋಟೆಯ ಪುಣ್ಯಭೂಮಿಯಲ್ಲಿ ನಿಂತು ಮನವಿ ಮಾಡುವೆ ಬಿಜೆಪಿ, ಮೋದಿ, ಎಲ್ಲರ‌ ಮೇಲೆಯೂ‌ ನಿಮ್ಮ ಆಶೀರ್ವಾದವಿರಲಿ. ಆತ್ಮನಿರ್ಭರ ಭಾರತಕ್ಕೆ ನಿಮ್ಮ ಆಶೀರ್ವಾದವಿರಲಿ ಎಂದು ಅಮಿತ್ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next