Advertisement

ಯಶಸ್ವಿನಿಯಿಂದ “ಆರೋಗ್ಯ ಕರ್ನಾಟಕ’ಕ್ಕೆ ಹಿನ್ನಡೆ?

08:16 PM Apr 09, 2022 | Team Udayavani |

ದಾವಣಗೆರೆ: ರಾಜ್ಯ ಸರಕಾರವು ಯಶಸ್ವಿನಿ ಯೋಜನೆ ಮರು ಜಾರಿಗೆ ತೀರ್ಮಾನಿಸಿರುವುದರಿಂದ ಆಯುಷ್ಮಾನ್‌ ಭಾರತ್‌ ಯೋಜನೆಯೊಂದಿಗೆ ಆರೋಗ್ಯ-ಕರ್ನಾಟಕ ಯೋಜನೆ ಅಸ್ತಿತ್ವ ಕಳೆದುಕೊಳ್ಳುತ್ತಾ ಎನ್ನುವ ಪ್ರಶ್ನೆ ಮೂಡಿದೆ.

Advertisement

ಆರೋಗ್ಯ ರಕ್ಷಣೆಯಲ್ಲಿ ರೈತರಿಗೆ, ಬಡವರಿಗೆ ಹೆಚ್ಚು ಸುಲಭ ಹಾಗೂ ಆಪ್ತವಾಗಿದ್ದ ಯಶಸ್ವಿನಿ ಯೋಜನೆ ಮರುಜಾರಿಯಾದರೆ, ರಾಜ್ಯ ಸರಕಾರದ ಆರೋಗ್ಯ- ಕರ್ನಾಟಕ ಯೋಜನೆ ಪಾತ್ರವೇನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ.

ರಾಜ್ಯದ ಜನರಿಗೆ ಆರೋಗ್ಯ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಹಿಂದಿನ ರಾಜ್ಯ ಸರಕಾರ, ವಂತಿಕೆ ಕಟ್ಟಬೇಕಾಗಿದ್ದ ಯಶಸ್ವಿನಿ ಯೋಜನೆಯನ್ನು ಕೈಬಿಟ್ಟು 2018ರ ಮಾರ್ಚ್‌ನಲ್ಲಿ ಹೊಸದಾಗಿ ಆರೋಗ್ಯ-ಕರ್ನಾಟಕ ಯೋಜನೆ ಜಾರಿಗೆ ತಂದಿತ್ತು. ಬಳಿಕ ಇದೇ ಆರ್ಥಿಕ ವರ್ಷದಲ್ಲಿ ಅಂದರೆ ಸೆಪ್ಟೆಂಬರ್‌ 23ರಂದು ಕೇಂದ್ರ ಸರಕಾರ ಆಯುಷ್ಕಾನ್‌-ಭಾರತ್‌ ಯೋಜನೆಗೆ ಚಾಲನೆ ನೀಡಿತು. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ರಾಜ್ಯ ಸರಕಾರ ಈ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಎಂಬ ಯೋಜನೆ ಅನುಷ್ಠಾನಗೊಳಿಸಿತ್ತು.

ಹೆಸರಿಗಷ್ಟೇ ಉಳಿಯುವ ಸಾಧ್ಯತೆ
ಆರೋಗ್ಯ-ಕರ್ನಾಟಕ ಯೋಜನೆಯ ಫಲ ಪಡೆಯಲು ಜನ ಯಾವುದೇ ವಂತಿಕೆ ಕಟ್ಟಬೇಕಾಗಿಲ್ಲ. ಸರಕಾರಿ ವೈದ್ಯರ ಶಿಫಾರಸು ಪತ್ರ ಪಡೆದು ಎಲ್ಲ ಬಿಪಿಎಲ್‌ನವರೂ ಗರಿಷ್ಠ ಐದು ಲಕ್ಷ ರೂ.ವರೆಗಿನ ಚಿಕಿತ್ಸಾ ಸೌಲಭ್ಯ ಪಡೆಯಬಹುದು.

ಎಪಿಎಲ್‌ನವರು ಶೇ. 30ರಷ್ಟು ರಿಯಾಯಿತಿ ಪಡೆಯಬಹುದು. ಆದರೆ, ಈ ಸೌಲಭ್ಯವನ್ನು ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಯೋಜನೆ ನೀಡುವುದರಿಂದ ಸೇರ್ಪಡೆಗೊಂಡಿರುವ ಆರೋಗ್ಯ-ಕರ್ನಾಟಕ ಹೆಸರಿಗಷ್ಟೇ ಉಳಿಯುವ ಸಾಧ್ಯತೆ ಇದೆ. ಯಶಸ್ವಿನಿ ಜಾರಿಯಲ್ಲಿದ್ದಾಗ 39.64ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next