Advertisement

Health: ಎಲ್ಲ ಜಿಲ್ಲಾಸ್ಪತ್ರೆಯಲ್ಲಿ ‘ಸಮುದಾಯ ಮಧುಮೇಹ ಕೇಂದ್ರ’ : ಸಚಿವ ದಿನೇಶ್‌

11:38 PM Aug 06, 2024 | Team Udayavani |

ಬೆಂಗಳೂರು: ಡಯಾಬಿಟಿಕ್‌ ಹಾಗೂ ಪ್ರಿ-ಡಯಾಬಿಟಿಕ್ಸ್‌ ಪತ್ತೆ ಹಚ್ಚುವ ನಿಟ್ಟಿನಲ್ಲಿ ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ “ಸಮುದಾಯ ಮಧುಮೇಹ ಕೇಂದ್ರ’ಗಳನ್ನು (ಸಿಡಿಸಿ) ಪ್ರಾರಂಭಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಸಚಿವ ದಿನೇಶ ಗುಂಡೂರಾವ್‌ ತಿಳಿಸಿದರು.

Advertisement

ರಾಜ್ಯ ಆರೋಗ್ಯ ಇಲಾಖೆ ಹಾಗೂ ನೊವೊ ನಾರ್ಡಿಸ್ಕ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ “ಚೇಜಿಂಗ್‌ ಡಯಾಬಿಟಿಸ್‌ ಬಾರೋಮೀಟರ್‌’ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದರು.

ಒಪ್ಪಂದದ ಭಾಗವಾಗಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಮುದಾಯ ಮಧುಮೇಹ ಕೇಂದ್ರಗಳು ಕಾರ್ಯಾಚರಿಸಲಿದೆ. ನೊವೊ ನಾರ್ಡಿಸ್ಕ್ ಸಂಸ್ಥೆಯು ಆಸ್ಪತ್ರೆಯ ಸಿಬ್ಬಂದಿಗಳಿಗೆ ವಿಶೇಷ ತರಬೇತಿಯನ್ನು ನೀಡಲಿದೆ. ಇಲಾಖೆಯ ಮುಖಾಂತರವೇ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಆ ಮೂಲಕ ಮಧುಮೇಹವನ್ನು ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಸಮುದಾಯ ಮಧುಮೇಹ ಕೇಂದ್ರದಲ್ಲಿ ಪ್ರತಿಯೊಬ್ಬರನ್ನು ಮಧುಮೇಹ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಪ್ರಿ-ಡಯಾಬಿಟಿಸ್‌ ಲಕ್ಷಣಗಳಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ, ಮಧುಮೇಹ ತಡೆಗೆ ಅಗತ್ಯವಿರುವ ಜೀವನ ಕ್ರಮವನ್ನು ಆಳವಡಿಸಿಕೊಳ್ಳಲು ಸಹಕಾರ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಆ ಮೂಲಕ ಮಧುಮೇಹವನ್ನು ಪ್ರಾರಂಭಿಕ ಹಂತದಲ್ಲಿ ನಿಯಂತ್ರಣ ಮಾಡಬಹುದಾಗಿದೆ. ಇನ್ನೂ ಡಯಾಬಿಟಿಸ್‌ನಿಂದ ಬಳಲುವವರಿಗೆ ಅಗತ್ಯವಿರುವ ಔಷಧ ನೀಡಲಾಗುತ್ತದೆ ಎಂದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ರಾಷ್ಟ್ರೀಯ ಆರೋಗ್ಯ ಮಿಷನ್‌ ನಿರ್ದೇಶಕ ಡಾ. ವೈ. ನವೀನ್‌ ಭಟ್‌, ನೊವೊ ನಾರ್ಡಿಸ್ಕ್ ಇಂಡಿಯಾದ ಆಡಳಿತ ನಿರ್ದೇಶಕ ವಿಕ್ರಾಂತ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

ಗೃಹ ಆರೋಗ್ಯ ಜಾರಿ!
ಗೃಹ ಆರೋಗ್ಯ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದೆ. ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆ.7ರಂದು ಸಂಜೆ ಸಭೆ ನಡೆಯಲಿದ್ದು, ಮುಂದಿನ 1 ತಿಂಗಳೊಳಗಾಗಿ ಗೃಹ ಆರೋಗ್ಯ ಯೋಜನೆ ರಾಜ್ಯಾದ್ಯಂತ ಜಾರಿಯಾಗಲಿದೆ. ಪ್ರತಿ ಮನೆಗೆ ಅಗತ್ಯವಿರುವ ಪ್ರಾಥಮಿಕ ಔಷಧಗಳನ್ನು ತಲುಪಿಸಲಾಗುತ್ತದೆ. ಇದೇ ವೇಳೆ ಡಯಾಬಿಟಿಸ್‌, ಕ್ಯಾನ್ಸರ್‌ ಸ್ಕ್ರೀನಿಂಗ್‌ ಸಹ ಮಾಡಲಾಗುತ್ತದೆ ಎಂದರು.

ಡೆಂಗ್ಯೂ  ಎಚ್ಚರ ಅಗತ್ಯ
ಮುಂದಿನ 3 ತಿಂಗಳು ಡೆಂಗ್ಯೂ ಕುರಿತು ಎಚ್ಚರಿಕೆಯಿಂದ ಇರಬೇಕು. ಪ್ರಸ್ತುತ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ.ಆದರೆ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಡೆಂಗ್ಯೂ  ಪ್ರಕರಣ ಇನ್ನಷ್ಟು ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿಡೆಂಗ್ಯೂ ಸೊಳ್ಳೆಗಳ ಲಾರ್ವಾ ನಾಶ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ನಿರಂತರವಾಗಿ ನಡೆಯಲಿದೆ. ಜನರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲುಗಡೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ರಾಜ್ಯಾದ್ಯಂತ ಸಾಂಕ್ರಾಮಿಕ ರೋಗಗಳ ತಡೆ, ಲಸಿಕಾಕರಣ ಕಾರ್ಯಕ್ರಮಗಳು ಯಶಸ್ವಿಯಾಗಿಸಲು ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹೆಲ್ತ್‌ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಇತರೆ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆರೋಗ್ಯ ಇಲಾಖೆಗೆ ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next