Advertisement

ಹಬ್ಬದ ದೀಪಕ್ಕೆ ನೀರೆರಚುವ ಮಳೆರಾಯ

06:45 AM Oct 15, 2017 | Harsha Rao |

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಸುರಿದು ಇನ್ನಿಲ್ಲದ ಅನಾಹುತ ಸೃಷ್ಟಿಸುತ್ತಿರುವ ಮಳೆಗೆ ಸದ್ಯಕ್ಕೆ ಬ್ರೇಕ್‌ ಬೀಳುವ ಲಕ್ಷಣಗಳಿಲ್ಲ. ನಿರಂತರವಾಗಿ ಬೀಳುತ್ತಿರುವ ಮಳೆ ಈ ಬಾರಿಯ ದೀಪಾವಳಿಯನ್ನೂ ಕಾಡುವ ಸಾಧ್ಯತೆ ದಟ್ಟವಾಗಿದೆ.

Advertisement

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದಲ್ಲಿ ಶನಿವಾರ ಕೂಡ ಮಳೆ ಅಬ್ಬರಿಸಿದ್ದು, ಭಾನುವಾರವೂ ದಕ್ಷಿಣ ಒಳನಾಡಿನಲ್ಲಿ ಗುಡುಗುಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಮುಂಗಾರು ಮಾರುತಗಳ ನಿರ್ಗಮನದ ಸಂದರ್ಭದಲ್ಲಿ ಹವಾಮಾನದಲ್ಲಿ ಈ ರೀತಿಯ ಬದಲಾವಣೆಗಳು ಸಹಜ. ಇದರಿಂದಾಗಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ. ಇದು ಇನ್ನೂ ನಾಲ್ಕೈದು ದಿನಗಳು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಡಗು, ತುಮಕೂರು, ರಾಮನಗರ, ಮೈಸೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗುಸಹಿತ ಭಾರಿ ಮಳೆಯ ನಿರೀಕ್ಷೆ ಇದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಈ ಮಧ್ಯೆ ಶನಿವಾರ ಬೆಳಗ್ಗೆ 8.30ಕ್ಕೆ ಕೊಪ್ಪಳದ ಯಲಬುರ್ಗದಲ್ಲಿ ಅತ್ಯಧಿಕ 80 ಮಿ.ಮೀ. ಹಾಗೂ ಬಾಳೇಹೊನ್ನೂರು ಮತ್ತು ಚಿತ್ರದುರ್ಗದಲ್ಲಿ 70 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಉತ್ತರ ಕನ್ನಡದ ಕಿರವತ್ತಿ, ಬಳ್ಳಾರಿಯ ಹಗರಿಬೊಮ್ಮನಹಳ್ಳಿ, ದಾವಣಗೆರೆಯಲ್ಲಿ 60 ಮಿ.ಮೀ., ಬೆಳಗಾವಿಯ ಚಿಕ್ಕೋಡಿ, ಕೋಲಾರದ ರಾಯಲಪಾಡು, ಬೆಂಗಳೂರಿನ ನೆಲಮಂಗಲ, ಬಳ್ಳಾರಿಯ ಕುಡತಿನಿ ಮತ್ತು ಕುರುಗೋಡಿನಲ್ಲಿ 50, ರಾಯಚೂರು, ಧರ್ಮಸ್ಥಳ, ಅಂಕೋಲ, ಶಿವಮೊಗ್ಗ, ಕೊಟ್ಟಿಗೇಹಾರ, ಅರಕಲಗೂಡು, ಬೆಂಗಳೂರು ನಗರದಲ್ಲಿ 30 ಮಿ.ಮೀ. ಮಳೆಯಾಗಿದೆ. ಧಾರವಾಡ, ಗದಗ, ಬಾಗಲಕೋಟೆ, ಹಿರಿಯೂರು, ಗೌರಿಬಿದನೂರಿನಲ್ಲಿ 10 ಮಿ.ಮೀ. ಮಳೆಯಾಗಿದೆ.

ಮಳೆಗೆ ಎರಡು ಬಲಿ
ಬೆಂಗಳೂರು: ರಾಜ್ಯದಲ್ಲಿ ಮಳೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಬೀದರ್‌ ಜಿಲ್ಲೆ ಬಸವಕಲ್ಯಾಣದ ಬಸವಕಲ್ಯಾಣ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಕಟ್ಟಡದ ಮೇಲೆ ನಿಂತಿದ್ದ ಮಳೆ ನೀರನ್ನು ಖಾಲಿ ಮಾಡಲು ಹೋದ ಕೌಡಿಯಾಳ ಗ್ರಾಮದ ಅವಿನಾಶ ತಿಪ್ಪಣ್ಣ ಹಿರೋಳ್ಳೆ (23) ಎಂಬುವರು ವಿದ್ಯುತ್‌ ಪ್ರವಹಿಸಿ ಅಸುನೀಗಿದ್ದಾರೆ. ದಾವಣಗೆರೆಯ ಪಿಬಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನೀರು ತುಂಬಿದ ಗುಂಡಿಗೆ ಬಿದ್ದು 6 ವರ್ಷದ ಬಾಲಕಿ ಮಧು ಎಂಬಾಕೆ ಅಸುನೀಗಿದ್ದಾಳೆ.

Advertisement

ಅನಾಹುತ ಸರಮಾಲೆ: ಈ ವರ್ಷ ಸುರಿದ ಮಳೆಗೆ ಶನಿ ವಾರ ತನಕ 135 ಮಂದಿ ಸಾವನ್ನಪ್ಪಿದ್ದಾರೆ. 2009ರಲ್ಲಿ ಇಡೀ ವರ್ಷ ಮಳೆ ದುರಂತಕ್ಕೆ 132 ಮಂದಿ ಬಲಿಯಾಗಿದ್ದರು. ಎಂಟು ವರ್ಷಗಳಲ್ಲಿ ಇದು ಗರಿಷ್ಠ ಪ್ರಮಾಣದ ಸಾವುನೋವನ್ನು ತಂದ ಮಳೆಯಾಗಿದೆ.

ಸಾವು
ಮೈಸೂರು 14
ಕಲಬುರ್ಗಿ 13
ವಿಜಯಪುರ 10

ಜಾನುವಾರು ಸಾವು
ಬಳ್ಳಾರಿ 636
ಬೆಂಗಳೂರು ಗ್ರಾಮಾಂತರ 301
ಗದಗ 45

ಮನೆ ಕುಸಿತ
ದಾವಣಗೆರೆ 1197
ರಾಯಚೂರು 1183
ಗದಗ 1015
(ಮಾರ್ಚ್‌ನಿಂದ ಅ.13ರವ ರೆಗೆ)

Advertisement

Udayavani is now on Telegram. Click here to join our channel and stay updated with the latest news.

Next