Advertisement
ಹಿರಿಯಡಕ ಗೋಪಾಲರಾಯರನ್ನು ನಾನು ಮೊದಲ ಬಾರಿ ನೋಡುವಾಗ ಅವರು ನಲ್ವತ್ತೈದು-ಐವತ್ತರ ತರುಣ! ಉಡುಪಿಯ ಯಕ್ಷಗಾನದ ಕೇಂದ್ರದಲ್ಲಿ ಹವ್ಯಾಸಿ ಕಲಾಸಕ್ತರಿಗಾಗಿ ರಾತ್ರಿ ತರಗತಿ ನಡೆಯುತ್ತಿತ್ತು. ಅದಕ್ಕೆ ನಾನು ಹಾಜರಾಗುತ್ತಿದ್ದೆ. ಆಗ ಹಿರಿಯಡಕ ಗೋಪಾಲ ರಾಯರು ಕೂಡ ಗುರುಗಳಾಗಿದ್ದರು. ತಿಂಗಳಿಗೆ ಒಂದು ರೂಪಾಯಿಯೊ ಒಂದೂವರೆ ರೂಪಾಯಿಯೊ ಶುಲ್ಕ. ಮುಂದೆ ಅಂದರೆ 1971ರಲ್ಲಿ ಹಗಲಿನ ತರಗತಿಗೆ ಸೇರಿ ಪೂರ್ಣಾವಧಿ ವಿದ್ಯಾರ್ಥಿಯಾಗಿ ಎರಡು ವರ್ಷಗಳ ತರಬೇತಿ ಮುಗಿಸಿದೆ. ನಮ್ಮ ಸೌಭಾಗ್ಯವೆಂದರೆ, ಆಗ ಕೇಂದ್ರದ ಗುರುಗಳಾಗಿದ್ದವರು ಬಡಗುತಿಟ್ಟಿನ ಮಹಾರಥರೆನಿಸಿಕೊಂಡ ಮಟಪಾಡಿ ವೀರಭದ್ರ ನಾಯಕರು, ನೀಲಾವರ ರಾಮಕೃಷ್ಣಯ್ಯರವರು ಮತ್ತು ಹಿರಿಯಡಕ ಗೋಪಾಲರಾಯರು. ಬಹುಶಃ ಬಡಗುತಿಟ್ಟಿನ ಯಕ್ಷಗಾನ ಪಾಠಕ್ಕೆ “ಲಕ್ಷಣ’ದ ರೂಪ ದೊರೆತದ್ದು ಇವರ ಕಾಲದಲ್ಲಿಯೇ.
Related Articles
Advertisement
ಮದ್ದಲೆಗಾರರೆಂದು ಮನ್ನಣೆ ಪಡೆದರೂ ಹಿರಿಯಡಕ ಗೋಪಾಲರಾಯರು ಮುಮ್ಮೇಳ- ಹಿಮ್ಮೇಳಗಳ ಸರ್ವಸಂಗತಿಗಳನ್ನು ಅರಗಿಸಿಕೊಂಡವರು. ಈಗಿನ ಯಕ್ಷಗಾನ ಕೇಂದ್ರದ “ಸಮಗ್ರ’ ಪಾಠಕ್ರಮಕ್ಕೂ ಅಂದಿನ ಗುರುಗಳೇ ಆದರ್ಶ. “ಅಭಿವ್ಯಕ್ತಿ ಒಂದರಲ್ಲಿ, ಅನುಭವ ಎಲ್ಲದರಲ್ಲಿ’ ಎಂಬಂಥ ನಡೆಯಲ್ಲಿ ಹೆಜ್ಜೆಯಿಡಲು ಕಲಿಸಿದವರು ಹಿರಿಯಡಕ ಗೋಪಾಲರಾಯರಂಥ ಗುರುಗಳು. ಇಂದು ಬಡಗುತಿಟ್ಟಿನ ನಾಟ್ಯಕ್ರಮ ಕೌಶಲವನ್ನು ಕಳೆದುಕೊಳ್ಳುತ್ತಿದೆ. ವಿಷಮ ಲಯದಲ್ಲಿ ತಾಳಕ್ಕೆ ಹೊಂದಿಸುತ್ತಿದ್ದ ಕಲೆಗಾರಿಕೆ ಕ್ಷೀಣಿಸುತ್ತಿದೆ.
ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಮಿ¤ಯವರ ಹೆಸರನ್ನು ನೀವೆಲ್ಲ ಕೇಳಿರಬಹುದು. ಅವರ ಶಿಷ್ಯ ಹಾರಾಡಿ ನಾರಾಯಣ ಗಾಣಿಗರ ಬಳಿಗೆ ಒಮ್ಮೆ ಸ್ತ್ರೀವೇಷದ ನಾಟ್ಯಕ್ರಮ ಕಲಿಯಲು ಹೋಗಿದ್ದೆ. ಅವರು ಏಕತಾಳದ ನಾಟ್ಯಕ್ರಮವನ್ನು ಕಲಿಸಿದ ಕ್ರಮ ಬೇರೆಯೇ. ಲೆಕ್ಕಾಚಾರ ಅಭಿನ್ನ, ಅಭಿವ್ಯಕ್ತಿ ಮಾತ್ರ ವಿಭಿನ್ನ. “ಈಗ ಆ ಸೊಗಸಿಲ್ಲ. ಹಳೆಯದ್ದು ಕಾಣೆಯಾಗಿದೆ’ ಎಂದು ಅವರು ವಿಷಾದದಿಂದ ನನ್ನಲ್ಲಿ ಹೇಳಿದರು. ನಾನು ಅವರು ಹೇಳಿಕೊಟ್ಟುದನ್ನು ಅಭ್ಯಾಸ ಮಾಡಿದೆ. ನಾನು ಕುಣಿಯಬಹುದು, ಅದಕ್ಕೆ ಅನುಗುಣವಾಗಿ ಮದ್ದಲೆ ನುಡಿಸುವವರು ಯಾರಿದ್ದಾರೆ? ನೇರವಾಗಿ ಗೋಪಾಲರಾಯರ ಬಳಿಗೆ ಹೋದೆ. ಅಷ್ಟು ಹೊತ್ತಿಗೆ ಅವರು ಯಕ್ಷಗಾನ ಕೇಂದ್ರವನ್ನು ತೊರೆದು ಸ್ವತಂತ್ರವಾಗಿ ತರಗತಿಗಳನ್ನು ನಡೆಸುತ್ತಿದ್ದರು. “ಇದೆಲ್ಲ ಮೊದಲು ಇತ್ತು ಮಾರಾಯ, ಈಗ ಇಲ್ಲ. ನೋಡ್ವಾ, ನೀನು ಕುಣಿ, ನಾನು ಬಾರಿಸುತ್ತೇನೆ’ ಎಂದರು. ನಾನು ಕುಣಿದೆ. ನನ್ನನ್ನು ಅಕ್ಷರಶಃ ಅವರೇ ಕುಣಿಸಿದರು. ಅವರ “ಪಟಾಂ’ ನುಡಿತ ಇದೆ ನೋಡಿ, ಅದು ಕಪಾಳಕ್ಕೆ ಬಾರಿಸಿದ ಹಾಗೆ! ಅಷ್ಟು ದೃಢ. ಇವತ್ತಿಗೂ ಅವರದ್ದು ಶುದ್ಧ ಸಾಂಪ್ರದಾಯಿಕ ಶೈಲಿಯ ಮದ್ದಲೆ. ಏರು ಮದ್ದಲೆಯನ್ನು ಜನಪ್ರಿಯಗೊಳಿಸಿದವರು ಅವರೇ. ತಬಲಾದ ಪ್ರೇರಣೆಯಿಂದ ರೂಪಿಸಿದ ಈ ಮದ್ದಲೆಯ, ಇಳಿಮದ್ದಲೆಯ ಘನತೆಯ ನಾದಕ್ಕೆ ಸರಿಸಮವಿಲ್ಲದಿರಬಹುದು, ಚೆಂಡೆಗೂ ಸೂಕ್ತ ಸಾಥಿಯಲ್ಲದಿರಬಹುದು. ಆದರೆ, ಸಾಂದರ್ಭಿಕವಾಗಿ ಇದನ್ನು ಬಳಸಿದರೆ ಪ್ರದರ್ಶನದ ಸೊಗಸು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಗೋಪಾಲರಾಯರ ಸೃಜನಶೀಲತೆಗೆ, ಪ್ರಯೋಗಶೀಲತೆಗೆ ಇದು ಸಾಕ್ಷಿ.
ಹಿರಿಯಡಕ ಗೋಪಾಲರಾಯರಿಗೆ ಶತಮಾನ; ಅವರೊಳಗಿನ ಕಲೆಗೂ ಶತಮಾನವೇ. ಎಂದರೆ, ಅವರು ಜ್ಞಾನಿಯಾಗಿಯೂ ವೃದ್ಧರು. ಒಂದು ಶತಮಾನದ ಯಕ್ಷಗಾನಕ್ಕೆ ಜೀವಂತ ದಾಖಲೆಯಾಗಿ ನಮ್ಮ ನಡುವೆ ಇರುವವರು. ಹಿರಿಯಡಕ ಗೋಪಾಲರಾಯರಿಂದಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ತೂಕ ಹೆಚ್ಚಿದೆ. ಅವರು ರಾಷ್ಟ್ರಮಟ್ಟದ ಕಲಾವಿದರ ಪಂಕ್ತಿಯಲ್ಲಿ ಅಲಂಕರಿಸಬೇಕಾದವರು ಎಂಬುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಆದರೆ, ಅವರ ಪ್ರತಿಭೆ-ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಕೆಲಸ ನಡೆಯಬೇಕಿದೆ. ಹಿರಿಯಡಕ ಗೋಪಾಲರಾಯರು ರಾಷ್ಟ್ರಪ್ರಶಸ್ತಿಗೆ ಭಾಜನರಾಗುವ ಸುಸಂದರ್ಭವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನನ್ನದಾಗಲಿ.
ಬನ್ನಂಜೆ ಸಂಜೀವ ಸುವರ್ಣ