Advertisement

ಮಳೆಗೆ ಬೆಚ್ಚಿದ ರಾಜ್ಯ : ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ವರ್ಷಧಾರೆ, 6 ಸಾವು

12:18 AM Jul 24, 2021 | Team Udayavani |

ಬೆಂಗಳೂರು/ಮುಂಬಯಿ : ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಉಕ್ಕೇರಿ ತೀರದ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಮಳೆಯಿಂದಾಗಿ ಶುಕ್ರವಾರ ಕರ್ನಾಟಕದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಚಿಕ್ಕಮಗಳೂರು, ಚಿಕ್ಕೋಡಿ, ಬೆಳಗಾವಿ, ಉತ್ತರ ಕನ್ನಡ, ಹೊನ್ನಾವರ, ಶಿರಸಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಅಂಕೋಲಾದ ಶಿರೂರಿನಲ್ಲಿ ಇಬ್ಬರು ಯುವಕರು ದೋಣಿ ಮಗುಚಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆದಿದೆ.

ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ವೇದಗಂಗಾ, ಹಿರಣ್ಯಕೇಶಿ ಮತ್ತು ಮಲಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಇದು ವರೆಗೆ 38 ಬ್ಯಾರೇಜ್‌- ಸೇತುವೆಗಳು ನೀರಿನಲ್ಲಿ ಮುಳುಗಿವೆ. 51 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ನದಿಗೆ ಹರಿದುಬರುತ್ತಿರುವ ನೀರಿನ ಮಟ್ಟ ಏರಿದ್ದರಿಂದ ರಬಕವಿ-ಬನಹಟ್ಟಿ ತಾಲೂಕಿನ ಮೂರು ಸೇತುವೆಗಳು ಜಲಾವೃತಗೊಂಡಿವೆ. ಬಾಗಲಕೋಟೆ – ಬೆಳಗಾವಿ ಜಿಲ್ಲೆಗೆ ಸಂಪರ್ಕ ಕಡಿತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿ ನದಿ ತುಂಬಿ ಹರಿಯುತ್ತಿದೆ. ನದಿ ತೀರದಲ್ಲಿ ಪ್ರವಾಹ ಉಂಟಾಗಿದ್ದು, ಎನ್‌ ಡಿಆರ್‌ ಎಫ್ ಮತ್ತು ನೌಕಾಪಡೆ ಪರಿಹಾರ ಕಾರ್ಯದಲ್ಲಿ ತೊಡಗಿದೆ.

ರಾಯಚೂರು ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಶುಕ್ರವಾರ ಕೃಷ್ಣಾ ನದಿಗೆ 3.07 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಇದರಿಂದ ನದಿ ಪಾತ್ರದ ಮೂರು ತಾಲೂಕುಗಳ ಸುಮಾರು 52 ಹಳ್ಳಿಗಳಿಗೆ ಮತ್ತೆ ನೆರೆ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

Advertisement

ಕೊಡಗಿನಲ್ಲಿ ಧಾರಾಕಾರ ಮಳೆ
ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರವಾಗಿದ್ದು, ಬಲವಾದ ಗಾಳಿಯಿಂದ ಆತಂಕ ಸೃಷ್ಟಿಯಾಗಿದೆ. ಕುಶಾಲನಗರ ಮತ್ತು ಸಂಪಾಜೆ ಭಾಗದ ಅಲ್ಲಲ್ಲಿ ಹೆದ್ದಾರಿ ಕುಸಿತ ಕಂಡುಬಂದಿದೆ. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನಾಪೋಕ್ಲು ಮತ್ತು ಮಡಿಕೇರಿ ರಸ್ತೆ ಜಲಾವೃತಗೊಂಡಿದೆ.

30 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ
ಕಬಿನಿ ಜಲಾಶಯದ 4 ಕ್ರಸ್ಟ್‌ಗೇಟ್‌ಗಳಿಂದ ಗುರುವಾರ ರಾತ್ರಿಯಿಂದಲೇ 30 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯವ್ಯಸ್ತವಾಗಿದೆ.

“ಮಹಾ’ ಮಳೆ: 136 ಸಾವು
ಮಹಾರಾಷ್ಟ್ರದಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಮುಂಬಯಿ ನಗರ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಕಳೆದ 40 ವರ್ಷಗಳಲ್ಲೇ ಅತೀ ಹೆಚ್ಚು ಮಳೆಗೆ ಮುಂಬಯಿ ಸಾಕ್ಷಿಯಾಗಿದೆ. ಮಳೆಯಿಂದ 48 ತಾಸುಗಳಲ್ಲಿ 136 ಮಂದಿ ಸಾವನ್ನಪ್ಪಿದ್ದಾರೆ. ರಾಯಗಢ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ 38 ಮಂದಿ ಅಸುನೀಗಿದ್ದಾರೆ. ಮಹಾರಾಷ್ಟ್ರಕ್ಕೆ ಧಾವಿಸಿರುವ ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ರಕ್ಷಕ ಪಡೆ, ಎನ್‌ಡಿಆರ್‌ ಎಫ್, ಮಹಾರಾಷ್ಟ್ರ ಸರಕಾರದ ಸಂಸ್ಥೆಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next