Advertisement

ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳ ಬಿರುಸಿನ ಯತ್ನ: ಹೆಚ್.ಡಿಕೆ

05:05 PM Nov 10, 2021 | Team Udayavani |

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣವನ್ನು ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳಿಂದ ಬಿರುಸಿನ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ನೇರ ಆರೋಪ ಮಾಡಿದರು.

Advertisement

ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯುತ್ತಿರುವ ‘ಜನತಾ ಪರ್ವ 1.O’ ದ ಎರಡನೇ ಹಂತದ ಸಂಘಟನಾ ಕಾರ್ಯಗಾರ ‘ಜನತಾ ಸಂಗಮ’ದ ಮೂರನೇ ದಿನ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಆ ಮೂಲಕ ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿವೆ ಎಂದರು.

ಕೆಲ ದಿನಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ದಿಲ್ಲಿಯಲ್ಲಿ ರಫೆಲ್ ಯುದ್ಧ ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡೂ ಪಕ್ಷಗಳ ಕೆಸರೆರಚಾಟದಲ್ಲಿ ನಿರತವಾಗಿವೆ ಎಂದು  ಖಾರವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಆತಂಕ ಪಡಬೇಡಿ; ಉತ್ತರಪ್ರದೇಶದ ಕಾನ್ಪುರ್ ನಲ್ಲಿ ನೂರಕ್ಕೂ ಅಧಿಕ ಝೀಕಾ ವೈರಸ್ ಪತ್ತೆ

Advertisement

ಬಿಟ್ ಕಾಯಿನ್ ಹಗರಣ ಬಗ್ಗೆ ಗಂಭೀರ ನಿಲುವು ತಾಳಬೇಕು. ಸರಕಾರ ಪ್ರಾರಂಭಿಕ ಹಂತದಲ್ಲಿ ಪ್ರಚಾರಕ್ಕೆ ಮಾತ್ರ ಚರ್ಚೆ ಮಾಡಿ ನಂತರ ನಿರ್ಲಕ್ಷ್ಯ ಮಾಡುವುದು  ಬೇಡ. 2016-17ರಿಂದಲೂ ಈ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಆಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೇ ಅವರು ಕಠಿಣವಾಗಿ ವರ್ತಿಸಿ ಪ್ರಾರಂಭಿಕ ಹಂತದಲ್ಲೇ ಕ್ರಮ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ  ದಂಧೆ ನಡೆಯುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ತನಿಖೆಯಲ್ಲಿ ಜಾರಿ ನಿರ್ದೇಶನಾಲಯ ತೊಡಗಿದೆ ಎನ್ನುವ ಮಾಹಿತಿ ಇದೆ. ಸರಕಾರ ನಡೆಸುವವರು, ಸರಕಾರದ  ಅಧೀನ ಸಂಸ್ಥೆಗಳು ಜನರಿಗೆ ಸರಿಯದ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನಂತೂ ನಿಖರ ಮಾಹಿತಿ‌ ಇಲ್ಲದೆ ಯಾವುದೇ ಹೇಳಿಕೆ ನೀಡಲು ತಯಾರಿಲ್ಲ. ಆದರೆ, ಜನರ ಮುಂದೆ ವಾಸ್ತವಾಂಶ ಇಡಲು ಯಾರು ತಯಾರಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರವನ್ನು  ತರಾಟೆಗೆ ತೆಗೆದುಕೊಂಡರು.

ನಾಲ್ಕು ಜನರಿಗೆ ತೊಂದರೆ ಕೊಡುವುದರಿಂದ ಉಪಯೋಗ ಇಲ್ಲ. ಆಗಿರುವ ಲೋಪವನ್ನು ಸರಕಾರ ಸರಿ ಮಾಡಬೇಕು. ಇನ್ನು, ಕೇಂದ್ರ ಸರಕಾರದ ಆದೇಶದ ಮೇರೆಗೆ ಇಡಿ ತನಿಖೆಗೆ ಶಿಫಾರಸು ಮಾಡಿದ್ದಾರೋ ಅಥವಾ ರಾಜ್ಯ ಸರಕಾರವೇ ಶಿಫಾರಸು ಮಾಡಿದೆಯೋ ಗೊತ್ತಿಲ್ಲ. ಇದರ ಮೇಲೆ ಕೂಡ ಈಗ ಚರ್ಚೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಲ್ಲಾ ಮಾಹಿತಿ ರವಾನೆಯಾಗಿದೆ. ಆದರೆ, ರಾಜ್ಯ ಸರಕಾರ ಏನು ಮಾಡುತ್ತದೆಯೋ ನೋಡೋಣ ಎಂದು ಹೆಚ್ ಡಿಕೆ ಹೇಳಿದರು.

ಕಾಂಗ್ರೆಸ್ ನಾಯಕರು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಲ್ಲಿಯೂ ಸರಕಾರದ ಅಧಿಕಾರಿಗಳೇ ಇರುತ್ತಾರೆ. ನ್ಯಾಯಾಂಗ ತನಿಖೆ ವರದಿ ಕೂಡ ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೆ? ಹಿಂದೆ ಅರ್ಕಾವತಿ ಡಿನೋಟಿಫಿಕೇಷನ್ ಬಗ್ಗೆ ತನಿಖೆ ನಡೆಸಿದ ನ್ಯಾ. ಕೆಂಪಣ್ಣ ಆಯೋಗದ ವರದಿ ಏನಾಯಿತು? ಬಿಟ್ ಕಾಯಿನ್ ತನಿಖೆ ವರದಿಯ ಗತಿಯೂ ಅಷ್ಟೇ ಆಗುತ್ತದೆ ಎಂದು ಕುಮಾರಸ್ವಾಮಿ ಮಾರ್ಮಕವಾಗಿ ಹೇಳಿದರು.

ಇದನ್ನೂ ಓದಿ: ಬಿಟ್ ಕಾಯಿನ್ ವಿಚಾರದಲ್ಲಿ ಯಾರ ಮೇಲಾದ್ರೂ ಆಪಾದನೆಯಿದ್ರೆ ತಕ್ಷಣ ಕ್ರಮ : ಈಶ್ವರಪ್ಪ 

ರಾಜ್ಯದಲ್ಲಿ ಐದು ವರ್ಷ ಸರಕಾರ ನಡೆಸಿದವರು ಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪ್ರಯೋಜನ ಏನು? ಈಗ ಮಾತನಾಡುವ ಬದಲು ತಮ್ಮ ಕಾಲದಲ್ಲಿಯೇ ಕ್ರಮ ವಹಿಸಿದ್ದರೆ ಬಿಟ್ ಕಾಯಿನ್ ದಂಧೆ ಇಷ್ಟು ದೂರ ಬರುತ್ತಿರಲಿಲ್ಲ. ಆಗ ಸುಮ್ಮನಿದ್ದು ಈಗ ಜನರ ಮುಂದೆ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದರೆ ಎಂದು ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು.

ನನಗೆ ಈಗ ಪಕ್ಷ ಸಂಘಟನೆ ಮುಖ್ಯ. ನನ್ನ ಗುರಿ ಏನಿದ್ದರೂ 2023ರ ಚುನಾವಣೆ. ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ನಮ್ಮ ಪಕ್ಷ ಗಂಭೀರವಾಗಿದೆ. ಅನಗತ್ಯ ವಿಷಯಗಳು ನನಗೆ ಬೇಕಿಲ್ಲ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಜನರು ಗಮನಿಸುತ್ತಿದ್ದಾರೆ.– ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next