Advertisement

ಹೆದ್ದಾರಿ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ

01:30 PM Dec 19, 2022 | Team Udayavani |

ಕೊಪ್ಪಳ: ಶಿಗ್ಗಾಂವಿ-ಕಲ್ಮಲಾ ರಾಜ್ಯ ಹೆದ್ದಾರಿ-23 ರಸ್ತೆ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಅಳವಂಡಿ ಸೇರಿ 10ಕ್ಕೂ ಹೆಚ್ಚು ಗ್ರಾಮಗಳ 150ಕ್ಕೂ ಹೆಚ್ಚು ಜನರು ಎರಡು ದಿನಗಳ ಕಾಲ ಅಳವಂಡಿ-ಕೊಪ್ಪಳದವರೆಗೂ ಪಾದಯಾತ್ರೆ ನಡೆಸಿ ಜನಪ್ರತಿನಿಧಿಗಳ ಕಣ್ತೆರೆಸುವ ಕೆಲಸಕ್ಕೆ ಸಿದ್ಧರಾಗಿದ್ದಾರೆ. ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಜನಪ್ರತಿನಿಧಿಗಳಿಗೆ ಇದು ಕೈಗನ್ನಡಿಯಾಗಿದೆ.

Advertisement

ಹೌದು. ಅಳವಂಡಿಯ ರಾಜ್ಯ ಹೆದ್ದಾರಿ-23 ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಸಿಂಗಟಾಲೂರು ಏತ ನೀರಾವರಿ ಹೋರಾಟ ಸಮಿತಿಯ ಸಹಯೋಗದಲ್ಲಿ ಹಲವು ಜನರು ಡಿ. 19ರಿಂದ ಡಿ. 20ರವರೆಗೂ ಎರಡು ದಿನ ಅಳವಂಡಿಯಿಂದ ಕೊಪ್ಪಳದವರೆಗೂ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.

ಶಿಗ್ಗಾಂವಿ ಕಲ್ಮಲಾ ಹೆದ್ದಾರಿ ರಸ್ತೆಯು ಕೊಪ್ಪಳ ಜಿಲ್ಲೆಯ ಗವಿಮಠ, ಗಡಿಯಾರ ಕಂಬ, ಚಿಕ್ಕಸಿಂದೋಗಿ, ಹಿರೇಸಿಂದೋಗಿ, ಅಳವಂಡಿ ಮಾರ್ಗವಾಗಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ-23 ಹಲವು ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಈ ಭಾಗದ ಸಾವಿರಾರು ಜನರು ಮುಂಡರಗಿ ಸೇರಿ ಇತರೆ ಭಾಗಕ್ಕೆ ತೆರಳಲು ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ ಹೆಚ್ಚು ವಾಹನಗಳ ಸಂಚಾರದಿಂದ ರಸ್ತೆಯು ಸಂಪೂರ್ಣ ಹಾಳಾಗಿದೆ. ರಸ್ತೆ ಅಭಿವೃದ್ಧಿ ಮಾಡಿ ಎಂದು ಇಲ್ಲಿನ ಹಲವು ನಾಯಕರು ಜಿಲ್ಲಾಡಳಿತ ಹಾಗೂ ಹೆದ್ದಾರಿ ಸಂಬಂಧಿತ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಸಕಾರಾತ್ಮಕ ಸ್ಪಂದನೆ ದೊರೆಯದ ಹೋರಾಟಕ್ಕೆ ನಿರ್ಧರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ: ತಾಲೂಕಿನ ಅಳವಂಡಿ, ಭೈರಾಪುರ, ರಘುರತ್ನಳ್ಳಿ, ಹಟ್ಟಿ, ಬೆಳಗಟ್ಟಿ, ಬಿಕನಳ್ಳಿ, ಮೈನಳ್ಳಿ, ಕವಲೂರು, ಕಂಪ್ಲಿ ಸೇರಿದಂತೆ 16ಕ್ಕೂ ಹೆಚ್ಚು ಹಳ್ಳಿಗಳ ಜನರು ಕೊಪ್ಪಳಕ್ಕೆ ಆಗಮಿಸಲು ಇದೇ ಮಾರ್ಗವೇ ಆಧಾರವಾಗಿದ್ದು, ಈ ರಸ್ತೆಯ ದುಸ್ಥಿತಿಯ ಕುರಿತು ಕೆಟ್ಟಿರುವ ವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇದೆಂಥಾ ರಸ್ತೆ ನೀವು ಒಮ್ಮೆ ನೋಡಿ.. ನಮ್ಮೂರಿನ ಅಭಿವೃದ್ಧಿ ಹೇಗಾಗಿದೆ ಎಂದೆಲ್ಲಾ ಫೋಟೋಗಳನ್ನು ಹಾಕಿ ಇಲ್ಲಿನ ವ್ಯವಸ್ಥೆಯ ಕುರಿತು ಜನಪ್ರತಿನಿಧಿಗಳ ವಿರುದ್ಧವೂ ಗುಡುಗಿ ಛೀಮಾರಿ ಹಾಕಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾದರೂ ಇಲ್ಲಿನ ರಸ್ತೆ ಅಭಿವೃದ್ಧಿಗೆ ವೇಗವೇ ದೊರೆಯುತ್ತಿಲ್ಲ.

ಕಬ್ಬು ಬೆಳೆದವರ ಗೋಳು ಹೇಳತೀರದು: ಕೊಪ್ಪಳ ತಾಲೂಕಿನಾದ್ಯಂತ ಹತ್ತಾರು ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರು ಮುಂಡರಗಿ ಭಾಗದಲ್ಲಿ ಇರುವ ಕಬ್ಬಿನ ಕಾರ್ಖಾನೆಗಳಿವೆ. ಇದೇ ರಸ್ತೆಯ ಮೂಲಕವೇ ಕಬ್ಬಿನ ಗಾಡಿಗಳ ಲೋಡ್‌ ಸಾಗಾಟ ಮಾಡಬೇಕಾಗಿದೆ. ಇಲ್ಲಿನ ತಗ್ಗು ಗುಂಡಿಗಳನ್ನು ನೋಡಿದರೆ ರೈತರು ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದ ಉದಾಹರಣೆಗಳಿವೆ. ಅಲ್ಲದೇ, ಹಲವು ರೈತರು ಕಬ್ಬು ಸಾಗಾಟ ವೇಳೆ ಲಾರಿ ಸೇರಿ ಟ್ರ್ಯಾಕ್ಟರ್‌ಗಳು ಪಲ್ಟಿಯಾಗಿ ರೈತರ ಕಬ್ಬು ನಷ್ಟವಾದ ಘಟನೆ ನಡೆದಿವೆ. ಇಲ್ಲಿನ ರೈತರಿಗೆ ಪರ್ಯಾಯ ರಸ್ತೆಗಳೇ ಇಲ್ಲ. ಪ್ರಯಾಣಿಕರು ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲು ಸಾಧ್ಯವಾಗದಷ್ಟು ರಸ್ತೆಯು ಹದಗೆಟ್ಟು ಹೋಗಿದೆ.

Advertisement

ಇದೆಲ್ಲದರಿಂದ ಬೇಸರತ್ತ 10ಕ್ಕೂ ಹಳ್ಳಿಗಳ 150ಕ್ಕೂ ಹೆಚ್ಚು ಜನರು ಡಿ. 19ರಂದು ಬೆಳಗ್ಗೆ 9 ಗಂಟೆಗೆ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಅಳವಂಡಿಯಿಂದ ಕೊಪ್ಪಳದವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಯಾತ್ರೆಗೆ ಅಳವಂಡಿ ಮಠದ ಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಲಿದ್ದಾರೆ. ಯಾತ್ರೆಯು ಸಾಗಿ ಮೈನಳ್ಳಿ-ಬಿಕನಳ್ಳಿ ಮಠದಲ್ಲಿ ವಿಶ್ರಾಂತಿ ಪಡೆದು, ನಂತರ ಚಿಕ್ಕ ಸಿಂದೋಗಿಯ ಮಾರ್ಗವಾಗಿ ಕೊಪ್ಪಳದ ಗವಿಮಠಕ್ಕೆ ಬಂದು ತಲುಪಲಿದೆ. ಗವಿಮಠದ ಯಾತ್ರಿ ನಿವಾಸದಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ. ಡಿ. 20ರಂದು ಗವಿಮಠದಿಂದ ಗಡಿಯಾರಕಂಬ, ಅಶೋಕ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಯಾತ್ರೆ ಮುಕ್ತಾಯದ ಯೋಜನೆ ರೂಪಿಸಿದೆ.

ಶಿಗ್ಗಾಂವಿ-ಕಲ್ಮಲಾ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಸ್ಥಿತಿ ನೋಡಿದರೆ ಸಂಚಾರ ಮಾಡಲು ಮನಸ್ಸು ಬರುವುದಿಲ್ಲ. ರಸ್ತೆ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಡಿ. 19ರಿಂದ ಎರಡು ದಿನಗಳ ಕಾಲ ಅಳವಂಡಿಯಿಂದ ಕೊಪ್ಪಳದವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಡಿ. 20 ಗವಿಮಠದಿಂದ ಯಾತ್ರೆ ನಡೆಯಲಿದೆ. ಕನಿಷ್ಟ 30 ಕಿಮೀ ಪಾದಯಾತ್ರೆ ಸಾಗಲಿದೆ. ಅಧಿ ಕಾರಿಗಳು, ಜನಪ್ರತಿಧಿ ಗಳು ಇಲ್ಲಿನ ಸ್ಥಿತಿ ನೋಡಬೇಕಿದೆ.  –ಶರಣಪ್ಪ ಜಡಿ, ರಾಜ್ಯ ಹೆದ್ದಾರಿ-23 ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next