Advertisement

ವಿಕಿಪೀಡಿಯ ಮಾದರಿಯಲ್ಲಿ ಗ್ರಾಮಗಳ ಇತಿಹಾಸ ಸಂಗ್ರಹ

03:05 PM Nov 05, 2019 | Suhan S |

ಹಾವೇರಿ: ಗ್ರಾಮಗಳ ಇತಿಹಾಸ, ಮಹತ್ವ ತಿಳಿಸಲು ವಿಕಿಪೀಡಿಯ ಮಾದರಿಯಲ್ಲಿ ಮಾಹಿತಿ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದರು.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳ ಮಾಹಿತಿ ಸಂಗ್ರಹಿಸಲು ಕಾಲೇಜು ವಿದ್ಯಾರ್ಥಿಗಳನ್ನು ಶನಿವಾರ, ರವಿವಾರ ಎರಡು ದಿನ ಬಳಸಿಕೊಳ್ಳಬೇಕು. ಇದಕ್ಕಾಗಿ ಪ್ರಾಚಾರ್ಯರ ಸಭೆ ಕರೆದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ನೊಡೆಲ್‌ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಸೂಚಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲೆಯ ಗ್ರಾಮಗಳ ಇತಿಹಾಸ, ಗ್ರಾಮದ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮಗಳ ಪರಿಚಯ, ಅಧ್ಯಯನದ ಜತೆಗೆ ನಮಗೊಂದು ಅಧ್ಯಯನ ವರದಿ ಸಿಗುತ್ತದೆ. ಮಾಹಿತಿ ಸಂಗ್ರಹಕ್ಕೊಂದು ನಮೂನೆ ಸಿದ್ಧಪಡಿಸಿ ನೀಡಲಾಗುವುದು. ಅದನ್ನು ಭರ್ತಿ ಮಾಡಿಕೊಡಬೇಕು. ಇದರಿಂದ ವಿಕಿಪಿಡಿಯಾ ಮಾದರಿಯಲ್ಲಿ ಗ್ರಾಮಗಳ ಮಾಹಿತಿ ಎಲ್ಲೆಡೆ ಸಿಗುವಂತೆ ವ್ಯವಸ್ಥೆ ಮಾಡಲು ಅವಕಾಶವಾಗುತ್ತದೆ ಎಂದು ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಸಂರಕ್ಷಣಾ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸುತ್ತಿದ್ದು ಜಿಲ್ಲೆಯಲ್ಲಿ ಸಂರಕ್ಷಿಸಬೇಕಾದ ಸ್ಮಾರಕಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಆದೇಶಿಸಿದರು.

ಪ್ರಸ್ತಾವನೆ ಸಲ್ಲಿಸಿ: ಜಿಲ್ಲೆಯ ಪ್ರವಾಸಿತಾಣಗಳ ನಕ್ಷೆ ತಯಾರಿ ಮಾಡಬೇಕು. ಮುಖ್ಯ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಪ್ರವಾಸಿ ವರ್ತುಲ ನಿರ್ಮಾಣ ಮಾಡಬೇಕಾಗಿದೆ. ಅಗತ್ಯವಿರುವ ಹೊಟೆಲ್‌ಗ‌ಳ ಪ್ರಸ್ತಾವನೆ, ಮೊಬೈಲ್‌ ಟಾಯ್ಲಟ್‌, ಮೊಬೈಲ್‌ ಕ್ಯಾಂಟೀನ್‌ಗಳ ಬೇಡಿಕೆ ಬಗ್ಗೆ ಪ್ರಸ್ತಾವನೆ, ಅದೇ ರೀತಿ ಪ್ರವಾಸಿ ತಾಣಗಳಿಗೆ ಬೇಕಾದ ರಸ್ತೆ, ನೀರು, ವಿದ್ಯುತ್‌, ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯವರು ಸೇರಿ ವಾರ್ಷಿಕ ಕ್ಯಾಲೆಂಡರ್‌ ಮಾಡಿ ಎಂದು ಸಚಿವರು ಅ ಧಿಕಾರಿಗಳಿಗೆ ಸೂಚಿಸಿದರು.

ಟಾಸ್ಕ್ಫೋರ್ಸ್‌ ರಚನೆ: ಪ್ರವಾಸೋದ್ಯಮಕ್ಕೆ ಸಂಬಂಧಿಸಿ ರಾಜ್ಯ ಮಟ್ಟದಲ್ಲಿ ಸುಧಾಮೂರ್ತಿ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ರಚಿಸಿದ್ದು, ಕೂಡಲೇ ಜಿಲ್ಲಾ ಮಟ್ಟದಲ್ಲಿಯೂ ಟಾಸ್ಕ್ಫೋರ್ಸ್‌ ಸಮಿತಿ ರಚಿಸಬೇಕು ಎಂದು ಸಚಿವ ಸಿ.ಟಿ. ರವಿ ಹೇಳಿದಾಗ, ಒಂದು ವಾರದಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ರಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸವಣೂರಿನ ವಿಷ್ಣುತೀರ್ಥ, ಶಿಗ್ಗಾವಿಯ ಗಾಯತ್ರಿ ಮಂದಿರ, ಪಂಚಪಾಂಡವರ ಮಂದಿರ, ಸೂರ್ಯನಾರಾಯಣ ಮಂದಿರ, ಹಾನಗಲ್‌ ನ ತಾರಕೇಶ್ವರ ದೇವಸ್ಥಾನ, ಬಂಕಾಪುರದ ನಗರೇಶ್ವರ ದೇವಸ್ಥಾನ ಸೇರ್ಪಡೆ ಮಾಡಬೇಕು ಎಂದು ಸಚಿವ ಬೊಮ್ಮಾಯಿ ಸೂಚಿಸಿದರು. ಅನುದಾನ ವಾಪಸ್‌ ಎಚ್ಚರಿಕೆ: ಸ್ವಾತಂತ್ರ ಹೋರಾಟಗಾರರ ವಸ್ತು ಸಂಗ್ರಹಾಲಯಕ್ಕೆ ಅನುದಾನ ಬಂದು ಮೂರು ವರ್ಷವಾದರೂ ಕೆಲಸ ಆಗಿಲ್ಲ. ಈ ಡಿಸೆಂಬರ್‌ನಲ್ಲಿ ಬಳಸಿಕೊಳ್ಳದಿದ್ದರೆ ಅನುದಾನ ವಾಪಸ್‌ ಹೋಗಲಿದೆ.

Advertisement

ಜಿಲ್ಲಾ ಕೇಂದ್ರದಲ್ಲಿ ನಿವೇಶನ ನೀಡಿದರೆ, ಕಲಾಮಂದಿರಕ್ಕೆ ಅನುದಾನ ನೀಡಲಾಗುವುದು ಎಂದ ಸಚಿವ ಸಿ.ಟಿ. ರವಿ, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಏನು ಬೇಕೋ ಕೇಳಿ ಅನುದಾನ ಕೊಡಲಾಗುವುದು. ಆದರೆ, ಯಾವುದೇ ಮಠ, ಸಂಸ್ಥೆಗೆ ಮೆಚ್ಚಿಸಲು ಕೇಳಿದರೆ ಅನುದಾನ ನೀಡಲ್ಲ ಎಂದು ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಪಂ ಸಿಇಓ ರಮೇಶ ದೇಸಾಯಿ, ಎಸ್ಪಿ ಕೆ.ಜಿ. ದೇವರಾಜು ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

ಸಾಮಾನ್ಯ ಮಾಹಿತಿ ಇಲ್ವಾ?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಶಶಿಕಲಾ ಹುಡೇದ ಅವರು ಸಭೆಯಲ್ಲಿ ವರದಿ ನೀಡುವಾಗ ಲಕ್ಷ ಇದ್ದುದನ್ನು ಕೋಟಿ, ಕೋಟಿ ಇದ್ದುದ್ದನ್ನು ತಪ್ಪು ತಪ್ಪಾಗಿ ಹೇಳಿದ್ದರಿಂದ ಸಚಿವ ಸಿ.ಟಿ. ರವಿ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. “ನಿಮಗೆ ಸಾಮಾನ್ಯ ಮಾಹಿತಿಯೂ ಕೊಡಲು ಬರೊದಿಲ್ವಾ? ಯಾವ ಇಲಾಖೆಯಿಂದ ಡೆಪ್ಯೂಟೇಶನ್‌ ಬಂದಿದ್ದೀರಿ? ಎಂದು ಕೆಂಡಕಾರಿದರು. ಆಗ ಅಧಿಕಾರಿ, “ನನ್ನ ಮೂಲ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಎಂದಾಗ ಮತ್ತಷ್ಟು ಕೆರಳಿ, ಇಷ್ಟು ಸಣ್ಣ ಮಾಹಿತಿ ಸಹ ಕೊಡಲು ಬರಲ್ಲ ಎಂದರೆ ಹೇಗೆ ನಿರ್ವಹಣೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮಾರ್ಚ್‌ಗೆ ಲೆಕ್ಕ ಬರೆಯೋ ಕೆಲಸ ಆಗಬಾರದು. ವಾಸ್ತವದಲ್ಲಿ ಕೆಲಸ ಆಗಬೇಕು ಎಂದು ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next