Advertisement

ಆಶ್ಲೇಷಾ ವರ್ಷಧಾರೆ: ಲಿಂಗನಮಕ್ಕಿ, ಕೆಆರ್‌ಎಸ್‌ ಡ್ಯಾಂಗಳ ದಾಖಲೆ

12:06 AM Aug 15, 2018 | |

ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗು, ಹಳೇ ಮೈಸೂರು ಸೇರಿ ರಾಜ್ಯದ ಹಲವೆಡೆ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಈ ಭಾಗದ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ 5 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಇದೇ ವೇಳೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ನೆರೆ ಬಂದಿದ್ದು, ಕೆಲ ಸೇತುವೆಗಳು ಜಲಾವೃತಗೊಂಡಿವೆ.

Advertisement

ಜಲಾಶಯಗಳಿಂದ ನೀರು ಬಿಡುಗಡೆ: ಕೇರಳದ ವೈನಾಡು ಹಾಗೂ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ವರ್ಷಧಾರೆಯಿಂದ ಕಾವೇರಿ ಭೋರ್ಗರೆಯುತ್ತಿದ್ದು, ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಕೆಆರ್‌ಎಸ್‌ನಿಂದ 1.20 ಲಕ್ಷ ಕ್ಯೂಸೆಕ್‌, ಗೊರೂರಿನ ಹೇಮಾವತಿ ಅಣೆಕಟ್ಟಿನಿಂದ 50 ಸಾವಿರ  ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ.

ಲಿಂಗನಮಕ್ಕಿ ತುಂಬಲು 2 ಅಡಿ ಬಾಕಿ: ಜಲಾನಯನ ಪ್ರದೇಶದ 500 ಕಿ.ಮೀ. ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಲಿಂಗನಮಕ್ಕಿ ಅಣೆಕಟ್ಟಿನ ಗರಿಷ್ಠ ಮಟ್ಟ 1819 ಅಡಿ ತಲುಪಲು 2ಅಡಿ ಬಾಕಿ ಇದೆ. ಮಂಗಳವಾರ ಅಣೆಕಟ್ಟಿನ 9 ಕ್ರಸ್ಟ್‌ಗೇಟ್‌ ತೆರೆದು 22 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಶರಾವತಿ ಕೊಳ್ಳದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಲಿಂಗನಮಕ್ಕಿ ಅಣೆಕಟ್ಟಿನಿಂದ 33 ಸಾವಿರ ಕ್ಯೂಸೆಕ್‌ ನೀರು ಬಿಡಲು ಆರಂಭಿಸಲಾಗಿದೆ. 

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹೆಚ್ಚುವರಿ 1.20 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡಿ ಋಷಿಮುಖ ಪರ್ವತ ಪ್ರದೇಶ ಹಾಗೂ
ನವವೃಂದಾವನ ಗಡ್ಡಿ ಸಂಪೂರ್ಣ ಜಲಾವೃತವಾಗಿದೆ. ಆನೆಗೊಂದಿ ಹತ್ತಿರವಿರುವ ಶ್ರೀ ಕೃಷ್ಣದೇವರಾಯ ಸಮಾಧಿ  (64 ಕಾಲು ಮಂಟಪ) ಸಂಪೂರ್ಣ ಮುಳುಗಡೆಯಾಗಿದೆ. ನವವೃಂದಾವನಕ್ಕೆ ಭಕ್ತರು ಹೋಗುವ ಯಾಂತ್ರಿಕ ದೋಣಿ ನಿಲುಗಡೆಯಾಗಿವೆ. 

ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದಿಂದ 92 ಸಾವಿರ ಕ್ಯೂಸೆಕ್‌ ನೀರು ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.

Advertisement

ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಕಾರ್ಯಾಚರಣೆಗಾಗಿ ಎನ್‌ ಡಿಆರ್‌ಎಫ್ ಪಡೆಯನ್ನು ಸಜ್ಜು ಗೊಳಿಸಲಾಗಿದೆ. ಪ್ರವಾಸಿ ತಾಣಗಳ ನದಿ ಪಾತ್ರಕ್ಕೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾ ಗಿದೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿಷೇಧ ಹಾಕಲಾಗಿದೆ. ಕೊಡಗಿನ ಭಾಗಮಂಡಲ ಜಲಾವೃತ
ಗೊಂಡಿದ್ದು, ಜಿಲ್ಲಾಡಳಿತ ಬೋಟ್‌ ಹಾಗೂ ರ್ಯಾಕಿಂಗ್‌ ವ್ಯವಸ್ಥೆಯ ಮೂಲಕ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.

ಸೇತುವೆ, ಮನೆಗಳು ಜಲಾವೃತ
ಕಾವೇರಿ ನದಿಗೆ ನೀರು ಬಿಟ್ಟಿರುವ ಪರಿಣಾಮ, ಶ್ರೀರಂಗ ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆಯಾಗುವ ಹಂತ ತಲುಪಿದೆ. ಪಶ್ಚಿಮ ವಾಹಿನಿ, ಅಲ್ಲಿ ರುವ ಮಹಾರಾಜರ ಮಂಟಪ, ಪಿಂಡಪ್ರದಾನ ಮಂಟಪ, ಅರಳಿಕಟ್ಟೆ, ರಂಗನಾಥ ಸ್ವಾಮಿ ದೇಗುಲದ ಸಮೀಪದ ಸ್ನಾನ ಘಟ್ಟ, ಗೌತಮ ಕ್ಷೇತ್ರ, ನಿಮಿಷಾಂಬ ದೇಗುಲದ ಸ್ನಾನ ಘಟ್ಟ ಹಾಗೂ ಬಟ್ಟೆ ಬದಲಾಯಿಸುವ ಕೊಠಡಿಗಳು, ಗಾಂಧೀಜಿ ಚಿತಾಭಸ್ಮ
ಬಿಟ್ಟಿರುವ ಸ್ಥಳಗಳು, ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಜಲಾವೃತ ಗೊಂಡಿವೆ. ಜತೆಗೆ, ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ರಂಗನತಿಟ್ಟು ಪಕ್ಷಿಧಾಮದ ದ್ವೀಪ ಗಳಲ್ಲಿ ಮಣ್ಣು ಸವಕಳಿ ತಪ್ಪಿಸಲು ಹಾಕಲಾಗಿದ್ದ 1500 ಮರಳು ಮೂಟೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭಾಗ ಮಂಡಲದ ಶ್ರೀಭಗಂಡೇಶ್ವರ ದೇವಾಲಯವನ್ನು ಕಾವೇರಿ, ಕನ್ನಿಕಾ, ಸುಜ್ಯೋತಿ ನದಿಗಳು ಆವರಿಸಿಕೊಂಡಿದ್ದು, ಈ ಭಾಗದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರು
ಜಿಲ್ಲೆಯಾದ್ಯಂತ ಮಳೆಯಾಗು ತ್ತಿದ್ದು, ಶೃಂಗೇರಿ ದೇಗುಲದ ಸುತ್ತಮುತ್ತಲಿನ ಪ್ರದೇಶಗಳು ಜಲಾ ವೃತಗೊಂಡಿವೆ.ಕಳಸದಿಂದ- ಹೊರ ನಾಡಿಗೆ
ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ 42 ದಿನಗಳಲ್ಲಿ 13ನೇ ಬಾರಿಗೆ ಮುಳುಗಡೆ ಯಾಯಿತು. ತುಂಗಾ-ಭದ್ರಾ ನದಿಗಳು ತುಂಬಿ ಹರಿಯುತ್ತಿರುವುದರಿಂದ ಮಲೆನಾಡಿನ ನೂರಾರು ಗ್ರಾಮಗಳಿಗೆ ರಸ್ತೆ ಸಂಪರ್ಕಕಡಿತಗೊಂಡಿದೆ. ಕಳಸ- ಮಂಗಳೂರು ಮಾರ್ಗ ಬಂದ್‌ ಆಗಿದೆ.

ಅಪಾಯದ ಮಟ್ಟದಲ್ಲಿ ನದಿಗಳು
ಕೊಡಗಿನ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಸನ ಸಮೀಪದ ರಾಮನಾಥಪುರದ ಬಳಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಬಾಳೆಲೆ, ನಿಟ್ಟೂರು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಸತತ ಮಳೆಯಿಂದ ನೇತ್ರಾವತಿ ಹಾಗೂ ಕುಮಾರ ಧಾರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಉಪ್ಪಿನಂಗಡಿಯ ಶ್ರೀ ಸಹಸ್ರ ಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ಅಂಗಳಕ್ಕೆ ನೀರು ಬಂದು, ಸಂಗಮದ ನಿರೀಕ್ಷೆ ಮೂಡಿಸಿದೆ. ಕುಮಾರ ಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಆಲಂಕಾರು ಹಾಗೂ ಕುಂತೂರು ಗ್ರಾಮದ ಹಲವು ಮನೆ ಗ ಳಿಗೆ ನೆರೆ ನೀರು ನುಗ್ಗಿದೆ.

ಶಾಲೆಗಳಿಗೆ ರಜೆ: ಮಳೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮಂಗಳವಾರವೂ ಪದವಿ ಕಾಲೇಜು ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು.

ಇನ್ನೆರಡು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ಇನ್ನೆರಡು ದಿನ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮುಂಜಾಗ್ರತಾ ಕ್ರಮಕ್ಕೆ ಸೂಚನೆ 
ಬೆಂಗಳೂರು: ಕೇರಳ ಹಾಗೂ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿರುವುದರಿಂದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ 1.4 ಲಕ್ಷ ಕ್ಯೂಸೆಕ್‌ ನೀರು ನದಿಗೆ ಬಿಡಲಾಗಿದ್ದು, ಎರಡು ದಿನದಲ್ಲಿ ಮೆಟ್ಟೂರು ಡ್ಯಾಮ್‌ ತಲುಪಲಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆ ನೀಡಿದೆ. 

ನೀರು ಬಿಡುತ್ತಿರುವುದು ಇದು 19ನೇ ಬಾರಿ!
ಶಿವಮೊಗ್ಗ: 1964ರಲ್ಲಿ ನಿರ್ಮಾಣವಾದ ಲಿಂಗನಮಕ್ಕಿಯಿಂದ ಈವರೆಗೆ 18 ಬಾರಿ ಜಲಾಶಯದಿಂದ ನದಿಗೆ ನೀರು ಬಿಟ್ಟ ದಾಖಲೆಯಿದ್ದು, ಇದು 19ನೇ ಬಾರಿ. ಸಾಮಾನ್ಯವಾಗಿ ಜಲಾಶಯದ ಮಟ್ಟ 1816 ಅಡಿ ತಲುಪಿದಾಗ ನೀರಿನ ಒಳಹರಿವು ಆಧರಿಸಿ ಜಲಾಶಯ ದಿಂದ ನದಿಗೆ ನೀರನ್ನು ಬಿಡೋದು ಪದ್ಧತಿ. ಆದರೆ, ಈ ಬಾರಿ ಒಳಹರಿವು ಒಮ್ಮೆಗೇ ಏರಿದ್ದು ಮುಂಜಾಗ್ರತೆ ದೃಷ್ಟಿಯಿಂದ ನೀರು ಹೊರಬಿಡಲಾಗಿದೆ. 2013ರಲ್ಲಿ ಆಗಸ್ಟ್‌ 1 ರಂದು 11 ಕ್ರಸ್ಟ್‌ ಗೇಟ್‌ ತೆರೆದು ನೀರು ಹೊರಬಿಟ್ಟಿದ್ದು ಬಿಟ್ಟರೆ ಈ ವರ್ಷವೇ ಆಗಸ್ಟ್‌ನಲ್ಲೇ ಜಲಾಶಯ ತುಂಬಿ ದಂತಾಗಿದೆ. ಜಲಾಶಯ ಈವರೆಗೆ 14 ಬಾರಿ ಸಂಪೂರ್ಣ ಭರ್ತಿಯಾಗಿದೆ. ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ಮೈದುಂಬಿ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಳೆ ಅವಘಡ: 2 ಸಾವು
ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಐರ್‌ಬೈಲು ನಿವಾಸಿ, ಬಿಎಸ್‌ಎನ್‌ಎಲ್‌ ಉದ್ಯೋಗಿ ಶಂಕರ ಪೂಜಾರಿ (58) ಎಂಬುವರು ಮಂಗಳವಾರ ಮನೆಯ ಸಮೀಪ ಇರುವ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಡೂರು – ಕುಂಜ್ಞಾಡಿಯ ರಘುರಾಮ ಶೆಟ್ಟಿ (54) ಎಂಬುವರು ಸೋಮವಾರ ರಾತ್ರಿ ತೋಡಿಗೆ ಬಿದ್ದಿದ್ದು, ಮಂಗಳವಾರ ಅವರ ಮೃತದೇಹ ಪತ್ತೆಯಾಗಿದೆ. ಶಿರಾಡಿ ಬ್ಲಾಕ್‌: ಶಿರಾಡಿ ಘಾಟಿ ರಸ್ತೆಯ ಮಾರನಹಳ್ಳಿ,
ಕೆಂಪುಹಳ್ಳದಲ್ಲಿ ಹೆದ್ದಾರಿಗೆ ಮಣ್ಣು ಕುಸಿದ ಪರಿಣಾಮ ಹೆದ್ದಾರಿ ಸಂಪೂರ್ಣ ಬ್ಲಾಕ್‌ ಆಗಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ವಾಹನಗಳು ಚಾರ್ಮಾಡಿ ಮೂಲಕ ಸಂಚರಿಸಿದವು.

ಸಂಚಾರದ ರಸ್ತೆ ಬದಲು
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುಟುಂಬ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ತೆರಳಿದೆ. ಸೋಮವಾರ ಶಿರಾಡಿ ಘಾಟಿ ಬ್ಲಾಕ್‌ ಆದ ಕಾರಣ ಚಾರ್ಮಾಡಿ ಘಾಟಿ ಮೂಲಕ ಕುಟುಂಬ ಧರ್ಮಸ್ಥಳಕ್ಕೆ ಆಗಮಿಸಿತು.  ಮಂಗಳವಾರ ಬೆಳಗ್ಗೆ  ಕೊಕ್ಕಡ-ಗುಂಡ್ಯ ರಸ್ತೆ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಗಿತ್ತಾದರೂ ಶಿರಾಡಿ ಬ್ಲಾಕ್‌ನ ಪರಿಣಾಮ ಬೆಳ್ತಂಗಡಿ-ಉಪ್ಪಿನಂಗಡಿ, ಪುತ್ತೂರು ಮೂಲಕ ಸುಬ್ರಹ್ಮಣ್ಯಕ್ಕೆ ಸಾಗಿದರು. ಸುಬ್ರಹ್ಮಣ್ಯದ ಕಾರ್ಯಕ್ರಮ ಮುಗಿಸಿ ಸಂಜೆ ಮತ್ತೆ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಉಪ್ಪಿನಂಗಡಿ-ಬೆಳ್ತಂಗಡಿ ಮೂಲಕ ಚಾರ್ಮಾಡಿ ಘಾಟಿ ರಸ್ತೆಯಲ್ಲೇ ಬೆಂಗಳೂರಿಗೆ ತೆರಳಿದರು.

ತಕ್ಷಣ ತೆರವಿಗೆ ಸೂಚನೆ
ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೀಳು ತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಿ ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಳೆ ಅನಾಹುತದಿಂದ ಆಗುವ ತೊಂದರೆ ಗಳಿಂದ ಜನ ಜೀವನ ಅಸ್ತವ್ಯಸ್ತಗೊಳ್ಳಬಾರದು. ಅದರಲ್ಲೂ ಮಡಿಕೇರಿ- ಮಂಗಳೂರು, ಮಂಗಳೂರು- ಬೆಂಗಳೂರು ರಸ್ತೆಗಳು ಕುಸಿತದಿಂದ ಸಮಸ್ಯೆಯಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿ ವಾಹನ ಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ಸಚಿವರಿಗೆ ತಟ್ಟಿದ ಮಳೆ ಬಿಸಿ
ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯ ಬಿಸಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೂ ತಟ್ಟಿದೆ. ಸೋಮವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದ ಸಚಿವರು ಗರಿಗೆಖಾನ್‌ ಎಸ್ಟೇಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಬೆಳಗ್ಗೆ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ
ಪ್ರಗತಿ ಪರಿಶೀಲನಾ ಸಭೆಗೆ ಅವರು ತೆರಳುತ್ತಿದ್ದಾಗ, ಮಾರ್ಗಮಧ್ಯೆ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತ ಗೊಂಡಿತ್ತು. ರಸ್ತೆಗೆ ಗುಡ್ಡ ಕುಸಿದಿದ್ದರಿಂದಾಗಿ ಕೆಲಕಾಲ ಅಲ್ಲಿಯೇ ಸಚಿವರು ಕಾಯುವಂತಾಗಿತ್ತು. 

ಇನ್ನು 3 ದಿನ ರೈಲು ಸಂಚಾರ ಇಲ್ಲ
ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ ಬಳಿ ಹಳಿ ಮೇಲೆ ಮಂಗಳವಾರ ಗುಡ್ಡ ಕುಸಿದು ಬಿದ್ದಿದೆ. ಆದ್ದರಿಂದ ಈ ಮಾರ್ಗದಲ್ಲಿ ಮುಂದಿನ 3 ದಿನ ಸಂಚಾರ ರದ್ದಾಗಲಿದೆ. ಈ ಮಾರ್ಗದ ರೈಲುಗಳಿಗೆ ಶೋರ್ನೂರು- ಸೇಲಂ ಮಾರ್ಗವಾಗಿ ಸಂಚಾರ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next