Advertisement

ಕ್ಷಿಪ್ರ ಪ್ರಗತಿಗೆ ಕನಸಷ್ಟೇ ಸಾಲದು ಅನುದಾನ ಬೇಕು

12:54 AM Aug 25, 2022 | Team Udayavani |

ಉಡುಪಿ ಜಿಲ್ಲೆ ಸ್ಥಾಪನೆಯಾಗಿ 25 ವರ್ಷಗಳಾಗಿವೆ. ತಾಲೂಕು ರಚನೆಯ ಹಿಂದೆ ಹಲವರ ಶ್ರಮದಾನವೂ ಇದೆ. ಆಗಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ರ ದಿಟ್ಟ ನಿರ್ಧಾರದ ಜತೆಗೆ ವಿಧಾನಪರಿಷತ್‌ ಸದಸ್ಯ ಡಾ| ವಿ.ಎಸ್‌. ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ, ಶಾಸಕ ಯು. ಸಭಾಪತಿಯವರ ಪ್ರಯತ್ನವೂ ಇದೆ. ಅಂಥ ಜಿಲ್ಲೆಯಲ್ಲೀಗ ಏಳು ತಾಲೂಕುಗಳಿವೆ. ಅವುಗಳ ಪ್ರಗತಿಯ ಹಾದಿ ಹೇಗೆ ಸಾಗಿದೆ ಎಂಬುದರ ಪಕ್ಷಿ ನೋಟ ಇಲ್ಲಿದೆ.

Advertisement

ಉಡುಪಿ ಜಿಲ್ಲಾ ಕೇಂದ್ರದ ಜತೆಗೆ ತಾಲೂಕು ಕೇಂದ್ರವೂ ಹೌದು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆ ಬೇರ್ಪಡುವ ಪೂರ್ವದಿಂದಲೇ
ಉಡುಪಿ ತಾಲೂಕು ಅಸ್ತಿತ್ವದಲ್ಲಿತ್ತು. ಉಡುಪಿ ಪ್ರತ್ಯೇಕ ಜಿಲ್ಲೆಯಾದ ಅನಂತರದಲ್ಲಿ ಉಡುಪಿ ತಾಲೂಕು
ಕೇಂದ್ರವಾಗಿಯೂ ಮುಂದುವರಿಯುವ ಜತೆಗೆ ಜಿಲ್ಲಾ ಕೇಂದ್ರವಾಗಿಯೂ ರೂಪುಗೊಂಡಿತು.

ಆದದ್ದು
– ರಜತಾದ್ರಿಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿ ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರ
– ತಾಲೂಕು ಕಚೇರಿ ಜೋಡುಕಟ್ಟೆಯಿಂದ ಬನ್ನಂಜೆಗೆ ಸ್ಥಳಾಂತರ. 2018ರಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ.
– ಉಡುಪಿ-ಮಣಿಪಾಲ ಚತುಷ್ಪಥವಾಗಿದ್ದು, ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ.
– ಮಣಿಪಾಲದಿಂದ ಪೆರಂಪಳ್ಳಿ – ಶೀಂಬ್ರಾ ಸಂಪರ್ಕ ಸೇತುವೆ ನಿರ್ಮಾಣ.
– ಕಲ್ಸಂಕ ರಸ್ತೆ-ಸೇತುವೆಯನ್ನು ಪುನರ್‌ ನಿರ್ಮಾಣ.
-ಮಣಿಪಾಲದಲ್ಲಿ ಸಾಲುಮರದ ತಿಮ್ಮಕ್ಕ ಬೃಹತ್‌ ಉದ್ಯಾನವನ ನಿರ್ಮಾಣ.
– ಮಲ್ಪೆ ಬಾಪುತೋಟದಲ್ಲಿ ಜೆಟ್ಟಿ ನಿರ್ಮಾಣವಾಗಿದೆ. ಮಲ್ಪೆಯಿಂದ ಪಡುಕರೆಗೆ ಸೇತುವೆ ನಿರ್ಮಾಣ.
– ಮಲ್ಪೆ ಬೀಚ್‌, ಸೈಂಟ್‌ ಮೇರಿಸ್‌ ದ್ವೀಪ್‌ ಅಭಿವೃದ್ಧಿ.
– ಇಪಿ ಎಫ್ ಪ್ರಾದೇ ಶಿಕ ಕಚೇರಿ ಸ್ಥಾಪನೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣ.
– ಸ್ವರ್ಣ ನದಿಗೆ ಅಣೆಕಟ್ಟು ನಿರ್ಮಾಣ

ಆಗಬೇಕಾದದ್ದು
– ಇಂದ್ರಾಳಿ ರೈಲ್ವೇ ಬ್ರಿಡ್ಜ್ ಸಮೀಪದ ರಸ್ತೆ ಸದಾ ಗುಂಡಿ ಮಯವಾಗಿರುತ್ತದೆ. ಉಡುಪಿ ನಗರ ಪ್ರವೇಶಿಸಿದೆ ಅಂಬಾಗಿಲು ಮಾರ್ಗವಾಗಿ ಮಣಿಪಾಲಕ್ಕೆ ಬರ ಬಹುದಾದ ರಸ್ತೆಯನ್ನು ಉನ್ನತೀಕರಿಸಲಾಗಿದೆ.
– ಉಡುಪಿಯಲ್ಲಿ ಸರಕಾರಿ ವೈದ್ಯಕೀಯ, ಎಂಜಿನಿ ಯರಿಂಗ್‌ ಕಾಲೇಜು ನಿರ್ಮಾಣ ಸಾಧ್ಯವಾಗಿಲ್ಲ.
– ವಿಮಾನ ನಿಲ್ದಾಣದ ಕನಸು ಇನ್ನೂ ಈಡೇರಿಲ್ಲ
– ಮಲ್ಪೆ ಬಂದರು ಪ್ರದೇಶದ ಅಭಿವೃದ್ಧಿ ಕಾಮಗಾರಿ ಇನ್ನೂ ಮುಗಿದಿಲ್ಲ
– ಪ್ರಕೃತಿದತ್ತವಾಗಿರುವ ಮಣ್ಣಪಳ್ಳ ಕೆರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ.
– ಉಡುಪಿಯಲ್ಲಿ ಬಹುಮಹಡಿ ಕಟ್ಟಡದ ಪಾರ್ಕಿಂಗ್‌ ವ್ಯವಸ್ಥೆ ಇನ್ನೂ ಜಾರಿಯಾಗಿಲ್ಲ
– ಜಿಲ್ಲಾಮಟ್ಟದ ಕ್ರೀಡಾಂಗಣದ ದುರಸ್ತಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಭುಜಂಗ ಪಾರ್ಕ್‌ ಅಭಿವೃದ್ಧಿ ಬಾಕಿಯಿದೆ.
– ಮಳೆಗಾಲದಲ್ಲಿ ಕೃತಕ ನೆರೆ ತಡೆಯಲು ಶಾಶ್ವತ ಪರಿಹಾರವಾಗಿಲ್ಲ.
– ಉಡುಪಿ ನಗರದೊಳಗೆ ಹರಿಯುವ ಇಂದ್ರಾಣಿ ಇನ್ನಷ್ಟು ಕಲುಷಿತಗೊಂಡಿದ್ದಾಳೆ. ನಗರದಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಇನ್ನೂ ಬಂದಿಲ್ಲ.
– ಜಿಲ್ಲೆಯ ಆರ್ಥಿಕ ಕೇಂದ್ರವಾಗಿರುವ ಮಲ್ಪೆಗೆ ಉಡುಪಿ ಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ.

ಸಿಟಿ ಬಸ್‌ ನಿಲ್ದಾಣದ ಸಮೀಪದಲ್ಲಿ ಹೊಸದಾಗಿ ನರ್ಮ್ ಬಸ್‌ ತಂಗುದಾಣವಾಗಿದ್ದರೂ ಓಡಾಡುವ ನರ್ಮ್ ಬಸ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಬನ್ನಂಜೆಯಲ್ಲಿ ಕೊನೆಗೂ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ಆರಂಭವಾಗಿದೆ.

Advertisement

-ರಾಜು ಖಾರ್ವಿ


ಮೂಲ ಸೌಕರ್ಯ ಇನ್ನಷ್ಟು ಬೇಕು

ಜಿಲ್ಲೆಯ ದೊಡ್ಡ ತಾಲೂಕು ಎನ್ನುವ ಹೆಗ್ಗಳಿಕೆಯ ಕುಂದಾಪುರ ತಾಲೂಕಿನಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯ ಸಾಕಷ್ಟಿವೆ. ವೇಗವಾಗಿ ಬೆಳೆಯುತ್ತಿರುವ ತಾಲೂಕುಗಳ ಪೈಕಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ತಾಲೂಕಿದು.

ಆದದ್ದು
-56 ಗ್ರಾ.ಪಂ.ಗಳೊಂದಿಗೆ ದೊಡ್ಡ ತಾಲೂಕು ಆಗಿತ್ತು. ಐದು ವರ್ಷಗಳ ಹಿಂದೆ 16 ಗ್ರಾ.ಪಂ.ಗಳೊಂದಿಗೆ ಬೈಂದೂರು ಹೊಸ ತಾಲೂಕು ಘೋಷಣೆಯಾಯಿತು.
-ಉಡುಪಿಯಿಂದ ಕುಂದಾಪುರಕ್ಕೆ, ಕುಂದಾ ಪುರದಿಂದ ಜಿಲ್ಲೆಯ ಗಡಿ ಭಾಗ ಶಿರೂರು ವರೆಗೂ ಚತುಷ್ಪಥ ಹೆದ್ದಾರಿ ನಿರ್ಮಾಣ ವಾಗಿದೆ. ಕುಂದಾಪುರ, ಕೋಟೇಶ್ವರ, ಬೈಂದೂರಲ್ಲಿ ಹೆದ್ದಾರಿ ಮೇಲ್ಸೆತುವೆ ರಚನೆಯಾಗಿದೆ. ಗುಲ್ವಾಡಿ, ಹಟ್ಟಿಕುದ್ರು, ಮರವಂತೆ ಮಾರಸ್ವಾಮಿ, ಕನ್ನಡಕುದ್ರು ಸೇತುವೆಗಳಾಗಿವೆ.
-ಕುಂದಾಪುರಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಂದಿದೆ. ಹೊಸ ಕೋರ್ಟ್‌ ಕಟ್ಟಡ ನಿರ್ಮಾಣವಾಗಿದೆ.
-ಕುಂದಾಪುರಕ್ಕೆ ಡಿವೈಎಸ್‌ಪಿ ಕಚೇರಿ, ಡಿವೈಎಸ್‌ಪಿ ಹುದ್ದೆಯು ಲಭಿಸಿದೆ.
-ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 13 ವಾರ್ಡ್‌ಗೆ 24 ಗಂಟೆ, 10 ವಾರ್ಡ್‌ಗೆ 12 ಗಂಟೆ ನಿರಂತರ ನೀರು ಪೂರೈಕೆ ಕಾಮಗಾರಿ ಯಾಗಿದ್ದು, ಎಲ್ಲ 23 ವಾರ್ಡ್‌ಗೂ ನಿರಂತರ ಪೂರೈಕೆ ಕಾರ್ಯ ಕೊನೆಯ ಹಂತದಲ್ಲಿದೆ.
-ಕಂದಾವರದಲ್ಲಿ 3 ಕೋ.ರೂ. ವೆಚ್ಚದಲ್ಲಿ ಸುಸ ಜ್ಜಿತ ಘನ ತ್ಯಾಜ್ಯ ವಿಲೇವಾರಿ ಘಟಕ ಲಾಭದಾ
ಯಕವಾಗಿ ನಡೆಯುತ್ತಿದೆ. 48 ಕೋ.ರೂ. ವೆಚ್ಚದ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ.

ಆಗಬೇಕಾದದ್ದು
-ಚತುಷ್ಪಥ ಹೆದ್ದಾರಿಯು ಷಟ³ಥವಾಗಿ ಎಕ್ಸ್‌ ಪ್ರಸ್‌ ಹೈವೇಯಾಗಿ ರೂಪುಗೊಂಡರೆ, ಬೈಂದೂರು – ಮಂಗಳೂರು, ಕುಂದಾ ಪುರ – ಮಂಗಳೂರು, ಕುಂದಾಪುರ – ಉಡುಪಿ ಸಂಚಾರ ಸುಲಭವಾಗಲಿದೆ. ಇಲ್ಲಿನ ಮೀನುಗಾರಿಕೆ, ವ್ಯಾಪಾರ- ವಹಿ ವಾಟು ದೃಷ್ಟಿಯಿಂದ ಪ್ರಯೋಜನಕಾರಿ.
-ಕುಂದಾಪುರದಲ್ಲೊಂದು ಪ್ರಾದೇಶಿಕ ಸಾರಿಗೆ ಕಚೇರಿ ಬೇಕೆಂಬ ಬಹು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಕುಂದಾಪುರ, ಬೈಂದೂರು ಭಾಗದವರು ದೂರದ ಮಣಿ ಪಾಲಕ್ಕೆ ನೋಂದಣಿಗೆ ತೆರಳಬೇಕು.
-ಕುಂದಾಪುರ – ಗಂಗೊಳ್ಳಿ ನಡುವೆ ಸೇತುವೆ ಯಾಗಬೇಕೆಂಬುದು ಬಹಳ ಹಳೆಯ ಬೇಡಿಕೆ. ಈ ಸೇತುವೆಯಾದರೆ ಎಲ್ಲ ರೀತಿಯಿಂದಲೂ ಅನುಕೂಲ. ಹಲವು ಕಿ.ಮೀ. ದೂರ ಕಡಿಮೆಯಾಗಿ, ಅನಗತ್ಯ ವೆಚ್ಚ, ಸಮಯ ಉಳಿತಾಯವಾಗುತ್ತದೆ. ಆದರೆ ಯಾವುದೋ ಶಕ್ತಿಗಳ ಒತ್ತಡ ಈ ಯೋಜನೆಗೆ ತಡೆಯುಂಟು ಮಾಡುತ್ತಿದೆ ಎಂಬುದು ನಾಗರಿಕರ ಆರೋಪ.
ಅದೀಗ ಇತ್ಯರ್ಥಗೊಂಡು ಯೋಜನೆ ಜಾರಿಗೊಳ್ಳಬೇಕಿದೆ.
-ಕುಂದಾಪುರದಲ್ಲಿ ಪ್ರಾಥಮಿಕದಿಂದ ಪದವಿಯವರೆಗೆ ಸಾಕಷ್ಟು ಶಿಕ್ಷಣ ಸಂಸ್ಥೆಗಳಿದ್ದರೂ ಉನ್ನತ ಶಿಕ್ಷಣಕ್ಕೆ ಅವಕಾಶ ಗಳಿಲ್ಲ. ಇಲ್ಲೊಂದು ಎಂಜಿನಿಯರಿಂಗ್‌ ಅಥವಾ ಮೆಡಿಕಲ್‌ ಕಾಲೇಜು ಆರಂಭ ವಾದರೆ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿ ಗಳಿಗೆ ವರದಾನವಾಗಲಿದೆ.
-ಪಂಚಗಂಗಾವಳಿ ನದಿ, ಹೇರಿಕುದ್ರು, ಹಟ್ಟಿಕುದ್ರು, ಮರವಂತೆ, ತ್ರಾಸಿ, ಸೋಮೇಶ್ವರ ಬೀಚ್‌ಗಳು, ಕೊಡಚಾದ್ರಿ ಬೆಟ್ಟ, ಬೆಳ್ಕಲ್‌ತೀರ್ಥ ಜಲಪಾತಗಳಿದ್ದು, ಇವುಗಳಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ಕೊಡುವ ಕಾರ್ಯ ಆಗಬೇಕಿದೆ.
-ಗಂಗೊಳ್ಳಿ, ಮರವಂತೆ, ಕೋಡಿ, ಕೊಡೇರಿ, ಅಳ್ವೆಗದ್ದೆ ಬಂದರುಗಳಲ್ಲಿ ಇನ್ನಷ್ಟು ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕಿದೆ.

-ಪ್ರಶಾಂತ್‌ ಪಾದೆ


ಕಾಪು: ಕಚೇರಿಗಳು ಬರಲಿ ಯೋಜನೆಗಳೂ ಬರಲಿ

ಕಾಪು ತಾಲೂಕು 2017ರ ಬಜೆಟ್‌ನಲ್ಲಿ ಘೋಷಣೆಯಾಯಿತು. 2018 ಫೆ. 14ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು. ನಾಲ್ಕು ವರ್ಷಗಳಲ್ಲಿ ಬೆಳವಣಿಗೆಯತ್ತ ಮುಖ ಮಾಡಿದೆ. ತಾಲೂಕು ಕಚೇರಿ, ತಾಲೂಕು ಪಂಚಾಯತ್‌, ಕಂದಾಯ ಇಲಾಖೆ, ಆಹಾರ ಇಲಾಖೆ ಮತ್ತು ಚುನಾವಣೆ ನಿರ್ವಹಣೆ ಹಾಗೂ
ಖಜಾನೆ ಇಲಾಖೆಗಳು ತಾಲೂಕು ಕೇಂದ್ರದಲ್ಲೇ ಕಾರ್ಯ ನಿರ್ವಹಿಸುತ್ತಿವೆ.

ಪ್ರಗತಿಯಲ್ಲಿದೆ
-ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನು ದಾನ ಮಂಜೂರಾಗಿದ್ದು, ಕಾಪು ಬಂಗ್ಲೆ – ಪುರಸಭೆ ಬಳಿಯ ಸರಕಾರಿ ಜಮೀನಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
-ಹೆಜಮಾಡಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಚಾಲನೆ ದೊರಕಿದೆ.
-ಬೆಳಪುವಿನಲ್ಲಿ ಕಾಪು ಪಾಲಿಟೆಕ್ನಿಕ್‌ ಕಾಲೇಜು ಆರಂಭಗೊಂಡಿದೆ. ಬೆಳಪುವಿನಲ್ಲಿ ಅತ್ಯಾ ಧುನಿಕ ವಿಜ್ಞಾನ ಸಂಶೋಧನ ಕೇಂದ್ರದ ಕಾಮಗಾರಿ ನಡೆಯುತ್ತಿದೆ.
-ಕುರ್ಕಾಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.

ತಾಲೂಕಿನ ಪ್ರಮುಖ ವಾಣಿಜ್ಯಬೆಳೆಗಳಾದ ಶಂಕರಪುರ ಮಲ್ಲಿಗೆಯನ್ನು ಪೋಷಿಸಲು ಶೀಥಲೀಕೃತ ಸಂಗ್ರಹಣಾ ಘಟಕ ಮತ್ತು ಮಟ್ಟುಗುಳ್ಳ ಬೆಳೆಯನ್ನು ಪ್ರೋತ್ಸಾಹಿ ಸಲು ಮಾರುಕಟ್ಟೆ ವ್ಯವಸ್ಥೆ ಜೋಡಣೆಯಾಗ ಬೇಕಿದೆ. ಕಡಲ ತೀರದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಶೇಷ ಉತ್ತೇಜನ ಸಿಗಬೇಕಿದೆ.

ಆಗಬೇಕಾದದ್ದು
-ಸಬ್‌ ರಿಜಿಸ್ಟ್ರಾರ್‌ ಕಚೇರಿ, ತಾಲೂಕು ನ್ಯಾಯಾಲಯ, ತಾಲೂಕು ಆಸ್ಪತ್ರೆ, ಅಗ್ನಿ ಶಾಮಕ ಠಾಣೆ, ಪ್ರಾದೇಶಿಕ ಸಾರಿಗೆ ಕಚೇರಿ, ಮೆಸ್ಕಾಂ ಕಚೇರಿ, ಶಿಕ್ಷಣ ಇಲಾಖೆ ಮತ್ತು ಬಿಒ ಕಚೇರಿ, ಲೋಕೋಪಯೋಗಿ ಇಲಾಖೆ, ಮೀನುಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನೋಂದಣಿ ಮತ್ತು ಮುದ್ರಾಂಶ, ಸಣ್ಣ ನೀರಾವರಿ ಇಲಾಖೆ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖೆಗಳು ಇನ್ನೂ ಬರಬೇಕಿವೆ.
-ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ ಮತ್ತು ಪಶು ಇಲಾಖೆಗೆ ತಾಲೂಕು ಮಟ್ಟದ ಅಧಿಕಾರಿಗಳ ನೇಮಕವಾಗಬೇಕಿದೆ. ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಬೇಕಿದೆ.
-ತಾಲೂಕಿನಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಮತ್ತು ನಿಲ್ದಾಣ ವ್ಯವಸ್ಥೆ, ತಾಲೂಕು ಕ್ರೀಡಾಂಗಣ, ತಾಲೂಕು ಕೇಂದ್ರದಿಂದ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಂಚಾರ ವ್ಯವಸ್ಥೆ ಜೋಡಣೆಗೆ ವಿಶೇಷ ಆದ್ಯತೆ ನೀಡಬೇಕಿದೆ.

- ರಾಕೇಶ್‌ ಕುಂಜೂರು


ಬ್ರಹ್ಮಾವರ : ವರ್ಷ ಎಂಟಾದರೂ ಕುಂಟುತ್ತಿದೆ

ತಾಲೂಕು ರಚನೆಯಾದದ್ದು 2014ರಲ್ಲಿ, ಆಗಿನ ಹೊಸ ತಾಲೂಕು ಈಗ ಎಂಟು ವರ್ಷದಷ್ಟು ಹಳೆಯದು. ಎಂಟು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಜನರು ನಿರೀಕ್ಷಿಸಿದ್ದರು. ಆದರೆ ಹೊಸ ತಾಲೂಕಿನ ಕೀರ್ತಿ ಬಂದದ್ದು ಬಿಟ್ಟರೆ, ನಿರ್ದಿಷ್ಟ ಸರಕಾರಿ ಕಚೇರಿಗಳ ಕೆಲಸ ಹಂಚಿಕೆ ಆಗಿದ್ದು ಹೊರತುಪಡಿಸಿದಂತೆ ಬೃಹತ್‌ ಅಭಿವೃದ್ಧಿ ಕಾರ್ಯಗಳು ಆಗಿದ್ದು ಕಡಿಮೆ.

ಪ್ರಗತಿಯಲ್ಲಿದೆ
-ಮಿನಿ ವಿಧಾನಸೌಧ ಇನ್ನೂ ನಿರ್ಮಾಣ ಹಂತ ದಲ್ಲಿದೆ. ಅದು ತ್ವರಿತವಾಗಿ ಪೂರ್ಣಗೊಂಡರೆ ಎಲ್ಲ ಸರಕಾರಿ ಕಚೇರಿಗಳು ಒಂದೆಡೆಗೆ ಬಂದು ಜನರಿಗೆ ಅನುಕೂಲವಾಗುತ್ತದೆ.
-ಪೊಲೀಸ್‌ ಕ್ವಾಟ್ರಸ್‌ ನಿರ್ಮಾಣ ಪ್ರಗತಿಯಲ್ಲಿದೆ.
-ಉಡುಪಿ ನಗರಕ್ಕೆ ಕುಡಿಯುವ ನೀರು ಕಲ್ಪಿಸುವ ವಾರಾಹಿ ಯೋಜನೆ ತಾಲೂಕಿ ನಲ್ಲೂ ಹರಿದು ಹೋಗುವುದರಿಂದ ಕೆಲವು ಗ್ರಾಮಗಳಿಗೆ ನೀರು ಸಿಗುವ ನಿರೀಕ್ಷೆಯಿದೆ. ಆ ಕಾಮಗಾರಿ ಪ್ರಗತಿಯಲ್ಲಿದೆ.

ಕಂದಾಯ ಇಲಾಖೆಯ ಬಹುತೇಕ ಕಡತಗಳು ಇಂದಿಗೂ ಉಡುಪಿಯಲ್ಲೇ ಇವೆ. ಅವೆಲ್ಲವೂ ಬ್ರಹ್ಮಾವರಕ್ಕೆ ವರ್ಗಾವಣೆಯಾಗಬೇಕು. ಭೂ ನ್ಯಾಯಮಂಡಳಿ ಕಚೇರಿ, ಅಗ್ನಿ ಶಾಮಕ ದಳ ಘಟಕವೂ ಸ್ಥಾಪನೆಯಾಗಬೇಕಿದೆ. ತಾಲೂಕು ಕಚೇರಿಗೆ ನುರಿತ ಸಿಬಂದಿ ನೇಮಕವಾಗಬೇಕಿದೆ. ಪೊಲೀಸ್‌ ಠಾಣೆಗೆ ಹೊಸ ವಾಹನ ಅಗತ್ಯವಿದೆ. ಬ್ರಹ್ಮಾವರ ಹೃದಯ ಭಾಗದ 4 ಗ್ರಾ.ಪಂ.ಗಳನ್ನು ಸೇರಿ ಪುರಸಭೆ ರಚನೆಯಾಗಬೇಕೆಂಬುದು ಹಳೆಯ ಬೇಡಿಕೆ. ಈಗಲಾದರೂ ಅದು ಪ್ರತ್ಯೇಕಗೊಂಡರೆ ಅನುದಾನ ಹಂಚಿಕೆ ಹಾಗೂ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಆಗಬೇಕಾದದ್ದು
-20ಕ್ಕೂ ಹೆಚ್ಚು ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
-ಸಂಚಾರಿ ನ್ಯಾಯಾಲಯ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರ ತಾಲೂಕು ನ್ಯಾಯಾಲಯ ರಚನೆಯಾಗಬೇಕಿದೆ.
-ಆರ್‌ಟಿಒ ಕಚೇರಿಯ ಬೇಡಿಕೆ ಇನ್ನೂ ಈಡೇ ರಿಲ್ಲ. ಸರ್ವಿಸ್‌ ರಸ್ತೆಗಳ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ ಆದಷ್ಟು ಬೇಗ ಆಗಬೇಕು. ಬ್ರಹ್ಮಾವರ ಬಸ್‌ಸ್ಟ್ಯಾಂಡ್ , ಮಹೇಶ್‌ ಡಿವೈಡರ್‌, ಕ್ಯಾಟಲ್‌ ಪಾಸ್‌, ಆಕಾಶವಾಣಿ ಅಪಾಯಕಾರಿ ಸ್ಥಳಗಳಾಗಿದ್ದು, ಸಂಚಾರಿ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ.
-ಪ್ರಸ್ತುತ ಒಂದೇ ಪಹಣಿ ವಿತರಣೆ ಕೇಂದ್ರ ವಿದ್ದು, ಎರಡು ಕೇಂದ್ರ ಬೇಕೆಂಬ ಬೇಡಿಕೆ ಈಡೇರಬೇಕಿದೆ.
-ಸುಸಜ್ಜಿತ ಖಾಸಗಿ ಹಾಗೂ ಕೆ.ಎಸ್‌.ಆರ್‌. ಟಿ.ಸಿ. ಬಸ್‌ ನಿಲ್ದಾಣ ಆಗ ಬೇಕಿದೆ. ವಾಹನ ನಿಲು ಗಡೆಗೂ ಸೂಕ್ತ ಸ್ಥಳ, ವ್ಯವಸ್ಥೆ ಕಲ್ಪಿಸಬೇಕಿದೆ.
-ಕುಂಜಾಲು ಕ್ರಾಸ್‌ನ 4 ರಸ್ತೆ ಕೂಡುವಲ್ಲಿ ತಾಲೂಕು ವೃತ್ತ ರಚನೆಯಾಗಬೇಕು. ಗಾಂಧಿ ಮೈದಾನ ಅಭಿವೃದ್ಧಿ, ಉದ್ಯಾನ ನಿರ್ಮಾಣ ಸಾರ್ವಜನಿಕರ ಬೇಡಿಕೆ.

ಆದದ್ದು
-ವಾರಾಹಿ ಬಲದಂಡೆ ಏತ ನೀರಾವರಿ ಯೋಜನೆ
-ಶಿರೂರು ಮೂರುಕೈನಿಂದ ಸಾಹೇಬರಕಟ್ಟೆ, ಮಧುವನ ತನಕ ನೀರಾವರಿ ಕಾಲುವೆ
-ಮಂದಾರ್ತಿ ಹೆಗ್ಗುಂಜೆ ತನಕ ನೀರಾವರಿ ಕಾಲುವೆ
-ಕೋಡಿ ಕನ್ಯಾಣ ಜಟ್ಟಿ ವಿಸ್ತರಣೆ
-ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
-ತಾಲೂಕು ಕಚೇರಿ ವಿಸ್ತರಣೆ
-ಪಾಸ್‌ಪೋರ್ಟ್‌ ಸೇವಾ ಕೇಂದ್ರ


-ಪ್ರವೀಣ್‌ ಮುದ್ದೂರು

ಕಾರ್ಕಳ: ಹಳೆಯ ತಾಲೂಕು ಹೊಸ ಬೇಡಿಕೆ
ಹೊಸ ಜಿಲ್ಲೆಯಾದ ಉಡುಪಿಯ ಮತ್ತೂಂದು ಪ್ರಮುಖ ತಾಲೂಕು ಕಾರ್ಕಳ. ಒಂದಿಷ್ಟು ಕೆಲಸ ಆಗಿದೆ ಎಂಬ ಸಮಾಧಾನವಿದ್ದರೆ, ಆಗಬೇಕಾದ ಬೇಡಿಕೆಗಳ ಪಟ್ಟಿ ದೊಡ್ಡದಿದೆ.

ಪ್ರಗತಿಯಲ್ಲಿದೆ
-ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕಿನ ಜನವಸತಿಗಳಿಗೆ ವಾರಾಹಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ.
-ಸ್ಲಡ್ಜ್ ಮ್ಯಾನೇಜ್‌ಮೆಂಟ್‌ ಯೋಜನೆ ಜಾರಿಯಲ್ಲಿದೆ.
-ಆನೆಕೆರೆ, ಬಸದಿ ಅಭಿವೃದ್ಧಿ ಕಾರ್ಯ
-ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್‌ ಆವರಣದಲ್ಲಿ ಯಕ್ಷರಂಗಾಯಣ ಕೆಲಸ ಪ್ರಗತಿಯಲ್ಲಿದೆ.

ಆದದ್ದು
-ಹೊಸ ಸುಸಜ್ಜಿತ ನ್ಯಾಯಾಲಯ ಕಟ್ಟಡ ನಿರ್ಮಾಣ.
-ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಿಂದು ಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಪ್ರತ್ಯೇಕ ಕಟ್ಟಡ. ಪೊಲೀಸ್‌ ವಸತಿ ಗೃಹ ಕಟ್ಟಡಗಳು ನಿರ್ಮಾಣವಾಗಿದೆ.
-ಎಣ್ಣೆಹೊಳೆ ಏತ ನೀರಾವರಿ ಯೋಜನೆ, ಜಲ ಜೀವನ್‌ ಮಿಷನ್‌ (ಜಲ ಧಾರೆ) ಯೋಜನೆ, 230 ಕಿಂಡಿ ಅಣೆಕಟ್ಟುಗಳ ನಿರ್ಮಾಣ.
-ಒಳಚರಂಡಿ ಯೋಜನೆ ಜಾರಿ, ತಾಲೂಕು ಆಸ್ಪತ್ರೆ ನಿರ್ಮಾಣ. ಸಾರ್ವಜನಿಕ ಗ್ರಂಥಾ ಲಯ ಕಟ್ಟಡ ನಿರ್ಮಾಣ.
-90ಕ್ಕೂ ಹೆಚ್ಚು ಸೇತುವೆ ನಿರ್ಮಾಣ. ಕಾರ್ಕಳ ಮತ್ತು ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ನೂತನ ವಿಭಾಗೀಯ ಕಚೇರಿ ನೂತನ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ)ಕೆ.ಜೆ. ಟಿ.ಟಿ.ಐ. ಕೇಂದ್ರ. ಒಳಾಂಗಣ ಕ್ರೀಡಾಂಗಣ

ಆಗಬೇಕಾದದ್ದು
-ನಗರದ ಒಂದು ಕಡೆ ಎಲ್ಲೆಡೆಯಿಂದ ಬಂದು ಸೇರುವ ಸರಕಾರಿ ಬಸ್ಸು ತಂಗುದಾಣ
-ಸುಸಜ್ಜಿತ ಬಸ್‌ ಡಿಪೋ
– ಗ್ರಾಮೀಣ ಸಾರಿಗೆ
-ಕಾರ್ಕಳ ತಾ| ಮೂಲಕ ಹಾದು ಹೋಗುವ ರೈಲ್ವೇ ಮಾರ್ಗ
-ನನೆಗುದಿಗೆ ಬಿದ್ದ ನಗರದ ಮುಖ್ಯ ರಸ್ತೆ ವಿಸ್ತರಣೆ
-2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ ಬಂಡೀ ಮಠ ಬಸ್‌ ನಿಲ್ದಾಣದ ಸದುಪಯೋಗ
– ವರ್ತುಲ ರಸ್ತೆ
-ಸಮರ್ಪಕ ಬಸ್‌ ಸಂಚಾರ ಮತ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆ
-ನಗರ ಕೇಂದ್ರದಲ್ಲಿರುವ ಆನೆಕೆರೆಗೆ ಕಾಯಕಲ್ಪ
-ಪುರ ಭವನ ನಿರ್ಮಾಣ
-ಟೆಲಿಟೂರಿಸಂ

-ಬಾಲಕೃಷ್ಣ ಭೀಮಗುಳಿ


ಹೆಬ್ರಿ: ಇನ್ನೂ ಕಾರ್ಯಾರಂಭವಾಗದ ಅಗತ್ಯ ಇಲಾಖೆ

ನಾಗರಿಕರ ನಿರಂತರ ಹೋರಾಟದ ಫ‌ಲವಾಗಿ ಅತೀ ಕಡಿಮೆ ಗ್ರಾಮಗಳನ್ನು ಹೊಂದಿ ದ್ದರೂ ಆಡಳಿತ ದೃಷ್ಟಿ ಯಿಂದ ಹೆಬ್ರಿಯನ್ನು ತಾಲೂಕಾಗಿ 2018 ರಲ್ಲಿ ಘೋಷಿಸ ಲಾಯಿತು. ಅದಾದ ಮೇಲೆ ಪ್ರಗತಿಯ ನೀರು ಬಹಳ ವೇಗ ವಾಗಿ ಹರಿಯಬೇಕಿತ್ತು.

ಆದದ್ದು
-ತಾಲೂಕು ಮಿನಿ ವಿಧಾನಸೌಧ ನಿರ್ಮಾಣ
-ನಾಡಕಚೇರಿ ಸಹಿತ ಕಂದಾಯ ಇಲಾಖೆಗಳ ನಿರ್ವಹಣೆ
-ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಕಾರ್ಯ ನಿರ್ವಹಣೆ

ಆಗಬೇಕಾದದ್ದು
-ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಬರಬೇಕಿದೆ.
-ನೋಂದಣಿ ಕಚೇರಿ ಕೂಡಲೇ ಆಗಬೇಕಿದೆ.
-ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳು ಇನ್ನೂ ತಾಲೂಕು ಕೇಂದ್ರಕ್ಕೆ ಬಂದಿಲ್ಲ. ಅದರಲ್ಲೂ ಶಿಕ್ಷಣ ಇಲಾಖೆ ಆದಷ್ಟು ಬೇಗ ಬರಬೇಕಿದೆ. ಶಿಕ್ಷಕರು ವೇತನಕ್ಕೆ ಕಾರ್ಕಳವನ್ನೇ ಅವಲಂಬಿಸಬೇಕು. ಉಳಿದ ಇಲಾಖೆಗಳ ಸೌಲಭ್ಯ ಪಡೆಯಲೂ ಜನರು ಕಾರ್ಕಳಕ್ಕೆ ತೆರಳುವ ಸ್ಥಿತಿ ಇದೆ.
-ಪಾಲಿಟೆಕ್ನಿಕ್‌ ಮತ್ತು ಐಟಿಐ ಕಾಲೇಜು ತೆರೆಯಬೇಕು.
-ಜೋಮ್ಲು ತೀರ್ಥ, ಕೂಡ್ಲು ಜಲಪಾತ, ಒನಕೆ ಅಬ್ಬಿ ಫಾಲ್ಸ್‌, ಕಬ್ಬಿನಾಲೆಯ ಹಲವಾರ ಕಿರು ಜಲಪಾತಗಳು, ವರಂಗ, ಕೆರೆ ಬಸದಿ ಸೇರಿದಂತೆ ಪ್ರವಾಸಿ ತಾಣಗಳು ಅಭಿವೃದ್ಧಿಯಾಗ
ಬೇಕು. ಇಲ್ಲಿಗೆ ರಸ್ತೆ ವ್ಯವಸ್ಥೆ ಮೂಲ ಸೌಲಭ್ಯ ಕಲ್ಪಿಸಬೇಕು.

ಜನರ ಅಲೆದಾಟ ತಪ್ಪಿಲ್ಲ
ಹೆಬ್ರಿ ತಾಲೂಕಿನ ಜನ ನೋಂದಣಿಗಾಗಿ ಶಂಕರ ನಾರಾಯಣ, ಬ್ರಹ್ಮಾವರ ಮತ್ತು ಕಾರ್ಕಳ ಸೇರಿದಂತೆ ಮೂರು ತಾಲೂಕನ್ನು ಅವಲಂಬಿಸಬೇಕಾಗಿದೆ. ಈಗಿರುವ 3 ಉಪ ನೋಂದಣಿ ಕಚೇರಿಗಳಾಗಿ ಸುಮಾರು 120 ವರ್ಷಗಳು ಕಳೆದಿದೆ.

ಅನಂತರದಲ್ಲಿ ಒಂದೂ ಉಪನೋಂದಣಿ ಕಚೇರಿಗಳಾಗದಿರು ವುದು ಬೇಸರದ ಸಂಗತಿ ಎಂದು ಹೆಬ್ರಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರ ಅನಿಸಿಕೆ.

-ಉದಯ್‌ ಕುಮಾರ್‌ ಶೆಟ್ಟಿ

ಬೈಂದೂರು: ಒಂದೆರಡು ಬಿಡಿ ಹನ್ನೆರಡು ಆಗಲಿ
2018ರಲ್ಲಿ ತಾಲೂಕು ಘೋಷಣೆಯಾದದ್ದು. ನಾಲ್ಕು ವರ್ಷಗಳಲ್ಲಿ ಒಂದಿಷ್ಟು ಸಹಜ ಅಭಿವೃದ್ಧಿ ಹೊರತುಪಡಿಸಿದರೆ, ಉಳಿದವು ಆದದ್ದು ಕಡಿಮೆ.

ಪ್ರಗತಿಯಲ್ಲಿದೆ
-ತಾಲೂಕು ಸಂಕೀರ್ಣ ಮಿನಿ
ವಿಧಾನ ಸೌಧ ನಿರ್ಮಾಣ ಹಂತದಲ್ಲಿದ್ದು, ಶೇ. 60ರಷ್ಟು ಕಾಮಗಾರಿ ಮುಗಿದಿದೆ.
-ಕೆಎಸ್‌ಆರ್‌ ಟಿ ಸಿ ಬಸ್ಸು ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ.
-ತಾಲೂಕು ಆಸ್ಪತ್ರೆ ಹಾಗೂ
ನ್ಯಾಯಾಲಯಕ್ಕೆ ಜಾಗ ಮೀಸಲಿದೆ. ಕಾಮಗಾರಿ ಇನ್ನೂ ಆರಂಭವಾಗಿಲ್ಲ

ಆದದ್ದು
-ತಾಲೂಕು ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅದೇ ಕಟ್ಟಡದಲ್ಲಿ ಕಂದಾಯ ಇಲಾಖೆ, ಸರ್ವೇ ಇಲಾಖೆಗಳು ಇವೆ. ಸಬ್‌ ರಿಜಿಸ್ಟ್ರಾರ್‌ ಕಚೇರಿ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿಯೂ ಸೇರಿದಂತೆ ಉಳಿದ ಇಲಾಖೆ ಗಳೂ ಪ್ರತ್ಯೇಕವಾಗಿವೆ.
-ತಾಲೂಕು ನ್ಯಾಯಾಲಯ ಆರಂಭವಾ ಗಿದ್ದು, ವಾರಕ್ಕೆ ಎರಡು ದಿನ ಕಲಾಪಗಳು ನಡೆಯುತ್ತವೆ.
-ಅಗ್ನಿಶಾಮಕ ಠಾಣೆ ಆರಂಭವಾಗಿದೆ.

ಆಗಬೇಕಾದದ್ದು
-ಖಾಯಂ ತಹಶೀಲ್ದಾರ್‌ ನೇಮಕ ವಾಗಿಲ್ಲ. ಕೂಡಲೇ ಆಗಬೇಕಿದೆ.
-ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಆರ್‌ಟಿಒ ಸೇರಿದಂತೆ ಹಲವು ಇಲಾಖೆಗಳು ಬರಬೇಕಿವೆ. ಈ ಸೌಲಭ್ಯ ಗಳಿಗೆ ಇನ್ನೂ ಉಡುಪಿ, ಕುಂದಾಪುರ ವನ್ನು ಅವಲಂಬಿಸಬೇಕಿದೆ.
-ಸಮುದಾಯ ಆರೋಗ್ಯ ಕೇಂದ್ರವಷ್ಟೇ ಇದ್ದು, ತಾಲೂಕು ಆಸ್ಪತ್ರೆ ಇದುವರೆಗೆ ನಿರ್ಮಾಣವಾಗಿಲ್ಲ.

ತಾಲೂಕು ಪಂಚಾಯತ್‌ ಕಟ್ಟಡ ನಿರ್ಮಾಣ ಇನ್ನೂ ಕನಸಾಗಿಯೇ ಇದೆ. ಹಾಗಾಗಿ
ತಾಲೂಕು ಪಂಚಾಯತ್‌ ವ್ಯವಸ್ಥೆ ಜಾರಿಯಲ್ಲಿದ್ದರೂ ಸಭೆಗಳು ನಡೆಯುವುದು ಕುಂದಾಪುರದಲ್ಲಿ. ಇದರೊಂದಿಗೆ ಬೈಂದೂರು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದೆ. ಪ.ಪಂ ವ್ಯಾಪ್ತಿಯ ಮೂರು ಗ್ರಾಮಗಳಲ್ಲೂ ಜನಪ್ರತಿನಿಧಿಗಳು ಇಲ್ಲದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಅಧಿಕಾರಿಗಳು ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರಷ್ಟೇ.

- ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next