Advertisement

ನಂದವಾಡಗಿಯಿಂದಲೇ ಹರಿ ನೀರಾವರಿ?

04:31 PM Jan 30, 2021 | Team Udayavani |

ಮಸ್ಕಿ: ಎನ್‌ಆರ್‌ಬಿಸಿ 5ಎ ಕಾಲುವೆಯಿಂದ ನೀರಾವರಿ ಬೇಡಿಕೆ ಇಟ್ಟ ರೈತರಿಗೆ ಈಗ ಪರ್ಯಾಯವಾಗಿ ಏತ ನೀರಾವರಿ ಮೂಲಕವೇ ಹರಿ ನೀರಾವರಿ ಕಲ್ಪಿಸಲು ಸರಕಾರ ಅಸ್ತು ಎಂದಿದೆ. ಇದರ ಡಿಪಿಆರ್‌ ತಯಾರಿಕೆಗೂ ಖಾಸಗಿ ಕಂಪನಿಗೆ ಗುತ್ತಿಗೆ ವಹಿಸಲು ಟೆಂಡರ್‌ ಆಹ್ವಾನಿಸಿದೆ!.

Advertisement

ತಾಲೂಕಿನ ಪಾಮನಕಲ್ಲೂರು ಹೋಬಳಿ ಕೇಂದ್ರದಲ್ಲಿ ಕಳೆದ 72 ದಿನಗಳಿಂದ ರೈತರ ಅನಿರ್ದಿಷ್ಠ ಧರಣಿ ನಡೆದಿದ್ದು, ನಾರಾಯಣಪುರ ಬಲದಂಡೆ ಮುಖ್ಯ
ಕಾಲುವೆಗೆ ಪ್ರತ್ಯೇಕ 5ಎ ಶಾಖೆ ಕಾಲುವೆ ನಿರ್ಮಾಣ ಮಾಡಿ ಅಲ್ಲಿಂದ ನೀರು ಹರಿಸಬೇಕು ಎನ್ನುವುದು ಇವರ ಬೇಡಿಕೆಯಾಗಿದೆ. ಇದು ತಾಂತ್ರಿಕವಾಗಿ
ಅಸಾಧ್ಯ, ನೀರಿನ ಲಭ್ಯತೆ ಇಲ್ಲದೇ ಇರುವುದು, ಟನಲ್‌ ನಿರ್ಮಾಣ, ಭೂಸ್ವಾಧಿಧೀನ ಪ್ರಕ್ರಿಯೆಗಳು ಸೇರಿ ಹಲವು ತಾಂತ್ರಿಕ ಸಮಸ್ಯೆ ಇದೆ ಎನ್ನುವ ಅಂಶವನ್ನು ಸರಕಾರ ಪ್ರಸ್ತಾಪಿಸಿ ಈ ಯೋಜನೆ ಜಾರಿಗೆ ನಿರಾಕರಿಸಿದೆ.

ಆದರೆ ಇದಕ್ಕೆ ಪರ್ಯಾಯವಾಗಿ ನಂದವಾಡಗಿ ಏತ ನೀರಾವರಿ ಮೂಲಕ ಹನಿ ನೀರಾವರಿ ಬದಲು ಹರಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು ಸರಕಾರದ ಪ್ರತಿನಿಧಿಗಳು, ಕೃಷ್ಣಭಾಗ್ಯ ಜಲನಿಗಮದ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದ್ದಾರೆ. ಆದರೆ, ಹೋರಾಟ ನಿರತ ರೈತರು ಇದನ್ನು ವಿರೋಧಿಸುತ್ತಿದ್ದಾರೆ. ಇತ್ತ ಇದಕ್ಕೆ ಪರ್ಯಾಯ ಮತ್ತೂಂದು ರೈತರ ಗುಂಪು ಸದ್ಯ ನಂದವಾಡಗಿ ಏತ ನೀರಾವರಿ ಮೂಲಕವೇ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಸರಕಾರ ಈ ಬೇಡಿಕೆಗೆ ಶೀಘ್ರ ಒಪ್ಪಿಗೆ ನೀಡಿದೆ. ಈಗ ಹರಿ ನೀರಾವರಿ ಯೋಜನೆ ಜಾರಿಗೆ ಬೇಕಾದ ನೀಲನಕಾಶೆ ತಯಾರಿಸಲು ಖಾಸಗಿ ಕಂಪನಿಗೆ
ಗುತ್ತಿಗೆ ನೀಡಲು ಮುಂದಾಗಿದೆ.

2.80 ಕೋಟಿ ರೂ.: ನಂದವಾಡಗಿ ಏತ ನೀರಾವರಿಯಲ್ಲಿ ಮಸ್ಕಿ ಕ್ಷೇತ್ರದ 23 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಸೂಕ್ಷ್ಮ ಹನಿ ನೀರಾವರಿ ಮೂಲಕ ನೀರು ಒದಗಿಸುವುದಕ್ಕೆ ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಹಂಚಿಕೆಯಾದ 2.25 ಟಿಎಂಸಿ ಅಡಿ ನೀರಿನ ಬಳಕೆಗೆ 1200 ಕೋಟಿ ರೂ.
ಹಣವನ್ನು ಕಾಯ್ದಿರಿಸಲಾಗಿತ್ತು. ಆದರೆ ರೈತರ ಬೇಡಿಕೆ ಹರಿ ನೀರಾವರಿ ಒದಗಿಸಬೇಕು ಎನ್ನುವುದಾಗಿದ್ದರಿಂದ ಹಳೆಯದನ್ನು ಕೈ ಬಿಟ್ಟು, ಈಗ ಪುನಃ ಡಿಪಿಆರ್‌ (ಡಿಟೈಲ್‌ ಪ್ರಾಜೆಕ್ಟ್ ರಿಪೋರ್ಟ್‌) ತಯಾರಿಕೆ ಮುಂದಾಗಿದ್ದಾರೆ.

ಇದಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು 2.80 ಕೋಟಿ ರೂ. ಮೊತ್ತಕ್ಕೆ ಟೆಂಡರ್‌ ಆಹ್ವಾನಿಸಿದ್ದಾರೆ. ಟೆಂಡರ್‌ನಲ್ಲಿ ಅರ್ಹತೆ ಪಡೆದ ಕಂಪನಿ ನಂದವಾಡಗಿ ಮೂಲಕ ಮಸ್ಕಿ, ಮಾನ್ವಿ ಹಾಗೂ ಲಿಂಗಸುಗೂರು ಕ್ಷೇತ್ರದ ಒಟ್ಟು 30 ಹಳ್ಳಿಗಳ 23 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಹರಿ ನೀರಾವರಿ ಮೂಲಕ ಹೇಗೆ ನೀರು ಒದಗಿಸುವುದು?, ಎಲ್ಲಿಂದ ಎಲ್ಲಿಗೆ ಪೈಪ್‌ಲೈನ್‌?, ಜಾಕ್‌ವೆಲ್‌ ಅಳವಡಿಕೆ, ಅಚ್ಚುಕಟ್ಟು ವ್ಯಾಪ್ತಿಗೆ ಸೇರುವ ಜಮೀನುಗಳಲ್ಲಿ ಕಾಲುವೆ ನಿರ್ಮಾಣ ವ್ಯವಸ್ಥೆ ಹೇಗೆ? ಎನ್ನುವುದು ಸೇರಿ ಹಲವು ಮಾರ್ಗಗಳಲ್ಲಿ ಸರ್ವೇ ನಡೆಸಿ, ಈ ಯೋಜನೆಗೆ ತಗಲುವ ಮೊತ್ತ ನಮೂದಿಸಿ ಸಂಪೂರ್ಣ ವರದಿ ನೀಡಬೇಕಿದೆ. ಇದಕ್ಕಾಗಿ ಟೆಂಡರ್‌ನಲ್ಲಿ ಭಾಗವಹಿಸಲು ಫೆ.8 ಕೊನೆ ದಿನ ನಿಗದಿ ಮಾಡಲಾಗಿದೆ.

Advertisement

ಹೆಸರು ಬದಲಾವಣೆ
ನಂದವಾಡಗಿ ಏತ ನೀರಾವರಿ ಎರಡನೇ ಹಂತದ ಮೂಲಕ ಈ ಯೋಜನೆ ಜಾರಿ ಮಾಡಬೇಕಿತ್ತು. ಆದರೆ ರೈತರು ನಂದವಾಡಗಿ ನೀರೇ ಬೇಡ ಎಂದು ಪಟ್ಟು ಹಿಡಿದಿದ್ದರಿಂದ ಈಗ ಈ ಯೋಜನೆ ಹೆಸರನ್ನು ಬದಲಾಯಿಸಲಾಗಿದೆ. ವಟಗಲ್‌ ಬಸವೇಶ್ವರ ಏತ ನೀರಾವರಿ ಎಂದು ಮರು ನಾಮಕರಣ ಮಾಡಿ

ಅಂತಿಮ ವರದಿ ಬಂದಿಲ್ಲ
5ಎ ಕಾಲುವೆ ಜಾರಿ ಸಾಧ್ಯ-ಅಸಾಧ್ಯತೆ ಕುರಿತು ನಿರ್ಧಾರ ಮಾಡಲು ತಾಂತ್ರಿಕ ತಜ್ಞರ ಸಮಿತಿ ಯೊಂದನ್ನು ಸರಕಾರ ನೇಮಿಸಿದೆ. ಕ್ಯಾ.ಆರ್‌. ದೊಡ್ಡಿಹಾಳ, ನಿವೃತ್ತ ಎಂಜಿನಿಯರ್‌ ಬಸವರಾಜ ಸೇರಿ ಇಲ್ಲಿನ ರೈತರು ಇರುವ ಸಮಿತಿ ರಚಿಸ ಲಾಗಿದೆ. ಪ್ರಾಥಮಿಕ ಸರ್ವೇ ನಡೆಸಿ ಡಿಪಿಆರ್‌ ತಯಾರಿಸಲು ನೆಕ್ಟ್ ಪ್ರವೈಟ್‌ ಲಿ. ಕಂಪನಿಗೆ ಗುತ್ತಿಗೆ ಸಹ ನೀಡಲಾಗಿದೆ. ಆದರೆ ಈ 2 ಸಮಿತಿಯಿಂದ ವರದಿ ಬರುವ ಮುನ್ನವೇ ಟೆಂಡರ್‌ ಕರೆದಿರುವುದು ಅಚ್ಚರಿ ಮೂಡಿಸಿದೆ.

ಮಸ್ಕಿ ಕ್ಷೇತ್ರದ ಹಳ್ಳಿಗಳಿಗೆ 5ಎ ಕಾಲುವೆ ಮೂಲಕ ನೀರು ಕೊಡಲು ಅಸಾಧ್ಯ. ಹೀಗಾಗಿ ರೈತರ ಬೇಡಿಕೆಯಂತೆ ವಟಗಲ್‌ ಬಸವೇಶ್ವರ ಏತ ನೀರಾವರಿ ಮೂಲಕ ಹರಿ ನೀರಾವರಿ ವ್ಯವಸ್ಥೆ ಕೊಡಲಾಗುತ್ತದೆ. ಇದಕ್ಕಾಗಿ ಡಿಪಿಆರ್‌ ತಯಾರಿಸಲು ಟೆಂಡರ್‌ ಕರೆಯಲಾಗಿದೆ.

ರಂಗರಾಮ್‌, ಸಿಇ ಕೆಬಿಜಿಎನ್‌ಎಲ್‌, ಎನ್‌ಎಲ್‌ಬಿಸಿ ರೋಡಲಬಂಡಾ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next