Advertisement

ಚಿಕಿತ್ಸೆಗೆ ಆರೋಗ್ಯ ಕಾರ್ಡ್‌ ಕಡ್ಡಾಯವಲ್ಲ

03:13 PM May 09, 2019 | Team Udayavani |

ಕೋಲಾರ: ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಆರೋಗ್ಯ ಕಾರ್ಡ್‌ ಕಡ್ಡಾಯವಲ್ಲ. ರೋಗಿಗಳು ತಮ್ಮ ಬಳಿ ಇರುವ ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್‌ ತೋರಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್‌ ತಿಳಿಸಿದರು.

Advertisement

ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಇದಾಗಿದೆ. ಬಿಪಿಎಲ್ ಕಾರ್ಡ್‌ ಹೊಂದಿದ ಬಡವರಿಗೆ ವಾರ್ಷಿಕ 5 ಲಕ್ಷ ರೂವವರಿಗೆ ಉಚಿತವಾಗಿ ಹಾಗೂ ಎಪಿಎಲ್ ಕಾರ್ಡ್‌ ಹೊಂದಿದವರಿಗೆ ಶೇ.30ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಿ ಸುವರ್ಣ ಆರೋಗ್ಯ ಟ್ರಸ್ಟ್‌ ವತಿಯಿಂದ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಕಾರ್ಡ್‌ಗೆ 10 ರೂ.ಶುಲ್ಕ: ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಆರ್‌.ಎಲ್.ಜಾಲಪ್ಪ ವೈದ್ಯಕೀಯ ಸಂಸ್ಥೆ, ನ್ಯೂ ಕೋಲಾರ್‌ ನರ್ಸಿಂಗ್‌ ಹೋಂ, ಮಾಲೂರಿನ ಸಂಜನಾ ಆಸ್ಪತ್ರೆ ಹಾಗೂ ಮುಳಬಾಗಿಲಿನ ಪೂರ್ಣಿಮಾ ಆಸ್ಪತ್ರೆಗಳು ಈ ಯೋಜನೆಯಡಿ ನೋಂದಾಯಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ ಹೊಂದಿದ್ದರೆ ಯೋಜನೆಯ ಸೇವೆಗಳನ್ನು ಸುಲಲಿತವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಈ ಕಾರ್ಡ್‌ಗಳನ್ನು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 10 ರೂ.ಶುಲ್ಕದೊಂದಿಗೆ ಬಿಳಿಯ ಹಾಳೆಯ ಮೇಲೆ ಮಾಹಿತಿ ಮುದ್ರಿಸಿ ನೀಡಲಾಗುತ್ತದೆ ಎಂದು ತಿಳಿಸಿದರು.

ಬೇಸಿಗೆಯಲ್ಲಿ ಆರೋಗ್ಯದ ಎಚ್ಚರವಿರಲಿ: ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ನೀಡಿದ ಸೇವೆಗಳಿಗಾಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಿಗೆ 28,17,200 ರೂ.ಗಳನ್ನು ಸುವರ್ಣ ಆರೋಗ್ಯ ಟ್ರಸ್ಟ್‌ ವತಿಯಿಂದ ಪಾವತಿಸಲಾಗಿದೆ. ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಅವಶ್ಯಕ ಸಲಕರಣೆಗಳನ್ನು ಖರೀದಿಸಲು ಬಳಸಿಕೊಳ್ಳಲಾಗುವುದು. ಬೇಸಿಗೆ ಬಿಸಿಲಿನಲ್ಲಿ ತೀವ್ರತರ ಏರಿಕೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸೂರ್ಯಾಘಾತ ಮತ್ತು ಉಷ್ಣಾಘಾತ ಆಗುವ ಸಾಧ್ಯತೆಗಳಿವೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅದರಂತೆ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಿಲ್ಲಿ ನಿರ್ಲಕ್ಷ್ಯ ವಹಿಸದೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವಿವರಿಸಿದರು.

140 ಕೇಂದ್ರಕ್ಕೆ ಅನುಮತಿ: ಸೇವಾಸಿಂಧು ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ವಿಶಾಲಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ಮಾನ್‌ ಭಾರತ್‌-ಕರ್ನಾಟಕ ಯೋಜನೆಯ ಸೇವೆಗಳನ್ನು ಒದಗಿಸಲು ಒಟ್ಟು 140 ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 46 ಕೇಂದ್ರಗಳಲ್ಲಿ ಈಗಾಗಲೇ ವಿತರಣೆ ಮಾಡಲಾಗುತ್ತಿದೆ ಎಂದರು.

Advertisement

ಹೆಚ್ಚಿನ ಮೊತ್ತ ಪಡೆದರೆ ದೂರು ನೀಡಿ: ಸರ್ಕಾರವು ಕಾಗದದ ಕಾರ್ಡ್‌ಗೆ 10 ರೂ. ಹಾಗೂ ಪಿ.ವಿ.ಸಿ ಕಾರ್ಡ್‌ ಗಳಿಗೆ 35 ರೂ.ನಿಗದಿಪಡಿಸಿದೆ.

ಇದಕ್ಕಿಂತ ಹೆಚ್ಚಿನ ಹಣವನ್ನು ಯಾರೂ ಪಡೆಯುವಂತಿಲ್ಲ. ಅದರ ಜೊತೆಗೆ ಅವರಿಗೆ ಅನುಮತಿ ನೀಡಿರುವ ಕೇಂದ್ರದಲ್ಲೇ ಈ ಕಾರ್ಡ್‌ಗಳ ವಿತರಣೆ ಮಾಡಬೇಕು.

ಇದಕ್ಕೆ ಒಂದಷ್ಟು ಮುಂಜಾಗ್ರತೆಯ ಕ್ರಮಗಳನ್ನೂ ಸಹ ವಹಿಸಲಾಗಿದೆ. ಇದನ್ನೂ ಮೀರಿ ಯಾರಾದರೂ ಹೆಚ್ಚಿನ ಮೊತ್ತ ಪಡೆದುಕೊಂಡರೆ ಕೂಡಲೇ 080-44554455 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ, ಡಾ.ಮುರುಗೇಶ್‌, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಪ್ರಸನ್ನ ಉಪಸ್ಥಿತರಿದ್ದರು.

ಸೇವಾ ಸಿಂಧು ಕೇಂದ್ರದಲ್ಲೂ ಕಾರ್ಡ್‌ ವಿತರಣೆ

ಆರೋಗ್ಯ ಕಾರ್ಡ್‌ಗಳ ವಿತರಣೆಗೆ ಸೇವಾಸಿಂಧು ಕೇಂದ್ರಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮುಳಬಾಗಿಲು ಮತ್ತು ಬಂಗಾರಪೇಟೆ ತಾಲೂಕುಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದುಕೊಳ್ಳುತ್ತಿರುವ ಕುರಿತು ದೂರುಗಳ ಬಂದಿದ್ದು, ಈ ಕೇಂದ್ರಗಳನ್ನು ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಏ.23ರ ಅಂತ್ಯಕ್ಕೆ 1,53,253 ನಾಗರಿಕರು ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ ಪಡೆದಿರುತ್ತಾರೆ. ಈ ಪೈಕಿ ಕೋಲಾರ ತಾಲೂಕು 1,06,209, ಶ್ರೀನಿವಾಸಪುರ- 11,860, ಮುಳಬಾಗಿಲು- 6,541, ಬಂಗಾರಪೇಟೆ- 14,153, ಕೆಜಿಎಫ್‌- 9,337, ಮಾಲೂರು – 5153 ಮಂದಿ ಈ ಕಾರ್ಡ್‌ಗಳನ್ನು ಪಡೆದುಕೊಂಡಿರುತ್ತಾರೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next