Advertisement

ಮಳೆ ಆರ್ಭಟಕ್ಕೆ ಹದಗೆಟ್ಟ ರಸ್ತೆಗಳು

05:48 PM Dec 08, 2019 | Naveen |

ಎಚ್‌.ಕೆ. ನಟರಾಜ
ಹಾವೇರಿ: ಮಳೆ ಹಾಗೂ ನೆರೆ ಕಾರಣದಿಂದ ಈ ಬಾರಿ ಮಳೆಗಾಲದಲ್ಲಿ ಗ್ರಾಮೀಣ ರಸ್ತೆಗಳಿಗೆ ಹೆಚ್ಚು ಧಕ್ಕೆಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಂದಾಜು 1200 ಕಿಲೋ ಮೀಟರ್‌ಗೂ ಅಧಿಕ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, 30ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿದೆ.

Advertisement

ಜಿಲ್ಲೆಯಲ್ಲಿ 4000 ಕಿಮೀ ಗ್ರಾಮೀಣ ರಸ್ತೆಯಿದ್ದು, ಪ್ರತಿವರ್ಷ ಐದಾರು ಕೋಟಿ ರೂ.ಗಳಲ್ಲಿ ದುರಸ್ತಿ, ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮಳೆಯ ಆರ್ಭಟ ಜೋರಾಗಿರುವ ಜತೆಗೆ ನದಿಗಳು ತುಂಬಿ ಅಪಾರ ಪ್ರಮಾಣದಲ್ಲಿ ನೆರೆ ಸೃಷ್ಟಿಯಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆಗಳಿಗೆ ಅಧಿ ಕ ಧಕ್ಕೆಯಾಗಿದೆ. ಇದರಿಂದ ಗ್ರಾಮೀಣ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ತೀರಾ ಓಡಾಡಲು ಸಾಧ್ಯವೇ ಇಲ್ಲದಂಥ ಕೆಲವು ರಸ್ತೆಗಳಿಗೆ ಮೊರಂ ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿದೆ. ಇನ್ನು ಕೆಲವು ಕಡೆ ರಸ್ತೆ ಹೊಸದಾಗಿಯೇ ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್‌ ಇಲಾಖೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ.

ಜಿಪಂ ರಸ್ತೆ ವಿವರ: ಜಿಲ್ಲೆಯಲ್ಲಿ 3967 ಕಿಮೀ ಜಿಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಇವೆ. ಇದರಲ್ಲಿ 1558ಕಿಮೀ ಡಾಂಬರ್‌ ರಸ್ತೆ, 446ಕಿಮೀ ಜೆಲ್ಲಿ ರಸ್ತೆ, 1962ಕಿಮೀ ಮಣ್ಣಿನ ರಸ್ತೆಗಳು ಇವೆ. ಹಾವೇರಿ ತಾಲೂಕಿನಲ್ಲಿ 674 ಕಿಮೀ, ಹಾನಗಲ್ಲ ತಾಲೂಕಿನಲ್ಲಿ 651ಕಿಮೀ, ಹಿರೇಕೆರೂರು ತಾಲೂಕಿನಲ್ಲಿ 491 ಕಿಮೀ, ಬ್ಯಾಡಗಿ ತಾಲೂಕಿನಲ್ಲಿ 190ಕಿಮೀ, ರಾಣಿಬೆನ್ನೂರು ತಾಲೂಕಿನಲ್ಲಿ 256ಕಿಮೀ, ಸವಣೂರು ತಾಲೂಕಿನಲ್ಲಿ 127ಕಿಮೀ ಹಾಗೂ ಶಿಗ್ಗಾವಿ ತಾಲೂಕಿನಲ್ಲಿ 222ಕಿಮೀ ಜಿಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಇವೆ.

ಮಳೆ, ನೆರೆ ಹಾನಿ: ಜಿಲ್ಲೆಯಲ್ಲಿ ಆಗಸ್ಟ್‌ ಮತ್ತು ಅಕ್ಟೋಬರ್‌ ಈ ಎರಡು ತಿಂಗಳಲ್ಲಿ ಅಪಾರ ಪ್ರಮಾಣದ ಮಳೆ ಹಾಗೂ ನೆರೆ ಸೃಷ್ಟಿಯಾಗಿ ರಸ್ತೆಗಳು ಕಿತ್ತು ಹೋಗಿವೆ. ಆಗಸ್ಟ್‌ ತಿಂಗಳಿನಲ್ಲಿ ಸುರಿದ ಮಳೆ ಆರ್ಭಟ ಹಾಗೂ ನೆರೆಗೆ 875.80 ಕಿಮೀ ಗ್ರಾಮೀಣ ರಸ್ತೆ ಹಾಳಾಗಿದ್ದರೆ ಅಕ್ಟೋಬರ್‌ ತಿಂಗಳಲ್ಲಿ ಸುರಿದ ಮಳೆ, ಸೃಷ್ಟಿಯಾದ ನೆರೆಗೆ 157.50ಕಿಮೀ ರಸ್ತೆ ಹಾಳಾಗಿದೆ.

Advertisement

ಆಗಸ್ಟ್‌ ತಿಂಗಳಲ್ಲಿ ಹಾವೇರಿ ತಾಲೂಕಿನ 141ಕಿಮೀ, ಹಾನಗಲ್ಲ ತಾಲೂಕಿನ 175ಕಿಮೀ, ಹಿರೇಕೆರೂರು ತಾಲೂಕಿನ 17ಕಿಮೀ, ರಾಣಿಬೆನ್ನೂರು ತಾಲೂಕಿನ 152ಕಿಮೀ, ಬ್ಯಾಡಗಿ ತಾಲೂಕಿನ 82ಕಿಮೀ, ಸವಣೂರು ತಾಲೂಕಿನ 206ಕಿಮೀ, ಶಿಗ್ಗಾವಿ ತಾಲೂಕಿನ 100ಕಿಮೀ ರಸ್ತೆ ಸೇರಿ ಒಟ್ಟು 875ಕಿಮೀ ರಸ್ತೆ ಹಾಳಾಗಿವೆ. ಅದೇ ರೀತಿ ಅಕ್ಟೋಬರ್‌ ತಿಂಗಳಲ್ಲಿ ಹಾವೇರಿ ತಾಲೂಕಿನಲ್ಲಿ 73ಕಿಮೀ, ಹಾನಗಲ್ಲ ತಾಲೂಕಿನಲ್ಲಿ 11.50ಕಿಮೀ, ಹಿರೇಕೆರೂರು ತಾಲೂಕಿನಲ್ಲಿ 12ಕಿಮೀ, ರಾಣಿಬೆನ್ನೂರು ತಾಲೂಕಿನಲ್ಲಿ 5 ಕಿಮೀ, ಬ್ಯಾಡಗಿ ತಾಲೂಕಿನಲ್ಲಿ 21.50ಕಿಮೀ, ಸವಣೂರು ತಾಲೂಕಿನಲ್ಲಿ 15ಕಿಮೀ, ಶಿಗ್ಗಾವಿ ತಾಲೂಕಿನಲ್ಲಿ 19.50ಕಿಮೀ ಸೇರಿ ಒಟ್ಟು 157ಕಿಮೀ ರಸ್ತೆ ಹಾಳಾಗಿವೆ.

ಜಿಲ್ಲೆಯಲ್ಲಿ ನೆರೆ, ಮಳೆಯಿಂದಾಗಿಯೇ ಒಟ್ಟು 1032ಕಿಮೀ ರಸ್ತೆ ಹಾಳಾಗಿದ್ದು, 25ಕೋಟಿ ರೂ.ಗಳಷ್ಟು ಹಾನಿ ಅಂದಾಜು ಮಾಡಲಾಗಿದೆ. ರಾಷ್ಟೀಯ ವಿಪತ್ತು ನಿಧಿಯಿಂದ ಪ್ರತಿ ಕಿಮೀ ದುರಸ್ತಿಗೆ 60,000 ರೂ.ನಂತೆ ಅಂದಾಜು 6.5ಕೋಟಿ ರೂ. ನಿರೀಕ್ಷಿಸಲಾಗಿದೆ. ಉಳಿದ ರಸ್ತೆ ದುರಸ್ತಿ, ಅಭಿವೃದ್ಧಿಗಾಗಿ ಸಾಮಾನ್ಯ ನಿರ್ವಹಣಾ ಅನುದಾನ, ಟಾಸ್ಕ್ ಫೋರ್ಸ್‌, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಕ್ರಿಯಾಯೋಜನೆ: ಸಾಮಾನ್ಯ ನಿರ್ವಹಣಾ ಅನುದಾನ 6.5ಕೋಟಿ ಬಿಡುಗಡೆಯಾಗಿದ್ದು, ರಸ್ತೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 168.50ಕಿಮೀ ರಸ್ತೆ ಅಭಿವೃದ್ಧಿಗಾಗಿ 5.13ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿ ಹಾವೇರಿ ತಾಲೂಕಿನಲ್ಲಿ 34.35ಕಿಮೀ, ಹಾನಗಲ್ಲ ತಾಲೂಕಿನಲ್ಲಿ
13.64ಕಿಮೀ, ಹಿರೇಕೆರೂರು ತಾಲೂಕಿನಲ್ಲಿ 20.04ಕಿಮೀ, ರಾಣಿಬೆನ್ನೂರು ತಾಲೂಕಿನಲ್ಲಿ 34.94ಕಿಮೀ, ಬ್ಯಾಡಗಿ ತಾಲೂಕಿನಲ್ಲಿ 14.5ಕಿ.ಮೀ., ಸವಣೂರು ತಾಲೂಕಿನಲ್ಲಿ 33.75ಕಿಮೀ, ಶಿಗ್ಗಾವಿ ತಾಲೂಕಿನಲ್ಲಿ 17.74ಕಿಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಟಾಸ್ಕ್ಫೋರ್ಸ್‌ನಲ್ಲಿ 3.64ಕೋಟಿ ರೂ.ಗಳಲ್ಲಿ ರಸ್ತೆ ಕಾಮಗಾರಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಅದರಲ್ಲಿ ಹಾವೇರಿ ತಾಲೂಕಿನ 39.33ಕಿಮೀ ರಸ್ತೆ, ಬ್ಯಾಡಗಿ ತಾಲೂಕಿನ 23.80ಕಿಮೀ ರಸ್ತೆ, ಸವಣೂರು ತಾಲೂಕಿನ 34.50ಕಿಮೀ ರಸ್ತೆ, ಶಿಗ್ಗಾವಿ ತಾಲೂಕಿನ 27.82ಕಿಮೀ ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು ಅನುಮೋದನೆ ಸಿಗಬೇಕಿದೆ.

ಒಟ್ಟಾರೆ ಮಳೆ, ನೆರೆಯಿಂದಾಗಿ ಜಿಲ್ಲೆಯ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಹಂತ ಹಂತವಾಗಿ ದುರಸ್ತಿ ಹಾಗೂ ಅಭಿವೃದ್ಧಿಗೆ ಇಲಾಖೆ ಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next