Advertisement

ಆಟೋ ರಿಕ್ಷಾ ನಿಲ್ದಾಣದಲ್ಲಿ ಆರೋಗ್ಯ ಪಾಠ !

11:34 PM Sep 20, 2019 | Team Udayavani |

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ದೊಡ್ಡಣಗುಡ್ಡೆ ಮಣ್ಣೋಳಿಗುಜ್ಜಿ ಆಟೋರಿಕ್ಷಾ ನಿಲ್ದಾಣವು ಸಾರ್ವಜನಿಕರಿಗೆ ಆರೋಗ್ಯ ಪಾಠ, ಹಕ್ಕಿಗಳ ಕಲರವದಿಂದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುತ್ತಿದೆ.

Advertisement

“ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬ ಶೀರ್ಷಿಕೆಯ, 42 ಅಡಿ ಉದ್ದದ ಫ‌ಲಕವು 100ಕ್ಕೂ ಅಧಿಕ ಹಣ್ಣು ಹಂಪಲು, ತರಕಾರಿಗಳ ಕುರಿತಾದ ಚಿತ್ರ ಸಹಿತ ಮಾಹಿತಿ ನೀಡುತ್ತಿದೆ. ಇದನ್ನು ತಿಳಿದುಕೊಳ್ಳಲೆಂದು ಅನೇಕ ಮಂದಿ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಮೊದಲು ಮನೆ ಮದ್ದು ಕುರಿತಾದ ಮಾಹಿತಿಯ ಬೃಹತ್‌ ಫ‌ಲಕ. ಇದೀಗ ತರಕಾರಿ, ಹಣ್ಣುಹಂಪಲುಗಳ ಸಮಗ್ರ ಮಾಹಿತಿ ನೀಡಲಾಗುತ್ತಿದೆ.

ಹಕ್ಕಿಗಳ ಆಕರ್ಷಣೆ
ಹಕ್ಕಿಗಳ ಮೇಲಿನ ಪ್ರೀತಿ ಇಲ್ಲಿನ ಆಟೋ ಚಾಲಕರ ಇನ್ನೊಂದು ವಿಶೇಷ. ಹಿಂದೆ ಇಲ್ಲಿ ಸಣ್ಣ ಗೂಡಿತ್ತು. ಅದರಲ್ಲಿ 10 ಲವ್‌ ಬರ್ಡ್ಸ್‌ಗಳಿದ್ದವು. ಅನಂತರ 7 ಉಳಿದವು. ಅವುಗಳು ಮೊಟ್ಟೆ ಇಟ್ಟು ಒಟ್ಟು ಹಕ್ಕಿಗಳ ಸಂಖ್ಯೆ 21ಕ್ಕೇರಿತು. ಈಗ ದೊಡ್ಡ ಗೂಡು ನಿರ್ಮಿಸಲಾಗಿದೆ. ಇದು ಈಗ ಮಕ್ಕಳು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ. ಇಲ್ಲಿನ ರಸ್ತೆಗಳಲ್ಲಿ ವಾಕಿಂಗ್‌ ಬರುವವರು, ಪ್ರಯಾಣಿಕರು ಕೂಡ ನಿಲ್ದಾಣದ ಬೆಂಚ್‌ನಲ್ಲಿ ವಿಶ್ರಾಂತಿ ಪಡೆದು ಆರೋಗ್ಯ ಕುರಿತಾದ ಫ‌ಲಕದತ್ತ ದೃಷ್ಟಿ ಹಾಯಿಸುತ್ತಾರೆ, ಹಕ್ಕಿಗಳೊಂದಿಗೆ ಸಮಯ ಕಳೆಯುತ್ತಾರೆ.

ಸಮಾಜಕ್ಕಾಗಿ…
ಇಲ್ಲಿನ ಚಾಲಕರು ಶಾಲೆಗಳಿಗೆ ನಿರಂತರವಾಗಿ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ. ಕರಂಬಳ್ಳಿ ಸರಕಾರಿ ಪ್ರಾಥಮಿಕ ಶಾಲೆ, ದೊಡ್ಡಣಗುಡ್ಡೆ, ಗುಂಡಿಬೈಲು ಶಾಲೆಗಳಿಗೆ ರೈನ್‌ಕೋಟ್‌, ಕಪಾಟು, ಬ್ಯಾಗ್‌ ಇತ್ಯಾದಿ ಪರಿಕರಗಳನ್ನು ನೀಡುತ್ತಿದ್ದಾರೆ. ಪಕ್ಕದ ಕರಂಬಳ್ಳಿ ಸರಕಾರಿ ಶಾಲೆಯವರು ಬೇಡಿಕೆ ಇಡುವ ಪರಿಕರಗಳನ್ನು ಒದಗಿಸುತ್ತಿದ್ದಾರೆ. ನಿಲ್ದಾಣದೊಳಗೆ ಸೋಲಾರ್‌ ಬೆಳಕು ಅಳವಡಿಸಲಾಗಿದೆ.

ಬಡ ವಿದ್ಯಾರ್ಥಿನಿಗೆ
ಪದವಿ ಶಿಕ್ಷಣ
ರಥಬೀದಿಯ ರಿಕ್ಷಾ ನಿಲ್ದಾಣದ ಚಾಲಕನೋರ್ವರು ಅಪಘಾತದಿಂದ ಗಾಯಗೊಂಡು ದುಡಿಯಲಾಗದ ಸ್ಥಿತಿಯಲ್ಲಿದ್ದಾಗ ಅವರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ದೊಡ್ಡಣಗುಡ್ಡೆ ಆಸ್ಪತ್ರೆ ಸಮೀಪದಲ್ಲಿ ತಾಯಿ ಮತ್ತು ಮಗಳು ಮಾತ್ರ ವಾಸವಿದ್ದು ಆರ್ಥಿಕವಾಗಿ ತೀರಾ ಸಮಸ್ಯೆಯಲ್ಲಿದ್ದರು. ಮಗಳ ವಿದ್ಯಾಭ್ಯಾಸಕ್ಕಾಗಿ 5 ವರ್ಷ ಇಲ್ಲಿನ ಚಾಲಕರು ಆರ್ಥಿಕ ಸಹಾಯ ಮಾಡಿದ್ದರು. ಆಕೆ ಈಗ ಪದವಿ ಮುಗಿಸಿದ್ದಾಳೆ. ಕರಂಬಳ್ಳಿ ರಾಮ್‌ ಬೆಟ್ಟುವಿನಲ್ಲಿ ಅಂಗವಿಕಲ ತಾಯಿ ಮಗಳ ಕುಟುಂಬಕ್ಕೆ ವೀಲ್‌ಚೇರ್‌, ಇನ್ನು ಕೆಲವು ಕುಟುಂಬಗಳಿಗೆ ಅಕ್ಕಿ ಇತ್ಯಾದಿ ಸೇವಾ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ.

Advertisement

ಪ್ರತಿ ತಿಂಗಳು 200 ರೂ. ಪ್ರತ್ಯೇಕ ಖಾತೆಯಲ್ಲಿ ಜಮೆ
ಸಾಮಾಜಿಕ ಸೇವಾ ಕಾರ್ಯವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆ, ಹಕ್ಕಿಗಳ ಸಾಕಣೆ, ನಿಲ್ದಾಣದ ಒಟ್ಟಾರೆ ನಿರ್ವಹಣೆಗಾಗಿ ಚಾಲಕರು ತಮ್ಮ ದುಡಿಮೆಯಲ್ಲಿ ಪ್ರತೀ ತಿಂಗಳು 200 ರೂ.ಗಳನ್ನು ಪ್ರತ್ಯೇಕ ಖಾತೆಯಲ್ಲಿ ಜಮೆ ಮಾಡುತ್ತಾರೆ. ಇದಕ್ಕೆ ಕೆಲವು ದಾನಿಗಳೂ ಕೈ ಜೋಡಿಸುತ್ತಾರೆ. ಈ ಆಟೋ ನಿಲ್ದಾಣಕ್ಕೆ ರಥಬೀದಿಯ ಗಣೇಶೋತ್ಸವ ಸಮಿತಿಯಿಂದ ಉತ್ತಮ ಆಟೋ ನಿಲ್ದಾಣ ಎಂಬ ಬಹುಮಾನವೂ ದೊರೆತಿದೆ. ಆಟೋ ರಿಕ್ಷಾ ನಿಲ್ದಾಣದಿಂದ ಕೇವಲ ಆಟೋ ಬಾಡಿಗೆ ಮಾತ್ರ ದೊರೆಯದೆ ಸಾರ್ವಜನಿಕರಿಗೆ ಇತರ ಉಪಯೋಗಗಳು ದೊರೆಯಬೇಕು ಎಂಬುದು ನಮ್ಮ ಇಚ್ಛೆ. ನಮ್ಮ ನಿಲ್ದಾಣವನ್ನು ಕೂಡ ಜನ ನೋಡಬೇಕು. ಇಲ್ಲಿಗೆ ಆಗಮಿಸಬೇಕು ಎಂಬ ಉದ್ದೇಶದಿಂದ ಆರೋಗ್ಯ ಮಾಹಿತಿ, ಹಕ್ಕಿಗೂಡು ಇತ್ಯಾದಿಗಳನ್ನು ಕೂಡ ಮಾಡಿದ್ದೇವೆ
– ಉದಯ್‌, ಮಣೋಳಿಗುಜ್ಜಿ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next