Advertisement

ಜಲಗಂಡಾಂತರ

12:23 PM Aug 09, 2019 | Suhan S |

ಹಾವೇರಿ: ಅತ್ತ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯತ್ತಿರುವುದರಿಂದ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ತುಂಬಿ ಹರಿದು ಜಿಲ್ಲೆಯ 10,000 ಎಕರೆಗೂ ಹೆಚ್ಚು ಹೊಲಗಳಿಗೆ ನೀರು ನುಗಿದೆ. ಹೀಗಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನೀರು ಪಾಲಾಗಿದ್ದು, ರೈತರು ಕಣ್ಣೀರು ಸುರಿಸುವಂತಾಗಿದೆ.

Advertisement

ವರದೆಯ ಪ್ರವಾಹಕ್ಕೆ ಜಿಲ್ಲೆಯ ಹಾನಗಲ್ಲ, ಹಾವೇರಿ, ಸವಣೂರು ತಾಲೂಕುಗಳಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಜಲಾವೃತಗೊಂಡಿದ್ದು ರೈತರು ಚಿಂತಾಕ್ರಾಂತರಾಗಿದ್ದಾರೆ. ಮೆಕ್ಕೆಜೋಳ, ಹತ್ತಿ, ಮೆಣಸು, ಸೂರ್ಯಕಾಂತಿ, ಶೇಂಗಾ, ಕಬ್ಬು, ಸವತೆ, ಬೆಂಡಿ ಬೆಳೆಗಳು ನೀರಲ್ಲಿ ಮುಳುಗಿದ್ದು, ಅಂದಾಜು ಶೇ.50 ಬೆಳೆ ಹಾನಿಯಾಗಿದೆ. ನೀರು ಇದೇ ರೀತಿ ಮೂರ್‍ನಾಲ್ಕು ದಿನ ನಿಂತರೆ ಬೆಳೆ ಸಂಪೂರ್ಣ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಬೆಳೆ ಹಾನಿ ಮಾತ್ರ ಅಪಾರ ಪ್ರಮಾಣದಲ್ಲಾಗಿದ್ದು, ಇಷ್ಟು ದಿನ ನೀರಿಲ್ಲದೇ ಕಂಗಾಲಾಗಿದ್ದ ಜಿಲ್ಲೆಯ ರೈತರು ಈಗ ನೆರೆಯಿಂದ ಬೆಳೆ ನಷ್ಟದ ಕಷ್ಟಕ್ಕೆ ಸಿಲುಕಿದ್ದಾರೆ.

ಜಮೀನು ಆವರಿಸಿದ ನೀರು:

ವರದಾ ನದಿ ತುಂಬಿ ಹರಿಯುತ್ತಿರುವುದರಿಂದ ಹಾವೇರಿ ತಾಲೂಕಿನಲ್ಲಿ ಕೋಣನತಂಬಗಿ, ಕೆಸರಳ್ಳಿ, ಮಣ್ಣೂರು, ಚೆನ್ನೂರು, ಕಿತ್ತೂರ, ಮರಡೂರು, ಅಕ್ಕೂರ, ಹಾಲಗಿ, ಮರೋಳ, ನದಿನೀರಲಗಿ, ಕೊಡಬಾಳ, ಹಿರೆಮಗದೂರ, ಕಲಕೋಟಿ, ಸವಣೂರು ತಾಲೂಕಿನ ಹಲಸೂರ, ಮನ್ನಂಗಿ, ಚಿಕ್ಕಮರಳಿಹಳ್ಳಿ, ಮಂಟಗಣಿ, ತೊಂಡೂರ, ಡೊಂಬರಮತ್ತೂರ, ಮೆಳ್ಳಾಗಟ್ಟಿ ಹಾಗೂ ಹಾನಗಲ್ಲ ತಾಲೂಕಿನ ಮಲಗುಂದ, ಕೂಡಲ ಗ್ರಾಮಗಳಲ್ಲಿ ನದಿ ನೀರು ಕೃಷಿ ಜಮೀನುಗಳನ್ನು ಆವರಿಸಿದೆ.

ಮಳೆ ಜತೆ ಡ್ಯಾಂ ನೀರು: ಮಳೆ ನೀರಿನ ಜತೆಗೆ ಜಲಾಶಯಗಳ ನೀರು ಸಹ ಸೇರಿ ಹೆಚ್ಚಿನ ಪ್ರವಾಹ ಸೃಷ್ಟಿಯಾಗಿದೆ. ಭದ್ರಾ ಹಾಗೂ ತುಂಗಾ ಜಲಾಶಯದಿಂದಲೂ ನೀರು ಬಿಟ್ಟಿರುವುದರಿಂದ ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ಎತ್ತರ ಹೆಚ್ಚಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ.

Advertisement

ತುಂಗಭದ್ರಾ ನದಿಯ ಪ್ರವಾಹದಿಂದ ಹಾವೇರಿ ತಾಲೂಕಿನ ಗುಯಲಗುಂದಿ, ಕಂಚಾರಗಟ್ಟಿ, ಗಳಗನಾಥ, ಹಾವಂಶ, ಶಾಖಾರ, ಹಾವನೂರು, ಹುರಳಿಹಾಳ, ಹರಳಹಳ್ಳಿ, ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರ, ಹರನಗೇರಿ, ಚಿಕ್ಕಕುರವತ್ತಿ, ಹಳೇಚಂದಾಪುರ ಗ್ರಾಮಗಳು ನೀರು ನುಗ್ಗುವ ಆತಂಕದಲ್ಲಿವೆ. ಕುಮುದ್ವತಿ ನದಿ ನೀರು ಕುಪ್ಪೆಲೂರು, ಮುಷ್ಟೂರ ಗ್ರಾಮಗಳಿಗೆ ನುಗ್ಗಿದೆ.

ಶಿಗ್ಗಾವಿ ಏತ ನೀರಾವರಿ ಯೋಜನೆಗಾಗಿ ವರದಾ-ಧರ್ಮಾ ನದಿ ಸೇರುವ ಪ್ರದೇಶದಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ ಗೇಟ್ ಎರಡ್ಮೂರು ದಿನ ತೆರೆಯದೇ ಇರುವುದರಿಂದ ಉಂಟಾದ ಹಿನ್ನೀರಿನಿಂದ ನೂರಾರು ಎಕರೆ ಪ್ರದೇಶದ ಬೆಳೆಗಳು ಜಲಾವೃತಗೊಂಡು ಅಪಾರ ಹಾನಿಯಾಗಿದೆ.

ಸಮೀಕ್ಷೆಗೆ ಡ್ರೋಣ ಬಳಿಸಿ:

ತೋಟಗಾರಿಕೆ ಹಾಗೂ ಕೃಷಿ ಜಮೀನಿನಲ್ಲಿ ಮಳೆ ಅಥವಾ ಪ್ರವಾಹದ ನೀರು ನುಗ್ಗಿ ಬೆಲೆ ಹಾನಿ ಕುರಿತಂತೆ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸರ್ವೇಯರ್‌ ತಂಡಗಳನ್ನು ರಚಿಸಿ ಪ್ರತಿ ಗ್ರಾಮದ ಪ್ಲಾಟ್‌ಗಳ ಛಾಯಾಚಿತ್ರ ಸಂಗ್ರಹಿಸಬೇಕು. ಸಾಧ್ಯವಾದರೆ ಡ್ರೋಣ ಕ್ಯಾಮೆರಾ ಬಳಸಿ ಏರಿಯಲ್ ಸರ್ವೇ ಮೂಲಕ ಬೆಳೆಹಾನಿ ವಿಡಿಯೋ ಚಿತ್ರೀಕರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಹೆದ್ದಾರಿ ಸಂಚಾರ ವ್ಯತ್ಯಯ:

ವರದಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಗುರುವಾರ ರಾತ್ರಿ ನಾಗನೂರು ಕೆರೆ ತುಂಬಿ ಶಿಗ್ಗಾವಿ ಸಮೀಪದ ಖುರ್ಸಾಪುರ ಕ್ರಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯಿತು. ಪರಿಣಾಮ ಪೊಲೀಸರು ರಸ್ತೆ ಸಂಚಾರ ಸ್ಥಗಿತಗೊಳಿಸಿದರು. ಹೆದ್ದಾರಿ ಮೇಲೆ ಎರಡೂ ತಾಸಿಗೂ ಹೆಚ್ಚು ಹೊತ್ತು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಹಲವು ಮಾರ್ಗಗಳು ಬಂದ್‌: ಶಿಗ್ಗಾವಿ ತಾಲೂಕಿನ ಬೆಣ್ಣೆಹಳ್ಳ ಕುನ್ನೂರು ಗ್ರಾಮದಿಂದ ಶ್ಯಾಡಂಬಿ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮಾರ್ಗ ಬಂದ್‌ ಆಗಿದೆ. ಅಡವಿಸೋಮಾಪುರ, ಹೊನ್ನಾಪುರ ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ನಾಗನೂರು ಕೆರೆ ಕೋಡಿ ಬಿದ್ದು ಶಿಗ್ಗಾವಿ ಹೊರವಲಯದಲ್ಲಿ ಹೆದ್ದಾರಿ ಮೇಲೆ ನೀರು ಹರಿದಿದೆ. ಸವಣೂರ ತಾಲೂಕು ಮನ್ನಂಗಿ-ಮೆಳ್ಳಾಗಟ್ಟಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಕಲ್ಪಿಸುವ ಬಾಜಿರಾಯನ ಹಳ್ಳದ ಸೇತುವೆಯ ಮೇಲೆ ನೀರು ಹರಿಯುತ್ತಿರುವ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ನದಿ ತುಂಬಿ ಬೆಳೆಯೆಲ್ಲ: ಮುಳುಗಿದ ಘಟನೆ 1992ರಲ್ಲಿ, 2013ರಲ್ಲಿ ಎರಡು ಬಾರಿ ಆಗಿತ್ತು. ಆ ಬಳಿಕ ಇಷ್ಟೊಂದು ಪ್ರಮಾಣದ ನೆರೆ ಬಂದಿರಲಿಲ್ಲ. ನೆರೆಯಿಂದ ಬೆಳೆ ಮೇಲೆ ಭಾರೀ ಪರಿಣಾಮ ಬೀರಿದೆ. ಜಿಲ್ಲಾಡಳಿತ ಕೂಡಲೇ ಸಮೀಕ್ಷೆ ಮಾಡಿ ಪರಿಹಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.•ಗಂಗಯ್ಯ ಕುಲಕರ್ಣಿ,ಗ್ರಾಮಸ್ಥ, ಕೋಣನತಂಬಗಿ.
ಮಳೆಯಿಂದಾಗಿ ಜಿಲ್ಲೆಯಲ್ಲಿ ನೆರೆಯುಂಟಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನದಿ ಪಾತ್ರದ ಕೃಷಿ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುವುದು.•ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ.
ರಾಯರ ಮಠಕ್ಕೂ ಜಲ ಕಂಟಕ: ವರದಾ ನದಿ ಸೃಷ್ಟಿಸಿದ ನೆರೆಯಿಂದ ಐತಿಹಾಸಿಕ ಪ್ರಸಿದ್ಧ ಹೊಸರಿತ್ತಿಯ ರಾಘವೇಂದ್ರ ಮಠ ಹಾಗೂ ಚೌಡಯ್ಯದಾನಪುರದಲ್ಲಿರುವ ಅಂಬಿಗರ ಚೌಡಯ್ಯಪೀಠಗಳು ಸಂಪೂರ್ಣ ಜಲಾವೃತಗೊಂಡಿವೆ.ಮಂತ್ರಾಲಯದ ಧೀರೇಂದ್ರ ತೀರ್ಥರು ಹಾಗೂ ಸುಶೀಲೇಂದ್ರ ತೀರ್ಥರ ಮೂಲ ವೃಂದಾವನವಿರುವ ಹೊಸರಿತ್ತಿ ರಾಯರಮಠ ವರದಾ ನದಿ ತೀರದಲ್ಲಿದ್ದು, ಸುಮಾರು 227 ವರ್ಷಗಳ ಐತಿಹಾಸ ಹೊಂದಿದೆ. ಮಂತ್ರಾಲಯ ರಾಘವೇಂದ್ರ ಮಠದ ಈಗಿನ ಪೀಠಾಧಿಪತಿಗಳಾದ ಸುಭುದೇಂದ್ರತೀರ್ಥರು ಹೊಸರಿತ್ತಿ ಮಠದಲ್ಲೇ ಇದ್ದರು ಎಂಬುದು ಇಲ್ಲಿ ಸ್ಮರಣೀಯ.

ಮಠ ಸಂಪೂರ್ಣ ಜಲಾವೃತಗೊಂಡಿದ್ದರಿಂದ ರಾಯರ ವಾರ ಎನಿಸಿದ ಗುರುವಾರ ಭಕ್ತರು ಪೂಜೆ ಸಲ್ಲಿಸಲಾಗದೆ ಮರಳಿದರು. ನೆರೆ ಹಿನ್ನೆಲೆಯಲ್ಲಿ ಗರ್ಭಗುಡಿ ಬಾಗಿಲು ಬಂದ್‌ ಮಾಡಲಾಗಿದೆ. 1991ರಲ್ಲಿ ಇದೇ ರೀತಿ ಪ್ರವಾಹ ಬಂದಿತ್ತು. 27 ವರ್ಷಗಳ ಬಳಿಕ ಈ ಸಲ ಮಠ ಜಲಾವೃತಗೊಂಡಿದ್ದು, ನದಿ ನೀರು ಇಳಿದ ಮೇಲೆ ಪೂಜೆ ನೆರವೇರಿಸಲಾಗುವುದು ಎಂದು ಮಠದ ಗೋಪಾಲಾಚಾರ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಳುಗಿದ ಐಕ್ಯ ಮಂಟಪ: ತಾಲೂಕಿನ ಚೌಡಯ್ಯದಾನಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಸಹ ತುಂಗಭದ್ರಾ ನದಿ ಪ್ರವಾಹದಲ್ಲಿ ಮುಳುಗಿದೆ. ಈ ಮಂಟಪ ನದಿಯಲ್ಲಿಯೇ ಇದ್ದು ತುಂಗಭದ್ರಾ ನದಿ ತುಂಬಿದಾಗಲೊಮ್ಮೆ ಮಂಟಪ ಮುಳುವುದು ಸಾಮಾನ್ಯವಾಗಿದೆ.

ತುಂಗಭದ್ರಾ ಮತ್ತು ವರದಾ ನದಿ ಸಂಗಮ ಪ್ರದೇಶದಲ್ಲಿರುವ ಗಳಗನಾಥ ದೇವಸ್ಥಾನದ ಬಳಿ ಸಹ ದೊಡ್ಡ ಪ್ರಮಾಣದ ನೀರು ಬಂದಿದ್ದು, ದೇವಸ್ಥಾನದಲ್ಲಿ ನೀರು ಸೋರುತ್ತಿದೆ. ಇದರಿಂದ ಒಳಗೆ ಪ್ರವೇಶಿಸಲು ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next