Advertisement

Holabasu Shettar: ಸಮಾಜಮುಖಿ ಯುವನಾಯಕ ಹೊಳಬಸು ಶೆಟ್ಟರ

09:37 AM Nov 01, 2023 | Team Udayavani |

ಅನ್ನ, ಅಕ್ಷರ, ಉದ್ಯಮ, ರಾಜಕೀಯ ಕ್ಷೇತ್ರದಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡು, ನೂರಾರು ಕೈಗಳಿಗೆ ಉದ್ಯೋಗದಾತರೆನಿಸಿಕೊಂಡಿರುವಾತ. ಕೊರೊನಾ- ಪ್ರವಾಹ ವೇಳೆ ಬಡವರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ, ಸಮಾಜ ಸೇವೆಗೆ ಅಧಿಕಾರವೇ ಬೇಕಿಲ್ಲ ಎಂಬುದನ್ನು ಸಾಬೀತುಪಡಿಸಿದಾತ. ನಾಡಿನ ಭಾಗ್ಯವಿದಾತನ ಶಿಷ್ಯ, ಗುಳೇದಗುಡ್ಡ-ಬಾದಾಮಿ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೊಳಬಸು ಶೆಟ್ಟರ ಪಕ್ಕಾ ಸಮಾಜಮುಖೀ ಯುವ ನಾಯಕರೆನಿಸಿಕೊಂಡಿದ್ದಾರೆ.

Advertisement

ಊರ ಮಧ್ಯದಲ್ಲೊಂದು ಶಾಸಕರ ಕಚೇರಿ. ಅಲ್ಲಿಗೆ ಬಂದವರೆಲ್ಲ ಹೇಳಿದ್ದನ್ನು ಮಾಡುತ್ತಿದ್ದ ಯುವಕನೊಬ್ಬ ಆ ಕಚೇರಿಯಲ್ಲಿದ್ದ. ಯಾರೇ ಬಂದ್ರೂ ಸಾಹೇಬರ ಬಗ್ಗೆ ಕೇಳಿದಾಗ ನಗುಮೊಗದಿಂದಲೇ ಉತ್ತರಿಸುತ್ತಿದ್ದ. ಆ ಯುವಕ ಮುಂದೊಂದು ದಿನ ಇಡೀ ರಾಜ್ಯವೇ ಗುರುತಿಸುವಂತೆ ಎತ್ತರಕ್ಕೆ ಬೆಳೆಯುತ್ತಾನೆಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದರೆ ಇಂದು ಆ ವ್ಯಕ್ತಿ ಯಾವಾಗಲೂ ರಾಜ್ಯದ ಮುಖ್ಯಮಂತ್ರಿಯ ಎಡ-ಬಲದಲ್ಲಿದ್ದು, ಸದಾ ಜನಸೇವೆಗೆ ಹಂಬಲಿಸುತ್ತಾನೆ.
ಆ ಯುವ ನಾಯಕ ಬೇರೆ ಯಾರೂ ಅಲ್ಲ, ಗುಳೇದಗುಡ್ಡದ ಯುವ ಮುಖಂಡ, ಶ್ರಮಜೀವಿ ಹೊಳಬಸು ಶೆಟ್ಟರ.

ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತ ಬಂದಿರುವ ಹೊಳಬಸು ಶೆಟ್ಟರ ಮಾಜಿ ಸಚಿವ, ಶಾಸಕ ಎಚ್‌.ವೈ.ಮೇಟಿ ಅವರ ಬಲಗೈ ಬಂಟನಂತಿದ್ದು, ಮೇಟಿಯವರು ಗುಳೇದಗುಡ್ಡ ಮತಕ್ಷೇತ್ರದಿಂದ ಶಾಸಕರಾದಾಗಿನಿಂದ ಇಲ್ಲಿಯವರೆಗೂ ಅವರ ಸೇವೆಗೆ ತಮ್ಮನ್ನು ತಾವು ಮುಡಿಪಾಗಿಟ್ಟಿದ್ದಾರೆ.

ಗುರು ನಿಷ್ಠೆಗೆ ಎತ್ತಿದ ಕೈ: ಹೊಳಬಸು ಶೆಟ್ಟರ, ಎಚ್‌.ವೈ. ಮೇಟಿ ಅವರೊಂದಿಗೆ ಸುಮಾರು 30 ವರ್ಷಗಳ ಅಧಿಕ ಕಾಲದ ಒಡನಾಟವಿದ್ದು, ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಎನ್ನುವಂತೆ ಮೇಟಿ ಅವರನ್ನು ಕೇವಲ ಗುರು ಅಂತಾ ಅಷ್ಟೇ ಅಲ್ಲ, ತನ್ನ ತಂದೆ ಸ್ವರೂಪಿಗಳೆಂದು ಪೂಜಿಸಿ- ಗೌರವಿಸುತ್ತ ಬಂದಿದ್ದಾರೆ.

Advertisement

ಎಚ್‌.ವೈ.ಮೇಟಿ ಅವರು ಎಲ್ಲೇ ಇದ್ದರೂ ಶೆಟ್ಟರ ಅವರು ಇದ್ದೇ ಇರುತ್ತಾರೆ. ಅಲ್ಲದೇ ಅವರ ಗೆಲ್ಲಿಸುವಲ್ಲಿ ಶೆಟ್ಟರ ಅವರು ಸಹ ಕಾರ್ಯಕರ್ತರ ಪಡೆಯನ್ನೇ ಹೊಂದಿರುವುದು ವಿಶೇಷ. ಇಂದಿಗೂ ಸಹ ಎಚ್‌.ವೈ. ಮೇಟಿ ಅವರ ಎದುರಿಗೆ ಕುಳಿತುಕೊಳ್ಳುವುದು ಕಾಣ ಸಿಗಲ್ಲ, ಎದ್ದು ನಿಲ್ಲುತ್ತಾರೆ ಅಷ್ಟು ಗುರುಗಳ ಮೇಲೆ ಗೌರವ-ಭಕ್ತಿ ಹೊಂದಿದ್ದಾರೆ. ಶೆಟ್ಟರ ಅವರು ತಮ್ಮ ಗುರುಗಳಾದ ಮೇಟಿ ಅವರ ಗುರು ಭಕ್ತಿಗೆ ತಮ್ಮ ಸಂಸ್ಥೆ ವತಿಯಿಂದ ನಿರ್ಮಿಸಿರುವ ಮಹಿಳಾ ವಸತಿ ನಿಲಯಕ್ಕೆ ಎಚ್‌.ವೈ.ಮೇಟಿ ಅವರ ಮಾತೋಶ್ರೀ ಅವರ ಹೆಸರು ನಾಮಕರಣ ಮಾಡಿರುವುದು ಗುರುನಿಷ್ಠೆಗೆ ಜ್ವಲಂತ ಉದಾಹರಣೆ ಎಂದರೆ ತಪ್ಪಲ್ಲ.

ನಾಡದೊರೆಯ ಬಂಟ : ಹೊಳಬಸು ಶೆಟ್ಟರ ಅವರ ನಿಷ್ಠೆ ಮೇಟಿ ಅವರ ವಿಷಯದಲ್ಲಿ ಎಷ್ಟಿದೆಯೋ ಅಷ್ಟೇ ಸಿಎಂ ಸಿದ್ದರಾಮಯ್ಯನವರ ವಿಷಯದಲ್ಲೂ ಕಮ್ಮಿಯೇನಿಲ್ಲ. ಸಿದ್ದರಾಮಯ್ಯನವರ ಮೇಲೆ ಅಪಾರ ಗೌರವ ಹೊಂದಿರುವ ಶೆಟ್ಟರ ಅವರು ಸಿದ್ದರಾಮಯ್ಯನವರು ಬಾದಾಮಿ ಶಾಸಕರಾದ ಮೇಲೆ ಅವರ ಹೆಸರಿಗೆ ಕಪ್ಪುಚುಕ್ಕೆ ಬಾರದಂತೆ ಅವರ ಮಾರ್ಗದರ್ಶನದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಬಾದಾಮಿಗೆ ಪುನಃ ಸಿದ್ದರಾಮಯ್ಯನವರೇ ಶಾಸಕರಾಗಬೇಕೆಂಬ ಕೂಗು ಜನರಿಂದಲೇ ಕೇಳಿ ಬರುವಂತಹ ಅಭಿವೃದ್ಧಿ ಕೆಲಸ ಮಾಡಿ ಸೈ ಎನಿಸಿದವರು.

ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥೆ : 2000 ಇಸ್ವಿಯಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹುಟ್ಟು ಹಾಕಿ, ಆ ಮೂಲಕ ಸಾಮಾಜಿಕ ಸೇವೆಗೆ ಮುಂದಾದ ಹೊಳಬಸು ಶೆಟ್ಟರ, ಹೊಳೆಹುಚ್ಚೇಶ್ವರ ಶಿಕ್ಷಣ ಸಂಸ್ಥೆ ಮೂಲಕ ಬಾಲ ಕಾರ್ಮಿಕ ಶಾಲೆ, ಮಹಿಳಾ ಸಾಂತ್ವನ ಕೇಂದ್ರ, ಜಲ ಸಂಪನ್ಮೂಲ ಇಲಾಖೆಯಿಂದ ಜಲಾನಯನ ಯೋಜನೆ, ಡಿಕೇರ್‌ ಸೆಂಟರ್‌, ವ್ಯಕ್ತಿತ್ವ ವಿಕಸನ ಶಿಬಿರಗಳಂತಹ ಕಾರ್ಯಕ್ರಮ ಆಯೋಜಿಸಿ ಸಮಾಜಮುಖೀ ಕಾರ್ಯಕ್ಕೂ ಮುಂದಾದವರು.

ಶಾಲಾ ಮಕ್ಕಳಿಗೆ ಬಿಸಿಯೂಟ: ಶೆಟ್ಟರ ಅವರು ರಾಜಕೀಯ ಜೀವನಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೋ, ಅಷ್ಟೇ ಸಮಾಜ ಸೇವೆಯ ಒಂದು ಭಾಗವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಗೂ ಆದ್ಯತೆ ಕೊಟ್ಟಿದ್ದಾರೆ. 2004-05ರಲ್ಲಿ ರಾಜ್ಯ ಸರಕಾರ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದಾಗ ಅದರಿಂದ ಲಾಭ ನಿರೀಕ್ಷಿಸದೇ ಸಮಾಜ ಸೇವೆಯೊಂದನ್ನೇ ಮುಖ್ಯವಾಗಿಸಿಕೊಂಡು ಬಿಸಿಯೂಟ ಯೋಜನೆಯನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದ್ದಾರೆ. 2004-05ರಲ್ಲಿ ಆರಂಭವಾದ ಬಿಸಿಯೂಟ ಯೋಜನೆಗೆ ಆರಂಭದಲ್ಲಿ 10 ಸಾವಿರ ಮಕ್ಕಳಿಗೆ ಊಟ ನೀಡಲಾಗುತ್ತಿತ್ತು. ಮುಂದೆ 2012-13ರಲ್ಲಿ 9 ಸಾವಿರ ಮಕ್ಕಳ ಸಂಖ್ಯೆಗೆ ನೀಡುತ್ತಿದ್ದು, ಸದ್ಯ 5700 ಮಕ್ಕಳಿಗೆ ನಿತ್ಯ ಬಿಸಿಯೂಟ ನೀಡಲಾಗುತ್ತಿದೆ. ಹಳದೂರ, ಅಲ್ಲೂರ, ತೋಗುಣಶಿ, ಹೀರೇಬೂದಿಹಾಳ, ಖಾಜಿಬೂದಿಹಾಳ ಸೇರಿದಂತೆ 16 ಹಳ್ಳಿಗಳಿಗೆ ನಿತ್ಯವೂ ಬಿಸಿಯೂಟ ಸಿದ್ಧಪಡಿಸಿ ಕಳುಹಿಸಲಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನ : ಬಿಸಿಯೂಟ ಯೋಜನೆಗೆ ಹೊಳಬಸು ಶೆಟ್ಟರ ಹಾಗೂ ಅವರ ಸಹೋದರ ಶ್ರೀಧರ ಶೆಟ್ಟರ, ಅಳಿಯ ಪ್ರದೀಪ ಕಂಚಾಣಿ ಸಾಕಷ್ಟು ಶ್ರಮವಹಿಸಿದ್ದು, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ನಿತ್ಯ 5700 ಮಕ್ಕಳಿಗೆ ಕೇವಲ ಒಂದೂವರೆ ಗಂಟೆಯಲ್ಲಿ ಅಡುಗೆ ಸಿದ್ಧಪಡಿಸುವ ಯಂತ್ರ ಅಳವಡಿಸಿದ್ದಾರೆ. ಈ ಬಿಸಿಯೂಟ ಕೇಂದ್ರದಲ್ಲಿ ಅಕ್ಕಿ ಸ್ವತ್ಛಗೊಳಿಸಲು, ಕಾಯಿಪಲ್ಲೆ ಕತ್ತರಿಸಲು, ತೊಳೆಯಲು ಎಲ್ಲದಕ್ಕೂ ಯಂತ್ರಗಳನ್ನು ಅಳವಡಿಸಿದ್ದಾರೆ. 8 ಲಕ್ಷ ರೂ. ವೆಚ್ಚದಲ್ಲಿ ಬಾಯ್ಲರ್‌ ಅಳವಡಿಸಿದ್ದು, ಇದು ಅಡುಗೆ ತಯಾರಿಕೆಗೆ ಎಷ್ಟು ಪ್ರಮಾಣದಲ್ಲಿ ಬಿಸಿ ಬೇಕೋ ಅಷ್ಟನ್ನೇ ಮಾತ್ರ ಕಳಿಸುವಂತಹ ತಂತ್ರಜ್ಞಾನ ಹೊಂದಿದೆ.

ಶಿಕ್ಷಣ ಕ್ರಾಂತಿ: ಉತ್ತರಕರ್ನಾಟಕ ಭಾಗದ ಮಕ್ಕಳು, ಪಾಲಕರು ಶಿಕ್ಷಣಕ್ಕಾಗಿ ಮಂಗಳೂರು, ಮೂಡಬಿದರೆ ಎನ್ನುತ್ತಿದ್ದ ಸಮಯದಲ್ಲಿ ಅವರಿಂದಲೇ ಇಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸೋಣ ಎಂದುಕೊಂಡು ಗ್ರಾಮೀಣ ಭಾಗದಲ್ಲಿ ತಮ್ಮ ತಂದೆ ಹೆಸರಿನ ಎಸ್‌.ಆರ್‌. ಶೆಟ್ಟರ ಸ್ವತಂತ್ರ ಪಿಯು ಕಾಲೇಜು ಆರಂಭಿಸಿ, ಪ್ರಸಿದ್ಧª ಶಿಕ್ಷಣ ತಜ್ಞ ಜಯಪ್ರಕಾಶ ಮಾವಿನಕುಳಿ ಸೇರಿದಂತೆ ಮಂಗಳೂರು ಭಾಗದ ಪ್ರತಿಭಾವಂತ ಉಪನ್ಯಾಸಕರನ್ನು ಕರೆಯಿಸಿ ಕಾಲೇಜು ಆರಂಭಿಸಿದ್ದಾರೆ. ಮಂಗಳೂರು ರೀತಿಯಲ್ಲಿ ಶಿಕ್ಷಣ ಕೊಡಿಸುವಲ್ಲಿ ಮುನ್ನುಡಿ ಬರೆದಿದ್ದಾರೆ.

ಪ್ರಾಥಮಿಕ ಹಂತದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂದು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಹೆಸರಿನಲ್ಲಿ ನೆಹರು ಅಂತಾರಾಷ್ಟ್ರೀಯ ಪಬ್ಲಿಕ್‌ ಶಾಲೆ ಆರಂಭಿಸಿ ಗ್ರಾಮೀಣ ಭಾಗದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಕೊಡಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದ ಒಂದು ಭಾಗವಾಗಿ ಸ್ಥಳೀಯ ವಿದ್ಯಾವಂತ ಯುವಕ-ಯುವತಿಯರಿಗೆ ನರ್ಸಿಂಗ್‌ ಶಿಕ್ಷಣ ಕೊಡಿಸುವ ಸಲುವಾಗಿ ಪ್ಯಾರಾ ಮೆಡಿಕಲ್‌ ಕಾಲೇಜು ಆರಂಭಿಸಿದ್ದಾರೆ.

ಉದ್ಯಮಕ್ಕೂ ಸೈ: ರಾಜಕೀಯ, ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೆ ಅಲ್ಲದೇ ಉದ್ಯಮ ಕ್ಷೇತ್ರದಲ್ಲೂ ಹೊಳಬಸು ಮುನ್ನುಗ್ಗುತ್ತಿದ್ದಾರೆ. ಬಾದಾಮಿಯ ಪ್ರಸಿದ್ಧ ಕೋರ್ಟ್‌ ಹೋಟೆಲ್‌ ಖರೀದಿಸಿ ಆ ಮೂಲಕ ಹೋಟೆಲ್‌ ಉದ್ಯಮದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ನಾಲ್ಕು ಜನ ಸ್ನೇಹಿತರೊಂದಿಗೆ ಸೇರಿ ಕೆಲವಡಿ ಗ್ರಾಮದ ಹತ್ತಿರ ಕೊರೊನಾ ಸಮಯದಲ್ಲಿ ಆಕ್ಷಿಜನ್‌ ಸಂಸ್ಕರಣಾ ವಿತರಣಾ ಘಟಕ ಆರಂಭಿಸಿ ಸಂಕಷ್ಟದ ಸಮಯದಲ್ಲಿ ನೆರವಾದ ಮಾತೃಹೃದಯಿ ಎಂದರೂ ತಪ್ಪಲ್ಲ.

ಮೂಕೇಶ್ವರಿ ಗುಡಿಗೆ ಹಗಲಿರುಳು ಶ್ರಮ : ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಶ್ರೀ ಮೂಕೇಶ್ವರಿ ದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವಲ್ಲಿ ಶೆಟ್ಟರ ಶ್ರಮ ಅಪಾರವಾಗಿದೆ. ತಾಯಿ ಮೂಕೇಶ್ವರಿ ದೇವಸ್ಥಾನ ಜಿಲ್ಲೆಯಲ್ಲಿಯೇ ಮಾದರಿ ದೇವಸ್ಥಾವನ್ನಾಗಿ ಮಾಡುವ ಹೆಬ್ಬಯಕೆಯಿಂದ ಪಟ್ಟಣದ ಎಲ್ಲ ಮುಖಂಡರು, ಸಾರ್ವಜನಿಕರೊಂದಿಗೆ ಸೇರಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಬಾದಾಮಿ ಶಾಸಕರಾಗಿದ್ದ ವೇಳೆ ಈ ದೇವಸ್ಥಾನಕ್ಕೆ 2 ಕೋಟಿ ರೂ. ಅನುದಾನ ಕೊಡಿಸುವಲ್ಲೂ ಪ್ರಮುಖ ಪಾತ್ರ ವಹಿಸಿರುವುದು ಸುಳ್ಳಲ್ಲ.

ಕುಡಿಯುವ ನೀರು-ಏತ ನೀರಾವರಿ : ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಾಮಿ, ಕೆರೂರ ಸೇರಿ ಶಾಶ್ವತ ಕುಡಿವ ನೀರಿನ ಸೌಲಭ್ಯ ಕಲ್ಪಿಸಿದಾರೆ. ಕೆರೂರು ಹಾಗೂ ಸುತ್ತಲಿನ ರೈತರ ಭೂಮಿಗೆ ನೀರುಣಿಸುವ ಕೆರೂರ ಏತ ನೀರಾವರಿ ಯೋಜನೆ ಆರಂಭಿಸಿ ಸಿದ್ದರಾಮಯ್ಯ ಅವರ ಆದೇಶದಂತೆ ಸಮರ್ಪಕವಾಗಿ ಜನತೆಗೆ ಸೌಲಭ್ಯ ತಲುಪಿಸಿ ಸಿದ್ದರಾಮಯ್ಯ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬಾದಾಮಿ ತಾಲೂಕಿಗೆ ಶಿಕ್ಷಣದ ವರದಾನ: ಗುಳೇದಗುಡ್ಡ ಪಟ್ಟಣದಲ್ಲಿ ಜವಳಿ ಪಾರ್ಕ್‌,ಡಿಪ್ಲೊಮಾ ಕಾಲೇಜ್‌, ಸರಕಾರಿ ಪ್ರಥಮ ದರ್ಜೆ ಕಾಲೇಜ್‌, ಕೆರೂರಲ್ಲಿ ಸರಕಾರಿ ಐಟಿಐ ಕಾಲೇಜ್‌, ಮತ್ತು ಸರಕಾರಿ ಪ್ರೌಢಶಾಲೆ ತಲೆ ಎತ್ತಿದ್ದು, ಇಲ್ಲೂ ಸಹ ಶೆಟ್ಟರ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದ ಇವತ್ತು ಕ್ಷೇತ್ರದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಿದೆ.

ಮಲಪ್ರಭಾ ನದಿಗೆ ನೀರು ಹರಿಸಿ ರೈತರಿಗೆ ನೆರವು: ಬೇಸಿಗೆಯಲ್ಲಿ ಮಲಪ್ರಭಾ ನದಿಗೆ ನೀರಿಲ್ಲದೇ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಸಿದ್ದರಾಮಯ್ಯ ಅವರಿಗೆ ರೈತರ ಸಂಕಷ್ಟ ಹೇಳುವ ಮೂಲಕ ರೈತರ ಬೆಳೆಗಳಿಗೆ ನವಿಲು ತೀರ್ಥ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಮಾಡಿ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ.

ಬಡವರಿಗೆ ಸೂರು: ಕ್ಷೇತ್ರದಲ್ಲಿ ಬಡವರಿಗೆ ಬಸವ ವಸತಿ ಯೋಜನೆಯಡಿ 7 ಸಾವಿರ ಆಶ್ರಯ ಮನೆಗಳ ಸೌಲಭ್ಯ ಕಲ್ಪಿಸಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಬಡವರಿಗೆ ಇಷ್ಟು ಮನೆಗಳನ್ನು ಕಲ್ಪಿಸಿರುವುದು ಕ್ಷೇತ್ರದ ಹೊಸ ಇತಿಹಾಸದಲ್ಲೇ ಮೊದಲು. ಈ ಎಲ್ಲ ಸಂದರ್ಭದಲ್ಲೂ ಕ್ಷೇತ್ರದ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಜನರ ಸಮಸ್ಯೆ ಬಗೆಹರಿಸುವಲ್ಲಿ ಸೇತುವೆಯಾದವರು ಹೊಳಬಸು ಶೆಟ್ಟರ.

ಪ್ರವಾಹ-ಕೊರೊನಾ ಸಂಕಷ್ಟಕ್ಕೆ ಸ್ಪಂದನೆ : ಕೋವಿಡ್‌ ವೇಳೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಲಹೆ ಮೇರೆಗೆ ಕ್ಷೇತ್ರದ ಮೂರು ಪಟ್ಟಣಗಳು ಹಾಗೂ 114 ಹಳ್ಳಿಗಳ ಕೃಷಿಕರು, ದಿನಗೂಲಿ ನೌಕರರು, ಬಡ ಕಾರ್ಮಿಕರ ಪ್ರತಿ ಮನೆಗೂ ಆಹಾರ ಧಾನ್ಯ ಸೇರಿ 2.46 ಲಕ್ಷ ಮಾಸ್ಕ್ ವಿತರಿಸುವಲ್ಲಿ ಹೊಳಬಸು ಶೆಟ್ಟರ ಅವರು ಯುವಕರ ತಂಡ ಸಾರ್ಥಕತೆ ಮೆರೆದಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಸೂಚನೆಯಂತೆ ರೈತರು ಬೆಳೆದ ತರಕಾರಿ ಹಾಗೂ ಹಣ್ಣು ಖರೀದಿಸುವ ವ್ಯವಸ್ಥೆ ಕೈಗೊಂಡಿದ್ದ ಶೆಟ್ಟರ ತಾಲೂಕಿನ ಹಿರಿಯ ಕಾಂಗ್ರೆಸ್‌ ಮುಖಂಡರೊಂದಿಗೆ ಸೇರಿ ರೈತರ ಬದುಕಿಗೆ ಆಸರೆಯಾಗುವ ಕಾರ್ಯ ಶ್ಲಾಘನೀಯ. ಗುಳೆ ಹೋಗಿದ್ದವರು ವಾಪಸ್‌ ಊರಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯದ ಕಿಟ್‌ ನೀಡಿರುವುದು ಜನಮಾನಸದಲ್ಲಿ ಇಂದಿಗೂ ಅವಿಸ್ಮರಣೀಯ.

ನಾನು ಬಾದಾಮಿ ಕ್ಷೇತ್ರದ ಶಾಸಕನಾಗಿದ್ದಾಗ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದ್ದು, ಇವುಗಳಲ್ಲಿ ಬಹುತೇಕ ಯೋಜನೆಗಳು ಕಾರ್ಯ ರೂಪಕ್ಕೆ ತಂದು ಜನತೆಯ ಭರವಸೆ ಈಡೇರಿಸಲಾಗಿದೆ. ಈ ಕಾರ್ಯದ ಯಶಸ್ಸಿನ ಹಿಂದೆ ಅನೇಕ ಕಾಂಗ್ರೆಸ್‌ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಅವರಿಗೆಲ್ಲ ನಾಯಕರಾಗಿ, ಮಾರ್ಗದರ್ಶನ ನೀಡುತ್ತ ಕ್ಷೇತ್ರದಲ್ಲಿ ನನ್ನ ಜನಸೇವೆಗೆ ಬಲ ತುಂಬಿದವರಲ್ಲಿ ಹೊಳಬಸು ಶೆಟ್ಟರ ಪಾತ್ರ ದೊಡ್ಡದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next