Advertisement

ಬಸವಣ್ಣನವರಿಗಿತ್ತು ಮಹಿಳಾ ಪರ ಕಾಳಜಿ

12:12 PM Aug 29, 2019 | Naveen |

ಹೊಳಲ್ಕೆರೆ: ಹನ್ನೆರಡನೇ ಶತಮಾನದಲ್ಲಿ ಮೂಢನಂಬಿಕೆ, ಕಂದಾಚಾರಕ್ಕೆ ಬಲಿಯಾಗುತ್ತಿದ್ದ ಮಹಿಳೆಯರಿಗೆ ಶೋಷಣೆ ಮುಕ್ತ್ತ ಬದುಕು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮನೆ ತೊರೆದ ದಾರ್ಶನಿಕ ಬಸವಣ್ಣನವರಾಗಿದ್ದಾರೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮುರುಘಾ ಮಠದ ವತಿಯಿಂದ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಸಮಾಜದಲ್ಲಿರುವ ಬಹುತೇಕ ಜನರು ಸ್ವಾರ್ಥ ಸಾಧನೆಗಾಗಿ ಹವಣಿಸುತ್ತಿದ್ದಾರೆ. ಅದು ವೈಯಕ್ತಿಕ ಹಿತಸಕ್ತಿಯಾದರೆ, ಸಮಾಜ ಚಿಂತಕರಲ್ಲಿ, ದಾರ್ಶನಿಕರಲ್ಲಿ, ಮಹಾಪುರುಷರಲ್ಲಿ ಸಮಾಜಮುಖೀ ಚಿಂತನೆ ಇರುತ್ತದೆ ಎಂದರು.

ಮಹಿಳೆಯರ ಶೋಷಿತ ಬದುಕು ಬಸವಣ್ಣನವರನ್ನು ಸ್ತ್ರೀ ಪರವಾದ ಧೋರಣೆ ಹೊಂದುವಂತೆ ಮಾಡಿತ್ತು. ಅವರದು ಜನಪರವಾದ ನಿಲುವು, ಸಮಾಜಮುಖೀ ಚಿಂತನೆ. ಪುರುಷ ಮೇಲು, ಸ್ತ್ರೀ ಕೀಳು ಎಂಬ ಭಾವನೆ ಸರಿಯಲ್ಲ. ಅದನ್ನು ಹೊಗಲಾಡಿಸಲು ಬಸವಣ್ಣ ಸಮ ಸಮಾಜ ಸ್ಥಾಪಿಸಿ ಪ್ರತಿಯೊಬ್ಬರು ಸಮಾನರು ಎನ್ನುವ ಸಂದೇಶವನ್ನು ಬಿತ್ತರಿಸಿದ್ದಾರೆ ಎಂದು ತಿಳಿಸಿದರು.

ಮಹಿಳಾ ಸಬಲೀಕರಣ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದ ಮುರುಘಾ ಶರಣರು, ಮಾನವ ಹಕ್ಕುಗಳಲ್ಲಿ ಮಹಿಳಾ ಹಕ್ಕುಗಳಿಗೆ ಧಕ್ಕೆಯಾಗಬಾರದು. ನಾನು ಪುರುಷನೆಂದು ನನಗೆ ಉಪನಯನ ಮಾಡಿದಿರಿ, ಆದರೆ ಅಕ್ಕ ನಾಗಮ್ಮಳಿಗೆ ಏಕೆ ಉಪನಯನ ಮಾಡಲಿಲ್ಲ ಎಂದು ಪ್ರಶ್ನಿಸುತ್ತಾರೆ ಬಸವಣ್ಣ. ಬಾಲ್ಯದಲ್ಲೇ ಪ್ರಶ್ನೆ ಮಾಡುವ ಎದೆಗಾರಿಕೆ ಅವರಲ್ಲಿತ್ತು. ಮಹಿಳಾ ಹಕ್ಕುಗಳಿಗಾಗಿ ತನ್ನ ಜಾತಿ, ಕುಟುಂಬವನ್ನೇ ತೊರೆಯುತ್ತಾರೆ. 900 ವರ್ಷಗಳ ಹಿಂದೆ ಬಸವಣ್ಣ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸಲು ಹೋರಾಡಿದ ಮೊದಲಿಗರಾಗಿದ್ದಾರೆ ಎಂದು ಬಣ್ಣಿಸಿದರು.

Advertisement

ವಿಷಯಾವಲೋಕನ ಮಾಡಿದ ನಿವೃತ್ತ ಕೃಷಿ ಅಧಿಕಾರಿ ಚಂದ್ರಶೇಖರ ಗುಂಡೇರಿ, ಕಲ್ಯಾಣ ದರ್ಶನ ಸಮಾಜಕ್ಕೆ ಮಾರ್ಗದರ್ಶನ. ಹೆಣ್ಣು ದಾಸಿಯಲ್ಲ, ಹೆಣ್ಣನ್ನು ಹಾಗೆ ನಡೆಸಿಕೊಂಡಲ್ಲಿ ಬದುಕೇ ನಶ್ವರ. ತಾಯಂದಿರು ಕುಟುಂಬದ ಗೌರವ, ಘನತೆ ಕಾಪಾಡುವವರು. ಪ್ರಕೃತಿಯಲ್ಲಿ ನಾವಿದ್ದೇವೆ. ಬದುಕಿಗೆ ಶಿಕ್ಷಣದ ಅಗತ್ಯವಿದ್ದು, ಅದರಲ್ಲಿ ಹೆಣ್ಣುಮಗುವಿಗೆ ತಪ್ಪದೇ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ಹೆಣ್ಣು ಇಡೀ ಕುಟುಂಬವನ್ನು ಶಿಕ್ಷಿತಗೊಳಿಸುತ್ತಾಳೆ. ನಗರದ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಮಕ್ಕಳ ಪಾಲನೆ, ಆರ್ಥಿಕ ಸ್ಥಿತಿಗತಿಯ ಅವಲೋಕನ ಮಾಡಿ ಕುಟುಂಬದ ಸ್ಥಿರತೆಯನ್ನು ಹೆಚ್ಚಿಸುತ್ತಾಳೆ. ಹಣದಿಂದ ಎಲ್ಲವೂ ಸಿಗುವುದಿಲ್ಲ. ಜ್ಞಾನದ ಬೆಳಕು ಬೇಕು. ಆದರೆ ಇಂದಿನ ಆಕರ್ಷಣೆಗಳು ನಮ್ಮನ್ನು ಅನಾರೋಗ್ಯಕರ ಚಟುವಟಿಕೆಗಳಿಗೆ ದಾಸರಾಗುವಂತೆ ಮಾಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ಎನ್‌.ಆರ್‌. ಪುರ ಬಸವ ಕೇಂದ್ರದ ಶ್ರೀ ಬಸವ ಯೋಗಾನಂದ ಸ್ವಾಮೀಜಿ ಮಾತನಾಡಿ, ಮಹಿಳೆಯರಿಗೆ ಈ ಸಮಾಜ ಹಲವಾರು ನಿರ್ಬಂಧಗಳನ್ನು ಹೇರಿದೆ. ಇನ್ನೂ ಸಂಪೂರ್ಣವಾಗಿ ನಿರ್ಬಂಧಗಳಿಂದ ಮುಕ್ತರಾಗಿಲ್ಲ. ಮಹಿಳಾ ಸಬಲೀಕರಣಕ್ಕಾಗಿ ಮುರುಘಾ ಶರಣರು ಅಪಾರ ಕೊಡುಗೆ ನೀಡಿದ್ದಾರೆ. ಲಿಂಗ ಸಮಾನತೆಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಗ್ರಾಪಂ ಉಪಾಧ್ಯಕ್ಷ ಎಸ್‌. ರಂಗಯ್ಯ, ಎಲ್.ಬಿ. ರಾಜಶೇಖರ್‌, ಡಾ| ಎನ್‌.ಬಿ. ಸಜ್ಜನ್‌,

ಜಿಪಂ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ, ರೈತ ನಾಯಕಿ ಗಂಗಮ್ಮ ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ನಾಗರಾಜ್‌ ಸ್ವಾಗತಿಸಿದರು. ಮುರುಘಾ ಶರಣರು ಚೀರನಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು. ಮಹಿಳೆಯರು ವಚನ ಪುಸ್ತಕಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

Advertisement

Udayavani is now on Telegram. Click here to join our channel and stay updated with the latest news.

Next