Advertisement

ಮೇಷ್ಟ್ರ ಕೃಪೆಯಿಂದ ಅವನು ಬಚಾವಾದ, ನನಗೆ ಶಿಕ್ಷೆಯಾಯ್ತು!

03:45 AM Mar 07, 2017 | Team Udayavani |

ವೃಥಾ ಶಿಕ್ಷೆಗೆ ಒಳಪಡಿಸಿದ್ದಕ್ಕೆ ಆ ಶಿಕ್ಷಕರ ವಿರುದ್ಧ ಕೋಪಿಸಿಕೊಂಡು ಖಂಡಿಸುವ ಪ್ರಚೋದನೆಗೊಳಪಡಬೇಕೋ ಅಥವಾ ಅವರೇ ಮುಂದೆ ಮಾಡಿದ ಕಾರಣದಂತೆ ಪ್ರಾಯದಲ್ಲಿ(ದೈಹಿಕವಾಗಿ ಅಲ್ಲ) ಚಿಕ್ಕವನಾದ ಹುಡುಗನ ಜೊತೆಗೆ ಕೈ ಮಿಲಾಯಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ಎಂಬ ಗೊಂದಲಕ್ಕೆ ಬಿದ್ದೆ. ಕೊನೆಗೆ ಎರಡನೆಯದ್ದೇ ಸೂಕ್ತವೆನಿಸಿತು. 

Advertisement

ನನ್ನ ಪ್ರಾಥಮಿಕ ಶಿಕ್ಷಣದ ದಿನಗಳವು. ಆಗೆಲ್ಲಾ ಶಾಲೆಗೆ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದೆವು. ಶಾಲೆಗೆ ತಲುಪುವ ಆ ಮೂರು ನಾಲ್ಕು ಮೈಲುಗಳ ಹಾದಿಯನ್ನು ನಿತ್ಯ ಕ್ರಮಿಸುವುದೆಂದರೆ ನಮಗೊಂಥರ ಖುಷಿಯ ಸಂಗತಿ. ತೋಟ, ಗದ್ದೆಯ ಬದು, ಸಂಕ, ಕೆರೆಯ ಏರಿ, ಕಾಡಿನ ನಡುವಿನ ನಿರ್ಜನ ಹಾದಿ… 

ಇವುಗಳನ್ನೆಲ್ಲಾ ಬಳಸಿಕೊಂಡು ಸಂಚರಿಸುವುದೆಂದರೆ ಪ್ರಕೃತಿಯ ಮಡಿಲಿನಲ್ಲಿ ಸ್ವತ್ಛಂದವಾಗಿ ವಿಹರಿಸಿದಂತೆ. ಅಕ್ಕಪಕ್ಕದ ಮಕ್ಕಳೆಲ್ಲಾ ಗುಂಪಾಗಿ ದಿನಾಲೂ ಒಟ್ಟಿಗೇ ಹೋಗುವುದು ರೂಢಿ. ಆಗೆಲ್ಲಾ ಶಾಲೆ ಹಾಗೂ ಊಟ ಎರಡೂ ಪರಸ್ಪರ ವಿರುದ್ಧ ಧ್ರುವಗಳಂತೆ. ಒಮ್ಮೊಮ್ಮೆ ಮನೆಯವರು ಶಾಲೆಯೇನು ಊಟಕ್ಕೆ ಹಾಕುತ್ತದೆಯೇ? ಎಂದು ಗದರುತ್ತಿದ್ದರು. ಆದರೆ ಅದೂ ಮುಂದೊಂದು ದಿನ ಸಾಕಾರವಾಗಬಹುದೆಂಬ ಸಣ್ಣ ಊಹೆಯೂ ಅವರ ಮನಸ್ಸಿನಲ್ಲಿ ಇದ್ದಿರಲಿಕ್ಕಿಲ್ಲ. ನಮಗಾಗ ಬಿಸಿಯೂಟವೆಂದರೆ ಮಧ್ಯಾಹ್ನ ಮನೆಯಲ್ಲಿ ಸಿದ್ಧಪಡಿಸುವ, ಇನ್ನೂ ಪೂರ್ತಿಯಾಗಿ ಬೆಂದಿರದ ಗಂಜಿಯೋ, ಪಲ್ಯವೋ ಇಲ್ಲಾ ಚಟ್ನಿಯೋ ಆಗಿರುತ್ತಿತ್ತು. ಅದನ್ನೇ ಪಾತ್ರೆಯಿಂದ ತಟ್ಟೆಗೆ ಸುರುವಿ ಬಾಯಲ್ಲಿ ಗಾಳಿ ಊದಿ ತಣಿಸಿಕೊಂಡು ಗಬಗಬನೆ ತಿಂದು ಮತ್ತೆ ಮಧ್ಯಾಹ್ನದ ಅವಧಿಗೆ ಶಾಲೆಯತ್ತ ದೌಡಾಯಿಸುತ್ತಿದ್ದೆವು. 

ಆಗ ನಾನು ಐದನೇ ತರಗತಿಯಲ್ಲಿದ್ದೆ ಎಂದೆನಿಸುತ್ತದೆ. ಒಂದು ದಿನ ಮಧ್ಯಾಹ್ನದ ಊಟ ಮುಗಿಸಿಕೊಡು ಹೋಗುತ್ತಿರುವಾಗ ನನ್ನ ಪಕ್ಕದ ಮನೆಯ, ನನಗಿಂತ ಒಂದು ಕ್ಲಾಸ್‌ ಸಣ್ಣವನಾಗಿದ್ದ ಹುಡುಗನೊಬ್ಬ ನನ್ನ ಜೊತೆ ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕಿಳಿದ. ಆ ಹಾದಿಯಲ್ಲಿಯೇ ನಾವೆಲ್ಲರೂ ನಿತ್ಯ ಕುಣಿದು ಕುಪ್ಪಳಿಸುತ್ತಾ ಖುಷಿಯಿಂದ ಸಾಗುತ್ತಿದ್ದವರು. ಆದರೆ ಅಂದೇಕೋ ಆತ ಕ್ಷುಲ್ಲಕ ವಿಷಯಕ್ಕೆ ಅನವಶ್ಯಕವಾಗಿ ನನ್ನ ಮೇಲೆ ಎಗರಿಬಿದ್ದಿದ್ದ. ಉಳಿದವರು ಸ್ವಲ್ಪ ಸಮಾಧಾನಪಡಿಸಿ ನಮ್ಮನ್ನು ಹಿಂದೆ ಬಿಟ್ಟು ಮುನ್ನಡೆದರು. ನಾನು ತುಸು ತಾಳ್ಮೆಯಿಂದಲೇ ಅವನನ್ನು ಆದರಿಸಲೆತ್ನಿಸಿದೆ. 

ನಾನು ತುಸು ಸಣಕಲು ಹುಡುಗ, ಆತ ನನಗಿಂತ ಚಿಕ್ಕವನಾದರೂ ಗುಂಡು ಗುಂಡಾಗಿ ಗಟ್ಟಿಮುಟ್ಟಾಗಿದ್ದ. ನನಗಿಂತ ಚಿಕ್ಕವನೊಬ್ಬ ನನ್ನ ಮೇಲೆ ಹೀಗೆ ತಿರುಗಿಬಿದ್ದದ್ದು ಕೊನೆ ಕೊನೆಗೆ ನನ್ನ ಸ್ವಾಭಿಮಾನವನ್ನೂ ಕೆಣಕಲಾರಂಭಿಸಿತು. ನಾನೂ ಕೋಪದಲ್ಲಿ ತೋಳೇರಿಸಿದೆ. ಇಬ್ಬರೂ ಜಂಗೀ ಕುಸ್ತಿಗಿಳಿದೆವು. ಇನ್ನೇನು ತಾನು ಸೋಲುವುದು ಗ್ಯಾರಂಟಿ ಎಂದು ಅರಿವಾಗುತ್ತಿದ್ದಂತೆ ಆ ಹುಡುಗ ಕಣ್ಣಿನಲ್ಲಿ ನೀರು ತುಂಬಿಕೊಂಡು ಶಾಲೆಯತ್ತ ಕಾಲ್ಕಿತ್ತ. ನಾನೂ ಹಲ್ಲುಕಡಿಯುತ್ತಾ ಆತನನ್ನು ಹಿಂಬಾಲಿಸಿದೆ. 

Advertisement

ಆತ ಶಾಲೆ ತಲುಪಿದವನೇ ನೇರ ಮುಖ್ಯೋಪಾಧ್ಯಾಯರತ್ತ ಹೆಜ್ಜೆ ಹಾಕಿದ. ಆತ ದೂರು ಕೊಡುತ್ತಾನೆ ಎನ್ನುವುದು ನನಗೆ ನಿಕ್ಕಿಯಾಗಿತ್ತು. ನಾನೂ ಅತ್ತ ಧಾವಿಸಿದೆ. ಆ ಮುಖ್ಯೋಪಾಧ್ಯಾಯರು ನಮ್ಮಿಬ್ಬರಿಗೂ ನೆರೆಮನೆಯವರೇ ಆಗಿದ್ದರು. ಹಾಗಾಗಿ ಈ ಜಗಳದಲ್ಲಿ ನನ್ನದೇನೂ ತಪ್ಪಿಲ್ಲದ ಕಾರಣ ಸತ್ಯಾಂಶವನ್ನು ಅವರಿಗೆ ಮನದಟ್ಟು ಮಾಡಬಹುದೆಂಬ ವಿಶ್ವಾಸದಲ್ಲಿ ನಾನಿದ್ದೆ. ಆದರೆ ನಾನು ಅಲ್ಲಿಗೆ ತಲುಪುವುದರೊಳಗೆ ಆತ ಗೋಳ್ಳೋ ಎಂದು ಕಣ್ಣೀರು ಹಾಕುತ್ತಾ ಒಂದಕ್ಕೆ ನಾಲ್ಕು ಸೇರಿಸಿ ನನ್ನ ಮೇಲೆ ದೂರು ಕೊಟ್ಟಿದ್ದ. ಆ ಶಿಕ್ಷಕರು ನನಗೆ ಬಾಯಿತೆರೆಯಲೂ ಅವಕಾಶ ಕೊಡದೆ, ಆತ ಚಿಕ್ಕವನು ಎಂಬ ನೆಪವನ್ನು ಮುಂದೊಡ್ಡಿ ಒಮ್ಮಿಂದೊಮ್ಮೆಗೇ, ಎರಡೂ ಕೈ ಮೇಲಕ್ಕೆತ್ತಿಕೊಂಡು ಶಾಲೆಯ ಸುತ್ತ ಹತ್ತು ಸುತ್ತು ಓಡು ಎಂದು ತಾಕೀತು ಮಾಡಿಬಿಟ್ಟರು! 

ಎರಡೇಟು ಹಾಕಿದ್ದರೂ ಸಹಿಸಿಕೊಳ್ಳುತ್ತಿದ್ದೆ, ಆದರೆ ಕ್ಲಾಸಿನಲ್ಲಿ ಹುಷಾರಿನ, ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ನನಗೆ ಶಾಲೆಗೆ ಸುತ್ತು ಹೊಡೆಯುವ ಆ ಶಿಕ್ಷೆ ಘೋರ ಅವಮಾನದಂತೆ ಕಂಡಿತು. ಎಲ್ಲರೂ ನೋಡಿ ಕುಹಕವಾಡುತ್ತಾರೆಂಬ ನಾಚಿಕೆ. ದೊಡ್ಡ ಕ್ಲಾಸಿನಲ್ಲಿದ್ದ ಅಣ್ಣಂದಿರ ಕಣ್ಣಿಗೆ ಬಿದ್ದರೆ ಏನು ಕಥೆ? ಎಂಬ ಆತಂಕ ಇನ್ನೊಂದೆಡೆ. ಆದರೆ ಕೆಂಡದ ಉಂಡೆಯಂತಿದ್ದ ಅವರ ಕಣ್ಣುಗಳು ನನ್ನನ್ನು ಬಿಡದೆ ಶಾಲೆಯ ಸುತ್ತ ಅಟ್ಟಿಸಿಬಿಟ್ಟವು. 

ನನಗೇನೂ ಮಾತನಾಡಲು ಅವಕಾಶ ಕೊಡದೆ ಅವರೇಕೆ ಇಂಥ ಶಿಕ್ಷೆಗೆ ಗುರಿಪಡಿಸಿದರೆಂದು ಯೋಚಿಸಿದೆ. ಉತ್ತರವೂ ಸಿಕ್ಕಿತ್ತು. ಆತನ ತಾಯಿ- ತಂದೆ ಆ ಮೇಷ್ಟ್ರ ಮನೆಯಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಶಿಕ್ಷಕರಿಗೆ ಆತನ ಬಗ್ಗೆ ಅಗತ್ಯಕ್ಕಿಂತಲೂ ಹೆಚ್ಚೇ ಮೃದು ಧೋರಣೆ ಇತ್ತು. ಅನವಶ್ಯಕ ಕಿತ್ತಾಟಕ್ಕಿಳಿದಿದ್ದ ಆತ ಆ ಶಿಕ್ಷಕರ ಕೃಪಾಕಟಾಕ್ಷದಿಂದಾಗಿ ಗೆದ್ದೆನೆಂಬ ಹುರುಪಿನಲ್ಲಿ ತಣ್ಣಗೆ ಹೋಗಿ ತರಗತಿಯಲ್ಲಿ ಕುಳಿತ. ಏನೂ ತಪ್ಪಿಲ್ಲದೆಯೂ ಅಪಮಾನಕಾರಿ ಶಿಕ್ಷೆಗೆ ತುತ್ತಾಗಿ ಅಳುತ್ತಾ ಶಾಲೆಗೆ ಹತ್ತು ಸುತ್ತು ಬಂದಿದ್ದ ನಾನು ಅವರ ವೈಯಕ್ತಿಕ ಹಿತಾಸಕ್ತಿಯ ಲೆಕ್ಕಾಚಾರಕ್ಕೆ ಬಲಿಪಶುವಾಗಿದ್ದೆ! 

ಹೀಗೆ ವೃಥಾ ಶಿಕ್ಷೆಗೆ ಒಳಪಡಿಸಿದ್ದಕ್ಕೆ ಆ ಶಿಕ್ಷಕರ ವಿರುದ್ಧ ಕೋಪಿಸಿಕೊಂಡು ಖಂಡಿಸುವ ಪ್ರಚೋದನೆಗೊಳಪಡಬೇಕೊ ಅಥವಾ ಅವರೇ ಮುಂದೆ ಮಾಡಿದ ಕಾರಣದಂತೆ ಪ್ರಾಯದಲ್ಲಿ(ದೈಹಿಕವಾಗಿ ಅಲ್ಲ) ಚಿಕ್ಕವನಾದ ಹುಡುಗನ ಜೊತೆಗೆ ಕೈ ಮಿಲಾಯಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ಎಂಬ ಗೊಂದಲಕ್ಕೆ ಬಿದ್ದೆ. ಕೊನೆಗೆ ಎರಡನೆಯದ್ದೇ ಸೂಕ್ತವೆನಿಸಿತು. ಅದರಲ್ಲೂ ಒಂದು ಸಕಾರಾತ್ಮಕ ಪಾಠ ಕಲಿಯುವುದರೊಂದಿಗೆ ಮರೆತು ಮುನ್ನಡೆದೆ. ಅಸಲಿಗೆ ಅದೂ ಕೂಡಾ ಆ ಶಿಕ್ಷಕರೇ ನನಗೆ ಕಲಿಸಿದ ಶಿಕ್ಷಣದ ಬುನಾದಿಯ ಮೇಲೆ ರೂಪುಗೊಂಡಿದ್ದ ಗುಣವಿಶೇಷವೇ ಆಗಿತ್ತಲ್ಲವೇ? ಹಾಗಾಗಿ ಶಿಕ್ಷೆಗಿಂತಲೂ ಅವರು ಕೊಟ್ಟ ಶಿಕ್ಷಣವೇ ನನಗೆ ಮುಖ್ಯವೆನಿಸಿತು. 

– ಸಂದೇಶ್‌ ಎಚ್‌. ನಾಯ್ಕ, ಕುಂದಾಪುರ 

Advertisement

Udayavani is now on Telegram. Click here to join our channel and stay updated with the latest news.

Next