Advertisement

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

05:53 PM Sep 29, 2024 | Team Udayavani |

ಇಂದು ಜೀವನವು ಬಿಗುವಾಗುತ್ತಾ ಹೋದಂತೆ ಮಾನವನು ನೋಟಿನ ಹಿಂದೆ ಓಡುತ್ತಿದ್ದಾನೆ. ತಾನು, ತನ್ನ ಪರಿವಾರ ಎಂದು ಸಾಗುವ ದೋಣಿಯಲ್ಲಿ ನಾವಿಕನಾಗಿ ದೋಣಿಗೆ ಹುಟ್ಟು ಹಾಕುತ್ತಾ ಮುಂದೆ ಸಾಗುವಲ್ಲಿ ನಿರತನಾಗುತ್ತಾನೆ. ದೋಣಿಯು ತೂತಾಗಿದೆಯೋ ಇಲ್ಲವೋ ಎಂದು ಪತ್ತೆ ಹಚ್ಚುವಲ್ಲಿ ವಿಫಲನಾಗುತ್ತಿದ್ದಾನೆ. ಅಕಸ್ಮಾತ್ ಪತ್ತೆ ಮಾಡಿದರೂ ಅಷ್ಟು ಹೊತ್ತಿಗೆ ಆತ ದಡದಿಂದ ಬಹಳಷ್ಟು ದೂರ ಸಾಗಿ ಸಮುದ್ರದ ಮಧ್ಯಕ್ಕೆ ಬಂದಾಗಿರುತ್ತದೆ. ದಡ ಎಲ್ಲಿದೆ ಎಂದು ಹುಡುಕುವ ಸಮಯಕ್ಕೆ ಆಯಸ್ಸೇ ಮುಗಿದು ತನ್ನ ದೋಣಿಗೆ ಮತ್ತೊರ್ವರು ಹುಟ್ಟು ಹಾಕುತ್ತಿರುತ್ತಾರೆ. ಅದೃಷ್ವಂತರು ಮಾತ್ರ ತನ್ನ ದೋಣಿಯಲ್ಲಿ ನಾವಿಕನಾಗಿ ಮುಂದುವರೆಯುತ್ತಾರೆ.

Advertisement

ಮನುಷ್ಯನು ಅನುಸರಿಸುವ ಜೀವನ ಶೈಲಿ ಆತನ ಆಯಸ್ಸನ್ನು ನಿರ್ಧರಿಸುತ್ತದೆ. ಬದಲಾದ ಜೀವನ ಶೈಲಿಗೆ ತಕ್ಕಂತೆ ದೇಹವು ಬದಲಾಗುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಂತೆ ಆತನ ಆಯಸ್ಸಿನ ಸಂಖ್ಯೆಯು ಕಡಿಮೆಯಾಗುತ್ತಾ ಬಂದಿದೆ.  ಆಹಾರ ಪದ್ದತಿ, ದೈನಂದಿನ ದಿನಚರಿ, ಕೆಲಸ ಕಾರ್ಯ ಎಲ್ಲವೂ ಬದಲಾಗಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತವೆಂಬ ದೊಡ್ಡ ವಿಷಯವು ಜನರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಹಿಂದೆ ಜನರಾಗಲೀ, ರೈತರಾಗಲೀ ಶ್ರಮವಹಿಸಿ, ಬೆವರು ಸುರಿಸಿ ದುಡಿದು ದಣಿದು ಹೊಟ್ಟೆ ತುಂಬಾ ಅಂಬಲಿಯೋ, ರಾಗಿ ಮುದ್ದೆಯನ್ನೋ ತಿಂದು ನೂರಾರು ವರ್ಷ ಬದುಕುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ಕಂಡು ಕೇಳರಿಯದ ರೋಗಗಳೆಲ್ಲಾ ರಾಜ್ಯಭಾರ ಮಾಡುತ್ತಿದೆ. ಅದರಲ್ಲೂ ಹೃದಯಾಘಾತ ಎಂಬುದು ಹುಟ್ಟಿದ ಮಗುವಿನಿಂದ ಹಿಡಿದು ಇಳಿವಯಸ್ಸಿನ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿದೆ. ಹೃದಯಾಘಾತವು ಹೃದಯ ಸ್ತಂಭನಕ್ಕೂ ಕಾರಣವಾಗಬಹುದು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau (NCRB)) ರವರು ನಡೆಸಿದ ಅಧ್ಯಯನದಲ್ಲಿ 2022 ರಲ್ಲಿ ಭಾರತದಲ್ಲಿ ಒಟ್ಟು 32,457ರಷ್ಟು ಜನರು ಹೃದಯಾಘಾತಕ್ಕೆ ತುತ್ತಾಗಿ ಮರಣ ಹೊಂದಿದ್ದಾರೆ. ಈ ಲೆಕ್ಕವು 2021ಕ್ಕೆ ಹೋಲಿಸಿದರೆ ಶೇ.12.5 ರಷ್ಟು ಹೆಚ್ಚಾಗಿದ್ದು, ಸುಮಾರು 28,413ರಷ್ಟು ಜನರು ಮರಣ ಹೊಂದಿದ್ದರು.

Advertisement

ಹೃದಯಾಘಾತ (Heart attack) ಕ್ಕೆ ಕಾರಣಗಳು ಹಲವಾರು ಅವುಗಳಲ್ಲಿ ಮುಖ್ಯವಾದುದು ಅತಂತ್ರಗೊಂಡ ಜೀವನ ಶೈಲಿ. ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ತೂಕ, ದೇಹಕ್ಕೆ ದೈಹಿಕ ಶ್ರಮ, ವ್ಯಾಯಾಮದ ಕೊರತೆ, ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿನ ಅಸಹಜ ಒತ್ತಡ, ಧೂಮಪಾನ ಮತ್ತು ಮದ್ಯಪಾನದಂತಹ ದುರಭ್ಯಾಸಗಳು, ಅಧಿಕ ಕೊಬ್ಬಿನಾಂಶ ಸೇರಿದ ಆಹಾರಗಳ ಸೇವನೆ ಮುಂತಾದ ಕಾರಣಗಳು ಸಮತೋತಲನವಾದ ಜೀವನವನ್ನು ದಿಕ್ಕೆಡಿಸಬಹುದು.

ದೇಹದಲ್ಲಿನ ಪ್ರತಿ ಬದಲಾವಣೆಗೂ ಅಥವಾ ಪ್ರತಿ ರೋಗಕ್ಕೆ ತುತ್ತಾಗುವುದಕ್ಕೂ ಮುನ್ನ ದೇಹವು ಆ ವ್ಯಕ್ತಿಗೆ ಮುನ್ಸೂಚನೆಯನ್ನು ನೀಡುತ್ತದೆಯಂತೆ. ಹಾಗೆಯೇ ಹೃದಯಾಘಾತಕ್ಕೂ ಮುನ್ನ ಮಾನವನ ದೇಹವು ಆ ವ್ಯಕ್ತಿಗೆ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ಅಂತಹ ಸೂಚನೆಗಳನ್ನು ಆರಂಭಿಕ ಸೂಚನೆಗಳು ಅಥವಾ ಮುನ್ನೆಚ್ಚರಿಕಾ ಸೂಚನೆಗಳು ಎಂದು ಕರೆಯಬಹುದು. ಇಂತಹ ಸೂಚನೆಗಳನ್ನು ಗುರುತಿಸುವುದರಿಂದ ನಮ್ಮ ಅಥವಾ ನಮ್ಮವರ ಜೀವವನ್ನು ಉಳಿಸಬಹುದು. ಹಾಗಾದರೆ ಹೃದಯಾಘಾತಕ್ಕೂ ಮುನ್ನ ನಮ್ಮ ದೇಹವು ನೀಡುವ ಆರಂಭಿಕ ಸೂಚನೆಗಳ ಕುರಿತು ತಿಳಿಯಲು ಇಲ್ಲಿ ಓದಿ.

ಸಾಮಾನ್ಯವಾಗಿ ಹೃದಯಾಘಾತವಾಗುವ ಮುನ್ನ ಎದೆಯು ಬಿಗಿದಂತೆ, ಒತ್ತಡ ಹೇರಿದಂತೆ ಹಾಗೂ ಅಸಹಜ ನೋವು ಕೆಲವು ನಿಮಿಷಗಳವರೆಗೆ ಕಾಣಿಸಿಕೊಳ್ಳಬಹುದು. ಅದು ತೀವ್ರ ಅಥವಾ ನಿರಂತರವಾಗಿರಬಹುದು.

ಹಠಾತ್‌ ನಿಶ್ಯಕ್ತಿ ಉಂಟಾಗಬಹುದು ಹಾಗೂ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದ ಯಾವುದಾದರು ಚಟುವಟಿಕೆಯು ಬಹಳ ಕಷ್ಟವೆನಿಸಬಹುದು. ವಿಶೇಷವಾಗಿ ಮಹಿಳೆಯರಲ್ಲಿ ಹೃದಯಾಘಾತದ ಸಂದರ್ಭದಲ್ಲಿ ಇಂತಹ ಸೂಚನೆಗಳು ಕಾಣಿಸಿಕೊಳ್ಳುತ್ತದೆ.

ಹೃದಯಾಘಾತದ ಸಂದರ್ಭದಲ್ಲಿ ಎದೆಯ ಭಾಗದಲ್ಲಿ ನೋವು ಪ್ರಾರಂಭವಾಗುತ್ತದೆ. ಮತ್ತು ಅದು ಎಡದ ಕೈಗೆ ಹರಡುತ್ತದೆ. ಕೆಲವೊಮ್ಮೆ ನೋವು ತೋಳಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

ತಂಪು ವಾತಾವರಣದಲ್ಲಿಯೂ ಬೆವರುವಿಕೆ (Cold sweats), ಕಣ್ಣುಕತ್ತಲೆ(dizziness) ಬರುವಂತೆ ಆಗುವುದು ಅಥವಾ ದೇಹದಲ್ಲಿ ಅಸ್ವಸ್ಥತೆ ಭಾವನೆ, ವಿಶೇಷವಾಗಿ ಎದೆಯಲ್ಲಿ ಉಸಿರಾಟದ ತೊಂದರೆಯಾಗುವಂತಹ ಸಮಸ್ಯೆಗಳು ಕಂಡುಬರುತ್ತದೆ.

ಈ ಎಲ್ಲಾ ಲಕ್ಷಣಗಳು ಸಾಮಾನ್ಯ ಲಕ್ಷಣಗಳಾಗಿದ್ದು ನೀವಾಗಿಯೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅಥವಾ ಕಡೆಗಣಿಸುವ ಮೊದಲು ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಕೆಲವೊಮ್ಮೆ ಕಡೆಗಣಿಸಿದ ವಿಷಯವೇ ದೊಡ್ಡದಾಗಿ ನಮ್ಮನ್ನು ಕಾಡುತ್ತದೆ. ಇಂತಹ ರೋಗಗಳು ಬರದಂತೆ ತಡೆಯಲು ಆರೋಗ್ಯಕರ ಜೀವನವನ್ನು ಅವಲಂಬಿಸಬೇಕು.

ಬಿಡುವಿಲ್ಲದಂತೆ ಕೆಲಸ, ದೈಹಿಕವಾಗಿ ಮಾನಸಿಕವಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಆರೋಗ್ಯಕರ ಜೀವನವು ಜೀವವನ್ನು ಬಿಗಿಯಾಗಿ ಹಿಡಿದು ಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ನಮ್ಮ ಹೃದಯದ ಆರೋಗ್ಯ ನಮ್ಮ ಕಾಳಜಿಯಾಗಿರಬೇಕು. ಜೀವನ ಒಂದೇ, ಜೀವವೂ ಒಂದೇ. ಬದುಕಿದ್ದಷ್ಟು ದಿನ ಜೀವನ ನಮ್ಮ ಕೈಯಲ್ಲಿ… ಹಿಡಿಯುವುದೋ ಕೆಳಕ್ಕೆ ತಳ್ಳುವುದೋ ನಿರ್ಧರಿಸಬೇಕಾದ್ದು ನಾವುಗಳೇ…

ಪೂರ್ಣಶ್ರೀ.ಕೆ

Advertisement

Udayavani is now on Telegram. Click here to join our channel and stay updated with the latest news.

Next