Advertisement

ಕ್ಯಾಬ್‌ ಲಿಂಕ್‌ಗೆ ಹಿಂದಿ ಪರೀಕ್ಷೆ! 

11:15 AM Jun 25, 2017 | |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಹಿಂದಿ ಬಳಕೆ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಗರದಲ್ಲಿರುವ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳೂ ಹಿಂದಿಗೆ ಪ್ರಾಶಸ್ತ್ಯ ನೀಡುತ್ತಿದ್ದು, ಈ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. 

Advertisement

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳೊಂದಿಗೆ ಚಾಲಕರು ಈ ಮೊದಲು ಯಾವುದೇ ಅಡತಡೆಗಳಿಲ್ಲದೆ ಸುಲಭವಾಗಿ ತಮ್ಮ ವಾಹನಗಳನ್ನು ಜೋಡಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜೋಡಣೆ ಮಾಡಿಕೊಳ್ಳುವ ಮುನ್ನ ಚಾಲಕರಿಗೆ “ಹಿಂದಿ ಮೌಖೀಕ ಪರೀಕ್ಷೆ’ ನಡೆಸಲಾಗುತ್ತಿದೆ. ಈ ಮೂಲಕ ನಿಧಾನವಾಗಿ ಹಿಂದಿಯನ್ನು ಹೇರಲಾಗುತ್ತಿದೆ ಎಂದು ಕೆಲ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ. 

ಮುರುಗೇಶಪಾಳ್ಯ, ನಾಗವಾರ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ನಗರದ ಅಲ್ಲಲ್ಲಿ ಇರುವ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳ ಕಚೇರಿಗಳಲ್ಲಿ ವಾಹನಗಳನ್ನು “ಲಿಂಕ್‌’ ಮಾಡಿಕೊಳ್ಳಲು ಮುಂದಾದ ಅನೇಕ ಚಾಲಕರಿಗೆ ಈ “ಹಿಂದಿ ಪರೀಕ್ಷೆ’ ಎದುರಾಗಿದೆ. ಹಿಂದಿ ಬಾರದಿದ್ದರೆ, ಇಂಗ್ಲಿಷ್‌ ಭಾಷೆಯಾದರೂ ತಕ್ಕಮಟ್ಟಿಗೆ ನಿರ್ವಹಣೆ ಮಾಡಲು ಬರುತ್ತದೆಯೇ ಎಂಬ ಪರೀಕ್ಷೆ ಮಾಡಲಾಗುತ್ತದೆ. 

ಹಿಂದಿ ಬರದಿದ್ದರೆ ಇನ್ನೋವಾಗೆ ಇಂಡಿಕಾ ವ್ಯಾಲ್ಯು: ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಚಾಲಕರ ಬಳಿ ಕನ್ನಡವನ್ನು ಕೇಳುವುದೇ ಇಲ್ಲ. ಹಿಂದಿ ಅಥವಾ ಇಂಗ್ಲಿಷ್‌ ಇವೆರಡರಲ್ಲಿ ಒಂದು ಮಾತ್ರ ಬರಲೇಬೇಕು. ಅದರಲ್ಲೂ ಹಿಂದಿಗೆ ಮೊದಲ ಆದ್ಯತೆ ಕೊಡಲಾಗುತ್ತಿದೆ.  “ಕೆಲ ದಿನಗಳ ಹಿಂದೆ ಮುರಗೇಶಪಾಳ್ಯದಲ್ಲಿರುವ ಓಲಾ ಕಚೇರಿಗೆ ನನ್ನ ಇನ್ನೊವಾ ಕಾರನ್ನು ಅಟ್ಯಾಚ್‌ ಮಾಡಲು ಹೋಗಿದ್ದೆ. ಚಾಲನಾ ಪರವಾನಗಿ ಹಾಗೂ ವಾಹನದ ದಾಖಲೆಗಳನ್ನು ಸಲ್ಲಿಸಿದೆ.

ನಂತರ ಒಂದು ಟೋಕನ್‌ ಕೊಟ್ಟರು. ಅದನ್ನು ತೆಗೆದುಕೊಂಡು ಮತ್ತೂಂದು ಕೌಂಟರ್‌ಗೆ ಕಳುಹಿಸಿದರು. ಅಲ್ಲಿ ಹಿಂದಿ ಬರುತ್ತದೆಯೇ? ಗ್ರಾಹಕರ ಜತೆ ಹಿಂದಿಯಲ್ಲಿ ಹೇಗೆ ವ್ಯವಹಾರ ಮಾಡುತ್ತೀರಾ ಎಂದು ಕೇಳಿದರು. “ಹಿಂದಿ ಬರುವುದಿಲ್ಲ’ ಎಂದಾಗ, ಇಂಗ್ಲಿಷ್‌ ಬರುತ್ತದೆಯೇ ಎಂದು ಕೇಳಿದರು. ಅದಕ್ಕೂ ಇಲ್ಲ ಎಂದಾಗ, “ಸರಿ ಹಾಗಿದ್ದರೆ ತಿಂಗಳಮಟ್ಟಿಗೆ ಇಂಡಿಕಾ ಪಟ್ಟಿಯಲ್ಲಿ ಓಡಿಸಿ. ಆಮೇಲೆ ನೋಡೋಣ ಎಂದು ಸೂಚಿಸಿದರು’ ಎಂದು ಆಡುಗೋಡಿಯ ಎಸ್‌. ಗುರು ಅಸಹಾಯಕತೆ ತೋಡಿಕೊಂಡರು.  

Advertisement

ಒತ್ತಾಯ ಎಷ್ಟು ಸರಿ?: “ನನ್ನದು ಸ್ವಿಫ್ಟ್ ಡಿಝೈರ್‌ ಕಾರು ಇದೆ. ಆರು ತಿಂಗಳ ಹಿಂದೆ ಓಲಾ ಮತ್ತು ಉಬರ್‌ಗೆ ಅಟ್ಯಾಚ್‌ ಮಾಡಲು ಹೋದಾಗ, ಬೆಂಗಳೂರಿಗೆ ಹೊರಗಿನ ಜನ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಅವರೊಂದಿಗೆ ವ್ಯವಹರಿಸಲು ಹಿಂದಿ ಸ್ವಲ್ಪವಾದರೂ ಬರಲೇಬೇಕು,’ ಎಂದು ಹೇಳಿದರು. ಆಗ, ಹೇಗೋ ಹಿಂದಿ ಮ್ಯಾನೇಜ್‌ ಮಾಡಿದೆ. ಆದರೆ, ಹೀಗೆ ಬಲವಂತವಾಗಿ ಹಿಂದಿ ಹೇರುತ್ತಿರುವುದು ಎಷ್ಟು ಸರಿ ಸರ್‌?’ ಎಂದು ಕುಮಾರಸ್ವಾಮಿ ಲೇಔಟ್‌ ನಿವಾಸಿ ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ. 

“ನನಗೆ ಮಾತ್ರವಲ್ಲ, ಕೆ.ಆರ್‌. ಪುರದಲ್ಲಿರುವ ನನ್ನ ಸ್ನೇಹಿತ ವೆಂಕಟಾಚಲಪತಿಗೂ ಇದೇ ಅನುಭವ ಆಗಿದೆ. ಹಿಂದಿ ಬಾರದಿದ್ದರೆ ಕೆಲಸ ಕೊಡುವುದಿಲ್ಲ ಎಂದಲ್ಲ; ಕೊಡಬಹುದು. ಆದರೆ, ಈ ಧೋರಣೆಗಳು ಹಿಂದಿ ಕಲಿಕೆಯ ಅನಿವಾರ್ಯತೆಯನ್ನು ಸೃಷ್ಟಿಸುವಂತಿದೆ,’ ಎಂದೂ ಅವರು ಹೇಳುತ್ತಾರೆ. 

ಉತ್ತರ ಪ್ರದೇಶದ ಡ್ರೈವರ್‌ಗಳ ನಿಯೋಜನೆ: ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಇತ್ತೀಚೆಗೆ ತಮ್ಮಲ್ಲಿರುವ ಟ್ಯಾಕ್ಸಿಗಳಿಗೆ ಚಾಲಕರನ್ನು ನೇಮಿಸುವಾಗಲೂ ಹಿಂದಿ ಬಲ್ಲವರಿಗೆ ಅದರಲ್ಲೂ ಉತ್ತರ ಭಾರತದವರಿಗೇ ಆದ್ಯತೆ ನೀಡಿವೆ ಎಂಬ ಆರೋಪವೂ ಕೇಳಿಬಂದಿದೆ. ನಗರದಾದ್ಯಂತ ಸಾವಿರಾರು ಟ್ಯಾಕ್ಸಿಗಳು ಆ್ಯಪ್‌ ಆಧಾರಿತ ಕಂಪೆನಿಗಳ ಬಳಿ ಇವೆ. ಅವುಗಳಿಗೆ ತಿಂಗಳಿಗೆ 15ರಿಂದ 20 ಸಾವಿರ ರೂ. ಮಾಸಿಕ ವೇತನ ಅಥವಾ ಇಂತಿಷ್ಟು ಗಂಟೆಗಳು ಡ್ಯುಟಿ ನಿಗದಿಪಡಿಸಿ ಚಾಲಕರನ್ನು ನಿಯೋಜಿಸಲಾಗಿದೆ. ಅವರಲ್ಲಿ ಬಹುತೇಕರು ಅನ್ಯರಾಜ್ಯದವರು ಎಂದು ಚಾಲಕರು ಆರೋಪಿಸುತ್ತಾರೆ. 

ನಿಯಮ ವಿಧಿಸಿಲ್ಲ; ಉಬರ್‌: ಈ ಬಗ್ಗೆ ಟ್ಯಾಕ್ಸಿ ಕಂಪೆನಿ ಉಬರ್‌ ಅನ್ನು ಸಂಪರ್ಕಿಸಿದರೆ ಅಲ್ಲಿನ ಅಧಿಕಾರಿಗಳು ಹೇಳುವುದೇ ಬೇರೆ. ಹಿಂದಿ ಬರಲೇಬೇಕು ಎಂದು ಯಾವ ಚಾಲಕರಿಗೂ ನಾವ ನಿಯಮ ವಿಧಿಸಿಲ್ಲ. ಅಟ್ಯಾಚ್‌ ಮಾಡಿಕೊಳ್ಳುವಾಗ ಅದನ್ನು ಕೇಳಿದ ಉದಾಹರಣೆಯೂ ಇಲ್ಲ ಎಂದು ಹೇಳಿದ್ದಾರೆ. 

ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕಾಗಿಯೇ ಅಟ್ಯಾಚ್‌ ಮಾಡಿಕೊಳ್ಳುವುದನ್ನು ನಿರಾಕರಿಸಿದ್ದು ಕಂಡುಬಂದರೆ ಹಾಗೂ ಅಂತಹ ವಂಚನೆಗೆ ಒಳಗಾದವರು ಪ್ರಾಧಿಕಾರಕ್ಕೆ ನೇರವಾಗಿ ದೂರು ನೀಡಿದರೆ, ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ಆದರೆ, ವ್ಯವಹಾರದ ದೃಷ್ಟಿಯಿಂದ ಸ್ವಲ್ಪ ಹಿಂದಿ ಕಲಿಯಬೇಕಾಗುತ್ತದೆ ಎಂದಾಗ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ. ಯಾಕೆಂದರೆ, ಅದು ವ್ಯವಹಾರದ ದೃಷ್ಟಿಯಿಂದ ಆತನದ್ದು ಸರಿ ಇರಬಹುದು. ಕನ್ನಡ ಬಿಡಿ ಎಂದು ಅವನು ಎಲ್ಲಿಯೂ ಹೇಳುತ್ತಿಲ್ಲವಲ್ಲ.
– ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next