Advertisement

ಬ್ಯಾಂಕಿಂಗ್‌ ವ್ಯವಸ್ಥೆಯ ದುರ್ಬಲಗೊಳಿಸುವ ಹಗರಣಗಳು

02:14 PM Mar 02, 2018 | Sharanya Alva |

ಬ್ಯಾಂಕುಗಳಿಂದ ಪಡೆದುಕೊಂಡ ಸಾಲವನ್ನು ಹಿಂತಿರುಗಿಸದೆ ಮೋಸ ಮಾಡಿ ದೇಶವನ್ನೇ ಬಿಟ್ಟು ಓಡಿ ಹೋಗುವ ಚಾಳಿ ಉದ್ಯಮ ರಂಗದಲ್ಲಿ ಸಾಮಾನ್ಯವಾಗುತ್ತಿದೆ. ಅದರಲ್ಲೂ ಇನ್ನೇನು ವಂಚನೆಯ ಪ್ರಕರಣ ದಾಖಲಾಗಲಿದೆ ಎಂಬ ಸಂದರ್ಭದಲ್ಲೇ ದೇಶ ಬಿಟ್ಟು ಓಡಿ ಹೋಗುವುದು ಆಶ್ಚರ್ಯದ ಸಂಗತಿ. 9000 ಕೋ. ರೂ. ವಂಚಿಸಿ ಪಲಾಯನ ಮಾಡಿರುವ ವಿಜಯ ಮಲ್ಯರ ಪ್ರಕರಣದ ನೆನಪು ಮರೆಯಾಗುತ್ತಿರುವ ಹೊತ್ತಿಗೆ ಅಂತಹುದೇ  ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಹಾರಿ ಹೋದವರನ್ನು ಕರೆತರುವುದು ಯಾವಾಗ? ಕರೆ ತರಲು ಸಾಧ್ಯವೇ? ಅವರು ಬಾಕಿಯಿಟ್ಟಿರುವ ಹಣ ವಸೂಲಾದೀತೇ? ಇದಕ್ಕಾಗಿ ಎಷ್ಟು ವರ್ಷ ಕಾಯಬೇಕು? ಎಂಬೆಲ್ಲ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರ ಇಲ್ಲ.

Advertisement

ಈಗಾಗಲೇ ಸಾರ್ವಜನಿಕ ರಂಗದ ಬ್ಯಾಂಕುಗಳು ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿಯ ಬಾಧೆಯಿಂದ ನಲುಗಿ ಹೋಗಿವೆ. ಈ ಪರಿಸ್ಥಿತಿಯಲ್ಲಿ ಕಾರ್ಪೊರೇಟ್‌ ಉದ್ಯಮಿಗಳು ಬ್ಯಾಂಕುಗಳಿಗೆ ಪಂಗನಾಮ ಹಾಕುತ್ತಿರುವುದು ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದು ಖಂಡಿತ. ಸಾಲ ಕೊಡುವುದು ಸುಲಭ, ಕೊಟ್ಟದ್ದನ್ನು ಹಿಂಪಡೆಯುವುದು ಬಹಳ ಕಷ್ಟ. ಕೊಟ್ಟವ ಕೋಡಂಗಿ ಇಸ್ಕೊಂಡವ ಈರಭದ್ರ ಎಂಬ ಮಾತು ಶ್ರೀಮಂತ ಉದ್ಯಮಿಗಳ ವಿಚಾರದಲ್ಲಿ ಪದೇ ಪದೆ ನಿಜವಾಗುತ್ತಿದೆ. 1992ರಲ್ಲಿ ಹರ್ಷದ್‌ ಮೆಹ್ತಾ ಎಂಬ ಶೇರು ದಲ್ಲಾಳಿ ಬಿಗ್‌ ಬುಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಳಸಿಕೊಂಡು ಹಣವನ್ನು ಶೇರು ಮಾರುಕಟ್ಟೆಗೆ ಹರಿಸಿ ಕೊನೆಗೆ ತಾನು ದಿವಾಳಿಯಾದದ್ದು ಮಾತ್ರವಲ್ಲದೆ ಶೇರು ಮಾರುಕಟ್ಟೆ ಮತ್ತು ಬ್ಯಾಂಕುಗಳನ್ನು ದಿವಾಳಿ ಮಾಡಿದ್ದು ಮರೆತು ಹೋಗಿಲ್ಲ. ಈ ಹಗರಣದಲ್ಲಿ ಬ್ಯಾಂಕುಗಳಿಗೆ ಸುಮಾರು 4,000 ಕೋಟಿ ರೂಪಾಯಿ ನಷ್ಟವಾಗಿತ್ತು. ಇದರ ಬೆನ್ನಿಗೆ ಕೇತನ್‌ ಪಾರಿಖ್‌ 1998-2001ರ ಸಮಯದಲ್ಲಿ ಶೇರು ಮಾರುಕಟ್ಟೆಗೆ ಬ್ಯಾಂಕಿನ
ಹಣವನ್ನು ಹರಿಸಿ ಕರಗಿಸಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಅನಂತರ ಸತ್ಯಂ ಕಂಪ್ಯೂಟರ್‌ ಹಗರಣ ಬೆಳಕಿಗೆ ಬಂತು. ಇತ್ತೀಚೆಗೆ 11,400 ಕೋಟಿ ರೂಪಾಯಿ ನೀರವ್‌ ಮೋದಿ ಹಗರಣ ಹೊಸ ಸೇರ್ಪಡೆ. ಎಲ್ಲ ಹಗರಣಗಳು ಸಂಭವಿಸಿರುವುದು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿರುವ ಲೋಪಗಳಿಂದ ಹಾಗೂ ಎಲ್ಲ ಹಗರಣಗಳಲ್ಲಿ ಸಾಮ್ಯತೆ ಇದೆ. ಬ್ಯಾಂಕಿನಿಂದ ಸಾಲ ಪಡೆಯುವುದು, ವಾಪಾಸು ಮಾಡಲಾಗದೆ ಕೊನೆಗೆ ಕೈ ಎತ್ತುವುದು ಅಥವಾ ದೇಶ ಬಿಟ್ಟು ಪಲಾಯನ ಮಾಡುವುದು. ಗಮನಾರ್ಹ ಅಂಶವೆಂದರೆ ಹಗರಣ ಕೋರರಿಗೆಲ್ಲ ಬ್ಯಾಂಕ್‌ ಅಧಿಕಾರಿಗಳೇ ನೆರವಾಗಿರುವುದು.

ಬೇಲಿಯೇ ಹೊಲ ಮೇಯ್ದಂತೆ 
ನೀರವ್‌ ಮೋದಿ ಪ್ರಕರಣದಲ್ಲಿ ಬ್ಯಾಂಕಿನ ಸಿಬ್ಬಂದಿ ಆರೋಪಿ ಗಳಿಗೆ ಸಹಾಯ ನೀಡಿದ್ದು, ಈ ಹಗರಣ 2008ರಲ್ಲಿ ಪ್ರಾರಂಭಗೊಂಡರೂ 10 ವರ್ಷಗಳಲ್ಲಿ ಗೊತ್ತಾಗದೆ ಉಳಿದದ್ದು ಬಹಳ ವಿಚಿತ್ರ ಸಂಗತಿ. ಆಧುನಿಕ ತಂತ್ರಜ್ಞಾನದ ಬಳಕೆಯ ಈ ಯುಗದಲ್ಲಿ ಕೂಡಾ ಆರೋಪಿಗಳು ಈ ಗುಟ್ಟು ರಟ್ಟಾಗದಂತೆ ರಹಸ್ಯ ಕಾಪಾಡಿಕೊಂಡಿರುವುದು ಅವರ ಚಾಲಾಕಿತನಕ್ಕೊಂದು ನಿದರ್ಶನ.

ಇನ್ನೇನು ವಂಚನೆಯ ಪ್ರಕರಣ ದಾಖಲಾಗುವುದೆಂಬ ನಿರೀಕ್ಷೆಯಲ್ಲಿದ್ದಾಗ ಆರೋಪಿಗಳು ಸುರಕ್ಷಿತವಾದ ಬಿಲವನ್ನು ಹುಡುಕಿಕೊಂಡು ಪರಾರಿಯಾದದ್ದು ನಮ್ಮ ವಿವೇಚನೆಗೂ ನಿಲು ಕದ್ದು. ಈಗಾಗಲೇ ಮಲ್ಯರನ್ನು ಭಾರತಕ್ಕೆ ಕರೆತರಲು ಹರಸಾಹಸ ಪಡು ತ್ತಿರುವಾಗ ಮತ್ತೂಂದು ಇಂಥದ್ದೆ ಪ್ರಕರಣ ಸಂಭವಿಸಿರು ವುದು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿರುವ ಹುಳುಕು ಗಳನ್ನೆಲ್ಲ ಜಗಜ್ಜಾಹೀರು ಗೊಳಿಸಿದೆ. ಈ ಹಗರಣಗಳ ಹಿಂದೆ ಯಾವ ನಿಗೂಢ ಕೈ ಇದೆಯೋ? ಅಥವಾ ರಾಜಕೀಯ ಪ್ರೇರಿತವೋ? ಫೋರ್ಬ್ಸ್ ಸಿರಿವಂತರ ಪಟ್ಟಿಯಲ್ಲಿರುವವರು ದಾವೋಸ್‌ಗೆ ಆಗಾಗ ಭೇಟಿ ನೀಡುವವರು ಹೀಗೆ ಕೋಟಿಗಟ್ಟಲೆ ಪಂಗನಾಮ ಹಾಕಬಹುದಾದರೆ ಜನ ಸಾಮಾನ್ಯ ರಾದ ನಾವೇನಾದರೂ
ಎಡವಿದರೆ ಏನು ಮಹಾ? ದೊಡ್ಡ ಕುಳಗಳು ದೊಡ್ಡ ಪ್ರಮಾಣ ದಲ್ಲಿ ಬ್ಯಾಂಕುಗಳಿಗೆ ಪಂಗನಾಮ ಹಾಕುವಾಗ ಬಡವರು, ರೈತರು ಸರಕಾರದಿಂದ ವಿನಾಯಿತಿ,ಬಡ್ಡಿ ಮನ್ನಾ, ಸಾಲ ಮನ್ನಾ ಮುಂತಾದ ಭಾಗ್ಯ ಯೋಜನೆಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನಿದೆ? ಸಾಮಾ 
ನ್ಯ ವಾಗಿ ಜನಸಾಮಾನ್ಯರು ಸಾಲ ತೆಗೆದುಕೊಳ್ಳಲು ಬ್ಯಾಂಕಿಗೆ ಹೋದರೆ ಬ್ಯಾಂಕಿನವರ ನೂರಾರು ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸುಸ್ತಾಗಿ ಸಾಲವೇ ಬೇಡವೆಂಬ ಹಂತಕ್ಕೆ ತಲುಪುತ್ತೇವೆ. ಇಷ್ಟೆಲ್ಲ ಕಿರುಕುಳ ಅನುಭವಿಸಿ ಸಾಲ ಪಡೆದುಕೊಂಡಕೊಂಡವರಾಗಿದ್ದರೆ ಒಂದೆರಡು ಕಂತು ಬಾಕಿಯಾದರೆ ಬ್ಯಾಂಕಿನಿಂದ ನೋಟಿಸಿನ ಮೇಲೆ ನೋಟಿಸು ಬರುತ್ತದೆ.ಅನಂತರ ಕಾನೂನು ಕ್ರಮ ಜರಗಿಸಲು ಬ್ಯಾಂಕುಗಳು ಅಣಿಯಾಗುತ್ತವೆ. ಸಾಲ ಪಡೆಯಲು ಆಸ್ತಿ ಪಾಸ್ತಿ ಏನಾದರೂ ಅಡವಿಟ್ಟಿದ್ದರೆ ಅವುಗಳ ಹರಾಜಿನೊಂದಿಗೆ ವಸೂಲಾತಿ ಅಂತ್ಯ ಗೊಳ್ಳು ತ್ತದೆ. ಬಡಪಾಯಿಗಳು ಮಾಡಿದ ಸಾಲ ತೀರಿಸಲು ಇನ್ನೊಂದು ಸಾಲದ ಮೊರೆ ಹೋಗಬೇಕಾಗುತ್ತದೆ.

Advertisement

ಆದರೆ ಶ್ರೀಮಂತರು ಮಾತ್ರ ಟಾಟಾ ಗುಡ್‌ಬೈ ಎಂದು ಹೇಳಿ ವಿಮಾನದಲ್ಲಿ ವಿದೇಶಕ್ಕೆ ಹಾರಿ ಹೋಗಿ ಐಷರಾಮಿ ಜೀವನ ನಡೆಸುವ ಅನುಕೂಲ ಹೊಂದಿದ್ದಾರೆ. ಅದನ್ನು ನೋಡಿ ಏನೂ ಮಾಡಲಾಗದ ಅಸಹಾ ಯಕ ಸ್ಥಿತಿಯಲ್ಲಿವೆ ಬ್ಯಾಂಕ್‌ಗಳು ಎಂತಹ ಭವ್ಯ ಭಾರತ ನಮ್ಮದು!
ಇಂತಹ ಹಗರಣಗಳು ನಿನ್ನೆ ಮೊನ್ನೆಯದ್ದಲ್ಲ. ಹಗರಣಗಳಿಗೆ ಬಹು ದೊಡ್ಡ ಇತಿಹಾಸವೇ ಇದೆ. ಮಟ್ಟ ಹಾಕಲು ಕಾನೂನು
ಕ್ರಮಗಳೂ ಇವೆ. ಆದರೆ ಕಾನೂನು ಇರುವುದೇ ಉಲ್ಲಂ ಸಲು ತಾನೇ? ಒಂದು ವೇಳೆ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆಯಾಗಿದ್ದರೆ ಹರ್ಷದ್‌ ಮೆಹ¤ ಹಗರಣದ ಬಳಿಕ ಯಾವ ಉದ್ಯಮಿಯೂ ಬ್ಯಾಂಕುಗಳಿಗೆ ವಂಚಿಸಲು ಧೈರ್ಯ ಮಾಡು ತ್ತಿರಲಿಲ್ಲ. ಹಗರಣಗಳು ನಡೆಯಬಾರದು ಎಂದಿದ್ದರೆ ಮೊದಲು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿರುವ ಲೋಪಗಳು ನಿವಾ  ರಣೆಯಾಗಬೇಕು. ಹಳೆಯ ತಪ್ಪು ಮತ್ತೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಜತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ತ್ವರಿತ ಗತಿ ಯಲ್ಲಿ ಆಗಬೇಕು.

 ಇಂದು ಮಾಡಿದ ತಪ್ಪಿಗೆ ಎಷ್ಟೋ ವರ್ಷಗಳ ನಂತರ ಶಿಕ್ಷಯಾದರೆ ಉಳಿದವರಿಗೆ ಬಿಡಿ ಸ್ವತಹ ಆರೋಪಿಗೇ ಹಗರಣ ಮರೆತುಹೋಗಿರಬಹುದು. ಕಟ್ಟುನಿಟ್ಟಿನ ಕಾನೂನು ಗಳು ಇದ್ದರೂ ಆಗಾಗ ಇಂತಹ ಹಗರಣಗಳು ದಾಖಲಾಗುತ್ತಿರುವುದು ಬಹು ದೊಡ್ಡ ದುರಂತ. ಇದನ್ನು ತಡೆಯಬೇಕೆಂದಿದ್ದರೆ ಊರು ಲೂಟಿಯಾದ ಬಳಿಕ ದಿಡ್ಡಿ ಬಾಗಿಲು ಹಾಕುವ ಪ್ರವೃತ್ತಿ ಕೊನೆಯಾಗಬೇಕು. ಓಡಿ ಹೋದವರನ್ನು ಕರೆತರಲು ಇನ್ನಷ್ಟು ಕೋಟಿ ಖರ್ಚು ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ, ಓಡಿ ಹೋಗದಂತೆ ತಡೆಯುವುದೇ ಬುದ್ಧಿವಂತಿಕೆ.

ಇತ್ತೀಚೆಗಷ್ಟೆ ಕೇಂದ್ರ ಸರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಶಕ್ತಿ ತುಂಬಲು ಅಗತ್ಯವಿರುವ ಹಣಕಾಸಿನ ಸಹಾಯ ಹಸ್ತ ನೀಡಿತು. ಹೀಗೆ ಪದೇ ಪದೇ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವುದು ಒಳ್ಳೆಯ ಕ್ರಮವಲ್ಲ. ಹೀಗೆ ಮಾಡುವುದರಿಂದ ಬ್ಯಾಂಕುಗಳು ಅನುತ್ಪಾದಕ ಆಸ್ತಿಗಳಾಗಿ ರುವ ವಸೂಲಾಗದ ಸಾಲವನ್ನು ವಸೂಲು ಮಾಡುವ ಬದಲು ಸರಕಾರದ ನೆರವಿನ ಹಸ್ತಕ್ಕಾಗಿ ಕಾದು ಕುಳಿತುಕೊಳ್ಳುತ್ತವೆ. ಇಷ್ಟಕ್ಕೂ ಸರಕಾರ ಕೊಡುವುದು ಜನರದ್ದೇ ತೆರಿಗೆ ಹಣವನ್ನಲ್ಲವೆ? ಹೀಗೆ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುತ್ತಾ ಹೋದರೆ ವಂಚಕರಿಗೆ ಮೋಸ ಮಾಡಲು ಸುಲಭವಾಗುತ್ತದೆ.

ಇದರಿಂದ ಬ್ಯಾಂಕ್‌ಗಳು ಸಶಕ್ತವಾಗುವ ಬದಲು ಇನ್ನಷ್ಟು ದುರ್ಬಲವಾಗುತ್ತವೆ. ದೇಶದಲ್ಲಿ ಸರಾಸರಿಯಾಗಿ ಪ್ರತಿ ನಾಲ್ಕು ಗಂಟೆಗೆ ಒಬ್ಬ ಬ್ಯಾಂಕ್‌ ಉದ್ಯೋಗಿ ತನ್ನ ಬ್ಯಾಂಕಿಗೆ ಮೋಸ ಮಾಡಿದ ಬಗ್ಗೆ ವರದಿ ಇದೆ. 2015 – 2017 ನಡುವೆ ಸುಮಾರು 5200 ಬ್ಯಾಂಕ್‌ ಅಧಿಕಾರಿಗಳಿಗೆ ವಂಚನೆ ಪ್ರಕರಣಗಳಿಗಾಗಿ ಶಿಕ್ಷೆ ಆಗಿದೆ. ಕಪ್ಪು ಹಣವನ್ನು ಸೃಷ್ಟಿ ಮಾಡುವುದನ್ನು ತಡೆ ಹಿಡಿಯಲು ಗ್ರಾಹಕ ಅಸಲಿಯೋ ನಕಲಿಯೋ ಎಂಬ ಮಾಹಿತಿಯನ್ನು ಕಲೆ ಹಾಕಲು ಕೆವೈಸಿ ಪದ್ಧತಿಯನ್ನು ಬ್ಯಾಂಕುಗಳು ಸಮರ್ಪಕವಾಗಿ ಜಾರಿಗೆ ತಂದಿವೆ. ಇದೇ ರೀತಿ ಬ್ಯಾಂಕ್‌ ಸಿಬ್ಬಂದಿಯನ್ನು ಅಸಲಿಯೋ ನಕಲಿಯೋ ಎಂದು ತಿಳಿದುಕೊಳ್ಳಬೇಕಾದ ವ್ಯವಸ್ಥೆಯೂ ಈ ಕೂಡಲೇ ಆಗಬೇಕಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ನಮ್ಮ ಹಣವನ್ನು ಕಾಯುವವರು ಯಾರು? ಉಳಿದ ದೇಶಗಳು ಅಭಿವೃದ್ಧಿಯನ್ನು ಸಾಧಿಸಲು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಲಿಷ್ಟಗೊಳಿಸುವ ಪ್ರಯತ್ನವನ್ನು ಮುಂದುವರಿಸುತ್ತಿರುವ ಹೊತ್ತಿಗೆ ನಮ್ಮಲ್ಲಿ ಇಂತಹ ಪ್ರಕರಣಗಳು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ. ಪ್ರಾಮಾಣಿಕತೆ, ಪಾರದರ್ಶಕತೆ ಎಂಬೆಲ್ಲಾ ಘೋಷಣೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಎಲ್ಲಕ್ಕೂ ಹಣ ಗಳಿಸುವ ಹಂಬಲವೇ ಕಾರಣ.

*ರಾಘವೇಂದ್ರ ರಾವ್ ನಿಟ್ಟೆ. 

Advertisement

Udayavani is now on Telegram. Click here to join our channel and stay updated with the latest news.

Next