Advertisement

ಹೆದ್ದಾರಿ ಸವಾರಿ-ಹುಷಾರಾಗಿ ಸಾಗಿರಿ !

09:43 AM Sep 11, 2019 | Team Udayavani |

ಅಭಿವೃದ್ಧಿಯ ಪ್ರತೀಕವಾಗಿರುವಂಥವು ನಮ್ಮ ರಸ್ತೆಗಳು. ಆದರೆ ಅವುಗಳೇ ಇಂದು ಜನರ ಪ್ರಾಣನಷ್ಟಕ್ಕೆ ಕಾರಣವಾಗುತ್ತಿವೆ ಎಂದರೆ ಆತಂಕದ ಸಂಗತಿಯೇ. ಉದಯವಾಣಿಯ ಈ ವಾಸ್ತವ ವರದಿಯ ಉದ್ದೇಶ ಒಂದೇ-ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ನಮ್ಮ ಸಂಸದರಿಗೆ, ಶಾಸಕರಿಗೆ, ಉಳಿದ ಜನ ಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ಮನದಟ್ಟು ಮಾಡಿಕೊಡುವುದು. ಆಗಲಾದರೂ ನಮ್ಮ ರಸ್ತೆಗಳು ಒಂದಿಷ್ಟು ಸುರಕ್ಷಿತವಾಗಬಲ್ಲವೋ ಎಂಬುದನ್ನು ಕಾದು ನೋಡಬೇಕು. ತಲಪಾಡಿಯಿಂದ ಶಿರೂರುವರೆಗಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 (ಎನ್‌ ಎಚ್‌ 66) ರಲ್ಲಿನ ಪ್ರತಿ ಸಮಸ್ಯೆಗಳಿಗೂ ಕನ್ನಡಿ ಹಿಡಿಯುವ ಮಹತ್ವದ ವಾಸ್ತವ ವರದಿ ಸರಣಿ ಇಂದಿನಿಂದ.

Advertisement

ಮಂಗಳೂರು: ನಿಮಗೆ ಈ ಸಂಗತಿ ಗೊತ್ತಿರಬಹುದು. ಇಂದು ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲಿ ಯುವಜನರೇ ಹೆಚ್ಚು. ಒಂದು ವರ್ಷದಲ್ಲಿ ಘಟಿಸುವ ಅಪಘಾತಗಳಲ್ಲಿ ಮರಣಕ್ಕೀಡಾಗುವ 9 ಸಾವಿರ ಮಂದಿ 18 ವರ್ಷದೊಳಗಿನವರು.

ರಾಷ್ಟ್ರೀಯ ಹೆದ್ದಾರಿಗಳಿರ ಬಹುದು ಅಥವಾ ಇನ್ಯಾವುದೇ ರಾಜ್ಯ ಹೆದ್ದಾರಿ ಅಥವಾ ಒಳ ರಸ್ತೆಗಳಿರ ಬಹುದು -ರಸ್ತೆ ಅಪಘಾತ ಗಳು ಸಾಮಾನ್ಯ ಎನ್ನುವಂತಾ ಗಿವೆ. ಆದರೆ ನಮ್ಮ ಕಣ್ಣಮುಂದೆಯೇ ಘಟಿಸು ತ್ತಿರುವ ಇಂಥ ಸರಣಿ ರಸ್ತೆ ಅಪಘಾತಗಳಿಂದ ಆಗುವ ಪ್ರಾಣ ನಷ್ಟ, ಆಘಾತ ಏನೆಂಬುದು ಅಪಘಾತ ಸಂತ್ರಸ್ತ ಕುಟುಂಬ ಗಳಿಗಷ್ಟೇ ಗೊತ್ತು. ಹೀಗಿರುವಾಗ, ರಸ್ತೆ ಅಪಘಾತಗಳನ್ನು ತಪ್ಪಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಾದುದು ಇಂದಿನ ತುರ್ತು.

ದೇಶದಲ್ಲಿ ಸುಮಾರು 56 ಲಕ್ಷ ಕಿ.ಮೀ. ಉದ್ದದ ರಸ್ತೆಯಿದ್ದು, ಆ ಪೈಕಿ 1.01 ಲಕ್ಷ ಕಿ.ಮೀ. ಉದ್ದದ ಹೆದ್ದಾರಿ ಇದೆ. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ 2017ರ ಅಂಕಿ-ಅಂಶದ ಪ್ರಕಾರ, ಆ ವರ್ಷದಲ್ಲಿ ಒಟ್ಟು 4,64,910 ಅಪಘಾತಗಳಾಗಿದ್ದು, 1.48 ಲಕ್ಷ ಮಂದಿ ಪ್ರಾಣ ಕಳೆದುಕೊಂಡರು. ಸುಮಾರು 4,70,975 ಮಂದಿ ಗಾಯಗೊಂಡರು. ಕರ್ನಾಟಕದಲ್ಲಿಯೂ 42,542 ಅಪಘಾತ ಗಳಾಗಿದ್ದು, 10,609 ಮಂದಿ ಪ್ರಾಣ ಕಳೆದುಕೊಂಡರೆ, 52,961 ಮಂದಿ ಗಾಯಗೊಂಡರು. ಇನ್ನು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 14,217 ಅಪಘಾತಗಳಲ್ಲಿ 3,792 ಮಂದಿ ಪ್ರಾಣ ಕಳೆದು ಕೊಂಡರೆ, 17,242 ಮಂದಿ ಗಾಯಗೊಂಡರು. ರಾಜ್ಯ ಹೆದ್ದಾರಿಗಳಲ್ಲಿಯೂ 11,193 ಅಪಘಾತ ಗಳಾಗಿದ್ದು, 3,102 ಮಂದಿ ಸತ್ತಿದ್ದಾರೆ. ಉಳಿದ ರಸ್ತೆಗಳಲ್ಲಿ ಒಟ್ಟು 20,816 ಅಪಘಾತಗಳು ದಾಖಲಾಗಿದ್ದು, 3,715 ಮಂದಿ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡದಲ್ಲೂ 948 ಅಪಘಾತ
ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಹಾಸನದಿಂದ ಮಂಗಳೂರುವರೆಗಿನ ಎನ್‌ಎಚ್‌-75 ಹಾಗೂ ತಲಪಾಡಿಯಿಂದ ಶಿರೂರು ವರೆಗಿನ ಎನ್‌ಎಚ್‌-66 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗಿರುವ ಎರಡು ಪ್ರಮುಖ ರಸ್ತೆಗಳು. ಜತೆಗೆ, ಕುಲಶೇಖರದಿಂದ ಮೂಡುಬಿದಿರೆ ಮೂಲಕ 169 ರಾಷ್ಟ್ರೀಯ ಹೆದ್ದಾರಿ ಕೂಡ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 177 ಕಿ.ಮೀ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 142 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ.

Advertisement

ಆದರೆ ಬೆಂಗಳೂರು-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75, ಕೇರಳದಿಂದ ಮಂಗಳೂರಿಗೆ ಹಾಗೂ ಉಡುಪಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎನ್‌ಎಚ್‌ -66ರಲ್ಲಿ ಅಪಘಾತ ಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಆತಂಕ ಸೃಷ್ಟಿಸಿದೆ.

ಸರಕಾರದ ಅಂಕಿ-ಅಂಶದ‌ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018ರಲ್ಲಿ ಒಟ್ಟು 948 ಅಪಘಾತಗಳು ಸಂಭವಿಸಿದ್ದರೆ, ಆ ಪೈಕಿ 420 ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿವೆ.

ಕಳೆದ ವರ್ಷ ಜಿಲ್ಲೆಯಲ್ಲಿ 83 ಮಂದಿ ಪ್ರಾಣ ಕಳೆದುಕೊಂಡರು. 462 ಮಂದಿ ಗಾಯಗೊಂಡರು. ಈ ಅಪಘಾತಗಳ ಪೈಕಿ 81 ಮರಣಾಂತಿಕ ಹಾಗೂ 339 ಅಪಘಾತಗಳು ಮರಣಾಂತಿಕವಲ್ಲದ ಅಪಘಾತಗಳಾಗಿವೆ. ಜಿಲ್ಲೆಯಲ್ಲಿ ಹಾದು ಹೋದ 177 ಕಿ. ಮೀ. ವ್ಯಾಪ್ತಿಯಲ್ಲಿ ಘಟಿಸುತ್ತಿರುವ ಸಮಸ್ಯೆಯಿದು.

ಈ ಹಿನ್ನೆಲೆಯಲ್ಲೇ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಘಟಿಸುತ್ತಿರುವ ಅಪಘಾತಗಳಿಗೆ ಕಾರಣಗಳೇನು? ಈ ಭಾಗದ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಕಾಮಗಾರಿ ಹೇಗೆ ಅಪಘಾತಕ್ಕೆ ಕಾರಣವಾಗುತ್ತಿವೆ, ಎಲ್ಲೆಲ್ಲಿ ಅಪಘಾತ ವಲಯಗಳಿವೆ, ಸಂಚಾರ ನಿಯಮ ಉಲ್ಲಂಘನೆಯೂ ಎಷ್ಟರ ಕೊಡುಗೆ ನೀಡುತ್ತಿದೆ-ಎಂಬಿತ್ಯಾದಿ ವಾಸ್ತವಾಂಶವನ್ನು ಅರಿಯಬೇಕಿದೆ.

ಅದರಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ತಂಡವು ಎನ್‌ಎಚ್‌-75ರಲ್ಲಿ ನಂತೂರಿನಿಂದ ಕೊಕ್ಕಡದ ಕ್ರಾಸ್‌ವರೆಗಿನ ಸುಮಾರು 60 ಕಿ.ಮೀ. ರಸ್ತೆ ಹಾಗೂ ಎನ್‌ಎಚ್‌-66ರಲ್ಲಿ ತಲಪಾಡಿಯಿಂದ ಹೆಜಮಾಡಿ ಟೋಲ್‌ವರೆಗಿನ ಸುಮಾರು 30 ಕಿ. ಮೀ. ಹೆದ್ದಾರಿಯಲ್ಲಿ ಪ್ರಯಾಣಿಸಿ ವಸ್ತುಸ್ಥಿತಿಯನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಿದೆ. ಇದು ಮೊದಲ ಕಂತು. ಎರಡನೇ ಕಂತಿನಲ್ಲಿ ಹೆಜಮಾಡಿಯಿಂದ ಕುಂದಾಪುರ ಹಾಗೂ ಮೂರನೇ ಕಂತಿನಲ್ಲಿ ಕುಂದಾಪುರದಿಂದ ಶಿರೂರುವರೆಗಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಓದುಗರ ಮುಂದಿಡಲಿದೆ ನಮ್ಮ ತಂಡ.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ, ಹೆದ್ದಾರಿ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆ ಕಂಪೆನಿಗಳ ಬೇಜವಾಬ್ದಾರಿ ತನ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯನ್ನು ಜನರ ಮುಂದಿಡುವುದರ ಜತೆಗೆ, ನಾಗರಿಕ ರಾದ ನಾವೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತ ಗಳನ್ನು ಹೇಗೆ ತಡೆಯಬಹುದು ಎಂಬುದನ್ನೂ ಇಲ್ಲಿ ವಿವರಿಸುವುದು ಉದಯವಾಣಿಯ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next