Advertisement

ನದಿ ತೀರದ ಹಳ್ಳಿಗಳಲ್ಲಿ ಹೈಅಲರ್ಟ್‌

03:55 PM Aug 06, 2019 | Team Udayavani |

ರಾಯಚೂರು: ಕೃಷ್ಣಾ ನದಿಗೆ ಸೋಮವಾರವೂ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಪ್ರವಾಹ ಸ್ಥಿತಿ ಮುಂದುವರಿದಿದ್ದು, ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಮಾತ್ರ ದೂರವಾಗಿಲ್ಲ. ಏತನ್ಮಧ್ಯೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಜಿಲ್ಲೆಯ ಪರಿಸ್ಥಿತಿ ಅವಲೋಕನ ಮಾಡಿದ್ದು, ನೆರೆ ಹಾನಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

Advertisement

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮುಂದುವರಿದ ಮಳೆಯಿಂದ ಜಲಾಶಯಗಳಿಗೆ ಒಳಹರಿವಿನಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದರಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ತಾಲೂಕಿನ ಅರಷಿಣಗಿ, ಗುರ್ಜಾಪುರದಲ್ಲಿ 200 ಎಕರೆಗೂ ಅಧಿಕ ಬೆಳೆ ಹಾನಿಯಾಗಿದೆ. ಕಳೆದ ಐದಾರು ದಿನಗಳಿಂದ ನದಿ ಒಂದೇ ಪ್ರಮಾಣದಲ್ಲಿ ಹರಿಯುತ್ತಿರುವ ಕಾರಣ ಕೆಲವೆಡೆ ಮಣ್ಣು ಕುಸಿತವಾಗಿ ಜಮೀನುಗಳ ಕೊರತೆ ಕಂಡು ಬಂದರೆ, ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಕಾಡುತ್ತಿದೆ.

ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕು ಸೇರಿದಂತೆ ಒಟ್ಟು 51ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಜಿಲ್ಲಾಡಳಿತ ರಕ್ಷಣೆ, ಅಗತ್ಯ ಸೇವೆ ಮುಂದುವರಿಸಿದೆ. ಲಿಂಗಸುಗೂರು ತಾಲೂಕಿನ ನಡುಗಡ್ಡೆಯಾದ ಓಂಕಾರಗಡ್ಡೆಯಲ್ಲಿ ಬಿತ್ತನೆಗೆಂದು ತೆರಳಿ ಪ್ರವಾಹಕ್ಕೆ ಸಿಲುಕಿದ್ದ ಐವರನ್ನು ಎನ್‌ಡಿಆರ್‌ಎಫ್‌ ತಂಡ ರಕ್ಷಿಸಿದೆ. ಆರ್‌ಟಿಪಿಎಸ್‌ಗಾಗಿ ನಿರ್ಮಿಸಿದ್ದ ಗುರ್ಜಾಪುರ ಸೇತುವೆ ಕೂಡ ಮುಳುಗಡೆ ಹಂತಕ್ಕೆ ತಲುಪಿದೆ. ಗುರ್ಜಾಪುರ ಮತ್ತು ಅರಷಿಣಗಿ ಗ್ರಾಮಗಳ ಸುತ್ತಮುತ್ತಲಿನ ಗದ್ದೆಗಳಿಗೆ ನೀರು ನುಗ್ಗಿದೆ. ದೇವದುರ್ಗ ತಾಲೂಕಿನ ಕೃಷ್ಣಾನದಿ ದಡದಲ್ಲಿರುವ ಕೊಪ್ಪರ ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ನೀರು ಬಂದಿದ್ದು, ಗ್ರಾಮಕ್ಕೂ ನೀರು ನುಗ್ಗುವ ಆತಂಕ ಶುರುವಾಗಿದೆ. ಲಿಂಗಸುಗೂರು ತಾಲೂಕಿನ ಕಾರೆ ಪವರ್‌ ಕಂಪೆನಿ ನಿರ್ಮಿಸಿರುವ ಬ್ಯಾರೇಜ್‌ ನೀರಿನಿಂದ ಮುಳುಗಿದ್ದು, ಯಳಗುಂದಿ, ಹಂಚಿನಾಳ ಗ್ರಾಮದ 150 ಎಕರೆ ಪ್ರದೇಶ ಜಲಾವೃತಗೊಂಡಿದೆ. ನದಿ ಪಾತ್ರದ ಹಳ್ಳಿಗಳಲ್ಲಿ ಜಿಲ್ಲಾಡಳಿತ ಹೈ ಅಲರ್ಟ್‌ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next