ಗುಡಿಬಂಡೆ: ಮೂರು ವರ್ಷದೊಳಗೆ ಕ್ಷೇತ್ರದ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕಿನ ಬೀಚಗಾನಹಳ್ಳಿ ಗ್ರಾಪಂನ ಧೂಮಕುಂಟಹಳ್ಳಿಯಲ್ಲಿ ಬೀಚಗಾನಹಳ್ಳಿ ಗ್ರಾಪಂ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರಿಗೆ ನಿವೇಶನ ಇಲ್ಲವೋ ಅಂತಹವರಿಗೆ ನೀಡಿ. ಕೆಲ ಗ್ರಾಮಗಳಲ್ಲಿ ಮುಖಂಡರಿಗೆ, ಬೇಕಾದವರಿಗೆ ಮಾತ್ರ ನಿವೇಶನ ನೀಡಲಾಗುತ್ತಿದೆ. ಪ್ರತಿ ಗ್ರಾಪಂ ಪಿಡಿಒಗಳು ನಿವೇಶನ ರಹಿತರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಬೇಕು. ಅಕ್ರಮ ನಡೆದರೆ ನನ್ನ ಗಮನಕ್ಕೆ ತನ್ನಿ ಎಂದರು.
25 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಧೂಮಕುಂಟಹಳ್ಳಿಯ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಒಟ್ಟು 37 ಫಲಾನುಭವಿಗಳಿಗೆ ಮಂಜೂರಾಗಿದ್ದು, 25 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಿದರು. ಉಳಿದವರಿಗೆ ಹಕ್ಕುಪತ್ರ ಬಂದ ನಂತರ ನೀಡಲಾಗುವುದು ಎಂದರು.
ನಿವೇಶನ ಜಾಗದಲ್ಲಿ ಉಳುಮೆ ಮಾಡುತ್ತಿರುವವರಿಗೆ ಬೇರೆ ಕಡೆ ಜಮೀನು ಗುರುತಿಸಿದರೆ ಅವರಿಗೆ ಜಮೀನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಬೀಚಗಾನಹಳ್ಳಿ ಗ್ರಾಪಂ ಉಪಾಧ್ಯಕ್ಷ ಬಿ.ಆರ್.ಮಹೇಶ್, ಮುಖಂಡ ಕೃಷ್ಣೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಬಾಲೇನಹಳ್ಳಿ ರಮೇಶ್ ಮಾತನಾಡಿದರು. ಈ ವೇಳೆ ತಾಪಂ ಅಧ್ಯಕ್ಷೆ ವರಲಕ್ಷಿ, ಬೀಚಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಸಿ.ಗಂಗರಾಜು, ಕವಿತಾ,
ಕೆ.ದೇವಿಕಾ, ಡಿ.ಎನ್.ಜಯಲಕ್ಷಿ, ಡಿ.ಎ.ವೆಂಕಟೇಶಪ್ಪ, ಪಿಡಿಒ ಎ.ಆರ್.ಶ್ರೀನಿವಾಸ್, ಸಿಬ್ಬಂದಿ ಅಶೋಕ್, ಮಂಜುನಾಥ, ಹೌಸಿಂಗ್ ನೋಡಲ್ ಅಧಿಕಾರಿ ಡಿ.ಜಿ.ರಂಗಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ರಮೇಶ್, ಮುಖಂಡರಾದ ರಮೇಶ್, ನರೇಂದ್ರ, ಮೂರ್ತಿ, ರಾಮಚಂದ್ರ, ರಿಯಾಜ್ ಪಾಷ, ಜೀವಿಕ ನಾರಾಯಣಸ್ವಾಮಿ, ಅಮರಾವತಿ, ರಾಮಾಂಜಿ ಸೇರಿದಂತೆ ಇತರರು ಭಾಗವಹಿಸಿದ್ದರು.