Advertisement

ಅನ್ನ,ಆಹಾರ, ಧರ್ಮದ ವಿಚಾರದಲ್ಲಿ ‘ಶಕಲಕ ಸರ್ಕಸ್ʼ ಮಾಡುವ ಬಿಜೆಪಿಗೆ ನೈತಿಕತೆ ಇದೆಯಾ? : HDK

08:14 PM Apr 02, 2022 | Team Udayavani |

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಅವರು ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.. ಟ್ವಿಟರ್ ಮೂಲಕ ರಾಜ್ಯ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

Advertisement

ಸ್ವಯಂಘೋಷಿತ ದೇಶಭಕ್ತ ಬಿಜೆಪಿ ಪಕ್ಷವೇ.. ಕುರ್ಚಿಗಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಯಾವ ಮುಖಂಡರ ಮನೆ ಬಾಗಿಲಿಗೂ ಬರಲಿಲ್ಲ. ಅಧಿಕಾರಕ್ಕಾಗಿ ಅವರ ಮನೆ ಬಾಗಿಲಿಗೇ ಬಂದರು ನಿಮ್ಮವರು! ನೆನಪಿರಲಿ. ಅಧಿಕಾರಕ್ಕಾಗಿ ಯಡಿಯೂರಪ್ಪನವರೇ ಬಿಜೆಪಿ ಬಿಡಲು ಸಿದ್ಧರಿದ್ದರು. ಮಂತ್ರಿಯಾದರೆ ಸಾಕಪ್ಪಾ ಎಂದು ಕುಮಾರಣ್ಣನ ಮನೆ ಕದತಟ್ಟಿದ್ದರು. ಆದರೆ, ತಾಯಿಯಂಥ ಪಕ್ಷ ಬಿಡಬೇಡಿ ಎಂದು ಸಲಹೆ ನೀಡಿದ್ದರು ಹೆಚ್ಡಿಕೆ. ಅವರಿಗೆ ಪಕ್ಷ ಬಿಡಿ ಎಂದಿದ್ದರೆ ಆವತ್ತೇ ಕರ್ನಾಟಕದಲ್ಲಿ ಬಿಜೆಪಿ ಸಮಾಧಿ ಆಗುತ್ತಿತ್ತು. ಬಿಜೆಪಿಯನ್ನು ಉಳಿಸಿದವರೇ ಕುಮಾರಸ್ವಾಮಿ ಎಂದು ಗುಡುಗಿದ್ದಾರೆ.

9 ದಿನ ಸಿಎಂ ಆಗಿದ್ದ ಯಡಿಯೂರಪ್ಪಗೆ ಬೆಂಬಲ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ಆಗ ನಿಮ್ಮ ಹೈಕಮಾಂಡ್, ʼಅಗ್ರಿಮೆಂಟ್ ಹೈ ಡ್ರಾಮಾʼ ಆಡಿ ಯಡಿಯೂರಪ್ಪ ಬೆನ್ನಿಗೆ ತಿವಿದದ್ದು ಗೊತ್ತಿಲ್ಲವಾ? ಕೊನೆಗೆ ಅಗ್ರಿಮೆಂಟನ್ನೇ ಹೈಜಾಕ್ ಮಾಡಿ ವಚನಭ್ರಷ್ಟರಾಗಿದ್ದು ನೀವು. ಅದನ್ನು ಕುಮಾರಸ್ವಾಮಿ ತಲೆಗೆ ಕಟ್ಟಿದಿರಿ. ಸತ್ಯ ಮರೆತರೆ ಹೇಗೆ ?

ಕೃತಜ್ಞತೆ ಎನ್ನುವುದು ನಿಮಗೆ ಆಗದ ಪದ. ಯಾರು ಶಕ್ತಿ ತುಂಬುತ್ತಾರೋ ಅವರ ಕತ್ತು ಕುಯ್ಯುವುದು ನಿಮ್ಮ ಜಾಯಮಾನ. 2006ರಲ್ಲಿ ಸರಕಾರ ರಚನೆಯಾದ ಎರಡೇ ತಿಂಗಳಿಗೆ ಕುಮಾರಸ್ವಾಮಿ ವಿರುದ್ಧ ಸಲ್ಲದ ಸುಳ್ಳು ಆರೋಪ ಮಾಡಿ ಬೆನ್ನಿಗಿರಿದದ್ದು ಯಾರು? ಬಿಜೆಪಿಯ ʼಬ್ರೂಟಸ್ ಪಾಲಿಟಿಕ್ಸ್ʼ ಅಲ್ಲವೇ ಅದು?

ಉಪ ಸಭಾಪತಿ ವಿಷಯಕ್ಕೆ ಬಂದರೆ, ಈ ಸ್ಥಾನಕ್ಕೂ ಕುಮಾರಣ್ಣಗೂ ಸಂಬಂಧವೇ ಇಲ್ಲ. ಆ ಪದವಿ ಆಕಾಂಕ್ಷಿ ಆಗಿದ್ದವರು ಮೂಲತಃ ಜನತಾ ಪರಿವಾರದವರು. ಅವರನ್ನು ಕಾಂಗ್ರೆಸ್ ನಂಬಿಸಿ, ವಂಚಿಸಿತ್ತು. ಅವರಿಗೆ ಜೆಡಿಎಸ್ ಪಕ್ಷ ಆಶ್ರಯ ಕೊಟ್ಟು ಶಕ್ತಿ ತುಂಬಿತು. ಇದರಲ್ಲಿ ಸರ್ಕಸ್ ಪ್ರಶ್ನೆ ಎಲ್ಲಿಂದ ಬಂತು?

Advertisement

ಇದನ್ನೂ ಓದಿ : ಕೋಮು ಸೌಹಾರ್ದತೆ ಮೆರೆದ ಯುಗಾದಿ : ಧರ್ಮ ಬೇಧ ಮರೆಸಿದ ಬೇವು-ಬೆಲ್ಲ ಕಷಾಯ

ಕನ್ನಡದ ನೆಲ-ಜಲ, ನಾಡು-ನುಡಿಗಾಗಿ ಕುಮಾರಸ್ವಾಮಿ ಸರ್ಕಸ್ ಮಾಡುತ್ತಾರೆ, ಸರಿ. ಆದರೆ; ಅನ್ನ-ಆಹಾರ, ಧರ್ಮದ ವಿಚಾರದಲ್ಲೂ ʼಶಕಲಕ ಸರ್ಕಸ್ʼ ಮಾಡುವ ಬಿಜೆಪಿಗೆ ನೈತಿಕತೆ ಎಂಬುದು ಇದೆಯಾ? ಮತಕ್ಕಾಗಿ, ಕುರ್ಚಿಗಾಗಿ ನಿಮ್ಮ ʼಸದಾರಮೆ ನಾಟಕʼ ಜಗಜ್ಜಾಹೀರು. ಕ್ಷಣಕ್ಕೊಂದು ಬಣ್ಣ ಬದಲಿಸುವ ಬಿಜೆಪಿ ಒಂದು ʼರಾಜಕೀಯ ಊಸರವಳ್ಳಿ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಜೀವನ ತೆರೆದ ಪುಸ್ತಕ. ಇದ್ದದ್ದನ್ನು ಕಡ್ಡಿತುಂಡು ಮಾಡಿದಂತೆ ಹೇಳುವ ಎದೆಗಾರಿಕೆ ಅವರಿಗಷ್ಟೇ ಇದೆ ಎಂಬುದು 6.5 ಕೋಟಿ ಜನರಿಗೆ ಗೊತ್ತು. ಅಧಿಕಾರಕ್ಕೆ ಅಂಟಿಕೊಂಡ ಕುಟುಂಬ ಅವರದ್ದಲ್ಲ. ಬೆಂಬಲ ಕೊಡುತ್ತೇವೆ ಎಂದು ವಾಜಪೇಯಿ ನೀಡಿದ ಆಫರನ್ನೇ ತಿರಸ್ಕರಿಸಿ, ಪ್ರಧಾನಿ ಪದವಿ ತೊರೆದ ನಾಯಕರು ದೇವೇಗೌಡರು ಎಂಬುದು ಗೊತ್ತಿಲ್ಲವೇ? ಕುಮಾರಸ್ವಾಮಿ ಅವರೇನೋ ಲಕ್ಕಿಡಿಪ್ ಸಿಎಮ್ಮು ಎಂಬುದೇನೋ ಸರಿ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಎಲ್ಲಿದ್ದಿರಿ ನೀವು? ಕುರ್ಚಿ ಹಿಡಿಯಲು ಈ ಲಕ್ಕಿಡಿಪ್ ಸಿಎಂ ಕಾಲೇ ಹಿಡಿಯಬೇಕಾಯಿತು. ಅದನ್ನು ಮರೆತರೆ ಹೇಗೆ? ಸತ್ಯಕ್ಕೆ ಸಮಾಧಿ ಕಟ್ಟುವುದು ಎಂದರೆ ಬಿಜೆಪಿಗೆ ಸುಲಭದ ಕೆಲಸ.

ಅಧಿಕಾರ ಬಂದಾಗ ಗೌಡರ ಕುಟುಂಬ ಬೊಕ್ಕಸ ಲೂಟಿ ಮಾಡಲಿಲ್ಲ. 2 ಅವಧಿಯಲ್ಲಿ ಬಿಜೆಪಿ ಸರಕಾರ ನಡೆಸಿದ ಭ್ರಷ್ಟಲೀಲೆಗಳು ಅನೇಕ? ಭ್ರಷ್ಟಸುಳಿಗೆ ಸಿಲುಕಿ ಸಿಎಂ ಜೈಲಿಗೆ ಹೋದ ಇತಿಹಾಸ ನಿಮ್ಮದು. ಸಾಲುಸಾಲು ಜೈಲುಪಕ್ಷಿಗಳು ನಿಮ್ಮವರೇ. ನಿಮ್ಮ ಶಾಸಕರೇ ಸಿಎಂ ವಿರುದ್ಧ ಭ್ರಷ್ಟ ಆರೋಪ ಮಾಡಿದಾಗ, ಅವರನ್ನು ಮನೆಗೆ ಕಳಿಸಿದ ʼಹೀನ ಚರಿತ್ರೆʼ ನಿಮ್ಮದು. ಈಗಷ್ಟೇ ರಾಜ್ಯದಾದ್ಯಂತ ಮಾರ್ದನಿಸುತ್ತಿರುವ 40% ಕಮೀಷನ್ ಕಥೆ ಏನು? ಪ್ರಧಾನಮಂತ್ರಿಗಳಿಗೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಬರೆದ ಪತ್ರ, ಬೆಳಗಾವಿ ಗುತ್ತಿಗೆದಾರರೊಬ್ಬರು ಬರೆದ ಪತ್ರ, ಸಚಿವರ ಮೇಲೆ ನೇರ ಪರ್ಸಂಟೇಜ್ ಆರೋಪ.. ಇದೆಲ್ಲ ಬಿಜೆಪಿಯ ಭ್ರಷ್ಟಕಾಂಡಗಳು. ಇದು ನಿಮ್ಮವರ ಜಾತಕ.

ಇದನ್ನೂ ಓದಿ : ಹಿಜಾಬ್ ವಿವಾದ; ಅಲ್ಲಾಹನನ್ನು ನಂಬಿ, ಮುಲ್ಲಾಗಳನ್ನಲ್ಲ: ಅನಿಲ್ ಮೆಣಸಿನಕಾಯಿ

2 ಸಲ ರಚಿಸಿದ ಸರಕಾರಕ್ಕೆ ಹಣ ಎಲ್ಲಿನದು? ಜನರತೆರಿಗೆ ಹಣವನ್ನು ಕೊಳ್ಳೆ ಹೊಡೆದದ್ದು ಅಲ್ಲವೇ? ಶಾಸಕರನ್ನು ಬಜಾರಿನಲ್ಲಿ ಬಿಕರಿ ವಸ್ತುಗಳಂತೆ ಖರೀದಿ ಮಾಡಿದ ಬಿಜೆಪಿಯ ʼಅಪರೇಷನ್ ಕಮಲʼ ನಿಮ್ಮ ಅನೈತಿಕತೆಯ ಪರಾಕಾಷ್ಠೆ. ದೆಹಲಿಯಲ್ಲಿ ಸಂಸತ್ ಭವನಕ್ಕೆ ನಮಸ್ಕಾರ, ಬೆಂಗಳೂರಿನಲ್ಲಿ ಶಾಸಕರ ವ್ಯಾಪಾರ!! ಇದಾ ಹಿಂದುತ್ವ? ಇದಾ ಪ್ರಜಾಪ್ರಭುತ್ವ? ಎಂದರು.

ಬಿಜೆಪಿ ಬಣ್ಣ ಬಿಚ್ಚಿಡುತ್ತಾ ಹೋದರೆ, ಮನುಕುಲದ ಈವರೆಗಿನ ಕ್ರೂರ-ಪೈಶಾಚಿಕ ಇತಿಹಾಸ ಮೀರಿಸುತ್ತದೆ. ಅಧಿಕಾರಕ್ಕಾಗಿ ನಡೆಸಿದ ʼನರಹಂತಕ ರಾಜಕಾರಣʼವು ಸಮಸ್ತ ಭಾರತೀಯರಿಗೆಲ್ಲ ಗೊತ್ತಿದೆ. ಮತಕ್ಕಾಗಿ ಡ್ರಾಮಾ ಯಾರದ್ದು ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ನಿತ್ಯವೂ ನಿಮ್ಮ ನಾಟಕಗಳ ಹೊಸ ಅಂಕಗಳು ಬಿಚ್ಚಿಕೊಳ್ಳುತ್ತಲೇ ಇವೆಯಲ್ಲ! ನಿಮ್ಮ ಬಾಲಂಗೋಚಿಗಳ ಗುತ್ತಿಗೆಯಲ್ಲ ಹಿಂದುತ್ವ. ಮುಗ್ಧ ಜನರಿಗೆ ಧರ್ಮದ ಹೆಸರಿನಲ್ಲಿ ವಿಷವುಣಿಸುತ್ತಿರುವ ನಿಮ್ಮದು ಹಿಂದುತ್ವವೇ? ಮಾನವ ವಿಕಾಸವನ್ನೇ ಮರೆತು ಮನುಜಕುಲಕ್ಕೇ ʼಮರಣಶಾಸನʼ ಬರೆಯುತ್ತಿರುವ ರಾಜಕಾರಣ ನಿಮ್ಮದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದರೆ ಇದೇನಾ? ಅದು, ಸಬ್ ಕಾ ವಿನಾಶ್ ಮತ್ತು ಸಬ್ ಕಾ ಸರ್ವ ನಾಶ್.

ಹಿಂದುತ್ವ ಎಂದರೆ ದಿವ್ಯ ಪರಂಪರೆ, ಶ್ರೇಷ್ಠ ನಂಬಿಕೆ, ಪಾವನ ಶ್ರದ್ಧೆ. ಎಲ್ಲರನ್ನೂ ಒಳಗೊಳ್ಳುವ ಪರಮೋತ್ಕೃಷ್ಟ ಆದರ್ಶ. ʼನಿಮ್ಮ ಹಿಂದುತ್ವʼ ಇದಕ್ಕೆ ತದ್ವಿರುದ್ಧ. ಗಾಂಧೀಜಿಯನ್ನು ಕೊಂದವರು, ಬ್ರಿಟೀಷರಿಗೆ ಪರಿಚಾರಿಕೆ ಮಾಡಿದವರು, ಶೂದ್ರರನ್ನು ಹೊಸಕಿ ಹಾಕಿದವರು ಈಗ ಹಿಂದುತ್ವದ ಜಪ ಮಾತನಾಡುತ್ತಿರುವುದು ಈ ಶತಮಾನದ ಬಹುದೊಡ್ಡ ಜೋಕ್ ಎಂದು ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next