Advertisement

ನದಿಪಾತ್ರ ಸ್ವಚ್ಛತೆಗೆ ಉತ್ತಮ ಜನಸ್ಪಂದನೆ

11:44 AM Dec 16, 2019 | |

ಹರಿಹರ: ನಗರದ ತುಂಗಭದ್ರಾ ನದಿ ಪಾತ್ರವನ್ನು ಸ್ವಚ್ಛ -ಸುಂದರಗೊಳಿಸಲೆಂದೇ ಉದಯಿಸಿರುವ ಸಮಾನ ಮನಸ್ಕ ಗೆಳೆಯರ ಬಳಗ ನೀಡಿದ್ದ ಕರೆಯ ಮೇರೆಗೆ ಭಾನುವಾರ ಬೆಳಗ್ಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ನಾಗರಿಕರು ನದಿ ತಟಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Advertisement

ಕಳೆದ ಕೆಲ ದಿನಗಳ ಹಿಂದಷ್ಟೆ “ನಮ್ಮೂರು ನಮ್ಮ ಹೊಣೆ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ಆರಂಭಿಸಿದ್ದ ಪತ್ರಕರ್ತ ರಾಘವೇಂದ್ರ, ಅಂಜಲಿ ಸುರೇಶ್‌ ಮತ್ತಿತರರು ಮಲೀನಗೊಂಡಿದ್ದ ನದಿಪಾತ್ರ ಸ್ವಚ್ಛತೆಗೆ ಸಮಾನ ಮನಸ್ಕರು ಕೈಜೋಡಿಸುವಂತೆ ಕರೆ ನೀಡಿದ್ದರು.

ವಾಟ್ಸ್‌ಆ್ಯಪ್‌ ಕರೆಗೆ ಸ್ಪಂದಿಸಿದ ಸಮಾನ ಮನಸ್ಕರು, ಭಾನುವಾರ ಬೆಳಗ್ಗೆ 7ಕ್ಕೆ ನಗರ ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರಿನ ನದಿ ತಟಕ್ಕೆ ಆಗಮಿಸಿ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಕಾರ್ತಿಕ ಮಾಸದ ಚಳಿಯನ್ನು ಲೆಕ್ಕಿಸದೇ, ಕುಟುಂಬ ಸಮೇತರಾಗಿ ಬಂದು ಭಾಗವಹಿಸಿದ್ದರು.

ನದಿ ದಡದ ತುಂಬೆಲ್ಲ ಬಿದ್ದಿದ್ದ ಮದ್ಯದ ಬಾಟಲ್‌, ಪ್ಲಾಸ್ಟಿಕ್‌ ಮತ್ತಿತರೆ ತ್ಯಾಜ್ಯಗಳನ್ನು ಆಯ್ದು ಒಟ್ಟುಗೂಡಿಸಿ, ಸುಮಾರು 6-7 ಟನ್‌ ಕಸವನ್ನು ನಗರಸಭೆ ಟ್ರ್ಯಾಕ್ಟರ್‌ ಗೆ ತುಂಬಿ ಹೊರಕ್ಕೆ ಸಾಗಿಸಲಾಯಿತು. ಸ್ವಚ್ಛತೆ ಕಾರ್ಯದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್‌, ನಗರಸಭೆ ಪೌರಾಯುಕ್ತೆ ಎಸ್‌.ಲಕ್ಷ್ಮೀ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿ ಕಾರಿಗಳು ಸಹ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭುತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಮಾಜದಲ್ಲಿ ಸ್ವಚ್ಛತೆ ಬಗೆಗಿನ ಪ್ರಜ್ಞೆಯ ಪ್ರತಿಬಿಂಬವಾಗಿ ಹೊರಹೊಮ್ಮಿತು.

ಪರಿಸರ ಸಂರಕ್ಷಣೆ ಸಾರ್ವಜನಿಕರ ಹೊಣೆ ಎಂಬ ಘೋಷ ವ್ಯಾಕ್ಯ ಈ ಅಭಿಯಾನದ ಮೂಲಕ ಸಾರ್ಥಕಗೊಂಡಿತು. ನಗರದ ಪ್ರತಿ ಬಡಾವಣೆ, ಉದ್ಯಾನವನಗಳಲ್ಲಿ ಸ್ವತ್ಛತೆಗೊಳಿಸಬೇಕು ಇಂತಹ ಕಾರ್ಯವನ್ನು ನಿರಂತರವಾಗಿ ನಡೆಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಭಾಗವಹಿಸಿದ್ದ ಸ್ವಯಂ ಸೇವಕರು ಅಭಿಪ್ರಾಯಪಟ್ಟರು.

Advertisement

ನಗರಸಭಾ ಸದಸ್ಯರಾದ ರಜನಿಕಾಂತ್‌, ಪಾರ್ವತಮ್ಮ ಐರಣಿ, ನೀತಾ ಮೆಹಾರ್ವಾಡೆ, ಅಶ್ವಿ‌ನಿ, ಮಾಜಿ ಸದಸ್ಯರಾದ ಬಿ.ಕೆ. ಸಯ್ಯದ್‌ ರೆಹಮಾನ್‌, ರಾಜು ರೋಕಡೆ, ನಾಗರಾಜ್‌ ಮೆಹಾರ್ವಾ ಡೆ, ಅಂಬುಜಾ ರಾಜೋಳಿ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಪರಿಸರ ಅಭಿಯಂತರ್‌ ಮಹೇಶ್‌, ಆರೋಗ್ಯ ನೀರಿಕ್ಷಕರಾದ ಕೋಡಿ ಭೀಮರಾಯ್‌, ಸಂತೋಷ ಮುಖಂಡರಾದ ನಿಜಗುಣ, ಹೆಚ್‌. ಕೆ.ಕೊಟ್ರಪ್ಪ, ತಿಪ್ಪೇಸ್ವಾಮಿ, ಕಿರಣ್‌ ಭೂತೆ, ಅಜಿತ್‌ ಸಾವಂತ್‌, ಎಚ್‌.ಎಸ್‌. ರಾಘವೇಂದ್ರ, ಮಾರುತಿ ಶೆಟ್ಟಿ, ಆರ್‌.ಟಿ. ವೆಂಕಟೇಶ್‌, ಎಚ್‌.ಪಿ. ಬಾಬಣ್ಣ, ಅಂಜು, ನವ್ಯ, ಪ್ರವೀಣ್‌, ರಾಘವೇಂದ್ರ ತೇಲ್ಕರ್‌, ಪ್ರಶಾಂತ್‌ ಸಿಂಧೆ, ಅಲಿ ಉದ್ಗಟ್ಟಿ, ಸುನೀಲ್‌, ಗಂಗಾಧರ್‌ ದುರುಗೋಜಿ, ಕೊಂಡಜ್ಜಿ ರಾಘವೇಂದ್ರ, ವಸಿಷ್ಠ, ಜಿ.ಕೆ. ವಿನಾಯಕ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next