Advertisement

ನೃತ್ಯಾಂಜಲಿಯಲ್ಲಿ ಅನಾವರಣಗೊಂಡ ಸೃಜನಶೀಲ ನೃತ್ಯ 

12:30 AM Feb 15, 2019 | Team Udayavani |

ನಾಯಕಿಯು ಕೃಷ್ಣನ ಚಿತ್ರವನ್ನು ನೆಲದಲ್ಲಿ ಬಿಡಿಸುತ್ತಿರಲಾಗಿ ಹಿಂದಿನ ಮತ್ತೂಂದು ಭಾಗದಲ್ಲಿ ಕೃಷ್ಣ ಅದನ್ನು ಭಂಗಿಗಳ ಮೂಲಕ ನಿರೂಪಿಸುವುದು, ಚರಣದಲ್ಲಿ ಕೃಷ್ಣನ ಕೊಳಲನ್ನು ಕಂಡ ನಾಯಕಿ ಅದರಲ್ಲೇ ಕೃಷ್ಣನನ್ನು ಕಾಣುವುದು, ಕೊನೆಯಲ್ಲಿ ಕೃಷ್ಣನ ಜೊತೆಯಲ್ಲಿ ಪವಡಿಸಿದಾಗ ಆತ ಮಾಯವಾಗಿ ಪುನಃ ಪಲ್ಲವಿಯ ಸ್ಥಾಯಿಗೆ ಹೋಗುವುದು ಇವೆಲ್ಲ ವಿಶಿಷ್ಟವಾಗಿತ್ತು. 

Advertisement

ಮಣಿಪಾಲದ ಹೆಜ್ಜೆ-ಗೆಜ್ಜೆಯ ರಜತ ಸಂವತ್ಸರದ ಸಂಭ್ರಮದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ನೃತ್ಯಾಂಜಲಿಯ 14ನೇ ಸರಣಿಯನ್ನು ಕುಂದಾಪುರದ ನೃತ್ಯವಸಂತ ನಾಟ್ಯಾಲಯದ ಕಲಾವಿದರು ಇತ್ತೀಚೆಗೆ ಉಡುಪಿಯ ರಾಜಾಂಗಣದಲ್ಲಿ ನಡೆಸಿಕೊಟ್ಟರು. ವಿ| ಪ್ರವಿತಾ ಅಶೋಕ್‌ರವರ ಗರಡಿಯಲ್ಲಿ ಪಳಗಿದ ಐವರು ಕಲಾವಿದರು ನೃತ್ಯಕಲೆಯನ್ನು ಸಮರ್ಥವಾಗಿ ಅನಾವರಣಗೊಳಿಸಿದರು. ಕಾರ್ಯಕ್ರಮ ಜಯಚಾಮರಾಜೇಂದ್ರ ಒಡೆಯರು ರಚಿಸಿದ ಅಠಾಣರಾಗ, ಆದಿತಾಳದ ಶ್ರೀ ಮಹಾಗಣಪತಿಂ ಭಜೇಹಂ ಎಂಬ ಗಣೇಶ ಸ್ತುತಿಯೊಂದಿಗೆ ಪ್ರಾರಂಭವಾಯಿತು. 

ಇದನ್ನು ರೋಶನ್‌ ಪೂಜಾರಿ ಮತ್ತು ಮೈತ್ರಿ ಪೆರ್ಡೂರು ಪ್ರಸ್ತುತಪಡಿಸಿದರು.ಆರಂಭದಿಂದಲೇ ಸ್ಪಷ್ಟವಾದ ಹಾಗೂ ಕ್ರಮಬದ್ಧವಾದ ಅಂಗಶುದ್ಧ ಅನಾವರಣವಾಯಿತು. ಕಲಾಕ್ಷೇತ್ರ ಶೈಲಿಯ ಛಾಯೆ ಹೊಂದಿದ ಪ್ರಸ್ತುತಿಯಲ್ಲಿ ಉತ್ಪವನ, ತೀರ್ಮಾನ, ತಟ್ಟುಮೆಟ್ಟು, ಆಯತಮಂಡಲ ಎಲ್ಲಾ ಸ್ಪಷ್ಟವಾಗಿದ್ದು ಅಭಿನಯ ಹಿತಮಿತದಲ್ಲಿತ್ತು. ಎರಡನೆಯ ನೃತ್ಯ ಪೂರ್ವಿಕಲ್ಯಾಣಿರಾಗದ ಶಿವಪದ ಆನಂದನಟಮಾಡುವಾರ್‌ ತಿಲ್ಲೆ„. ಇದನ್ನು ಕಿರಿಯ ಕಲಾವಿದೆಯರಾದ ಯುಕ್ತಿ ಉಡುಪ, ನಿಯತಿ ಮತ್ತು ಸಿಂಚನ ನೆಂಪು ಇವರು ಗೈದರು. ಶಿಸ್ತುಬದ್ಧವಾದ ಮಾರ್ಗದರ್ಶನದ ಹಿನ್ನಲೆಯಲ್ಲಿ ನೃತ್ಯವನ್ನು ನಿರೂಪಿಸಿದ ಈ ಕಿರಿಯ ಕಲಾವಿದೆಯರ ಶಿವಸ್ತುತಿಯಲ್ಲಿ ಅಡವುಗಳು ಬಹಳ ಶಕ್ತಿಶಾಲಿಯಾಗಿದ್ದು ಭಂಗಿಗಳು ಆಕರ್ಷಕವಾಗಿದ್ದವು. ಅಭಿನಯ ಮಿತಿಯಲ್ಲಿತ್ತು. 

ಕಾರ್ಯಕ್ರಮದ ಸುದೀರ್ಘ‌ ನೃತ್ಯ ಪದವರ್ಣ.ಇದು ಲಾಲ್ಗುಡಿಯವರ ರಚನೆ ಚಾರುಕೇಶಿರಾಗದ ಇನ್ನಂ ಎನ್‌ ಮನಂ ಇದನ್ನು ಮೈತ್ರಿ ಮತ್ತು ರೋಶನ್‌ ಪ್ರಸ್ತುತಪಡಿಸಿದರು. ಕೃಷ್ಣನಿಗಾಗಿ ಹಂಬಲಿಸಿ ಕನವರಿಸುವ ನಾಯಕಿಯ ಚಿತ್ರಣವಿರುವ ಈ ವರ್ಣದಲ್ಲಿ ಗುರು ಪ್ರವಿತಾರವರು ಕೃಷ್ಣನ ಪಾತ್ರವನ್ನೂ ವೇದಿಕೆಗೆ ತರಿಸುವ ಹೊಸ ಪ್ರಯೋಗವನ್ನು ಮಾಡಿದ್ದರು. ಆದರೂ ಸಾಹಿತ್ಯವು ನಾಯಕಿಯ ಸುತ್ತಲೇ ತಿರುಗುವ ಸ್ವಗತವಾದ್ದರಿಂದ ನಾಯಕನ ಪಾತ್ರ ಗೌಣವಾಗಿಬಿಡುತ್ತದೆ. ಇಷ್ಟಾದರೂ ಹೊಸ ಪ್ರಯೋಗದಲ್ಲಿ ಬಹಳಷ್ಟು ನವೀನತೆ, ಸೃಜನಶೀಲತೆ ಎದ್ದು ಕಾಣುತ್ತಿತ್ತು. ಇದಕ್ಕೆ ಉದಾಹರಣೆಯಾಗಿ ನಾಯಕಿಯು ಕೃಷ್ಣನ ಚಿತ್ರವನ್ನು ನೆಲದಲ್ಲಿ ಬಿಡಿಸುತ್ತಿರಲಾಗಿ ಹಿಂದಿನ ಮತ್ತೂಂದು ಭಾಗದಲ್ಲಿ ಕೃಷ್ಣ ಅದನ್ನು ಭಂಗಿಗಳ ಮೂಲಕ ನಿರೂಪಿಸುವುದು, ಚರಣದಲ್ಲಿ ಕೃಷ್ಣನ ಕೊಳಲನ್ನು ಕಂಡ ನಾಯಕಿ ಅದರಲ್ಲೇ ಕೃಷ್ಣನನ್ನು ಕಾಣುವುದು, ಕೊನೆಯಲ್ಲಿ ಕೃಷ್ಣನ ಜೊತೆಯಲ್ಲಿ ಪವಡಿಸಿದಾಗ ಆತ ಮಾಯವಾಗಿ ಪುನಃ ಪಲ್ಲವಿಯ ಸ್ಥಾಯಿಗೆ ಹೋಗುವುದು ಇವೆಲ್ಲ ವಿಶಿಷ್ಟವಾಗಿತ್ತು. 

ವರ್ಣದ ಜತಿಗಳ ಭಾಗದಲ್ಲಿ ಮೃದಂಗ ಕಲಾವಿದರಾದ ವಿ|ಹರ್ಷ ಸಾಮಗ ಬಹಳಷ್ಟು ನಿರ್ವಹಿಸಿದರೂ ನಟುವಾಂಗದಲ್ಲಿ ಸಣ್ಣ ತೊಡಕು ಕಂಡಿತು. ರಾಗ ಇನ್ನಷ್ಟು ಆಪ್ಯಾಯಮಾನವಾಗಲು ನಿತೀಶ್‌ರವರ ಕೊಳಲು ಕಾರಣ. ಅನಂತರ ಪ್ರಸ್ತುತಪಡಿಸಿದ ಅರ್ಧನಾರೀಶ್ವರಂ ಎಂಬ ಮುತ್ತುಸ್ವಾಮಿ ದೀಕ್ಷಿತರ ಕುಮುದಕ್ರಿಯರಾಗದ ಕೃತಿ ಸುಂದರವಾಗಿ ನಿರೂಪಿತವಾಯಿತು. ಶಿವ-ಪಾರ್ವತಿಯರ ಆಹಾರ್ಯವನ್ನು ವರ್ಣಿಸುವಲ್ಲಿ ಹಾಗೂ ವಿವಿಧ ನಿಲುವು, ಭಂಗಿಗಳಲ್ಲಿ ಗುರುಗಳ ಕಲ್ಪನೆ ಹಾಗೂ ಶಿಷ್ಯರ ಪ್ರಾವೀಣ್ಯ ಸಾಬೀತಾಯಿತು. ಶಿವನ ಉದ್ಧತ ಹಾಗೂ ಪಾರ್ವತಿಯ ಸುಕೋಮಲ ವರ್ಣನೆಯಲ್ಲಿ ಮೃದಂಗ ಕಲಾವಿದ ಹರ್ಷ ಸಾಮಗರು ಅದ್ಭುತವಾಗಿ ಚಮತ್ಕಾರ ತೋರಿದರು. 

Advertisement

ನಾಲ್ಕನೆಯ ನೃತ್ಯ ಪುರಂದರದಾಸರ ಚಿಕ್ಕವನೇ ಇವನು ಎಂಬ ದೇವರನಾಮದಲ್ಲಿ ಸುಂದರವಾದ ಸಂಯೋಜನೆ ಕಂಡುಬಂತು. ಇದರಲ್ಲಿ ಯುಕ್ತಿ, ನಿಯತಿ ಹಾಗೂ ಸಿಂಚನಾ ಅಭಿನಯ ಸಾಮರ್ಥ್ಯ ತೋರಿಸಿದರು. ಕೃಷ್ಣನ ಬಗ್ಗೆ ದೂರು ಹೇಳುವ ಗೋಪಿಕಾ ಸ್ತ್ರೀಯರ ಚಿತ್ರಣವಿರುವ ಈ ಸಾಹಿತ್ಯದಲ್ಲಿ ಮೂವರು ಕಲಾವಿದೆಯರು ಕೂಡ ಬೇರೆ ಬೇರೆ ಪಾತ್ರ ಬದಲಾಯಿಸಿಕೊಂಡು ಗೋಕುಲದ ಚಿತ್ರಣವನ್ನು ಕಣ್ಣಮುಂದೆ ತಂದರು. 

ಓರ್ವ ಗೋಪಿಕೆ ಚಾಡಿ ಹೇಳುವಾಗ ಮತ್ತೀರ್ವರು ಯಾವುದಾದರೊಂದು ಕೆಲಸದಲ್ಲಿ ತೊಡಗಿರುವುದು, ಕೊನೆಗೆ ಕೃಷ್ಣನನ್ನು ಹಿಡಿಯಲು ಬೆಣ್ಣೆಯನ್ನು ಎದುರಿಗಿರಿಸಿ ವೇದಿಕೆಯಲ್ಲಿದ್ದ ದ್ವಾರದಲ್ಲಿ ಅಡಗಿ ಕುಳಿತು ಇಣುಕುವುದು, ಹೀಗೆ ವಿವಿಧ ವಿಶೇಷಗಳು ಇದರಲ್ಲಿ ಕಂಡುಬಂತು. ಈ ದೇವರನಾಮದ ಅಭಿನಯದಲ್ಲಿ ಪುಟಾಣಿಗಳು ಸೈ ಎನಿಸಿಕೊಂಡರೆ ನಂತರದ ಕಾಳಿಂಗ ಮರ್ಧನ ತಿಲ್ಲಾನದಲ್ಲಿ ಅಷ್ಟೇ ಕರಾರುವಕ್ಕಾಗಿ ಲವಲವಿಕೆಯಿಂದ ನೃತ್ತಭಾಗದಲ್ಲಿ ಮೆಚ್ಚುಗೆ ಗಳಿಸಿದರು. ಉತ್ತಮ ಅನುಸರಣೆಯಿಂದ ಪಿಟೀಲು ವಾದನದಲ್ಲಿ ಶರ್ಮಿಳಾ ರಾವ್‌ ಇವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. 

ದೀಪಕ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next