Advertisement

ಗಾಂಜಾ ನಿರ್ಮೂಲನೆಗೆ ಪೊಲೀಸರ ಸಮರ : 2 ವಾರಗಳಲ್ಲಿ 18 ಕೆ.ಜಿ. ಗಾಂಜಾ ವಶ

12:02 PM Sep 17, 2020 | sudhir |

ಹಾಸನ: ಜಿಲ್ಲೆಯಲ್ಲಿ ಗಾಂಜಾ ಬೆಳೆಯುವವರು, ಮಾರಾಟಗಾರರವಿರುದ್ಧ ಸಮರ ಸಾರಿರುವ ಪೊಲೀಸ್‌ ಇಲಾಖೆಯು ಕಳೆದ15 ದಿನಗಳಲ್ಲಿ 11 ಪ್ರಕರಣಗಳಲ್ಲಿ 18ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Advertisement

ನಗರದಲ್ಲಿ ಗಾಂಜಾ ಪ್ರಕರಣಗಳ ಕುರಿತಂತೆ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಆರ್‌.ಶ್ರೀನಿವಾಸಗೌಡ ಮಾಹಿತಿ ನೀಡಿ, ಇದುವರೆಗಿನ ಗಾಂಜಾ ಪ್ರಕರಣಗಳಲ್ಲಿನ ಆರೋಪಿಗಳಿಂದ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಜಿಲ್ಲೆಯಲ್ಲಿ ಗಾಂಜಾ
ಬೆಳೆಯುತ್ತಿರುವವರು ಹಾಗೂ ಮಾರಾಟಗಾರರಿಗೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳ ನಂಟಿರುವುದು ದೃಢಪಟ್ಟಿದೆ ಎಂದು ಹೇಳಿದರು.

ತಂಡ ರಚನೆ: ಜಿಲ್ಲೆಯಲ್ಲಿ  ಗಾಂಜಾ ಪ್ರಕರಣಗಳ ಸರಪಳಿಯನ್ನು ಪೊಲೀಸ್‌ ಇಲಾಖೆ ಬೆನ್ನು ಹತ್ತಿದ್ದು, ಕೊನೆಯ ಹಂತದವರೆಗೂ ಜಾಲಾಡದೆ ಬಿಡುವುದಿಲ್ಲ. ಗಾಂಜಾ ಪ್ರಕರಣಗಳ ಪತ್ತೆ, ಅದರ ಆಳ, ಅಗಲದ ತನಿಖೆಗೆ ಈಗಾಗಲೇ ವಿಶೇಷ ಪೊಲೀಸ್‌ ತಂಡ ರಚನೆ ಮಾಡಲಾಗಿದೆ. ತಂಡವು ಬೆಂಗಳೂರಿಗೆ ಹೋಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2016ರಲ್ಲಿ ಗಾಂಜಾ ಪ್ರಕರಣ ಕೇವಲ ಒಂದು ಪ್ರಕರಣ ದಾಖಲಾಗಿದ್ದು 2017ರಲ್ಲಿ 6 ಪ್ರಕರಣ, 2018ರಲ್ಲಿ9 ಪ್ರಕರಣ,2019ರಲ್ಲಿ7ಪ್ರಕರಣ ದಾಖಲಾಗಿದ್ದರೆ, 2010ರಲ್ಲಿ ಈವರೆಗೆ 19 ಪ್ರಕರಣಗಳಲ್ಲಿ 30 ಕೆ.ಜಿ. ಗಾಂಜಾ
ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು, ಸೆಪ್ಟೆಂಬರ್‌ನಲ್ಲಿಯೇ 11 ಪ್ರಕರಣಗಳಲ್ಲಿ 18 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಬಕಾರಿ, ಅರಣ್ಯ ಇಲಾಖೆ ಸಹಕಾರ: ಜಿಲ್ಲೆಯಲ್ಲಿ ಆಲೂರು, ಅರಕಲಗೂಡು,ಕೊಣನೂರು, ಬೇಲೂರು ತಾಲೂಕು ಅರೇಹಳ್ಳಿ, ಅರಸೀಕೆರೆ ತಾಲೂಕು ಜಾವಗಲ್‌, ಬಾಣಾವರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಬೆಳೆದಿರುವ ಪ್ರಕರಣಗಳು
ಪತ್ತೆಯಾಗಿವೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಬುಡ ಸಹಿತ ಕಿತ್ತು ಹಾಕಲು, ಅಬಕಾರಿ ಮತ್ತು ಅರಣ್ಯ ಇಲಾಖೆ ಸಹಕಾರ ಪಡೆಯಲಾಗುತ್ತಿದೆ ಎಂದು ಹೇಳಿದರು.

ಮಕ್ಕಳ ಬಗ್ಗೆ ಎಚ್ಚರವಿರಲಿ: ಜಿಲ್ಲೆಯಲ್ಲಿ ಗಾಂಜಾ ಹೊರತುಪಡಿಸಿದರೆ ಸಿಂಥೆಟಿಕ್‌ ಡ್ರಗ್ಸ್‌ ಪ್ರಕರಣಗಳು ಕಂಡು ಬಂದಿಲ್ಲ. ಟಯರ್‌ಗಳಿಗೆ ಪಂಕ್ಚರ್‌ ಹಾಕಲು ಬಳಸುವ ಸಲ್ಯೂಷನ್‌ ಬಳಸುವ ಮಾದಕ ವ್ಯಸನಿಗಳು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಫೆವಿಕಾಲ್‌ ಅಥವಾ ಅಯೋಡೆಕ್ಸ್‌ ಮೂಸುವ ಚಟಗಳಿವೆಯೇ ಎಂಬ ಬಗ್ಗೆ ಎಚ್ಚರ ವಹಿಸಬೇಕು
ಎಂದು ಸಲಹೆ ನೀಡಿದರು.

Advertisement

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಸೆರೆ 
ಅರಸೀಕೆರೆ: ನಗರದ ಜೇನುಕಲ್‌ ಕ್ರೀಡಾಂಗಣ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ನಗರ ಇನ್ಸ್‌ಪೆಕ್ಟರ್‌ ಬಿ. ಚಂದ್ರಶೇಖರಯ್ಯ ನೇತೃತ್ವದ ತಂಡ ಬಂಧಿಸಿದೆ. ಜೇನುಕಲ್‌ ನಗರ ನಿವಾಸಿಗಳಾದ ಸೈಪುಲ್ಲಾ ಖಾನ್‌, (20) ಸುಲ್ತಾನ್‌ (21), ಇಬ್ರಾಹಿಂ (20) ಬಂಧಿತರು. ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು, 150 ಗ್ರಾಂ ತೂಕದ ಗಾಂಜಾ ಜೊತೆ ಆರೋಪಿಗಳನ್ನು ಬಂಧಿಸಿದ್ದಾರೆ. ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ವಾಮಿ ನಾಯ್ಕ, ಸ್ಥಳೀಯ ಸತ್ತರ್‌ ಅವರ ಸಮಾಕ್ಷಮ ಮಹಜರ್‌ ನಡೆಸಿ, ಬಂಧಿತ
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ದಾಳಿ ವೇಳೆ ಪೊಲೀಸ್‌ ಸಿಬ್ಬಂದಿ ಮಂಜೇಗೌಡ, ಕೀರ್ತಿ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next