Advertisement

ನೆರೆ ಸಂತ್ರಸ್ತರಿಗೆ ಹರಿದು ಬಂದ ನೆರವಿನ ಮಹಾಪೂರ

10:13 AM Aug 19, 2018 | Team Udayavani |

ಕೊಲ್ಲೂರು: ಕೇರಳದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 1 ಕೋಟಿ ರೂ. ಹಾಗೂ ಕೊಡಗಿನಲ್ಲಿ ಸಂತ್ರಸ್ತರಿಗೆ 25 ಲಕ್ಷ ರೂ. ಒದಗಿಸುವ ಬಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಶನಿವಾರ ದೇಗುಲದಲ್ಲಿ ಜರಗಿದ ವಿಶೇಷ ಸಭೆ ನಿರ್ಣಯ ಕೈಗೊಂಡಿತು.

Advertisement

ಈ ಸಂದರ್ಭ ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರು ನೆರೆ ಸಂತ್ರಸ್ತರಿಗೆ ಧನಸಹಾಯ ಮಾಡಲು ಕೈಗೊಂಡ ನಿರ್ಣಯವನ್ನು ಧಾರ್ಮಿಕ ಧತ್ತಿ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಎಂ. ಶೆಟ್ಟಿ , ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಸದಸ್ಯರಾದ ನರಸಿಂಹ ಹಳಗೇರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಕೆ. ರಮೇಶ ಗಾಣಿಗ, ರಾಜೇಶ ಕಾರಂತ, ಅಭಿಲಾಶ್‌, ಅಧೀಕ್ಷಕ ರಾಮಕೃಷ್ಣ ಅಡಿಗ, ಎಂಜಿನಿಯರ್‌ ಉಪಸ್ಥಿತರಿದ್ದರು. ವಿಶೇಷ ಪೂಜೆ : ನೆರೆ ಹಾವಳಿ ಕಡಿಮೆಯಾಗಲೆಂದು ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಂಗಳೂರಿನಿಂದ ಕೇರಳಕ್ಕೆ ಪರಿಹಾರ ಸಾಮಗ್ರಿ ರವಾನೆ
ಮಂಗಳೂರು,: ಕೇರಳದ ನೆರೆ ಸಂತ್ರಸ್ತರ ನೆರವಿಗೆ ಎನ್‌ಜಿಒ, ಸಾರ್ವಜನಿಕರ ಮೂಲಕ ಪಡೆದುಕೊಂಡ ಪರಿಹಾರ ಸಾಮಗ್ರಿಗಳನ್ನು ಕೋಸ್ಟ್‌ಗಾರ್ಡ್‌ ಮಂಗಳೂರು ಕೇಂದ್ರ ಕಚೇರಿಯಿಂದ 3 ವಿಮಾನಗಳ ಮೂಲಕ ಶನಿವಾರ ಕಲ್ಲಿಕೋಟೆ ಮತ್ತು ಕೊಚ್ಚಿಗೆ ಸಾಗಿಸಲಾಗಿದೆ. ನೆರೆ ಸಂತ್ರಸ್ತರಿಗೆ ತತ್‌ಕ್ಷಣಕ್ಕೆ ಬೇಕಾಗುವಂತಹ ಆವಶ್ಯಕ ವಸ್ತುಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಇಂಡಿಯನ್‌ ಕೋಸ್ಟ್‌ಗಾರ್ಡ್‌ನ ಮಂಗಳೂರು ಕೇಂದ್ರ ಕಚೇರಿಗೆ ಶನಿವಾರದಂದು ಬಂದಿದ್ದವು. 
ಅವುಗಳಲ್ಲಿ ತತ್‌ಕ್ಷಣಕ್ಕೆ ಬೇಕಾಗುವಂತಹ ಔಷಧ, ಮಕ್ಕಳ ಆಹಾರಗಳನ್ನು ವಿಮಾನ ಮೂಲಕ ಸಾಗಿಸಲಾಗಿದೆ. ರವಿವಾರ ಮತ್ತಷ್ಟು ಪರಿಹಾರ ಸಾಮಗ್ರಿಗಳು ರವಾನೆಯಾಗಲಿವೆ. ಸಾಮಗ್ರಿ ಗಳನ್ನು ಸಾರ್ವಜನಿಕರು ವ್ಯವಸ್ಥಿತವಾಗಿ ಪ್ಯಾಕ್‌ ಮಾಡಿ, ವಸ್ತು ನಮೂದಿಸಿ ಕೋಸ್ಟ್‌ಗಾರ್ಡ್‌ ಮಂಗಳೂರು ಕೇಂದ್ರ ಕಚೇರಿಗೆ ತಲುಪಿಸಬಹುದು. ಔಷಧಗಳನ್ನು ಬಜಪೆ ಹಳೆ ವಿಮಾನ ನಿಲ್ದಾಣಕ್ಕೂ ತಲುಪಿಸಬಹುದು. ಹೆಚ್ಚಿನ ಮಾಹಿತಿಗಾಗಿ 0824 2405269, 2405278 ದೂರವಾಣಿ ಸಂಪರ್ಕಿಸಬಹುದಾಗಿದೆ.

ಆ. 19, 20: ನೆರವು ಸಂಗ್ರಹ
ಮಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ದ.ಕ. ಜಿಲ್ಲೆಯ ಕೊಡವ ವಿದ್ಯಾರ್ಥಿ ಸಂಘಟನೆಯಿಂದ ಅಗತ್ಯ ಸಾಮಗ್ರಿಗಳ ಸಂಗ್ರಹ ಆ. 19 ಮತ್ತು 20ರಂದು ಎಸ್‌ಡಿಎಂ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಕುರಿತು ಶನಿವಾರ ಮಾಹಿತಿ ನೀಡಿದ ಸಂಘಟನೆಯ ಸಲಹೆಗಾರ ನ್ಯಾಯವಾದಿ ಎಸ್‌.ಪಿ. ಚಂಗಪ್ಪ, 19ರಂದು ಬೆಳಗ್ಗೆ ಶರವು ಮಹಾಗಣಪತಿ ದೇಗುಲದಲ್ಲಿ ಪ್ರಾರ್ಥಿಸಿ ಅಗತ್ಯ ವಸ್ತುಗಳ ಸಂಗ್ರಹ ಕಾರ್ಯ ನಡೆಯಲಿದೆ ಎಂದರು. ಸಂಘಟನೆಯ ಅಧ್ಯಕ್ಷ ಕೆ.ಜಿ. ಬೋಪಣ್ಣ, ಉಪಾಧ್ಯಕ್ಷೆ ಶಿಫಾಲಿ ಚಂಗಪ್ಪ, ಖಜಾಂಚಿ ಕುಶ ನಂಜಪ್ಪ, ಉಪ ಕಾರ್ಯದರ್ಶಿ ನೇಹಾ ನೀಲಮ್ಮ, ಸಲಹೆಗಾರ ಬಿ.ಬಿ. ಅಜಿತ್‌ ಬೋಪಯ್ಯ ಉಪಸ್ಥಿತರಿದ್ದರು.

ರೆಡ್‌ಕ್ರಾಸ್‌ನಿಂದ ಸಹಾಯ
ಮಂಗಳೂರು: ಕೇರಳ ಪ್ರವಾಹ ಸಂತ್ರಸ್ತರಿಗೆ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ದ.ಕ. ಜಿಲ್ಲಾ ಶಾಖೆಯ ವತಿಯಿಂದ ಅಗತ್ಯ ವಸ್ತುಗಳ ಸಹಾಯಹಸ್ತವನ್ನು ನೀಡಲಾಯಿತು.
ಸಾಮಗ್ರಿಗಳನ್ನು ಸೇವಾ ಭಾರತಿ ಸಂಘ ನಿಕೇತನದ ಮೂಲಕ ಕಳುಹಿಸಿಕೊಡಲಾಯಿತು. ಸುಳ್ಯ ತಾಲೂಕಿಗೂ ಅಗತ್ಯ ಸಾಮಗ್ರಿಗಳನ್ನು ಜಿಲ್ಲಾ ಶಾಖೆಯ ವತಿಯಿಂದ ವಿತರಣೆ ಮಾಡಲಾಗಿದೆ. ಜಿಲ್ಲಾ ಶಾಖೆಯ ಚೇರ್‌ಮನ್‌ ಶಾಂತಾರಾಮ ಶೆಟ್ಟಿ ಸಾಮಗ್ರಿ ಹಸ್ತಾಂತರಿಸಿದರು. ಸುನಿಲ್‌ ಆಚಾರ್ಯ, ಭರತ್‌ರಾಜ್‌ ಉಪಸ್ಥಿತರಿದ್ದರು. ರೆಡ್‌ಕ್ರಾಸ್‌ ಸಂಸ್ಥೆಯ ಸಂಯೋಜಕ ಪ್ರವೀಣ್‌ಕುಮಾರ್‌ ಉಸ್ತುವಾರಿ ವಹಿಸಿದ್ದರು. ಜಿಲ್ಲಾಡಳಿತ ದ. ಸಹಯೋಗದಲ್ಲಿ ಈ ಸೇವೆ ಮಾಡಲಾಗುತ್ತಿದೆ.

Advertisement

ಕೆಎಂಎಫ್‌ನಿಂದ 96,000 ಲೀ. ಹಾಲು
ಮಂಗಳೂರು: ಕೇರಳ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಕೆಎಂ ಎಫ್‌ 96,000 ಲೀ. ತೃಪ್ತಿ ಹಾಲನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿದೆ. 17,000 ಲೀ. ತೃಪ್ತಿ ಹಾಲಿನ ಪ್ರಥಮ 2 ವಾಹನಗಳಿಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ  ಅವರು ಶನಿವಾರ ಹಸಿರುನಿಶಾನೆ ತೋರಿದರು.

ಕೇರಳ ಸಮಾಜಂ
ಮಂಗಳೂರು: ಕೇರಳ ಸಮಾಜಂ ವತಿಯಿಂದ ಕೇರಳದ ನೆರೆ ಪೀಡಿತರಿಗೆ 5 ಲಕ್ಷ ರೂ. ನೆರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಅಧ್ಯಕ್ಷ ಟಿ.ಕೆ. ರಾಜನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಶೀ ಶ್ರೀ ಸಹಾಯ
ಮಂಗಳೂರು: ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಆದೇಶದ ಮೇರೆಗೆ ಶ್ರೀ ಕಾಶೀಮಠ, ಬೆಂಗಳೂರು ಶ್ರೀ ಕಾಶೀ ಮಠ, ಜಿಎಸ್‌ಬಿ ದೇವಾಲಯಗಳ ಒಕ್ಕೂಟದ ವತಿಯಿಂದ ಕೇರಳದ ಪ್ರವಾಹ ಪೀಡಿತ ಸಂತ್ರಸ್ತರಿಗೆ ವಸ್ತು ರೂಪದಲ್ಲಿ ಸಹಾಯ ಮಾಡಬಯಸುವ ಸಮಾಜ ಬಾಂಧವರು ತಮ್ಮ ಶಕ್ತಾÂನುಸಾರ ಶ್ರೀ ದೇಗುಲದ ವಿಶೇಷ ಕೌಂಟರ್‌ಗೆ ಆ. 19ರ ಒಳಗೆ ತಲುಪಿಸಬಹುದು. ಕಾಫಿ-ಚಹಾ ಪುಡಿ, ಅಕ್ಕಿ, ಸಕ್ಕರೆ, ಟೂತ್‌ಪೇಸ್ಟ್‌, ಸೀರೆ, ಬಾತ್‌ ಟವಲ್‌, ಲುಂಗಿ, ಒಳ ವಸ್ತ್ರಗಳು (ಹೊಸತು ಮಾತ್ರ) ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಕೇರಳ ನೆರವು ಕೇಂದ್ರ ಆರಂಭ
ಕಾಸರಗೋಡು: ಕೇರಳದ ಸಂತ್ರಸ್ತರ ನೆರವಿಗೆ ವಸ್ತುರೂಪದಲ್ಲಿ ಸಹಾಯ ಮಾಡಲು ಸಾಮಗ್ರಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದೆ. ಕಾಸರಗೋಡು ಸರಕಾರಿ ಕಾಲೇಜು, ಪಡನ್ನಕ್ಕಾಡು ಕೃಷಿ ವಿದ್ಯಾಲಯ, ತ್ರಿಕ್ಕರಿಪ್ಪುರ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ನೆರವನ್ನು ಸಲ್ಲಿಸಬಹುದು. ಧನಸಹಾಯವನ್ನು ಕೇರಳ ಮುಖ್ಯಮಂತ್ರಿಗಳ ದುರಂತ ಪರಿಹಾರ ನಿಧಿಗೆ ಚೆಕ್‌/ಡಿಡಿ/ನಗದು ರೂಪದಲ್ಲಿ ಡಿಸಿ ಕಚೇರಿಯಲ್ಲಿ ನೇರ ಜಮೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next