Advertisement

ಮನೆ ತಾರಸಿಯಲ್ಲೇ ತರಕಾರಿ ತೋಟ; ಆಸಕ್ತರಿಗೆ ತರಬೇತಿ

12:00 AM Jan 28, 2020 | Sriram |

ವಿಶೇಷ ವರದಿಉಡುಪಿ:ಮನೆ ಅಂಗಳ ಇಲ್ಲವೆ ತಾರಸಿಯಲ್ಲಿ ಪುಟ್ಟದೊಂದು ಕೈ ತೋಟ ಮಾಡುವ ಆಸೆ ನಿಮ್ಮಲ್ಲಿದ್ದರೆ ಚಿಂತೆ ಬಿಡಿ! ತೋಟಗಾರಿಕೆ ಇಲಾಖೆ ಇದಕ್ಕಾಗಿಯೆ ಯೋಜನೆಯೊಂದನ್ನು ರೂಪಿಸಿದೆ.

Advertisement

ತೋಟಗಾರಿಕೆ ಇಲಾಖೆ “ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ’ ಕಾರ್ಯಕ್ರಮ ಆಯೋಜಿಸಿದೆ.

200 ಮಂದಿಗೆ ತರಬೇತಿ
ಜ. 28ರಂದು ಶಿವಳ್ಳಿ ದೊಡ್ಡಣಗುಡ್ಡೆ ತೋಟಗಾರಿಕಾ ಕೇಂದ್ರದಲ್ಲಿ ಈಗಾಗಲೇ ಆಯ್ಕೆಯಾದ 200 ಮಂದಿಗೆ ಕೈತೋಟ ಹಾಗೂ ತಾರಸಿ ಮನೆ ತರಕಾರಿ ಕೃಷಿ ತರಬೇತಿ ಆಯೋಜಿಸಿದೆ. ಮನೆಯಲ್ಲಿ ದಿನನಿತ್ಯ ದೊರೆಯುವ ಸಾವಯವ ಉಳಿಕೆ ಪದಾರ್ಥ ಗಳನ್ನು ಕೈತೋಟದ ಉತ್ಪಾದನಾ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಬಹುದು. ತರಬೇತಿಗೆ ಬಂದವರಿಗೆ ತಾರಸಿ ತೋಟಗಳ ಪ್ರಾಮುಖ್ಯತೆ ಮತ್ತು ಅನುಕೂಲಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ.

ತೋಟಗಾರಿಕೆ ಕಿಟ್‌ ಉಚಿತ
ಟೊಮೆಟೊ, ಬದನೆ, ಮೆಣಸಿನಕಾಯಿ ಗಿಡಗಳು ಮತ್ತು ಬೀಜಗಳು, ಮಣ್ಣು ಮಿಶ್ರಿತ ಗೊಬ್ಬರ ಸೇರಿದಂತೆ 500 ರೂ. ಮೊತ್ತದ ಕಿಟ್‌ಉಚಿತವಾಗಿ ನೀಡಲಾಗುತ್ತದೆ. ಫ‌ಲಾನುಭವಿಗಳು ತರಬೇತಿಯ ನಂತರವೂ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯಬಹುದಾಗಿದೆ.

ಯೋಜನೆಯ ಉದ್ದೇಶ
ನಗರ ಮತ್ತು ಪಟ್ಟಣ ಪ್ರದೇಶದ ನಾಗರಿಕರಲ್ಲಿ ಸಮತೋಲನ ಆಹಾರ ಒದಗಿಸುವಲ್ಲಿ ಹಣ್ಣು ತರಕಾರಿಗಳ ಪಾತ್ರದ ಬಗ್ಗೆ ಅರಿವು ಮೂಡಿಸುವುದು. ಕೈತೋಟ ಮತ್ತು ತಾರಸಿ ತೋಟಗಳಲ್ಲಿ ತರಕಾರಿ ಬೆಳೆಗಳನ್ನು ಸ್ವತಃ ಸಾವಯವ ಪದ್ಧತಿಯಲ್ಲಿ ಉತ್ಪಾದಿಸಲು ತಾಂತ್ರಿಕ ಮಾರ್ಗದರ್ಶನ ಮತ್ತು ಉತ್ತೇಜನ ನೀಡುವುದು. ಸಾವಯವ ಉಳಿಕೆ ಪದಾರ್ಥಗಳನ್ನು ಬಳಸಿಕೊಂಡು ಎರೆಹುಳು ಗೊಬ್ಬರ, ಕಾಂಪೋಸ್ಟ್‌ ಇತ್ಯಾದಿಗಳನ್ನು ತಯಾರಿಸಿಕೊಂಡು ಮರುಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಲಾಗುತ್ತದೆ.

Advertisement

ತಾರಸಿ ತೋಟದ ಅನುಕೂಲ
ತಾರಸಿ ತೋಟ ಕೇವಲ ಮನೆಯ ಅಂದ ಚೆಂದ ಹಾಗೂ ಸಮಯ ಕಳೆಯುವ ಹವ್ಯಾಸಕ್ಕೆ ಸೀಮಿತವಾಗಿ ಉಳಿದಿಲ್ಲ. ಆರೋಗ್ಯಕರ ಹಾಗೂ ತಾಜಾ ತರಕಾರಿಗಳನ್ನು ಪಡೆಯಲು ಸಾಧ್ಯ. ತಾರಸಿ ತೋಟ ಕಟ್ಟಡ ತೀವ್ರವಾದ ಉಷ್ಣವನ್ನು ತಡೆದು ತಂಪು ಮಾಡುತ್ತದೆ. ಗಾಳಿ ಗುಣಮಟ್ಟ ಸುಧಾರಿಸಿ, ವಾಯುಮಾಲಿನ್ಯ ಕಡಿಮೆ ಮಾಡುತ್ತದೆ.

ತರಕಾರಿ ಕೃಷಿ ಸಮಯ
ಸೊಪ್ಪು ತರಕಾರಿ, ಬಸಳೆ, ಮೂಲಂಗಿ,ಟೊಮ್ಯಾಟೋ ವರ್ಷದ ಎಲ್ಲ ಕಾಲದಲ್ಲೂ ಬೆಳೆಯ ಬಹುದು. ಕುಂಬಳಕಾಯಿ, ಹೀರೆಕಾಯಿ, ಸಾಂಬಾರ್‌ ಸೌತೆ, ತುಪ್ಪದ ಹೀರೆಕಾಯಿ ಇತ್ಯಾದಿ ಜೂನ್‌ -ಅಗಸ್ಟ್‌ ಮತ್ತು ಜನವರಿ- ಫೆಬ್ರವರಿಯಲ್ಲಿ

ಯಥೇತ್ಛ ತರಕಾರಿ
ಸುಮಾರು 4ರಿಂದ 5 ಜನರಿರುವ ಕುಟುಂಬಕ್ಕೆ ಹಣ್ಣು ಮತ್ತು ತರಕಾರಿಗಳನ್ನು ಒದಗಿಸಲು 500 ಚ.ಮೀ. ಜಾಗ ಸಾಕಾಗುತ್ತದೆ. ತೋಟದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ತರಕಾರಿ ಬೆಳೆಸಬೇಕು. ಇಲ್ಲಿ ಬಿಸಿಲು ಯಥೇತ್ಛವಾಗಿ ದೊರೆಯತ್ತದೆ. ಕೈತೋಟದ ಕುಂಬಳ, ಸೋರೆ, ಸೇರಿದಂತೆ ಮುಂತಾದ ಬಳ್ಳಿ ಬೆಳಸಬಹುದಾಗಿದೆ. ಬಹುವಾರ್ಷಿಕ ಸಸ್ಯಗಳ ನಡುವಿನ ಜಾಗದಲ್ಲಿ ಬೇಗ ಕೊಯ್ಲಿಗೆ ಬರುವ ಹಾಗೂ ಆಳವಾಗಿ ಬೇರು ಬಿಡದಂತಹ ಬೆಳ್ಳುಳ್ಳಿ, ಈರುಳ್ಳಿ, ಕೊತ್ತುಂಬರಿ, ಪುದಿನ ಸೇರಿದಂತೆ ಮುಂತಾದ ಋತುವಿನ ತರಕಾರಿ ಬೆಳೆಯಬಹುದು.

200 ಜನರ ಆಯ್ಕೆ
ಕೈತೋಟ ಹಾಗೂ ತಾರಸಿ ಮನೆ ತರಕಾರಿ ಕೃಷಿ ತರಬೇತಿ ಹಾಗೂ ಕಿಟ್‌ ವಿತರಣೆಗೆ ಈಗಾಗಲೇ 200 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಬ್ರಹ್ಮಾವರ ಕೃಷಿ ಕೇಂದ್ರದ ವಿಜ್ಞಾನಿಗಳಿಂದ ತೋಟಗಾರಿಕಾ ಕೃಷಿ ಬಗ್ಗೆ ತರಬೇತಿ ನೀಡಲಾಗುತ್ತದೆ. ಇಲಾಖೆ ನಿಗದಿ ಪಡಿಸಿದ ಗುರಿ ಸಾಧಿಸಲಾಗಿದೆ.
-ವೆಂಕಟೇಶ್‌, ತೋಟಗಾರಿಕಾ ಇಲಾಖೆ ಸಹಾಯಕ ನಿದೇರ್ಶಕ.

Advertisement

Udayavani is now on Telegram. Click here to join our channel and stay updated with the latest news.

Next