ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಬದಿ ಹಾಗೂ ಸೂಕ್ಷ್ಮವಲಯದ ಕಾಡಂಚಿನಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಡೆಯುವ ಕಾರ್ಯಕ್ಕೆ ಮುಂದಾಗಿಲ್ಲ.
ಪುತ್ತನಪುರ ಗ್ರಾಪಂಗೆ ಸೇರಿದ ಹೆದ್ದಾರಿ ಬದಿಯಲ್ಲಿ ನೂತನ ಬಡಾವಣೆ, ಹಂಗಳ ಗ್ರಾಪಂಗೆ ಮತ್ತು ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಗೆ ಸೇರಿದ ಮಗು ವಿನಹಳ್ಳಿ ಗೇಟ್ ಬಳಿಯಲ್ಲಿ ಬೃಹತ್ ಕಾಮಗಾರಿ ನಡೆಸಲಾಗುತ್ತಿದೆ.
ಹಂಗಳ ಗ್ರಾಪಂನಿಂದ ಯಾವುದೇ ಅನುಮತಿಯನ್ನೂ ಪಡೆದುಕೊಳ್ಳದೆಯೇ ಬಂಡೀಪುರ ಪ್ಲಾಜಾ ಹೆಸರಿನ ರೆಸಾರ್ಟ್ನ ಖಾಲಿ ನಿವೇಶನದಲ್ಲಿ ಉದ್ಯಾನ, ಕಟ್ಟಡ ಹಾಗೂ ಬೃಹತ್ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಹೊಂದಿ ಕೊಂಡಂತೆಯೇ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್ಸ್ ತನ್ನ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಾಣ ಮಾಡುತ್ತಿದೆ. ಇದಕ್ಕಾಗಿ ಭಾರೀ ಪ್ರಮಾಣದ ಕಚ್ಚಾ ವಸ್ತು ಸಂಗ್ರಹಿಸಿ ಯಂತ್ರೋಪಕರಣ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಇಲ್ಲಿಗೆ ಕೆಲವೇ ಅಡಿ ಅಂತರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನಿನಲ್ಲಿ ಅಪ್ನಾ ಸಪ್ನಾ ಹೆಸರಿನಲ್ಲಿ ಹೋಂ ಸ್ಟೇ ನಡೆಸಲು ಕಟ್ಟಡ ನಿರ್ಮಾಣ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳು ತಡೆಹಿಡಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಯಾವುದೇ ಅನುಮತಿ ಇಲ್ಲದೆಯೇ ಬೃಹತ್ ಕಟ್ಟಡ ಕಾಮಗಾರಿ ನಡೆಸುತ್ತಿದ್ದರೂ ಸುಮ್ಮನಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಡಂಚಿನ ಗ್ರಾಮಗಳ ಜನರು ತಮ್ಮ ಮುರುಕು ಮನೆಗಳ ದುರಸ್ತಿ ಮಾಡಿಕೊಳ್ಳಲೂ ಅನುಮತಿ ನಿರಾಕರಿಸುವ ಅರಣ್ಯ ಇಲಾಖೆಯವರು ಹೆದ್ದಾರಿ ಬದಿಗಳಲ್ಲಿ ಬೃಹತ್ ಕಾಮಗಾರಿಗಳು ನಡೆಯುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸಿ ಬಡವರಿಗೊಂದು ಶ್ರೀಮಂತರಿಗೊಂದು ಕಾನೂನು ಅನುಸರಿಸುತ್ತಾ ಸುಮ್ಮನಿರುವುದು ಸರಿಯೇ ಎಂದು ಪರಿಸರ ಪ್ರೇಮಿ ವಿದ್ಯಾಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.