Advertisement

ಹಿಮ್‌ ಟೂ

06:00 AM Oct 24, 2018 | |

ನೋವುಂಡ ಹೆಣ್ಣಿನ ಹೃದಯದಿಂದ ಎದ್ದ “ಮೀ ಟೂ’ ಮಾರುತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಪುರುಷರನ್ನು ಬುಡಮೇಲು ಮಾಡುತ್ತಲೇ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಮಾರುತ ಸುಪ್ತವಾಗಿ ಹರಿದಾಡುತ್ತಿದೆ. ಅದು “ಹಿಮ್‌ ಟೂ’. ಬದುಕನ್ನು ಕೇವಲ ಒಂದೇ ಕೋನದಿಂದ  ನೋಡಿದರೆ ಸತ್ಯ ಕಣ್ತಪ್ಪಿ ಹೋಗುವುದೇ ಹೆಚ್ಚು.  ಹೀಗಾಗಿ ಯಾವುದೇ ಅಭಿಪ್ರಾಯಕ್ಕೆ ಬರುವ ಮುನ್ನ ಪರಾಮರ್ಶಿಸಬೇಕಾದ್ದು ಔಚಿತ್ಯ. ಅಸಲಿಗೆ ಲೈಂಗಿಕ ಕಿರುಕುಳ ಪ್ರಕರಣಗಳು “ಮೀ ಟೂ’ ಬರುವ ಮುನ್ನವೇ ಮನೋಚಿಕಿತ್ಸಾ ವೈದ್ಯರ ಕೌನ್ಸೆಲಿಂಗ್‌ ಕೋಣೆಯಲ್ಲಿ ಪ್ರಸಾರಗೊಂಡಿದ್ದವು. ಒಟ್ಟಿನಲ್ಲಿ ಇವೆಲ್ಲದರ ಮಧ್ಯೆ ಪ್ರಕೃತಿ ಮತ್ತು ಪುರುಷನ ನಡುವಿನ ಸಮತೋಲನ ಕೆಡುತ್ತಿದೆ ಎಂಬ ಆತಂಕ ಲೇಖಕಿಯದ್ದು.

Advertisement

ಕೇಸ್‌ 1
ಖಡಕ್‌ ಅಧಿಕಾರಿ ಶ್ಯಾಂ, ಕಿರಿಯ ಅಧಿಕಾರಿಗಳ ಕಾರ್ಯನಿರ್ವಹಣೆ/ ಕಾರ್ಯಕ್ಷಮತೆಯ ಸುಧಾರಣೆಗೆಂದು ಬೋರ್ಡ್‌ ಮೀಟಿಂಗ್‌ ಕರೆದಿದ್ದರು. ಕೆಲವರನ್ನು ತರಾಟೆಗೆ ತೆಗೆದುಕೊಂಡಿದ್ದರು, ವಿವರಣೆ ಕೇಳಿದ್ದರು. ಅವರಲ್ಲಿ ತಾರಾ ಕೂಡಾ ಒಬ್ಬರಾಗಿದ್ದರು. ಅವರು “ಊರಿನ ಹವೆ ಒಗ್ಗದೆ ತನ್ನ ಕಾರ್ಯ ನಿರ್ವಹಣೆ ಕುಸಿದಿದೆ, ಮೊದಲು ವರ್ಗ ಮಾಡಿ’ ಎಂದಿದ್ದರು. ಈ ಮನವಿಯನ್ನು ಸ್ವಲ್ಪ ಗಡುಸಾಗಿಯೇ ಶ್ಯಾಮ್‌ ತಳ್ಳಿ ಹಾಕಿದಾಗ ತಾರಾಗೆ ಅಳು ಬಂತು. ನಂತರ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಬೇಕು ಎಂದು ಎಲ್ಲರಿಗೂ ವಾರ್ನಿಂಗ್‌ ಕೊಟ್ಟು ಶ್ಯಾಮ್‌ ಮೀಟಿಂಗ್‌ ಮುಗಿಸಿ¨ªಾರೆ. ಮೀಟಿಂಗ್‌ ನಡೆದ ನಾಲ್ಕನೇ ದಿನ ಶ್ಯಾಮ್‌ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿತ್ತು. ದೂರು ನೀಡಿದ್ದು ತಾರಾ! ಅವರು ಮೇಲಧಿಕಾರಿ ಶ್ಯಾಂ ಅವರಿಂದ ಮಾನಸಿಕ ಒತ್ತಡ ಅನುಭವಿಸಿದ್ದಕ್ಕೆ ಸಾಕ್ಷಿಯಾಗಿ ಮನೋವೈದ್ಯರ ಪತ್ರವನ್ನೂ ತೋರಿಸಿದ್ದರು. ಆ ದಿನ ಕಚೇರಿಯಲ್ಲಿ ಗುÇÉೋ ಗುಲ್ಲು! 
  ಇದಾದ ಕೆಲವೇ ಸಮಯದಲ್ಲಿ ಆಡಳಿತ ಮಂಡಳಿ, ತಾರಾ ಅವರು ಕೇಳಿಕೊಂಡಿದ್ದ ಹಾಗೆ, ಅವರಿಷ್ಟದ ಊರಿಗೆ ವರ್ಗ ಮಾಡಿತು. ಶ್ಯಾಮ್‌, ಇಲ್ಲಸಲ್ಲದ ದೂರಿನಿಂದ ಮಾನಸಿಕವಾಗಿ ಜರ್ಝರಿತರಾದರು. ದೂರಿನ ವಿಚಾರಣೆ ನಡೆಸಲು ಕಚೇರಿಯಲ್ಲಿ ಒಂದು ಆಂತರಿಕ ಸಮಿತಿ ರಚನೆಯಾಯಿತು. ಅದರಲ್ಲಿ ಮನೋವೈದ್ಯರೂ ಇದ್ದರು. ಶ್ಯಾಮ್‌ ಮತ್ತು ತಾರಾ ಇಬ್ಬರನ್ನೂ ಕರೆಸಿ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಲಾಯಿತು. ಮೀಟಿಂಗ್‌ನಲ್ಲಿ ಹಾಜರಿದ್ದವರ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಯಿತು. ವಿಚಾರಣೆ ಮುಗಿಯುವಷ್ಟರಲ್ಲಿ ಪ್ರಕರಣದಲ್ಲಿ ಶ್ಯಾಮ್‌ ಅವರ ತಪ್ಪೇನಿಲ್ಲ ಎಂಬುದು ಸಮಿತಿಗೆ ಅರ್ಥವಾಯಿತು. ಅವರನ್ನು ದೂರಿನಿಂದ ಖುಲಾಸೆ ಮಾಡಿತು. ಸುಳ್ಳು ದೂರು ದಾಖಲಿಸಿದ್ದಕ್ಕೆ ತಾರಾ ಅವರಿಗೆ ನೋಟೀಸ್‌ ನೀಡಲಾಯಿತು.

ಕೇಸ್‌ 2
ಕಚೇರಿಯಲ್ಲಿ ದಕ್ಷತೆ ಮತ್ತು ಕಾರ್ಯಕ್ಷಮತೆಗೆ ಹೆಸರಾಗಿದ್ದವರು ಜನಾರ್ದನ್‌. ಒಳ್ಳೆಯ ಕೆಲಸಗಾರ ಎಂದು ಹೆಸರು ಮಾಡಿದ್ದಾತ ಕುಗ್ಗಿ ಹೋಗಿದ್ದರು. ಅವರನ್ನು ಕೆಲಸದಿಂದ ತೆಗೆದುಹಾಕಿದ್ದು ಅದಕ್ಕೆ ಕಾರಣ. ಅವರ ಕಂಪನಿಯಲ್ಲಿ ಶುಕ್ರವಾರ ಕ್ಯಾಶುವಲ್‌ ಡ್ರೆಸ್‌ ತೊಡಬಹುದಾಗಿತ್ತು. ಒಂದು ಶುಕ್ರವಾರ ಮೀಟಿಂಗ್‌ ಏರ್ಪಾಡಾಗಿತ್ತು. ಒಬ್ಬ ಸಹೋದ್ಯೋಗಿ ಮಹಿಳೆ ಮೀಟಿಂಗಿಗೆ ಮೈ ಕಾಣುವ ಉಡುಗೆ ಧರಿಸಿ ಬಂದಿದ್ದರು. ಮೀಟಿಂಗ್‌ ನಡೆಯುತ್ತಿದ್ದಂತೆಯೇ ಆ ಮಹಿಳೆ ಜನಾರ್ದನ್‌ ಮೇಲೆ ಹರಿಹಾಯ್ದಿದ್ದರು, ವಾಚಾಮಗೋಚರವಾಗಿ ಬೈಯತೊಡಗಿದ್ದರು. ತನ್ನನ್ನು ಜನಾರ್ದನ್‌ ಕೆಟ್ಟ ದೃಷ್ಟಿಯಿಂದ ನೋಡಿದ್ದಾರೆ ಎನ್ನುವುದು ಅವರ ಆಪಾದನೆ. ಮೀಟಿಂಗ್‌ನಲ್ಲಿ ಕುಳಿತಿದ್ದ ಮಿಕ್ಕ ಪುರುಷ ಸಹೋದ್ಯೋಗಿಗಳ ಮೇಲೆ ಹೊರಿಸದೆ ವಿನಾಕಾರಣ ನನ್ನನ್ನೇ ಗುರಿಯಾಗಿಸಿಕೊಂಡಿದ್ದಾರೆ ಎನ್ನುವುದು ಜನಾರ್ದನ್‌ ವಾದ. ಕಚೇರಿಯಲ್ಲಿ ಬಹುತೇಕರು ಮಹಿಳಾ ಸಹೋದ್ಯೋಗಿಯ ಬೆಂಬಲಕ್ಕೆ ನಿಂತುಬಿಟ್ಟಿದ್ದರು. ಈ ಅವಮಾನದಲ್ಲಿ ಜನಾರ್ದನ್‌ ಅತ್ಮಹತ್ಯೆಗೂ ಯತ್ನಿಸಿದ್ದರು. ಮನೆಯವರು ಅವರನ್ನು ಮನೋಚಿಕಿತ್ಸಕರ ಬಳಿ ಕಳಿಸಿ ಕೌನ್ಸೆಲಿಂಗ್‌ ಕೊಡಿಸಿದರು. 

ಕೇಸ್‌ 3
ರಾಜು- ಸರಿತಾ ಇಬ್ಬರೂ ಗೂಡಿನಂತಿದ್ದ ಒಂದೇ ಕ್ಯೂಬಿಕಲ…ನಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟಿಗೆ ಕೆಲಸ ಮಾಡುತ್ತಿದ್ದುದರಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು! ಕೆಲಸಕ್ಕೆ ಸಂಬಂಧಪಟ್ಟ ಸಮಾಚಾರಗಳನ್ನು ರಾಜೂ ಹೇಳಿಕೊಡುತ್ತಿದ್ದರು. ಒಟ್ಟಿಗೇ ಊಟ- ಕಾಫಿ ಸೇವಿಸುತ್ತಿದ್ದರು. ಸರಿತಾ ಹಣ ಬೇಕಾದರೆ ರಾಜೂನನ್ನು ಕೇಳಿ ಪಡೆದುಕೊಳ್ಳುತ್ತಿದ್ದಳು. ಅವರಿಬ್ಬರ ಮಧ್ಯೆ ಸ್ನೇಹಕ್ಕೆ ಹೊರತಾದ ಯಾವುದೇ ಭಿನ್ನಾಭಿಪ್ರಾಯವಾಗಲಿ ಇರಲಿಲ್ಲ. ಸರಿತಾಳಿಗೆ ರಾಜೂನಲ್ಲಿ ಎಲ್ಲಿಲ್ಲದ ವಿಶ್ವಾಸವಿತ್ತು. ಹೀಗಿದ್ದವಳು ಅಚಾನಕ್ಕಾಗಿ ಒಂದು ದಿನ “ರಾಜು, ಕಂಪ್ಯೂಟರ್‌ ಮೌಸ್‌ ಮುಟ್ಟುವ ನೆಪದಲ್ಲಿ ತನ್ನ ಕೈಯನ್ನು ಹದಿನೇಳು ಸಲ ಮುಟ್ಟಿದ್ದಾನೆ’ ಎಂದು ಹೇಳಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಳು. ತಕ್ಷಣವೇ ಕಂಪನಿ ರಾಜುಗೆ ಮುಂಚಿತವಾಗಿ ಆರು ತಿಂಗಳ ಸಂಬಳ ಕೊಟ್ಟು ಬೇರೆ ಕಂಪನಿಗೆ ಹೋಗಲು ಆದೇಶಿಸಿತು. ಸರಿತಾ ಈಗಲೂ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. 

ಕೇಸ್‌ 4
ರಾಜೀವನ ಮದುವೆಗೆ ಇಪ್ಪತೈದು ದಿನ ಬಾಕಿ ಇರುವಾಗ ಕೆಲಸದಿಂದ ತೆಗೆದುಹಾಕಲಾಯಿತು. ಸಹೋದ್ಯೋಗಿ ಶೈಲಾ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆಂಬ ಕಾರಣ ನೀಡಿ ಕಂಪನಿ ಅವನನ್ನು ವಜಾ ಮಾಡಿತ್ತು. ದೂರು ಕೊಟ್ಟದ್ದಕ್ಕಾಗಿ ಅವಳನ್ನು ಪಾಪಪ್ರಜ್ಞೆ ಕಾಡುತ್ತಿತ್ತು. ಮನೋವೈದ್ಯರ ಬಳಿ ತೆರಳಿದಳು. ಆ ದಿನ ಕೆಲಸ ಮುಗಿದ ಮೇಲೆ ಇಬ್ಬರೂ ಟೈಂಪಾಸ್‌ಗೆಂದು ಪಬ್‌ಗ ತೆರಳಿದ್ದರು. ಇಬ್ಬರೂ ಮದ್ಯಪಾನ ಮಾಡುವ ಸಂದರ್ಭದಲ್ಲಿ ಶೈಲಾ ತನ್ನ ಮನೆಯ ಪರಿಸ್ಥಿತಿ ಹೇಳಿಕೊಂಡು ಅತ್ತಿದ್ದಳು. ಅವಳ ತಂದೆ ತೀರಿಕೊಂಡು ಕೆಲವೇ ತಿಂಗಳಾಗಿದ್ದವು. ಆ ಸಮಯದಲ್ಲಿ ರಾಜೀವ್‌ ಅವಳನ್ನು ಮುಟ್ಟಲು ಮುಂದಾಗಿದ್ದ. ಶೈಲಾ ಕಿರುಚಿಕೊಂಡು ಓಡಿ ಬಂದುಬಿಟ್ಟಿದ್ದಾಳೆ. ದೂರು ನೀಡಿ ಅವನು ಕೆಲಸ ಕಳಕೊಂಡ ಮೇಲೆ ಅವಳಿಗೆ ತಾನು ಮಾಡಿದ್ದು ತಪ್ಪೇ ಸರಿಯೇ ಎಂಬ ಅನುಮಾನ ಬಂದಿದೆ. ರಾಜೀವ್‌ ತನ್ನನ್ನು ಸಮಾಧಾನ ಮಾಡಲು ಬಂದನೇ, ಅಥವಾ ಕೆಟ್ಟ ಯೋಚನೆಯಿಂದ ಮುಟ್ಟಲು ಬಂದನೇ ಎಂದು ಅವಳಿಗೇ ಗೊತ್ತಿಲ್ಲ. ಆದರೀಗ ಕಾಲ ಮಿಂಚಿ ಹೋಗಿದೆ.

Advertisement

ಕೇಸ್‌ 5
ನಿರ್ಮಲಾ ಹಿರಿಯ ಹುದ್ದೆಯಲ್ಲಿದ್ದಾರೆ. ತನಗಿಂತ ಎಂಟು ವರ್ಷ ಕಿರಿಯ ಸಹೋದ್ಯೋಗಿಯ ಜೊತೆ ಸಲುಗೆಯಿಂದ ಇದ್ದರು. ಅವನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಬೇಕಾದ ಹಾಗೆ ನಿಯಮಾವಳಿಗಳನ್ನು ತೂರಿ ಸಹಾಯ ಮಾಡಿದ್ದಾರೆ. ಅವರಿಬ್ಬರ ನಡುವೆ ಶಾರೀರಿಕ ಸಂಪರ್ಕವೂ ಇತ್ತು. ಹೀಗಿರುವಾಗಲೇ ಕಿರಿಯ ಸಹೋದ್ಯೋಗಿಗೆ ಮದುವೆ ಗೊತ್ತಾಗಿತ್ತು. ಇದನ್ನು ಸಹಿಸದ ನಿರ್ಮಲಾಗೆ ಮೋಸ ಹೋದ ಭಾವ ಕಾಡಿತ್ತು. ನಿರ್ಮಲಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು! ಹಾಗಿದ್ದೂ ಕಿರಿಯ ಸಹೋದ್ಯೋಗಿ ತನಗೆ ಮದುವೆಯಾಗುವುದಾಗಿ ನಂಬಿಸಿದ್ದ ಎಂದು ಮನೋವೈದ್ಯರ ಬಳಿ ಹೇಳಿಕೊಂಡಿದ್ದರು. ಅದೇ ಸಮಯಕ್ಕೆ ಮಕ್ಕಳಿಗಾಗಿಯಾದರೂ ತಾನೆಂದೂ ವಿಚ್ಚೇದನ ಕೊಡುವುದಿಲ್ಲ ಎಂಬ ಮಾತನ್ನೂ ಆಡಿದ್ದರು. ಅವರಲ್ಲಿಯೇ ಈ ಬಗ್ಗೆ ಗೊಂದಲಗಳಿದ್ದವು. ಆ ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಿಸಲೂ ಮುಂದಾಗಿದ್ದರಂತೆ. ಆದರೆ, ಅಷ್ಟರಲ್ಲಿ ಅವನು ಬೇರೆ ಕಂಪನಿಗೆ ಎಸ್ಕೇಪ್‌ ಆಗಿದ್ದ. ನಿರ್ಮಲಾ ಈಗಲೂ ಮನೋಚಿಕಿತ್ಸಕರ ಬಳಿ ಕೌನ್ಸೆಲಿಂಗ್‌ಗೆ ತೆರಳುತ್ತಿದ್ದಾರೆ.

ಪುರುಷ ಇಟ್ಟ ತಪ್ಪು ಹೆಜ್ಜೆಗಳ ಲೆಕ್ಕವನ್ನು ಹೆಣ್ಣು ಒಂದೊಂದಾಗಿ ಸಮಾಜದೆದುರು ಒಪ್ಪಿಸುತ್ತಿದ್ದಾಳೆ. “ಮೀ ಟೂ’ ಎನ್ನುವ ಅವಳ ಧ್ವನಿಯಲ್ಲಿ ನೋವಿದೆ; ಹೇಳತೀರದ ದುಗುಡವಿದೆ… ಎಲ್ಲವೂ ನಿಜ. ಅವಳ ಈ ಧೈರ್ಯವನ್ನು ಮೆಚ್ಚಲೇಬೇಕು ಕೂಡ. ಆದರೆ, ಕೆಲವು ಸ್ತ್ರೀಯರ ಆರೋಪವನ್ನು ಪರಾಮರ್ಶಿಸುವ ಕೆಲಸವನ್ನು ಯಾರು ಮಾಡುತ್ತಾರೆ? ಪುರುಷನೊಳಗೂ ಹೆಪ್ಪುಗಟ್ಟಿರುವ ನೋವುಗಳ ಲೆಕ್ಕವನ್ನು ಒಪ್ಪಿಸುವವರು ಯಾರು? “ಮೀ ಟೂ’ ಮಾರುತದ ಈ ಅಬ್ಬರದಲ್ಲಿ, ಈ ಪ್ರಶ್ನೆಗಳು ಎಲ್ಲೋ ತರಗೆಲೆಯಂತೆ ತೂರಿ ಹೋಗದಿದ್ದರೆ ಸಾಕಷ್ಟೇ.  

ಮೀ ಟೂಗೂ ಮುನ್ನ…
1. ಕಾನೂನು ಮಹಿಳೆಯ ರಕ್ಷಣೆಗಾಗಿ ಇದೆ. ಹಾಗೆಂದು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ.
2. ಕಿರುಕುಳದ ಆಪಾದನೆ ಹೊರಿಸುವ ಮುನ್ನ ವ್ಯಕ್ತಿಯ ಹಿನ್ನೆಲೆಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕು.
3. ದೂರು ನೀಡುವ ಮುನ್ನ ಲೈಂಗಿಕ ಕಿರುಕುಳ ನಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ದೂರಿನಲ್ಲಿ ಅನುಮಾನಕ್ಕೆ ಜಾಗವಿರಬಾರದು. 
4. ಮನಸ್ಸು ಪ್ರಕ್ಷುಬ್ದವಾಗಿದ್ದರೆ, ಉದ್ವಿಗ್ನತೆ ಇದ್ದರೆ, ಆಲೋಚನೆಯಲ್ಲಿ ಉತ್ಪ್ರೇಕ್ಷೆ ಇರುತ್ತದೆ. ದೂರುದಾರರು ಇದರ ಕುರಿತೂ ಗಮನ ಹರಿಸಬೇಕು.
5. ಕಿರುಕುಳ ಬರೀ ಪುರುಷನ ಕಡೆಯಿಂದಲೇ ಆಗಿರಬೇಕೆಂದೇನಿಲ್ಲ. ಮಹಿಳೆಯಿಂದಲೂ ಆಗಿರಬಹುದು. ಎಲ್ಲಾ ಪ್ರಕರಣಗಳಿಗೂ ಎರಡು ಆಯಾಮಗಳಿರುತ್ತವೆ. ವಿಚಾರಣೆಯ ಹೊರತಾಗಿ ಏಕ್‌ದಂ ಪುರುಷನದೇ ತಪ್ಪು ಎಂಬ ನಿರ್ಧಾರಕ್ಕೆ ಬರುವುದು ತಪ್ಪಾಗಬಹುದು. 

ಶುಭಾ ಮಧುಸೂದನ್‌, ಮನೋಚಿಕಿತ್ಸಕಿ

Advertisement

Udayavani is now on Telegram. Click here to join our channel and stay updated with the latest news.

Next