Advertisement

ಅಧಿಕ ರಕ್ತದೊತ್ತಡ 

04:00 PM May 15, 2018 | |

ನಮ್ಮ ಜೀವನ ಶೈಲಿ ಹಾಗೂ ಕೆಲಸದ ಒತ್ತಡಗಳಿಂದ ಆರೋಗ್ಯದ ಕಡೆಗೆ ಗಮನ ನೀಡಲು ಸಮಯ ಸಿಗವುದೇ ಇಲ್ಲ. ವರ್ಷಗಳು ಉರುಳಿದಂತೆ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಗಳು ಗಾಬರಿ ಉಂಟು ಮಾಡುತ್ತವೆ. ಹಿಂದೆ ನಮಗೆ ತಿಳಿಯದ ಅನೇಕ ರೋಗಗಳಿಂದು ಮನೆ ಮಾತಾಗುತ್ತಿವೆ. ದಶಕಗಳ ಹಿಂದೆ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಆರೋಗ್ಯ ಸಂಬಂಧಿತ ಕಾಯಿಲೆಗಳು ಈಗ ಯುವ ಪೀಳಿಗೆಯನ್ನೂ ಕಾಡುತ್ತಿದೆ. ಅದಕ್ಕಾಗಿ ನಿಯಮಿತ ಆಹಾರ, ವ್ಯಾಯಾಮ ಮೊದಲಾದವುಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎನ್ನು ತ್ತಾರೆ ವೈದ್ಯರು.

Advertisement

ಇಂತಹ ಆರೋಗ್ಯ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದು. ರಕ್ತನಾಳ ಮತ್ತು ಅಪಧಮನಿಗಳಲ್ಲಿನ ರಕ್ತದ ಒತ್ತಡ ನಿರಂತರ ಹೆಚ್ಚಾಗುವುದನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. ಇದರಿಂದ ದೇಹದ ಇತರ ಅಂಗಾಂಗಗಳಾದ ಕಣ್ಣು, ಮೂತ್ರಪಿಂಡ ಮತ್ತು ಮೆದುಳಿಗೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿ ಎರಡು ವಿಧಗಳಿದ್ದು ಪ್ರಾಥಮಿಕ ಹಾಗೂ ಅಧಿಕ ರಕ್ತದೊತ್ತಡ ಎಂಬುದಾಗಿ ವಿಭಾಗಿಸಲಾಗುತ್ತದೆ. ಅಧಿಕ ರಕ್ತದೊತ್ತಡವು ಗಂಭೀರ ಸಮಸ್ಯೆಗಳನ್ನು ಉಂಟು ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಔಷಧಗಳನ್ನು ಸೇವಿಸುವುದು ಅಗತ್ಯ. 

ಕಾರಣ
ಅಧಿಕ ರಕ್ತದೊತ್ತಡವು ಹೆಚ್ಚಾಗಿ ಆನುವಶಿಂಕವಾಗಿ ಬರುತ್ತದೆ. ಅಂದರೆ ಹೆತ್ತವರು ಅಧಿಕ ರಕ್ತದೊತ್ತಡ ಹೊಂದಿದ್ದರೆ ಭವಿಷ್ಯದಲ್ಲಿ ಮಕ್ಕಳಿಗೆ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆ ಇದೆ. ಅಲ್ಲದೆ ಅತಿಯಾದ ತೂಕ, ಅಧಿಕ ಉಪ್ಪಿನಾಂಶದ ಆಹಾರ ಸೇವನೆ, ವ್ಯಾಯಾಮದಿಂದ ದೂರ ಇರುವುದರಿಂದಲೂ ಅಧಿಕ ರಕ್ತದೊತ್ತಡ ಬಾಧಿಸಬಹುದು.

ಪರಿಣಾಮ
ಅಧಿಕ ರಕ್ತದೊತ್ತಡ ನಿಯಂತ್ರಿಸದೇ ಇದ್ದಲ್ಲಿ ಕಣ್ಣು, ಮೂತ್ರಪಿಂಡ ಮತ್ತು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರಬಹುದು. ಅದರೊಂದಿಗೆ ಮೆದುಳಿನ ರಕ್ತಸ್ರಾವದಿಂದ ಪಾರ್ಶ್ವವಾಯು ಮತ್ತು ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಇದೆ. 

ತಡೆಗಟ್ಟುವುದು ಹೇಗೆ?
ಯಾವುದೇ ಆರೋಗ್ಯ ಸಮಸ್ಯೆಗೆ ವ್ಯಾಯಾಮ ಹಾಗೂ ನಿಯಮಿತ ಆಹಾರ ನಿರ್ವಹಣೆ ಬಹಳ ಮುಖ್ಯ. ಅಧಿಕ ರಕ್ತದೊತ್ತಡಕ್ಕೂ ಇದೇ ಪರಿಹಾರ. ನಿಯಮಿತ ಏರೋಬಿಕ್‌ ವ್ಯಾಯಾಮ ಮತ್ತು ಸರಿಯಾದ ಆಹಾರ ಕ್ರಮದಿಂದ ಸಕ್ರಿಯ ಜೀವನ ಶೈಲಿಯನ್ನು ಅನುಸರಿಸಬೇಕು. ಅದರೊಂದಿಗೆ ಆಹಾರದಲ್ಲಿ ಅತಿಯಾದ ಉಪ್ಪು, ಸಿಹಿ ಸೇವನೆ ಕಡಿಮೆ ಮಾಡಬೇಕು. ತೂಕ ಇಳಿಸಿದರೆ ಉತ್ತಮ. ಧೂಮಪಾನ ಮತ್ತು ಮಧ್ಯ ಸೇವನೆಯನ್ನು ನಿಲ್ಲಿಸುವುದರಿಂದ ಕೂಡ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು. 

Advertisement

ಚಿಕಿತ್ಸೆ ಅನಿವಾರ್ಯ
ಹೆಚ್ಚಾಗಿ ಬದಲಾದ ಜೀವನ ಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅಧಿಕ ರಕ್ತದೊತ್ತಡವಾಗುವವರೆಗೆ ಕಾದು ಅದಕ್ಕೆ ಬೇಕಾಗುವ ಚಿಕಿತ್ಸೆಯನ್ನು ಪಡೆಯುವುದಕ್ಕಿಂತ ಮುಂಚಿತವಾಗಿ ಜಾಗರೂಕತೆ ವಹಿಸುವುದು ಅವಶ್ಯ. ಅಧಿಕ ರಕ್ತದೊತ್ತಡವನ್ನು ತಡೆಯಲು ಚಿಕ್ಕ ವಯಸ್ಸಿನಿಂದಲೇ ಜೀವನಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳುವುದು ಉತ್ತಮ. ಇಲ್ಲವಾದ್ದಲ್ಲಿ ಕಾಯಿಲೆಯ ತೀವ್ರತೆ ಮತ್ತು ವಯಸ್ಸಿಗನುಗುಣವಾಗಿ ಔಷಧ ವನ್ನು ಸೇವಿಸಬೇಕಾಗಬಹುದು. ಆಧಿಕ ರಕ್ತದೊತ್ತಡದಿಂದ ಉಂಟಾಗುವ ದೀರ್ಘಾವಧಿಯ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಲು ಜೀವನಪೂರ್ತಿ ಔಷಧ ಸೇವಿಸಬೇಕಾದ ಪರಿಸ್ಥಿತಿಯೂ ಎದುರಾಗಬಹುದು. 

ಎಚ್ಚರ ವಹಿಸಿ
ರೋಗ ಬಂದ ಬಳಿಕ ಲಕ್ಷಾಂತರ ರೂ. ಹಣ ಖರ್ಚು ಮಾಡುವುದಕ್ಕಿಂತ ರೋಗ ಬರುವ ಮುನ್ನ ಎಚ್ಚರವಹಿಸಬೇಕಾಗಿರುವುದು ಮುಖ್ಯ. ಹಾಗಾಗಿ ದಿನನಿತ್ಯ ವ್ಯಾಯಾಮ, ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿ ಕೊಳ್ಳುವುದು ಉತ್ತಮ ಮಾರ್ಗ. ಸಮಸ್ಯೆ ಲಕ್ಷಣಗಳು ಕಂಡು ಬಂದಾಗ ನೀವೇ ಔಷಧ ಸೇವಿಸುವ ಬದಲು ಸೂಕ್ತ ವೈದ್ಯರನ್ನು ಸಂಪರ್ಕಿಸಬೇಕು.
-ಡಾ| ಜನಾರ್ದನ್‌ ಕೆ., ವೈದ್ಯರು, ಬಂಟ್ಸ್‌ಹಾಸ್ಟೆಲ್‌

ಪ್ರಜಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next