Advertisement

ನೋಡ ಬನ್ನಿ,ಕೋಟೆಯ ಸೊಬಗ

12:40 PM Sep 16, 2017 | |

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಮೊಸಳೆ ಇನ್ನಿತರ ಅಪರೂಪದ ಜೀವಿಗಳು ಇರುವ ಸ್ಥಳ ಯಾವುದು? ಅತಿ ಹೆಚ್ಚು ಶ್ರೀಗಂಧ, ಬೀಟೆ, ಹೊನ್ನೆ, ಬಿಲ್ವಾರದಂಥ ಅಮೂಲ್ಯ ವನ್ಯ ಸಂಪತ್ತು ಇರುವ ಪ್ರದೇಶ ಯಾವುದು?ಎರಡಕ್ಕೂ ಒಂದೇ ಉತ್ತರ: ಹೆಗ್ಗಡ ದೇವನಕೋಟೆ.

Advertisement

ಇವಿಷ್ಟೇ ಅಲ್ಲ, ಕಬಿನಿ ಜಲಾಶಯ, ನುಗು, ತಾರಕ, ಹೆಬ್ಬಳ್ಳ ಜಲಾಶಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಏಕೈಕ ಪ್ರದೇಶ ಕೂಡ ಇದೇ.  ಹೆಗ್ಗಡದೇವನ ಕೋಟೆ ಏಕೆ ಪ್ರಮುಖ ಸ್ಥಳವೆಂದರೆ- ಒಂದು ಕಾಲದಲ್ಲಿ ದಸರಾ ಉತ್ಸವಕ್ಕೆ ಮೈಸೂರಿಗೆ ಆನೆಗಳನ್ನು ಸರಬರಾಜು ಮಾಡುತ್ತಿದ್ದದ್ದು ಇದೇ ಪ್ರದೇಶ.  ಒಂದು ಕಾಲದಲ್ಲಿ ಖೆಡ್ಡಾ ಆಪರೇಷನ್‌ ಕೂಡ ಇಲ್ಲಿ ನಡೆಯುತ್ತಿತ್ತು. ಮಹಾರಾಜರ ಕಾಲದಲ್ಲಿ ಹಾಗೂ ಅನಂತರದಲ್ಲಿ, 1972 ರವರೆಗೂ ಆನೆಗಳನ್ನು ಖೆಡ್ಡಾ ಮೂಲಕ ಹಿಡಿದು, ಪಳಗಿಸುವ ಪ್ರಮುಖ ಕೇಂದ್ರವಾಗಿದ್ದುದು ಇದೇ ಹೆಚ್‌.ಡಿ. ಕೋಟೆ. 

ಪೊನ್ನಾಟ ಎಂಬ ಮಹಾರಾಜನಿಂದ ಸ್ಥಾಪಿತವಾದದ್ದು ಹೆಗಡೆ ದೇವರಾಯನ ಕೋಟೆ. ಕಾಲಾಂತರದಲ್ಲಿ ಇದು ಹೆಗ್ಗಡದೇವನ ಕೋಟೆ ಆಯಿತು. ಈ ಪೊನ್ನಾಟ ಮಹಾರಾಜ, ಆ ದಿನಗಳಲ್ಲಿ ಯದುವಂಶದ ಮೈಸೂರು ಅರಸರಿಗೆ ಕಪ್ಪ ಕೊಡಲು ಒಪ್ಪಲಿಲ್ಲವಂತೆ. ಇದರಿಂದ ಸಿಟ್ಟಾದ ಮೈಸೂರಿನ ದೊರೆಗಳು ಪೊನ್ನಾಟ ಮಹಾರಾಜನನ್ನು ಹತ್ತಿಕ್ಕಿ, ಸಾಮಂತ ರಾಜನಾದ ಜೈನ ಧರ್ಮದ ಹೆಗಡೆದೇವರಾಯನನ್ನು ಪ್ರಾಂತ್ಯ ಅಧಿಕಾರಿಯಾಗಿಸಿದರು.  ಆನಂತರದಲ್ಲಿ  ಹೆಗ್ಗಡದೇವನಕೋಟೆಯ ದಟ್ಟ ಕಾಡಿಗೆ  ಮೈಸೂರು ರಾಜ ವಂಶಸ್ಥರು ಬೇಟೆಗೆ ಬರುತ್ತಿದ್ದರು. 

ಬೇಟೆಗೂ ಮುನ್ನ ಆಗಿನ ಕಾಡುಗುಡಿ, ಈಗಿನ ಬೀರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು.  ಆಗ ಹುಟ್ಟಿಕೊಂಡ ಮಹಾರಾಜರ ಬಂಗಲೆಗಳೇ ಈಗ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಂಗಲ್‌ ಲಾಡ್ಜ್ ರೆಸಾರ್ಟ್‌ ಅಧೀನದಲ್ಲಿದೆ.  ವನ್ಯಜೀವಿಗಳನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ಕಟ್ಟಿರುವ ವೀಕ್ಷಣಾ ಗೋಪುರ, ಗುಂಡ್ರೆ ಅರಣ್ಯದೊಳಗಿನ ರಾಜ ಬಂಗಲೆ ಇಂದು ಅರಣ್ಯ ವಸತಿಗೃಹಗಳಾಗಿ ಮಾರ್ಪಾಡಾಗಿವೆ. 

ಈ ಊರಿಗೆ ವಿಶಿಷ್ಟ ಎನ್ನುವಂಥ ಪೌರಾಣಿಕ ಹಿನ್ನೆಲೆಯೂ ಇದೆ.   ಪಾಂಡವರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡು, ಪಾಂಡವರು ವನವಾಸಕ್ಕೆ ತೆರಳುವ ಮುನ್ನ ಇಲ್ಲಿಯೇ ಒಂದು ದಿನ ಉಳಿದಿದ್ದರು ಎನ್ನಲಾದ ಕೋಟೆ, ಪಟ್ಟಣದ 1ನೇ ಮುಖ್ಯರಸ್ತೆಯಲ್ಲಿದೆ. ಇಲ್ಲಿ ಶ್ರೀಲಕ್ಷಿ$¾àವರದರಾಜಸ್ವಾಮಿ ದೇವಸ್ಥಾನವಿದೆ. 

Advertisement

ದಸರಾ ದಿನ ಇಲ್ಲಿಯೂ ಪೊಲೀಸ್‌ ಪೂಜೆ ಹೆಸರಿನಲ್ಲಿ ನಡೆಯುತ್ತದೆ. ದೇವಸ್ಥಾನದಿಂದ ದೇವರ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಪಟ್ಟಣದ ಬಿಇಒ ಆಫೀಸ್‌ ಹತ್ತಿರ ಇರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 

ಪೂನ್ನಾಟ ಮಹಾರಾಜನ ಆಳ್ವಿಕೆಯ ನಂತರ ಈ ಸ್ಥಳದಲ್ಲಿ ಜೈನ ಸಮುದಾಯದ ಜನರು ಹಾಗೂ ಜೈನ ಮುನಿಗಳು ಹೆಚ್ಚಾಗಿ ವಾಸವಿದ್ದರು  ಎಂಬುದ್ದಕ್ಕೆ ಆನೇಕ ಐತಿಹಾಸಿಕ ಕುರುಹುಗಳು ಹೆಚ್‌.ಡಿ. ಕೋಟೆಯಲ್ಲಿವೆ. ಈ ಮಾತಿಗೆ , ಸುಮಾರು 125 ವರ್ಷಗಳ ಹಿಂದೆ ಪಟ್ಟಣದಲ್ಲಿ ಈಗಿರುವ ಹಳೆ ತಾಲೂಕು ಕಚೇರಿ ನಿರ್ಮಾಣದ ಸಂದರ್ಭ ಭೂಮಿಯಲ್ಲಿ ದೊರೆತಿರುವ ಜೈನ ತೀರ್ಥಂಕರರಲ್ಲಿ ಒಬ್ಬರಾದ ಶ್ರೀಚಂದ್ರಪ್ರಭಾ ತೀರ್ಥಂಕರರ ವಿಗ್ರಹವೇ ಸಾಕ್ಷಿ. 

ಇಂದು ಪಟ್ಟಣದಲ್ಲಿರುವ ಜೋನಿಗೇರಿ ಬಡಾವಣೆಯು ಹಿಂದೆ ಜೈನಕೇರಿ ಅಗಿತ್ತು. ಕಾಲಾನಂತರ ಇಂದು ಜೋನಿಗೇರಿ ಆಗಿ ಮಾರ್ಪಟ್ಟಿದೆ ಎನ್ನುತ್ತಾರೆ ಇತಿಹಾಸಜ್ಞರು.  ಪುನ್ನಾಟ ಮಹಾರಾಜನ ನಂತರ ಇಲ್ಲಿ ಆಳ್ವಿಕೆ ನಡೆಸಿದ ಹೆಗಡೆದೇವರಾಯ ಕೂಡ ಜೈನ ಧರ್ಮಕ್ಕೇ ಸೇರಿದ ಸಾಮಂತ ರಾಜ ಎಂದು ಉಲ್ಲೇಖವಿದೆ.

ತಲಕಾಡಿನಂತೆ ಈ ಸ್ಥಳವೂ ಶಾಪಗ್ರಸ್ಥ..!?
ಪೊನ್ನಾಟ ಮಹಾರಾಜ ಕಟ್ಟಿದ  ಹೆಗ್ಗಡದೇವನಕೋಟೆ ತಾಲ್ಲೂಕು ಪ್ರಕೃತಿ ಸಂಪತ್ತಿನ ಕಣಜ. ಇಷ್ಟಾದರೂ ಇದು  ಹಿಂದುಳಿದ ತಾಲ್ಲೂಕು ಎಂದು ಕರೆಸಿಕೊಳ್ಳಲು ಒಂದು ಶಾಪ ಕಾರಣವಂತೆ.  ಅಂದು ಹೆಗ್ಗಡದೇವರಾಯನ ಆಸ್ಥಾನದಲ್ಲಿದ್ದ ಮಹಾರಾಜನಿಂದ ನೊಂದ ಸ್ತ್ರೀ ಒಬ್ಬಳು ನೀಡಿದ ಶಾಪ ಕಾರಣ ಎಂದು ಹೇಳಲಾಗುತ್ತಿದೆ.

ಪೊನ್ನಾಟ  ರಾಜನ  ನಂತರ ಸಾಮಂತ ರಾಜನಾಗಿದ್ದ ಹೆಗಡೆ ದೇವರಾಯನ ಆಳ್ವಿಕೆ ವೇಳೆ ರಾಜನ ಕಡೆಯವರು ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಥಳಿಸುತ್ತಿದ್ದಾಗ ಇಲ್ಲಿನ ಜನರೆಲ್ಲಾ ಸುಮ್ಮನೆ ನೋಡುತ್ತಾ ನಿಂತಿದ್ದರಂತೆ.  ಅದೇ ವೇಳೆಗೆ, ಸಂತೆಗೆ ಹೋಗುತ್ತಿದ್ದ ಬೇರೊಂದು ಊರಿನ ವ್ಯಕ್ತಿ – ಈ ಹೆಣ್ಣು ಮಗಳಿಗೆ ಯಾಕೆ ಶಿಕ್ಷೆ ಕೊಡುತ್ತೀರಿ? ಇದನ್ನು ತಕ್ಷಣವೇ ನಿಲ್ಲಿಸಿ ಎಂದು ಪ್ರತಿಭಟನೆಯ ದನಿಯಲ್ಲಿ ಹೇಳಿದನಂತೆ. 

ಆಗ, ತನ್ನ ಸಹಾಯಕ್ಕೆ ಬಾರದ ಈ ಊರಿನವರು ಇದ್ದಂಗೆ ಇರಲಿ, ನನ್ನ ರಕ್ಷಣೆಗೆ ಪ್ರಯತ್ನಿಸಿದ ಬೇರೆ ಕಡೆಯಿಂದ ಇಲ್ಲಿಗೆ ಬಂದವರು ಬಾಳಿ ಬದುಕಲಿ ಎಂದು ಆ ಹೆಂಗಸು ಶಾಪವಿತ್ತಳಂತೆ.  ವಿಚಿತ್ರ ಎಂದರೆ, ಅಂದಿನಿಂದ ಇಂದಿನವರೆಗೂ ಬೇರೆ ಕಡೆಯಿಂದ ಪಟ್ಟಣಕ್ಕೆ ವಲಸೆ ಬಂದವರೇ, ವ್ಯಾಪಾರ ವಹಿವಾಟು ಇನ್ನಿತರ ಕ್ಷೇತ್ರದಲ್ಲಿ ಪ್ರಗತಿ ಹೊಂದಿದ್ದಾರೆಯೇ ಹೊರತು, ಇಲ್ಲಿನವರು ಇನ್ನೂ ಇದ್ದ ಹಾಗೇ ಇದ್ದಾರೆ. ಇದನ್ನು ಕೇಳಿದ ಕೆಲವರು ಇದು ಆ ಹೆಣ್ಣು ಮಗಳ ಶಾಪದ ಫ‌ಲ ಎನ್ನುತ್ತಾರೆ. 

ಬಿ. ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next