Advertisement

ಭತ್ತದ ಬೇಸಾಯದಲ್ಲಿ ಸವಾಲುಗಳನ್ನು ಮೆಟ್ಟಿನಿಂತ ಮಾದರಿ ಮಹಿಳೆ

10:04 AM Dec 29, 2019 | mahesh |

ಹೆಸರು: ನೊಣಾಲ್‌ ಪ್ರತಿಭಾ ಎಸ್‌. ಹೆಗ್ಡೆ
ಏನೇನು ಕೃಷಿ: ಭತ್ತ, ಅಡಿಕೆ, ತೆಂಗು, ಕರಿಮೆಣಸು
ವಯಸ್ಸು: 52
ಕೃಷಿ ಪ್ರದೇಶ: 10 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತÌದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬಜಪೆ: ಕೃಷಿಯೆಂದರೆ ಹಿಂದೆ ಸರಿಯುವ ಯುವಕರು, ಅದರಲ್ಲೂ ಭತ್ತದ ಬೇಸಾಯ ಮಾಡದೇ ಗದ್ದೆಯನ್ನು ಹಡೀಲು ಬಿಟ್ಟವವರಿಗೆ ಕೃಷಿ ಮಾಡುವ ಸ್ಫೂರ್ತಿ ನೀಡುವ ಜಿಲ್ಲೆಯಲ್ಲಿಯ ಹೆಮ್ಮೆಯ ಮಾದರಿ ಮಹಿಳಾ ರೈತೆ ನೊಣಾಲ್‌ ಪ್ರತಿಭಾ ಎಸ್‌. ಹೆಗ್ಡೆ (52). ಎಲ್ಲ ವಿಭಾಗದಲ್ಲಿ ಪುರುಷರಿಗೆ ಮಹಿಳೆ ಸರಿಸಮಾನ ಎನ್ನುವ ಕಾಲವಿದು. ಕೃಷಿಯಲ್ಲಿ ಅದರಲ್ಲೂ ಭತ್ತದ ಬೇಸಾಯ ಮಾಡುವ ಕೆಲವೇ ರೈತರಲ್ಲಿ ನೊಣಾಲ್‌ ಪ್ರತಿಭಾ ಎಸ್‌. ಹೆಗ್ಡೆ ಒಬ್ಬರು. ಪುರುಷರಿಗೆ ಸರಿಸಮಾನರು ಎನ್ನುವಲ್ಲಿ ಅವರ ಭತ್ತದ ಬೇಸಾಯವೇ ನಿದರ್ಶನ . ಭತ್ತದ ಬೇಸಾಯ ನಷ್ಟ, ಸಮಸ್ಯೆಗಳನ್ನು ಮೆಟ್ಟಿ ನಿಂತ ಈ ಮಹಿಳೆಯ ಕಾಯಕವೇ ಕೈಲಾಸವಾಗಿದೆ. ಕುಳವೂರು ಮೇಗಿನಮನೆ ರಾಮಣ್ಣ ರೈ ಮತ್ತು ನೊಣಾಲ್‌ ಹೇಮಾವತಿ ರೈ ದಂಪತಿಯ ಮೂರು ಮಂದಿ ಮಕ್ಕಳಲ್ಲಿ ಪ್ರತಿಭಾ ಎಸ್‌. ಹೆಗ್ಡೆ ಕಿರಿಯರು. ತಂದೆ ತಾಯಿ ಒಂದೇ ಊರಿನವರು. ಕೃಷಿಕರು ಕೂಡ. ಒಟ್ಟು 10 ಎಕ್ರೆ ಜಾಗದಲ್ಲಿ 5 ಎಕ್ರೆ ಭತ್ತದ ಕೃಷಿ ಮಾಡುತ್ತಾರೆ. ಭತ್ತ ಬೇಸಾಯ ಮಾಡುತ್ತಿದ್ದ ತಾಯಿ ಹೇಮಾವತಿ ರೈ ಅವರ ಹಾದಿಯನ್ನು ಮುಂದುವರಿಸಿಕೊಂಡು ಬಂದವರು ಪ್ರತಿಭಾ ಎಸ್‌. ಹೆಗ್ಡೆ. 20 ವರ್ಷಗಳಿಂದ ಭತ್ತದ ಬೇಸಾಯದ ಜತೆಗೆ ಅಡಕೆ, ತೆಂಗು, ಕರಿಮೆಣಸು ಮತ್ತು ಸಾಗುವಾನಿ ಮರಗಳನ್ನು ಕೂಡ ಬೆಳೆಸಿದ್ದಾರೆ. 1ಸಾವಿರ ಕಂಗು, ಗದ್ದೆಯ ಬದಿಗಳಲ್ಲಿ 100ರಷ್ಟು ತೆಂಗು ಮರ ಅದಕ್ಕೆ ಕರಿಮೆಣಸು ಬಳ್ಳಿ ಬಿಟ್ಟಿದ್ದಾರೆ.

ಕಾಲುವೆ ನೀರು ಆಧಾರ
ಫ‌ಲ್ಗುಣಿ ನದಿಯ ನೀರು ದೊಡ್ಡಳಿಕೆಯಿಂದ ಸಣ್ಣ ಕಾಲುವೆ ಮೂಲಕ 8 ಕಿ.ಮೀ. ನೊಣಾಲ್‌ ತನಕ ಬರುತ್ತಿದೆ. ಮದ್ರಾಸ್‌ ಸರಕಾರ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು 1968 ರಿಂದ 16ಕಿ.ಮೀ. ಉದ್ದದ ಕಾಲುವೆ ಮೂಲಕ ಬಡಗುಳಿಪಾಡಿ ತನಕ ನೀರನ್ನು ಕೃಷಿಪ್ರದೇಶಕ್ಕೆ ಕೊಂಡೊಯ್ಯುಲಾಗುತ್ತಿತ್ತು. ಈ ಪ್ರದೇಶದ ಕೃಷಿಕರಿಗೆ ಹಿಂಗಾರು ಬೆಳೆಗೆ ಇದು ಆಧಾರವಾಗಿದೆ. ಕೊಳವೆ ಬಾವಿ, ಕರೆಗಳಿದ್ದರೂ ಈ ನೀರು ಮಹತ್ವದಾಗಿದೆ.ಭತ್ತ ಬೇಸಾಯದಿಂದ ಬಂದ ಬೇಕಾದಷ್ಟು ಅಕ್ಕಿಯನ್ನು ಮನೆ ಉಪಯೋಗಕ್ಕೆ ಇಟ್ಟುಕೊಂಡು ಬಾಕಿದನ್ನು ಮಾರಾಟ ಮಾಡಲಾಗುತ್ತದೆ. ಭತ್ತ ಬೇಸಾಯದಲ್ಲಿ ಬೈಹುಲ್ಲು ಲಾಭ. ಮುಂಗಾರು ಬೆಳೆಯಲ್ಲಿ ಲಾಭ ಹೆಚ್ಚು. ಈ ಬೆಳೆಯನ್ನು ಹೆಚ್ಚಾಗಿ ಎಲ್ಲರೂ ಮಾಡುತ್ತಾರೆ. ಅದರೆ ಹಿಂಗಾರು ಬೆಳೆ ಮಾಡುತ್ತಿಲ್ಲ ಲಾಭವೂ ಕಡಿಮೆ. ಕಷ್ಟವೂ ಜಾಸ್ತಿ. ಭತ್ತದ ಬೆಳೆ ಜತೆ ಜತೆಯಾಗಿ ವಾಣಿಜ್ಯ ಬೆಳೆಯೂ ಬೇಕು. ರಾಸಾಯನಿಕ ಗೊಬ್ಬರ ಜತೆ ಸಾವಯವ ಗೊಬ್ಬರ ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಪ್ರತಿಭಾ ಹೆಗ್ಡೆ. ಪ್ರತಿಭಾ ಅವರ ಪತಿ ಸದಾನಂದ ಹೆಗ್ಡೆ ವ್ಯಾಪಾರಸ್ಥರಾದರೂ ಕೂಡ ಕೃಷಿಯಲ್ಲಿ ಸಾಥ್‌ ನೀಡುತ್ತಿದ್ದಾರೆ. ಮಗಳು ಶಿಯಾ ಎಸ್‌. ಹೆಗ್ಡೆ ವಿದ್ಯಾಭ್ಯಾಸದ ಜತೆಗೆ ಕೃಷಿಯಲ್ಲಿ ಆಸಕ್ತಿ ವಹಿಸುತ್ತಿದ್ದಾರೆ.

ಭತ್ತದ ಬೇಸಾಯ
ಇನ್ನೂ 4 ಎಕ್ರೆ ಜಾಗದಲ್ಲಿ ಭತ್ತದ ಬೇಸಾಯವನ್ನು ಮಾಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದು ಈ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಬಹುವುದು ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರತಿಭಾ ಎಸ್‌. ಹೆಗ್ಡೆ.

Advertisement

ತಾ| ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ
ಕೃಷಿ ಇಲಾಖೆ 2018-19ನೇ ಸಾಲಿನಲ್ಲಿ ಆತ್ಮ ಯೋಜನೆ ಯಡಿ ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ ವಿಭಾಗದಲ್ಲಿ ತಾ| ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿದೆ. ಹಲವಾರು ಸಂಘ, ಸಂಸ್ಥೆಗಳು ಇವರ ಕೃಷಿ ಸಾಧನೆಗೆ ಸಮ್ಮಾನಿಸಿವೆ.

ಎರಡು ಅವಧಿಯ ಬೆಳೆ ಪ್ರತಿ ಬಾರಿ ಮುಂಗಾರಿನಲ್ಲಿ 5 ಎಕ್ರೆ ಮತ್ತು ಹಿಂಗಾರಿನಲ್ಲಿ 5 ಎಕ್ರೆ ಭತ್ತದ ಬೇಸಾಯ ಮಾಡುತ್ತಾರೆ. ಹಿಂಗಾರು ಭತ್ತ ಬೆಳೆಯಲ್ಲಿ ಅವರ ಸ್ವಂತ ಜಾಗ 1.5 ಎಕ್ರೆ ಗದ್ದೆಯಲ್ಲಿ ಮತ್ತು ಹಡೀಲು ಬಿಟ್ಟ ಕುಳವೂರು ಗುತ್ತಿನ 3.5 ಎಕ್ರೆ ಗದ್ದೆಯಲ್ಲಿ ಭತ್ತದ ಬೇಸಾಯವನ್ನು ಮೂರು ವರ್ಷದಿಂದ ಮಾಡುತ್ತಿದ್ದಾರೆ. ಮುಂಗಾರು ಬೆಳೆಯನ್ನು ಟಿಲ್ಲರ್‌ ಮೂಲಕ ಉಳುಮೆ ಮಾಡಿ, ಕಳೆ ಗಿಡ ಜಾಸ್ತಿ ಇರುವ ಕಾರಣ ಕುಳವೂರು ಗುತ್ತಿನ ಗದ್ದೆಯನ್ನು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಲಾಗುತ್ತದೆ. ಮುಂಗಾರು ಬೆಳೆಯನ್ನು ನಾಟಿ ಮಾಡುವ ಮೂಲಕ ಹಿಂಗಾರು ಭತ್ತದ ಬೇಸಾಯವನ್ನು ಮ್ಯಾಟ್‌ಪದ್ಧತಿಯಲ್ಲಿ ಮಿಶನ್‌ ಮೂಲಕ ನಾಟಿ ಮಾಡಲಾಗುತ್ತದೆ.

ಬೇಸಾಯದಿಂದ ಜಲಸಂರಕ್ಷಣೆ
ಭತ್ತದ ಕೃಷಿಯಿಂದ ಮಾನಸಿಕ ನೆಮ್ಮದಿ ಇದೆ. ಹಿರಿಯರು ಮಾಡಿಕೊಂಡು ಬಂದ ಕೃಷಿ ಹಾಗೂ ಸಂಸ್ಕೃತಿ ಉಳಿಸುವಂತಾಗಿದೆ. ಹಡೀಲು ಬಿಟ್ಟ ಗದ್ದೆಯಲ್ಲಿ ಭತ್ತದ ಕೃಷಿ ಎಲ್ಲರೂ ಮಾಡಬೇಕು. ಭತ್ತ ಬೇಸಾಯದಿಂದ ಜಲಸಂರಕ್ಷಣೆ ಸಾಧ್ಯ. ಇದರಿಂದ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಕಡಿಮೆ. ವಿವಿಧ ಬೆಳೆಗಳಿಗೆ ಫಸಲು ಜಾಸ್ತಿ ಬರುತ್ತದೆ. ಭತ್ತ ಬೇಸಾಯ ಕಡಿಮೆಯಾಗುತ್ತಿದ್ದಂತೆ ಎಲ್ಲೆಡೆ ನೀರಿನ ಸಮಸ್ಯೆ ಕಾಣುತ್ತೇವೆ. ಎಲ್ಲಿ ಭತ್ತದ ಬೇಸಾಯ ಜಾಸ್ತಿ ಇದೆಯೋ ಅಲ್ಲಿ ನೀರಿನ ಸಮಸ್ಯೆ ಕಡಿಮೆ. ಜಲಸಂರಕ್ಷಣೆ, ಜಾಗೃತಿ, ಯೋಜನೆ, ಯೋಚನೆಗಳು ಭತ್ತ ಬೇಸಾಯ ಮಾಡುವ ರೈತನಲ್ಲಿ ಹೆಚ್ಚು ಕಾಣುತ್ತೇವೆ. ಗದ್ದೆಯನ್ನು ಹಡೀಲು ಬಿಡದೇ ಸಾಮೂಹಿಕ ಭತ್ತ ಬೇಸಾಯ ಮಾಡಿದಲ್ಲಿ ಕೀಟ, ಹಕ್ಕಿ, ನವಿಲು, ಜಿಂಕೆಗಳ ಬಾಧೆ ಕಡಿಮೆ. ಇಲ್ಲದಿದ್ದಲ್ಲಿ ಒಬ್ಬ ರೈತ ಮಾಡಿದ ಭತ್ತ ಬೇಸಾಯಕ್ಕೆ ಎಲ್ಲದರ ದಾಳಿಗೆ ಅದು ಗುರಿಯಾಗಿ ನಷ್ಟಕ್ಕೆ ಕಾರಣವಾಗುತ್ತದೆ.
– ಪ್ರತಿಭಾ ಎಸ್‌.ಹೆಗ್ಡೆ, ಕೃಷಿಕರು

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next