Advertisement

ಮುಂದುವರಿದ ಮಳೆ ಆರ್ಭಟ: ಬೆಳಗಾವಿಯಲ್ಲಿ 25ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

03:21 PM Aug 17, 2020 | keerthan |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಮತ್ತು ನದಿಗಳ ಅರ್ಭಟ ಮುಂದುವರಿದಿದ್ದು, ಇದರಿಂದ ಜಿಲ್ಲೆಯ ಹತ್ತಕ್ಕೂ ಹೆಚ್ಚು ತಾಲೂಕುಗಳಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ 25 ಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

Advertisement

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದರಿಂದ ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ 1.40 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.

ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಮತ್ತೆ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿಯ ಒಳಹರಿವಿನ ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿದ್ದು ಮಲಪ್ರಭಾ ಜಲಾಶಯಕ್ಕೆ ಈಗ 37383 ಕ್ಯೂಸೆಕ್ಸ್ ನೀರು ಬರುತ್ತಿದ್ದು, ಜಲಾಶಯದಿಂದ 26894 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ರಾಮದುರ್ಗ ತಾಲೂಕಿನಲ್ಲಿ ಆರಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಿದ್ದರೆ ಸುಮಾರು ಆರು ಗ್ರಾಮಗಳು ಪ್ರವಾಹದ ಆತಂಕಕ್ಕೆ ತುತ್ತಾಗಿವೆ.

ಇನ್ನು ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹಿಡಕಲ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿದೆ. ಜಲಾಶಯಕ್ಕೆ 38588 ಕ್ಯೂಸೆಕ್ಸ್ ನೀರು ಬರುತ್ತಿದ್ದು ಇಷ್ಟೇ ಪ್ರಮಾಣದಲ್ಲಿ ನೀರನ್ನು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಲೋಳಸುರ ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಕೃಷ್ಣ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಶಹಾಪುರದ ಕೊಳ್ಳೂರು ಸೇತುವೆ ಜಲಾವೃತ

Advertisement

ಬೆಳಗಾವಿ, ವಿಜಯಪುರ, ಸೊಲ್ಹಾಪುರ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಜಲಾವೃತಗೊಂಡು ಪ್ರಯಾಣಿಕರು‌ ಪರದಾಡುವಂತವಾಗಿದೆ.

ಘಟಪ್ರಭಾ ನದಿ ಪ್ರವಾಹದಿಂದ ಗೋಕಾಕ ನಗರದ ಹಾಲಬಾಗ ಗಲ್ಲಿ, ಕುಂಬಾರ ಗಲ್ಲಿ , ಮಂಟನ್ ಮಾರ್ಕೆಟ್, ಬೋಜಗಾರ ಗಲ್ಲಿಗಳಲ್ಲಿ‌ ನೀರು‌ ನುಗ್ಗಿದೆ.

ಪ್ರವಾಹ ಪೀಡಿತ ನಿರಾಶ್ರಿತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕಾಡಳಿತ ಸೂಚನೆ ನೀಡಿದ್ದು ಲೋಳಸುರ ಸೇತುವೆ ಬಳಿ ಪೊಲೀಸ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next