Advertisement

ಮನೆಯೇ ಗ್ರಂಥಾಲಯ : ಗಡಿನಾಡು ಬೀದರಿನಲ್ಲಿ ಪುಸ್ತಕದ ಮಹಾಮನೆ

07:11 PM Feb 16, 2021 | Team Udayavani |

ಕಲ್ಯಾಣ ‌ ಕರ್ನಾಟಕ ಭಾಗದ ಗಡಿಜಿಲ್ಲೆ ಬೀದರ್‌ ನಗರದಲ್ಲಿ ಸಮಾನ ಮನಸ್ಕ ತಂಡವೊಂದು ವಿಶಿಷ್ಟ, ವಿಭಿನ್ನ ಮತ್ತು ಅಪೂರ್ವ ಅನ್ನಿಸುವಂಥ ಸಮಾಜಮುಖೀ ಕಾರ್ಯ ಮಾಡುತ್ತಿದೆ. ಸರ್ಕಾರದ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವವರು, ನಿವೃತ್ತ ಅಧಿಕಾರಿಗಳು ಮತ್ತು ಸಮಾಜಸೇವಕರನ್ನು ಒಳಗೊಂಡಿರುವ ಜನರೆಲ್ಲಾ ಸೇರಿಕೊಂಡು “ಶಾಹಿದ್‌ ಭಗತ್‌ ಸಿಂಗ್‌ ‘ ಹೆಸರಿನಲ್ಲಿ ‘ ಚಾರಿಟೇಬಲ್‌ ಟ್ರಸ್ಟ್ ‘ ಕಟ್ಟಿದ್ದಾರೆ. ಈ ಟ್ರಸ್ಟ್‌ ಅಡಿಯಲ್ಲಿ ಮುಂದೇನು? ಎನ್ನುವ ಆಲೋಚಿಸುವ ಹೊತ್ತಿಗೆ ಎಲ್ಲರಿಗೂ ಹೊಳೆದದ್ದು- “ಗ್ರಂಥಾಲಯ ಮಾಡೋಣ’ ಎಂಬ ಐಡಿಯಾ ಜೊತೆಯಾಗಿದೆ.

Advertisement

ಗ್ರಂಥಾಲಯ ಮಾಡಬೇಕಾದರೆ ಸುಸಜ್ಜಿತ ಕಟ್ಟಡವೊಂದು ಅಗತ್ಯವಾಗಿ ಬೇಕು. ಅಂಥದೊಂದು ಬಿಲ್ಡಿಂಗ್‌ ಎಲ್ಲಿದೆ ಎಂಬ ಯೋಚನೆಯಲ್ಲೇ ತಂಡದ ಸದಸ್ಯರು, ವಿಶಾಲವಾದ ಕಟ್ಟಡವನ್ನು ಬಾಡಿಗೆಗೆ ಪಡೆಯಲು ಹುಡುಕಾಟ ನಡೆಸಿದ್ದರು. ಆಗಶಿವರಾಜ್‌ ಪಾಟೀಲ್‌ ಎನ್ನುವ ಸರ್ಕಾರಿ ನೌಕರ, ಬೀದರ್‌ ನಗರದ ಸಿದ್ದೇಶ್ವರ ಕಾಲೋನಿ ನೌಬಾದಿನಲ್ಲಿದ್ದ ತಮ್ಮ ಸೈಟ್‌ ಅನ್ನು ಬಳಗದವರಿಗೆ ಉಚಿತವಾಗಿ ನೀಡಿ, ಗ್ರಂಥಾಲಯ ನಿರ್ಮಾಣಕ್ಕೆ ಇದು ನನ್ನ ಕಡೆಯ ಕಾಣಿಕೆ ಎಂದರಂತೆ!

ಗ್ರಂಥಾಲಯ ನಿರ್ಮಾಣಕ್ಕೆ ಅಗತ್ಯವಿದ್ದ ಜಾಗವೇನೋ ದಾನದ ರೂಪದಲ್ಲಿ ಬಂತು. ಇನ್ನು ಕಟ್ಟಡ ನಿರ್ಮಾಣಕ್ಕೆ ಹಣ ಬೇಕು. ಅದನ್ನು ಬೇರೆ ಯಾರೋ ಕೊಡಬಹುದು ಎಂದು ಕಾಯುವ ಬದಲು ನಾವೇ ಸ್ವಲ್ಪ ಸ್ವಲ್ಪ ‌ ಹಣ ಹಾಕಿದರೆ ಹೇಗೆ ಎಂದು ಯೋಚಿಸಿದ ಈ ತಂಡದವರಿಗೆ, ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಮಾಜ ಸೇವಕರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಜೊತೆಯಾದರು. ಪರಿಣಾಮ, 15 ಲಕ್ಷ ರೂ. ವೆಚ್ಚದಲ್ಲಿ ಒಂದು ಅಂತಸ್ತಿನ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣವಾಯಿತು.  2019 ರ ಜನವರಿ 20 ರಂದು ಖ್ಯಾತ ವಿಚಾರವಾದಿ ಆನಂದ ತೇಲ್ತುಂಬಡೆ ಅವರಿಂದ ಉದ್ಘಾಟನೆಯೂ ನಡೆದು, ಈ ಪುಸ್ತಕ ‌ ಮನೆಗೆ ‘ಕೆಂಪು – ನೀಲಿ ಗ್ರಂಥಾಲಯ’ ಎಂದು ಹೆಸರಿಡಲಾಯಿತು.

ಹೆಸರಿಗಿದೆ ವಿಶೇಷ ಅರ್ಥ :

Advertisement

ಈ ಗ್ರಂಥಾಲಯಕ ಇಟ್ಟಿರುವ ಹೆಸರಿಗೆ ವಿಶೇಷ ಅರ್ಥವಿದೆ. “ಕೆಂಪು’ ಎಂಬುದು ವರ್ಗದ ಸಂಕೇತವಾದರೆ “ನೀಲಿ’ ಜಾತಿಯ ಸಂಕೇತವನ್ನು ಸೂಚಿಸುತ್ತದೆ. ದೇಶದಲ್ಲಿ ಕೆಂಪು – ನೀಲಿ ಬಣ್ಣಗಳು ಒಗ್ಗೂಡಿ, ಒಂದೇ ಪಥದಲ್ಲಿ ಮುನ್ನಡೆಯಬೇಕು. ಆಗ ವರ್ಗರಹಿತ ಮತ್ತು ಜಾತಿರಹಿತ ಸಮಾಜ ರೂಪುಗೊಳ್ಳಲು ಸಾಧ್ಯ ಎನ್ನುವ ಸದಾಶಯದಿಂದ ಕಟ್ಟಡಕ್ಕೆ “ಕೆಂಪು – ನೀಲಿ ಗ್ರಂಥಾಲಯ” ಕರೆಯಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳಿವೆ! :

ಇದು ಮೊಬೈಲ್‌, ಕಂಪ್ಯೂಟರ್‌, ಆನ್‌ ಲೈನ್‌ ಜಮಾನಾ. ಪುಸ್ತಕಗಳನ್ನು ಓದುವವರಿಲ್ಲ ಎನ್ನುತ್ತಿರುವ ಈ ಕಾಲಘಟ್ಟದಲ್ಲಿಯೇ ಪುಸ್ತಕ  ಪ್ರೇಮಿಗಳಿಗೆ ಹೊಸ ಹೊಸ ಪುಸ್ತಕವನ್ನು ಪರಿಚಯಿಸುತ್ತಿರುವುದು ಇಲ್ಲಿನ ವಿಶೇಷ. ಎರಡು ಪುಸ್ತಕ ಕೋಣೆ, ಒಂದು ವಿಶಾಲವಾದ ರೀಡಿಂಗ್‌ರೂಮ್‌ ಹೊಂದಿರುವ ಈ ಗ್ರಂಥಾಲಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ವಿವಿಧ ದಿನಪತ್ರಿಕೆ,ವಾರಪತ್ರಿಕೆ, ಮಾಸ ಪತ್ರಿಕೆ, ಪಾಕ್ಷಿಕಗಳಿವೆ. ಶರಣ, ದಾಸ, ಸೂಫಿ ಸಾಹಿತ್ಯ ಸೇರಿದಂತೆ ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಯ ಬಹುತೇಕ ಸಾಹಿತ್ಯ ಪುಸ್ತಕಗಳೂ ಇಲ್ಲಿವೆ. ಜೊತೆಗೆ ಎ ದರ್ಜೆಯಿಂದ ಡಿ ಗ್ರೂಪ್‌ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅಗತ್ಯವಿರುವ ಪುಸ್ತಕಗಳನ್ನು ಓದಲು ವ್ಯವಸ್ಥೆ ಮಾಡಲಾಗಿದೆ. ದಿನವೂ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದಲೆಂದು ಈ ಗ್ರಂಥಾಲಯಕ್ಕೆ ಬರುತ್ತಾರೆ.

ತರಬೇತಿ ಕೇಂದ್ರ ಸ್ಥಾಪನೆಯ ಗುರಿ :

ಈ ಗ್ರಂಥಾಲಯವು ಓದಿನ ತಾಣವಷ್ಟೇ ಅಲ್ಲ; ಹಲವು ವಿಚಾರಗಳನ್ನು ಕುರಿತ ಮುಕ್ತ ಚರ್ಚೆಗೆ ವೇದಿಕೆಯೂ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅನ್ನಲೇಬೇಕು. ಗ್ರಂಥಾಲಯದ ಅಂಗಳವು ಈಗಾಗಲೇ ಹಲವು ಹೊಸಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪಿಸುವ ‌ಗುರಿಯನ್ನೂ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಎನ್ನುತ್ತಾರೆ ಟ್ರಸ್ಟ್‌ ಸದಸ್ಯರಾದ ಗಗನ ಫುಲೆ.

“ಬೀದರ್‌’ ಎಂದರೆ ಧರಿನಾಡು, ಬರದ ಬೀಡು. ಇಲ್ಲಿನ ಕೆಂಪು ನೆಲ ಶರಣರ ಕಾಯಕ ಭೂಮಿ, ಶರಣರ ವಚನಗಳು ಈ ನೆಲದ ಐಸಿರಿಯನ್ನು ಎತ್ತಿ ತೋರಿಸುತ್ತವೆ, ಇಂಥ ಹಿನ್ನೆಲೆಯ ಕಲ್ಯಾಣ ಶರಣರ ನೆಲದಲ್ಲಿ ಸಮಾನ ಮನಸ್ಕರೆಲ್ಲರೂ ಕೂಡಿಕೊಂಡು, ಪ್ರತಿಫಲಾಪೇಕ ಇದಲ್ಲದೆ ಗ್ರಂಥಾಲಯ ನಿರ್ಮಿಸಿದ್ದು ಹೆಮ್ಮೆಯ ಸಂಗತಿ

ಮೂರು ಸಾವಿರ ಪುಸ್ತ ಕ :

“ಕಂಪು – ನೀಲಿ ಗ್ರಂಥಾಲಯ’ ನಿರ್ಮಾಣದ ಸುದ್ದಿ ತಿಳಿಯುದ್ದಂತೆಯೇ ಬೀದರ್‌ ನವರಾದ ಮಲ್ಲಿಕಾರ್ಜುನ ಸುಭಾನೆ ಮತ್ತು ಮಾರುತಿ ಗೋಖಲೆ ತಲಾ 2 ಲಕ್ಷ ರೂ., ಅಭಿಮನ್ಯು 1 ಲಕ್ಷ, ಶಂಕರ ಸುಬಾನೆ 1 ಲಕ್ಷ , ಅಲಿಂಸಾಬ್‌ 50 ಸಾವಿರ ರೂ. ಮೌಲ್ಯದ ಪುಸ್ತಕಗ್ತ‌ಳನ್ನು ಖರೀದಿಸಿ ಕೊಟ್ಟಿದ್ದಾರೆ. ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಮಾಜ ಸೇವಕರೂ ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಪರಿಣಾಮವಾಗಿ 3 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಕೆಂಪು- ನೀಲಿ ಗ್ರಂಥಾಲಯದ ಒಡಲನ್ನು ಸೇರಿಕೊಂಡಿವೆ.

 

-ಬಾಲಾಜಿ ಕುಂಬಾರ, ಚಟ್ನಾಳೆ

Advertisement

Udayavani is now on Telegram. Click here to join our channel and stay updated with the latest news.

Next