Advertisement

ಹವ್ಯಕರ ಮನೆ ಊಟ

07:58 PM Dec 01, 2019 | Sriram |

ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಮಾಡುವ ಊಟಕ್ಕೆ ಅದರದ್ದೇ ಆದ ವಿಶೇಷ ಇದೆ. ಅದರಲ್ಲೂ ಹವ್ಯಕ ಬ್ರಾಹ್ಮಣರ ಮನೆಯ ಊಟ ಅಂದ್ರೆ ಕೇಳಬೇಕಾ?, ಅಕ್ಕಿರೊಟ್ಟಿ, ಚಪಾತಿ, ತರಕಾರಿ, ಸೊಪ್ಪಿನ ಪಲ್ಯ, ತಂಬುಳಿ ಹೀಗೆ… ಹಲವು ಬಗೆಯ ಪದಾರ್ಥಗಳು ಇರುತ್ತದೆ. ಇದೆಲ್ಲವನ್ನೂ ತಿನ್ನೋಕೆ ಬಾಳೆಎಲೆ ಬೇಕೇಬೇಕು. ಇಂತಹ ಅಪ್ಪಟ ಮಲೆನಾಡಿನ ಮನೆ ಊಟ ಸವಿಯಬೇಕೆಂದ್ರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಭಟ್ಟರ ಹೋಟೆಲ್‌ಗೆ ಬರಬೇಕು.

Advertisement

ಹೌದು, ಶಿರಸಿ ಮೂಲದ, ಕುಮಟಾ ತಾಲೂಕಿನ ಯಲವಳ್ಳಿಯ ಪರಮೇಶ್ವರ್‌ ರಾಮಕೃಷ್ಣ ಹೆಗಡೆ, ಅಪ್ಪಟ ಮಲೆನಾಡಿನ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಮನೆಗಳಲ್ಲಿ ಮಾಡುವ ಊಟವನ್ನು ಉಣಬಡಿಸುವ ಸಲುವಾಗಿ ಹೋಟೆಲ್‌ ಪ್ರಾರಂಭಿಸಿದ್ದಾರೆ. ಎಲೆಕ್ಟಾನಿಕ್ಸ್‌ ಡಿಪ್ಲೊಮಾ ಮಾಡಿರುವ ಹೆಗಡೆಯವರು, ಬೆಂಗಳೂರಿನಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ನಗರದ ಸಹವಾಸವೇ ಬೇಡ ಎಂದು, ಊರಿಗೆ ವಾಪಸ್ಸಾಗಿದ್ದಾರೆ.

ಎರಡು ವರ್ಷ ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಹೆಗಡೆಯವರು, ನಂತರ ತೋಟದ ಜೊತೆ ಬೇರೆ ಉದ್ಯೋಗ ಮಾಡಬೇಕೆಂದು ಯೋಚಿಸಿ, ತಮ್ಮ ತೋಟದಲ್ಲೇ ಬೆಳೆಯುವ ಬಾಲೆಎಲೆ, ತರಕಾರಿ, ಸೊಪ್ಪು, ಅಕ್ಕಿ, ಮುಂತಾದವುಗಳನ್ನು ಬಳಸಿಕೊಂಡು ಕುಮಟಾದಲ್ಲಿ ಮೂರು ನಾಲ್ಕು ವರ್ಷಗಳ ಹಿಂದೆ ಪುಟ್ಟದಾಗಿ ಹೋಟೆಲ್‌ಅನ್ನು ಪ್ರಾರಂಭಿಸಿದ್ದರು. ಈಗಾಗಲೇ ಹತ್ತಾರು ಹೋಟೆಲ್‌ಗ‌ಳು ಇದ್ದ ಕುಮಟಾದಲ್ಲಿ ವಿಶೇಷವಾಗಿ ಏನಾದ್ರೂ ಮಾಡಬೇಕೆಂದುಕೊಂಡು, ಅಪ್ಪಟ ಮಲೆನಾಡಿನ ಊಟವನ್ನೇ ಗ್ರಾಹಕರಿಗೆ ಉಣಬಡಿಸುತ್ತಿದ್ದಾರೆ.

ತಂಬುಳಿ, ಊಟ ವಿಶೇಷ:
ಹೋಟೆಲ್‌ನಲ್ಲಿ ತಿಂಡಿ ಮಾಡಲಾಗುತ್ತದೆ. ಆದ್ರೂ ಊಟಕ್ಕೇ ಹೆಚ್ಚು ಪ್ರಾಧಾನ್ಯತೆ. ಕುಮಟಾ ಪಟ್ಟಣದಲ್ಲಿನ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಮಾಧ್ಯಮದವರು, ಮಧ್ಯಾಹ್ನದ ಊಟಕ್ಕೆ ಹೆಗಡೆಯವರ ಹೋಟೆಲಿಗೇ ಹೆಚ್ಚಾಗಿ ಬರುತ್ತಾರೆ. ಹವ್ಯಕರ ಮನೆಯ ಪ್ರಮುಖ ಖಾದ್ಯವಾಗಿರುವ ತಂಬುಳಿ ಇಲ್ಲಿನ ವಿಶೇಷ. ಜೀರಿಗೆ, ಎಳ್ಳು, ಸಾಸಿವೆ, ಒಣ ಮೆಣಸು, ಕಾಯಿತುರಿ, ಔಷಧಿ ಗುಣವುಳ್ಳ ಪದಾರ್ಥಗಳನ್ನು ಬಳಸಿ ಮಾಡಿದ ಒಂದೆಲಗ, ಮಜ್ಜಿಗೆ, ಪಲಾಕ್‌ ತಂಬಳಿ ಗ್ರಾಹಕರ ಮೆಚ್ಚುಗೆ ಗಳಿಸಿದೆ.

ಬಾಲೆಎಲೆ ವಿಶೇಷ:
ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಿರುವ ಪರಮೇಶ ಹೆಗಡೆಯವರು, ತಿಂಡಿ, ಊಟ ಎಲ್ಲದಕ್ಕೂ ಬಾಲೆಎಲೆಯನ್ನೇ ಬಳಸುತ್ತಾರೆ.

Advertisement

ಗ್ರಾಹಕರ ಹುಟ್ಟಹಬ್ಬಕ್ಕೆ ಒಂದು ಸ್ವೀಟು:
ಹೋಟೆಲ್‌ಗೆ ಬರುವ ಗ್ರಾಹಕರ ಹುಟ್ಟಿದ ಹಬ್ಬ ಇದ್ರೆ, ಅವರ ಬಳಿ ಇಂತಿಷ್ಟು ಹಣ ಪಡೆದು, ಅವರಿಗೆ ಇಷ್ಟವಾದ ಯಾವುದಾದ್ರೂ ಒಂದು ಸ್ವೀಟ್‌ ಮಾಡಿ ಎಲ್ಲಾ ಗ್ರಾಹಕರಿಗೆ ಬಡಿಸುತ್ತಾರೆ. ಇದರಿಂದ, ಹುಟ್ಟಿದ ಹಬ್ಬ ಆಚರಿಸಿಕೊಂಡವರಿಗೂ ಒಂದು ಆಶೀರ್ವಾದ ಸಿಕ್ಕಂತೆ ಆಗುತ್ತದೆ ಎಂಬುದು ಹೆಗಡೆಯವರ ಮಾತು.

ಹೋಟೆಲ್‌ ತಿಂಡಿ:
ದೋಸೆ, ಚಪಾತಿ, ಬನ್ಸ್‌, ಪೂರಿ, ರೈಸ್‌ಬಾತ್‌… ಹೀಗೆ ಪ್ರತಿದಿನ ಒಂದೊಂದು ತಿಂಡಿ ಮಾಡಲಾಗುತ್ತೆ. ದರ 20 ರೂ.. ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮಾತ್ರ.

ಅಪ್ಪಟ ಮಲೆನಾಡಿನ ಊಟ:
ಚಪಾತಿ, ಪೂರಿ ಊಟದ ಜೊತೆ ಉತ್ತರ ಕನ್ನಡ, ಅದರಲ್ಲೂ ಹವ್ಯಕ ಬ್ರಾಹ್ಮರ ಮನೆಯಲ್ಲಿ ಮಾಡುವ ರೊಟ್ಟಿ ಊಟ ಸಿಗುತ್ತೆ. ರೊಟ್ಟಿ ಜೊತೆ ಎರಡೂ ತರ ರೈಸ್‌, ಸಾಂಬಾರು, ತಂಬುಳಿ, ಹಸಿ(ರೈತ), ಪಲ್ಯ, ಸ್ವೀಟ್‌ ಕೊಡ್ತಾರೆ. ದರ 50 ರೂ.

ಹೋಟೆಲ್‌ ಸಮಯ:
ಬೆಳಗ್ಗೆ 9 ರಿಂದ ಸಂಜೆ 5ರವರೆಗೆ. ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ರವರೆಗೆ ಊಟ ಸಿಗುತ್ತದೆ. ಭಾನುವಾರ ರಜೆ.

ಹೋಟೆಲ್‌ ವಿಳಾಸ:
ಗಾಂಧಿ ನಗರ ಸಮೀಪ, ಮಣಿಕಿ, ಎನ್‌.ಎಚ್‌.66 (ಹಿಂದೆ ಎನ್‌.ಎಚ್‌.17), ಕುಮಟಾ.

-ಕೆ. ದಿನೇಶ ಗಾಂವ್ಕರ/
ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next