Advertisement

ಉಡುಪಿ ಜಿಲ್ಲೆಯಲ್ಲಿ  ಮಳೆಯಬ್ಬರ; ವ್ಯಾಪಕ ಹಾನಿ

10:51 AM May 30, 2018 | |

ಉಡುಪಿ: ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳ ವಾರ ಬೆಳಗಾಗುತ್ತಿದ್ದಂತೆ ಅಬ್ಬರಿಸಲು ಶುರುಮಾಡಿದ ಮಳೆಗೆ ತತ್ತರಿಸಿದೆ. ಮೇ 28ರ ರಾತ್ರಿಯಿಂದ ಬೆಳಗ್ಗಿನ ವರೆಗೆ ಹಾಗೂ ಮೇ 29ರ ಮಧ್ಯಾಹ್ನದ ಅನಂತರ ಸುರಿದ ಭಾರೀ ಗಾಳಿ-ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.

Advertisement

ಮೇ 28ರಂದು ರಾತ್ರಿ ಬೀಸಿದ ಗಾಳಿಗೆ ಜಿಲ್ಲೆ ಯಾದ್ಯಂತ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಉದ್ಯಾವರ, ಅಂಬಲಪಾಡಿ ಮೊದಲಾದೆಡೆ 50ಕ್ಕೂ ಅಧಿಕ ಬೃಹತ್‌ ಮರಗಳು, 100ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಉರುಳಿವೆ. ಕಾರ್ಕಳದ ಬೈಲೂರಿನಲ್ಲಿ ಸಿಡಿಲಾಘಾತಕ್ಕೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಡುಬಿದ್ರಿಯಲ್ಲಿ ಶಾಲೆಯಿಂದ ಮರಳುತ್ತಿದ್ದ ಬಾಲಕಿಯೊಬ್ಬಳು ನೀರುಪಾಲಾಗಿದ್ದಾಳೆ.

ಕತ್ತಲಲ್ಲಿ  ಉಡುಪಿ
ಉಡುಪಿ ನಗರ ಸಹಿತ ತಾಲೂಕಿನ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿದ್ದು, ರಾತ್ರಿಯ ವರೆಗೂ ಸುಸ್ಥಿತಿಗೆ ತರಲು ಸಾಧ್ಯವಾಗಿಲ್ಲ. ಸಿಡಿಲಿನ ಆಘಾತಕ್ಕೆ ತಂತಿಗಳು ಕಡಿದ ಪರಿಣಾಮ 30ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟುಹೋಗಿವೆ.

ರಸ್ತೆಗಳಿಗೆ ಮರ ಉರುಳಿದ ಕಾರಣ ಉದ್ಯಾವರ, ಅಂಬಲಪಾಡಿ, ಕಡೆಕಾರು, ಕಿದಿಯೂರು ಮೊದಲಾದೆಡೆ ಬಸ್‌ ಸಂಚಾರ ಸ್ಥಗಿತಗೊಂಡಿತು. ನಗರಸಭೆ, ಅಗ್ನಿಶಾಮಕ ದಳದ ಸಿಬಂದಿ ಸ್ಥಳೀಯರ ಸಹಕಾರದೊಂದಿಗೆ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

Advertisement

ಸ್ತಬ್ಧವಾದ ನಗರ
ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಉಡುಪಿ ನಗರದ ಶಿರಿಬೀಡು, ಮಠದಬೆಟ್ಟು, ರಾಜಾಂಗಣ ಪಾರ್ಕಿಂಗ್‌ ಪ್ರದೇಶದ ಸಮೀಪ ಸೇರಿದಂತೆ ವಿವಿಧೆಡೆ ನೀರು ನಿಂತು ಸ್ಥಳೀಯರು ತೊಂದರೆಗೊಳಗಾದರು. ಶಿರಿಬೀಡು ಇಷ್ಟಾರ್ಥ ಸಿದ್ಧಿವಿನಾಯಕ ದೇವಸ್ಥಾನ ರಸ್ತೆಯ 10ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತು. ಮಠದಬೆಟ್ಟಿನ ಲಕ್ಷ್ಮೀ ಅವರ ಮನೆ ಜಲಾವೃತವಾಯಿತು. ರಾ.ಹೆ. 66ರ ಕರಾವಳಿ ಬೈಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ವ್ಯತ್ಯಯವಾಯಿತು.

ಜಲಾವೃತಗೊಂಡ ಶಿರಿಬೀಡು ಟವರ್‌
ಉಡುಪಿ ಸಿಟಿ ಬಸ್‌ನಿಲ್ದಾಣ ಇರುವ ಶಿರಿಬೀಡು ಟವರ್ ವಸತಿ ಮತ್ತು ವಾಣಿಜ್ಯ ಸಂಕೀರ್ಣ ಜಲಾವೃತವಾಗಿದ್ದು , ನಿವಾಸಿಗಳು ಆತಂಕ ದಿಂದ ಇದ್ದಾರೆ. ಶಿರಿಬೀಡು ಮಠದಬೆಟ್ಟು ಪರಿಸರ ದಲ್ಲಿ  ನಿರ್ಮಿಸಿರುವ ಬೃಹತ್‌ ಆವರಣ ಗೋಡೆ ಯಿಂದಾಗಿ ನೀರು ಹೋಗದೇ ವಸತಿ ಸಂಕೀರ್ಣದ ತಳಭಾಗ ಜಲಾವೃತವಾಗಿದೆ. ಲಿಫ್ಟ್, ಜನರೇಟರ್‌ಗಳಿಗೂ ನೀರು ನುಗ್ಗಿದೆ. ಇದು ನಿವಾಸಿಗಳನ್ನು ದಿಗ್ಬಂಧನದಲ್ಲಿರಿಸಿದಂತಾಗಿದೆ. 

ಈ ಸಂಕೀರ್ಣದ ವಿದ್ಯುತ್‌ ಸಂಪರ್ಕವನ್ನು ಸಂಪೂರ್ಣ ಕಡಿತ ಮಾಡಲಾಗಿದೆ. ಇಲ್ಲಿ  ಮಂಗಳವಾರ ರಾತ್ರಿಯ ವರೆಗೂ ನೀರಿನ ಮಟ್ಟ  ಏರಿಕೆಯಾಗುತ್ತಲೇ ಇತ್ತು.

513 ವಿದ್ಯುತ್‌ ಕಂಬಗಳು ಧರಾಶಾಯಿ
ಉಡುಪಿ:
ಉಡುಪಿ ಜಿಲ್ಲೆಯಲ್ಲಿ  ಕಳೆದ 3 ದಿನಗಳಲ್ಲಿ  ಒಟ್ಟು  513 ವಿದ್ಯುತ್‌ ಕಂಬಗಳು ಧರಾಶಾಯಿಯಾಗಿವೆ.

ರವಿವಾರ 513, ಸೋಮವಾರ 183 ಮತ್ತು ಮಂಗಳವಾರ 152 ಕಂಬಗಳು ಧರೆಗುರುಳಿದ್ದು , ಮೆಸ್ಕಾಂಗೆ ಸುಮಾರು 38 ಲ. ರೂ. ನಷ್ಟವಾಗಿದೆ. ಹಲವೆಡೆ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟು ಹೋಗಿವೆ. ಉದ್ಯಾವರ ಮತ್ತು ಪಡುಕರೆ ಭಾಗದಲ್ಲಿ ವಿದ್ಯುತ್‌ ಮರು ಸಂಪರ್ಕಕ್ಕೆ ಇನ್ನೂ  ಹಲವು ದಿನಗಳು ಬೇಕಾಗಬಹುದು. ಕಾರ್ಕಳ, ಹೆಬ್ರಿ, ಮಣಿಪಾಲದಲ್ಲಿ  434 ಹಾಗೂ ಕುಂದಾಪುರ, ಕೋಟ ಭಾಗದಲ್ಲಿ  79 ವಿದ್ಯುತ್‌ ಕಂಬಗಳು ಧರೆಗುರುಳಿವೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ತಾಲೂಕು: 48.3 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಮೇ 28ರ ಬೆಳಗ್ಗೆ  8.30ರಿಂದ ಮೇ 29ರ ಬೆಳಗ್ಗೆ  8.30ರ ಅವಧಿಯಲ್ಲಿ  ಸರಾಸರಿ 34.93 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಅಂದರೆ 48.3 ಮಿ.ಮೀ. ಮಳೆ ಸುರಿದಿದೆ.  ಕಾರ್ಕಳದಲ್ಲಿ 45 ಮಿ.ಮೀ. ಮತ್ತು ಕುಂದಾಪುರದಲ್ಲಿ 11.5 ಮಿ.ಮೀ. ಮಳೆಯಾಗಿದೆ.

ಬ್ರಹ್ಮಾವರ: ಅಪಾರ ಹಾನಿ
ಬ್ರಹ್ಮಾವರ:
ಇಂದಿರಾನಗರ, ವಾರಂಬಳ್ಳಿ, ಸಾಲಿಕೇರಿಯಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಅಪಾರ ಹಾನಿಯಾಗಿದೆ. ವಾರಂಬಳ್ಳಿಯ ಕೃಷ್ಣ ಅವರ ಮನೆ ಸಮೀಪದ ದೈವದ ಗುಡಿಗೆ ಹಾನಿಯಾಗಿದೆ. 

ಸಾಲಿಕೇರಿ ಮುಖ್ಯರಸ್ತೆಯಲ್ಲಿ ಹಲವಾರು ವಿದ್ಯುತ್‌ ಕಂಬ, ಮರಗಳು ಉರುಳಿದ ಪರಿಣಾಮ ಸಂಚಾರ ಸ್ಥಗಿತಗೊಂಡಿತು. ಹೊನ್ನಾಳಕ್ಕೆ ತೆರಳುವ ಬಸ್‌ಗಳು ದೂಪದಕಟ್ಟೆ ಮಾರ್ಗವಾಗಿ ಸಂಚರಿಸಿದವು.

ಮಂಗಳವಾರ ಸಂಜೆಯ ಭಾರೀ ಮಳೆಗೆ ಬ್ರಹ್ಮಾವರ ಚರ್ಚ್‌ ಕಾಂಪ್ಲೆಕ್ಸ್‌ ಎದುರಿನ ಸರ್ವಿಸ್‌ ರೋಡ್‌ನ‌ಲ್ಲಿ ನೀರು ತುಂಬಿ ಸವಾರರು ಪರದಾಡಿದರು. ಮಟಪಾಡಿ ರಸ್ತೆಯಲ್ಲೂ  ತೀವ್ರ ತೊಂದರೆ ಅನುಭವಿಸಿದರು.

ಕಡೆಕಾರು: ಮಳೆಗಾಳಿಗೆ ಹೊಳೆಗೆ ಉರುಳಿದ ವಿದ್ಯುತ್‌ ಟವರ್‌
ಪಡುಕರೆ ಜನರಿಗೆ ಕೆಲವು ದಿನ ಕತ್ತಲ ಭಾಗ್ಯ?

ಮಲ್ಪೆ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗಾಳಿಗೆ ಪಡುಕರೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಡೆಕಾರ್‌ ಸೀವೀವ್‌ ರೆಸಾರ್ಟ್‌ ಸಮೀಪದ ಹೊಳೆ ತೀರದಲ್ಲಿರುವ ವಿದ್ಯುತ್‌ ಟವರ್‌ ಹೊಳೆಗೆ ಉರುಳಿಬಿದ್ದು ವಿದ್ಯುತ್‌ ಸಂಪರ್ಕ ಕಡಿದುಕೊಂಡಿದೆ.
ಪರಿಣಾಮ ಉದ್ಯಾವರ ಕನಕೋಡದಿಂದ ಮಲ್ಪೆ ಶಾಂತಿನಗರದ ನಾಗರಿಕರಿಗೆ ಸುಮಾರು 650 ಮನೆಗಳಿಗೆ ವಿದ್ಯುತ್‌ ಪೂರೈಕೆ ಇಲ್ಲದೆ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.

ಕಡೆಕಾರು ಕುದ್ರುಕರೆ ಹೊಳೆ ಮಧ್ಯೆ ಹಾದು ಹೋಗುವ 11 ಕೆವಿಯ ಟವರ್‌ನ ಪಿಲ್ಲರ್‌ ಸಮೇತದ ಹೊಳೆಗೆ ಬಿದ್ದಿದೆ. ಮಳೆಗಾಲವಾದ್ದರಿಂದ ಈಗಿನ ಸ್ಥಿತಿಯಲ್ಲಿ ಸದ್ಯದಲ್ಲಿ ಸರಿಪಡಿಸಲು ಅಸಾಧ್ಯವಾಗಿದೆ. ಪಡುಕರೆ ಭಾಗದಲ್ಲಿ ವಿದ್ಯುತ್‌ ಪೂರೈಕೆಗೆ ಪರ್ಯಾಯ ವ್ಯವಸ್ಥೆಯನ್ನು ಅತೀ ಶೀಘ್ರದಲ್ಲಿ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಚೇರ್ಕಾಡಿ: ಸಿಡಿಲು ಬಡಿದು ಹಾನಿ
ಬ್ರಹ್ಮಾವರ:
ಚೇರ್ಕಾಡಿ ಗ್ರಾಮದ ಹಳೆಗರಡಿಯ ಸಂಪ ಅವರ ಮನೆಗೆ ಮಂಗಳವಾರ ಸಂಜೆ ಸಿಡಿಲು ಬಡಿದು ಹಾನಿಯಾಗಿದೆ. ಗೋಡೆಯಲ್ಲಿ ರಂಧ್ರ ಸೃಷ್ಟಿಯಾಗಿದೆ. ಟಿ.ವಿ., ಫ್ರಿಜ್‌, ಗೆùಂಡರ್‌ ಮೊದಲಾದ ಉಪಕರಣಗಳು ಸುಟ್ಟು ಹೋಗಿವೆ.

ಈ ಸಂದರ್ಭ ಮನೆಯಲ್ಲಿ ನಾಲ್ವರು ಸದಸ್ಯರು ಇದ್ದಿದ್ದು,  ವನಜಾ ಅವರು ಆಘಾತಕ್ಕೊಳಗಾದರು.

ಕೂಡ್ಲಿ: ಸಿಡಿಲಿಗೆ ಹಾನಿ, ಅಸ್ವಸ್ಥ
ಬ್ರಹ್ಮಾವರ:
ಬಾರಕೂರು ಕೂಡ್ಲಿ ಕೃಷ್ಣ ನಾಯ್ಕ ಅವರ ಪುತ್ರ ಗಣೇಶ ನಾಯ್ಕ ಅವರು ಸಿಡಿಲಿನಿಂದ ಅಸ್ವಸ್ಥಗೊಂಡಿದ್ದಾರೆ.

ಮಂಗಳವಾರ ಸಂಜೆ ಮನೆಯ 5,6 ಮಂದಿ ಸೇರಿ ಸಮೀಪದಲ್ಲಿ ದೈವದ ಪೂಜೆ ನೆರವೇರಿಸುವಾಗ ಸಿಡಿಲು ಬಡಿದಿದೆ. ತತ್‌ಕ್ಷಣ ಗಣೇಶ ನಾಯ್ಕ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಿಡಿಲಿನಿಂದ ಕೂಡ್ಲಿ ಉಡುಪರ ಮನೆ ಟಿ.ವಿ., ಫ್ರಿಜ್‌, ಫ್ಯಾನ್‌, ವಯರಿಂಗ್‌ ಸುಟ್ಟು ಹೋಗಿವೆ.

ಕೊಲ್ಲೂರು: ಧಾರಾಕಾರ ಮಳೆ
ಕೊಲ್ಲೂರು:
ಕೊಲ್ಲೂರಿನಲ್ಲಿ ಮಂಗಳವಾರ ಅಪರಾಹ್ನ ಆರಂಭ ಗೊಂಡ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪೇಟೆ ಸಹಿತ ವಿವಿಧೆಡೆ ನೀರಿನ ಮಟ್ಟ ಏರಿದೆ. ಕೆಲವು ಕಡೆಗಳಲ್ಲಿ ಕೃತಕ ನೆರೆಹಾವಳಿ ಕಂಡುಬಂದಿದೆ. ಜಡ್ಕಲ್‌, ಮುದೂರು, ವಂಡ್ಸೆ, ತಳಕೋಡು, ಕಾನಿR ಪರಿಸರದಲ್ಲಿ ಭಾರೀ ಮಳೆಯಾಗಿದೆ. ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ, ಹುಣ್ಸೆಮಕ್ಕಿ, ಕಾಳಾವರ, ಬಿದ್ಕಲ್‌ಕಟ್ಟೆ, ಯಡಾಡಿ-ಮತ್ಯಾಡಿ ಮುಂತಾದೆಡೆ ಅವ್ಯಾಹತವಾಗಿ ಮಳೆ ಸುರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next