Advertisement

ಕೇರಳದಲ್ಲಿ ಮಳೆ ಅಬ್ಬರ

02:23 PM May 16, 2022 | Team Udayavani |

ತಿರುವನಂತಪುರಂ: ಕೇರಳದ ಹಲವು ಜಿಲ್ಲೆಗಳಲ್ಲಿ ಭಾನುವಾರದಂದು ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಶನಿವಾರ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಈ ಮಳೆ ಇನ್ನೂ ಐದು ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಭಾನುವಾರ ಕೇರಳಕ್ಕೆ ಎಚ್ಚರಿಸಿದೆ. ಐದು ಜಿಲ್ಲೆಗಳಿಗೆ ಸೋಮವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

“ಅರೇಬಿಯನ್‌ ಸಮುದ್ರದಿಂದ ದಕ್ಷಿಣ ಭಾರತದ ಕರಾವಳಿ ಭಾಗದ ಕಡೆಗೆ ಬಲವಾದ ಮಾರುತಗಳು ಬೀಸುತ್ತಿದ್ದು, ಕರ್ನಾಟಕದ ಕರಾವಳಿ ಭಾಗ, ಕೇರಳ, ತಮಿಳುನಾಡು ಮತ್ತು ಮಹೆ ಪ್ರದೇಶಗಳಲ್ಲಿ ಮೇ 16ರವರೆಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ’ ಎಂದು ಭಾನುವಾರ ಐಎಂಡಿ ಎಚ್ಚರಿಸಿದೆ. ಈ ಪ್ರದೇಶಗಳಲ್ಲಿ 64 ಮಿ.ಮೀ.ನಿಂದ 204.4ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದೇ ಹಿನ್ನೆಲೆ ಎರ್ನಾಕುಲಂ, ಇಡುಕ್ಕಿ, ತ್ರಿಸೂರು, ಕೋಚಿಕೋಡ್‌ ಮತ್ತು ಕಣ್ಣೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಈ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವರಾಗಿರುವ ಕೆ.ರಂಜನ್‌ ತಿಳಿಸಿದ್ದಾರೆ. “ಗುಡ್ಡಗಾಡು ಪ್ರದೇಶಗಳಿರುವ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿರುವುದರಿಂದಾಗಿ ಅಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಿಶೇಷ ನಿರ್ದೇಶನ ನೀಡಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಆಪತ್ತು ವಿಶ್ಲೇಷಕರಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್‌ ಅವರು ಶನಿವಾರವೇ ಸಭೆ ನಡೆಸಿದ್ದು, ವಿಪತ್ತು ನಿರ್ವಹಣಾ ಸಿದ್ಧತೆಗಳನ್ನು ತೀವ್ರಗೊಳಿಸಲು ಸೂಚಿಸಿದ್ದರು. ಎಲ್ಲ ನಗರಗಳಲ್ಲಿ ಕಂಟ್ರೋಲ್‌ ರೂಂಗಳನ್ನು ಆರಂಭಿಸಲಾಗಿದ್ದು, ಅವಶ್ಯಕತೆ ಯಿದ್ದರೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ತಿಳಿಸಲಾಗಿದೆ. ಜಲಾವೃತ ಪ್ರದೇಶಗಳಿಂದ ನೀರನ್ನು ತೆಗೆಯಲೆಂದು ಪಂಪಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕೇರಳದ 5 ಜಿಲ್ಲೆಗಳಿಗೆ ಭಾನುವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು.

ಕೊಚ್ಚಿಯಲ್ಲಿ ಅವಾಂತರ: ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ನಗರದ ಬಹುತೇಕ ಭಾಗಗಳು ಜಲಾವೃತವಾಗಿದ್ದವು. ನಗರದ ಸರ್ಕಾರಿ ಬಸ್‌ ನಿಲ್ದಾಣವೂ ಸಂಪೂರ್ಣ ಜಲಾವೃತವಾಗಿದ್ದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಇನ್ನೊಂದತ್ತ ಎರ್ನಾಕುಲಂ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಜನಜೀವನಕ್ಕೆ ಅಡ್ಡಿಯಾಗಿದೆ. ಹಲವು ಮನೆಗಳು ಜಲಾವೃತವಾದ ಹಿನ್ನೆಲೆ, 2 ಗಂಜಿ ಕೇಂದ್ರಗಳನ್ನು ತೆರೆದು 9 ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.

Advertisement

ಶೇ.43 ಹೆಚ್ಚುವರಿ ಮಳೆ: ಭಾರತದ ದಕ್ಷಿಣ ಭಾಗದಲ್ಲಿ ಮಾ.1ರಿಂದ ಮೇ 14ರವರೆಗೆ 109 ಮಿ.ಮೀ. ಮಳೆಯಾಗಿದೆ. ಇದು ಅಂದಾಜು ಮಳೆಗಿಂತ ಶೇ.43 ಹೆಚ್ಚಿದೆ. ಈ ಅವಧಿಯಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮೊದಲೇ ಅಂದಾಜಿಸಿದ್ದ ಪೂರ್ವ ಮುಂಗಾರು ಮಳೆ ಪ್ರಮಾಣದಲ್ಲಿ ಈಗಾಗಲೇ ಕರ್ನಾಟಕವು ಶೇ.82 ಮಳೆ ಕಂಡಿದೆ. ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಶೇ.79, ಕೇರಳದಲ್ಲಿ ಶೇ.73, ಪುದುಚೆರಿಯಲ್ಲಿ ಶೇ.59, ಲಕ್ಷದ್ವೀಪದಲ್ಲಿ ಶೇ.39 ಮತ್ತು ತಮಿಳುನಾಡಿನಲ್ಲಿ ಶೇ.21 ಪೂರ್ವ ಮುಂಗಾರಿನ ಮಳೆಯಾಗಿದೆ.  ಅಂಡಮಾನ್‌ ನಿಕೋಬಾರ್‌ಗೆ ಮುಂಗಾರು ಎಂಟ್ರಿ.

ಪ್ರತಿ ವರ್ಷಕ್ಕಿಂತ ಈ ವರ್ಷ ಬಹುಬೇಗನೆ ಆಗಮಿಸಿರುವ ಮುಂಗಾರು ಭಾನುವಾರವೇ ಅಂಡಮಾನ್‌ ನಿಕೋಬಾರ್‌ ದ್ವೀಪ ಮತ್ತು ಆಗ್ನೇಯ ಬಂಗಾಳ ಕೊಲ್ಲಿಗೆ ಕಾಲಿಟ್ಟಿದೆ. ದಿನಕಳೆದಂತೆ ಮುಂಗಾರು ಬಿರುಸಾಗಲಿದ್ದು, ಈ ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಕಾಲ 64.55ಮಿ.ಮೀ.ನಿಂದ 115.4ಮಿ.ಮೀ. ಮಳೆಯಾಗಲಿದೆ ಎಂದು ಐಎಂಡಿ ಭಾನುವಾರ ಎಚ್ಚರಿಸಿದೆ.  ಅಸ್ಸಾಂನಲ್ಲಿ ಭೂಕುಸಿತ,

ರೈಲು ಸೇವೆ ಸ್ಥಗಿತ

ಅಸ್ಸಾಂನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ದಿಮಾ ಹಸಾವೋ ಜಿಲ್ಲೆಯಲ್ಲಿ ಭಾನುವಾರ ಉಂಟಾದ ಭೂಕುಸಿತದಿಂದಾಗಿ ಬರಾಕ್‌ ಕಣಿವೆ ಪ್ರದೇಶ ರೈಲು ಮತ್ತು ವಾಹನ ಸಂಚಾರ ಸ್ಥಗಿತ ಗೊಂಡಿತ್ತು. 76ಕಿ.ಮೀ ರೈಲು ಹಳಿಗೆ 26 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದರಿಂದಾಗಿ 17 ರೈಲುಗಳ ಸಂಚಾರ ನಿಷೇಧಿಸಲಾಗಿತ್ತು. ಅದಾಗಲೇ ಹಳಿಗಿಳಿದಿದ್ದ ಎರಡು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದ್ದು, ಅದರಲ್ಲಿದ್ದ 2,645 ಜನರನ್ನು ಬೇರೆ ಬಸ್ಸು, ಹೆಲಿಕಾಪ್ಟರ್‌ಗಳನ್ನು ಬಳಸಿ ಸ್ಥಳಾಂತರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next