Advertisement

ಹಣಕ್ಕಿಂತ ಆರೋಗ್ಯ ಭಾಗ್ಯವೇ ಮುಖ್ಯ: ರಾಮಪ್ಪ

05:50 PM Apr 20, 2022 | Team Udayavani |

ಹರಿಹರ: ಯಾರೆ ಆಗಲಿ ಹಣ ಸಂಪಾದನೆಯನ್ನೇ ಗುರಿಯಾಗಿರಿಸಿಕೊಂಡರೆ ಮಾನಸಿಕ ಒತ್ತಡಕ್ಕೊಳಗಾಗಿ ಅನಾರೋಗ್ಯಕ್ಕೆ ತುತ್ತಾಗುವುದು ಗ್ಯಾರಂಟಿ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಮಂಗಳವಾರ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಹಣ ಎಲ್ಲಾ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದನ್ನು ಕೊರೊನಾ ವೈರಸ್‌ ತೋರಿಸಿ ಕೊಟ್ಟಿದೆ. ಆದಾಗ್ಯೂ ಜನರು ಹಣದ ಹಿಂದೆ ಬಿದ್ದು ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಒತ್ತಡ ಮತ್ತು ಯಾಂತ್ರೀಕೃತ ಜೀವನ ಶೈಲಿಯ ಪರಿಣಾಮ ನಾವು ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಹಣಕ್ಕಿಂತ ಆರೋಗ್ಯ ಮುಖ್ಯ ಎನ್ನುವುದನ್ನು ಅರಿತು ಪ್ರತಿನಿತ್ಯ ವಾಯು ವಿಹಾರ, ಮನಸ್ಸಿಗೆ ಉಲ್ಲಾಸ ನೀಡುವ ಚಟುವಟಿಕೆ, ಪೌಷ್ಟಿಕಾಂಶಯುಕ್ತ ಹಿತಮಿತ ಆಹಾರ ಸೇವನೆಯಂತಹ ಜೀವನಶೈಲಿ ರೂಢಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ಜಿಪಂ ಸಿಇಒ ಡಾ| ಎ.  ಚನ್ನಪ್ಪ ಮಾತನಾಡಿ, ನಾಲಿಗೆ ರುಚಿ ನೋಡಿ ನಾವು ಆಹಾರ ಸೇವಿಸುವ ಬದಲು ದೇಹದ ಅಗತ್ಯತೆ ಆಧರಿಸಿ ಸೇವಿಸಬೇಕು. ವೈಯಕ್ತಿಕ ಸ್ವತ್ಛತೆ ಸೇರಿದಂತೆ ಸುತ್ತಮತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷé ಮಾಡದೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಡಿಎಚ್‌ಒ ಡಾ| ಎಲ್‌. ನಾಗರಾಜ್‌ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರತಿ ತಾಲೂಕಿನಲ್ಲೂ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಜೊತೆಗೆ ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿದೆ.

Advertisement

ಜಿಲ್ಲೆಯಲ್ಲಿ ಶೇ. 105ರಷ್ಟು ಪ್ರಥಮ ಡೋಸ್‌, ಶೇ. 96ರಷ್ಟು ಎರಡನೇ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ. ಅಲ್ಲದೆ ಬೂಸ್ಟರ್‌ ಡೋಸ್‌ ಹಾಕುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

306 ರೋಗಿಗಳ ಅಸಾಂಕ್ರಾಮಿಕ ರೋಗ ತಪಾಸಣೆ, 260 ಜನರು ನೇತ್ರ ಪರೀಕ್ಷೆ ಸೇರಿದಂತೆ ಮೇಳದಲ್ಲಿ ಒಟ್ಟು 1910 ರೋಗಿಗಳು ತಪಾಸಣೆಗೊಳಗಾದರು. 63 ರೋಗಿಗಳಿಗೆ ಕಣ್ಣಿನ ಪೊರೆಯ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. 102 ಜನರಿಗೆ ಉಚಿತವಾಗಿ ಕನ್ನಡಕ ಹಾಗೂ 125 ಎಬಿಎಆರ್‌ಕೆ ಮತ್ತು 80 ಆರೋಗ್ಯ ಕಾರ್ಡ್‌ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಶಾಹಿನಾ ಭಾನು ದಾದಾಪೀರ್‌ ಬಾನುವಳ್ಳಿ, ಉಪಾಧ್ಯಕ್ಷ ಎ. ವಾಮನಮೂರ್ತಿ, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಡಾ| ಮೀನಾಕ್ಷಿ, ಡಾ|ಪಿ.ಡಿ. ಮುರಳೀಧರ, ಡಾ| ಜಿ.ಡಿ. ರಾಘವನ್‌, ಡಾ| ಎ.ಎಂ. ರೇಣುಕಾರಾಧ್ಯ, ಡಾ| ಕೆ. ನಟರಾಜ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಲ್‌. ಹನುಮ ನಾಯ್ಕ, ಡಾ| ವಿಶ್ವನಾಥ್‌ ಕುಂದಗೋಳಮಠ, ಸಿಬ್ಬಂದಿಗಳಾದ ಎಂ. ಉಮ್ಮಣ್ಣ, ಎಂ.ವಿ. ಹೊರಕೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next