Advertisement

ಹರೇಕಳ ಹೊಸ ವೆಂಟೆಡ್‌ ಡ್ಯಾಂ ಬಹುತೇಕ ಪೂರ್ಣ

11:25 AM Nov 17, 2022 | Team Udayavani |

ಮಹಾನಗರ: ಹರೇಕಳ ಮತ್ತು ಅಡ್ಯಾರ್‌ ಗ್ರಾಮಗಳ ಮಧ್ಯೆ ಹಾದು ಹೋಗುವ ನೇತ್ರಾವತಿ ನದಿಗೆ ಅಡ್ಡವಾಗಿ “ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ’ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ.

Advertisement

ಭವಿಷ್ಯದ 30 ವರ್ಷಗಳ ದೂರ ದೃಷ್ಟಿಯೊಂದಿಗೆ ಮಂಗಳೂರು ವಿಧಾ ನಸಭೆ ಕ್ಷೇತ್ರದ ಬಹುತೇಕ ಗ್ರಾಮಗಳು, ಮಂಗಳೂರು ಪಾಲಿಕೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಹರೇಕಳದಲ್ಲಿ ಹೊಸ ಡ್ಯಾಂ ನಿರ್ಮಾಣವಾಗುತ್ತಿದೆ. ಸದ್ಯ ಡ್ಯಾಂನ ಸುತ್ತ ಸುಣ್ಣ ಬಣ್ಣ ಬಳಿಯುವ ಕಾಮಗಾರಿ ಭರದಿಂದ ಸಾಗುತ್ತಿದೆ.

2018-19ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆ ಯನ್ನು ಪ್ರಕಟಿಸಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಟೆಂಡರ್‌ ಪ್ರಕ್ರಿಯೆ ನಡೆಯಿತು. ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ (2020ರ ಮಾರ್ಚ್‌) ಶಿಲಾನ್ಯಾಸ ನೆರವೇರಿಸಲಾಯಿತು. ಆ ಬಳಿಕ ಕಾಮಗಾರಿಯು ಭರದಿಂದ ಸಾಗಿದ್ದು, ಇದೀಗ ಉದ್ಘಾಟನೆಗೆ ಸಜ್ಜಾಗಿದೆ.

ವೆಂಟೆಡ್‌ ಡ್ಯಾಂ ಉದ್ದ 520 ಮೀ. ಇದ್ದು, ಸುಮಾರು 7.5 ಮೀ. ಅಗಲ, ಎರಡೂ ಬದಿಗಳಲ್ಲಿ ತಲಾ ಒಂದು ಮೀ. ಅಗಲದ ಫುಟ್‌ ಪಾತ್‌ ಇದೆ. ಒಟ್ಟು 52 ಕಿಂಡಿಗಳನ್ನು ನಿರ್ಮಿಸಲಾಗಿದೆ. ಈ ಡ್ಯಾಂ ಮೂಲಕ ಅಂದಾಜು 0.6 ಟಿಎಂಸಿ ನೀರು ಶೇಖರಣೆ ಸಾಧ್ಯವಾಗಲಿದೆ.

Advertisement

ಮಂಗಳೂರಿಗೂ ನೀರು!

ಹರೇಕಳ ಡ್ಯಾಂನಿಂದ 50 ಎಂಎಲ್‌ಡಿ ಹೆಚ್ಚುವರಿ ನೀರನ್ನು ಮಂಗಳೂರಿಗೆ ತರಲು ಚಿಂತನೆ ನಡೆಯುತ್ತಿದೆ. ನಗ ರ ದಲ್ಲಿ ಈಗಾಗಲೇ ಜಲಸಿರಿ ಯೋಜನೆ ಜಾರಿ ಯಾಗಿದ್ದು, ಮುಂದೆ 24×7 ಮಾದರಿ ಯಲ್ಲಿ ನೀರು ಪೂರೈಕೆ ವ್ಯವಸ್ಥೆಯಾಗಲಿದೆ. ಈ ಸಂದರ್ಭ ಎದುರಾಗಲಿರುವ ನೀರಿನ ಕೊರತೆ ನೀಗಿಸಲು ಹರೇಕಳ ವೆಂಟೆಡ್‌ ಡ್ಯಾಂನಿಂದ ಹೆಚ್ಚುವರಿ ನೀರು ಪಡೆಯುವ ಮೂಲಕ ಪರಿಹಾರ ಕಂಡುಕೊಳ್ಳುವ ಚಿಂತನೆ ನಡೆಯುತ್ತಿದೆ. ಹೀಗಾಗಿ ತುಂಬೆ ಡ್ಯಾಂ ಸನಿಹ ಅಡ್ಯಾರು ಭಾಗದಲ್ಲಿ 10 ಎಕರೆ ಭೂಮಿಯನ್ನು ಪಾಲಿಕೆ ನಿಗದಿಗೊಳಿಸಿದೆ. ಇಲ್ಲಿ ಸುಸಜ್ಜಿತ ನೀರು ಶುದ್ಧೀಕರಣ ಘಟಕ ಆರಂಭಿಸುವ ಚಿಂತನೆ ನಡೆಯುತ್ತಿದೆ.

ವಾಹನ ಸಂಚಾರಕ್ಕೆ ಅನುಕೂಲ

ಹರೇಕಳ ಭಾಗದಿಂದ ಅಡ್ಯಾರ್‌ ಕಡೆಗೆ ಕಣ್ಣಳತೆ ದೂರವಿದ್ದರೂ ಅತ್ತಿಂದಿತ್ತ ವಾಹನ ದಲ್ಲಿ ಬರಲು ಅವಕಾಶವಿಲ್ಲ. ಹಲವು ಕಿ.ಮೀ. ರಸ್ತೆಯಲ್ಲಿ ಸುತ್ತಾಡಿ ಇಲ್ಲಿಗೆ ಬರಬೇಕು ಅಥವಾ ದೋಣಿಯನ್ನು ಅವ ಲಂಬಿಸಬೇಕಾಗುತ್ತದೆ. ಆದರೆ ಹರೇಕಳ ದಲ್ಲಿ ಡ್ಯಾಂ ನಿರ್ಮಾಣವಾಗುತ್ತಿದ್ದು, ಇದರಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಲಘು ವಾಹನಗಳು ಮಾತ್ರ ಸಂಚರಿಸಲು 7.5 ಮೀ. ಅಗಲದ ಸೇತುವೆ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ಪಾದಚಾರಿಗಳಿಗೆ ಎರಡೂ ಬದಿಯಲ್ಲಿ ಕಾಲುದಾರಿಯಿದೆ.

ನದಿತಟದ ಜಮೀನು ಮುಳುಗಡೆ ಭೀತಿ!

ಹೊಸ ಡ್ಯಾಂನಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹವಾದರೆ ಅಡ್ಯಾರ್‌, ಅರ್ಕುಳ, ಹರೇಕಳ, ಪಾವೂರು, ಬೋಳಿಯಾರ್‌ ಗ್ರಾಮಗಳ ನದಿತಟದ ಹಲವು ಎಕರೆ ಜಮೀನು ಮುಳುಗಡೆ ಭೀತಿಯೂ ಎದುರಾಗಿದೆ. ಸುರತ್ಕಲ್‌ ಎನ್‌ಐಟಿಕೆಯ ತಜ್ಞರು ಡಿಜಿಪಿಎಸ್‌ ಮೂಲಕ ಸರ್ವೇ ನಡೆಸಿ ವರದಿ ನೀಡಿದ್ದು, ಇದರಂತೆ ಮುಳುಗಡೆಯ ಆ ಪ್ರದೇಶವನ್ನು ಭೂಸ್ವಾಧೀನ ಪಡಿಸಲು ಸರ್ವೇ ನಡೆಸಿ ಖಾಸಗಿ, ಸರಕಾರಿ ಜಮೀನು ಗುರುತಿಸಬೇಕು. ಖಾತೆದಾರರ ಹೆಸರು, ವಿಸ್ತೀರ್ಣದ ವಿವರವನ್ನು ತಿಳಿಸುವಂತೆ ಸೂಚಿಸಲಾಗಿದೆ. ಆದರೂ ಮುಳುಗಡೆ ಭೀತಿ ಎದುರಿಸುವ ಜನರಿಗೆ- ಕೃಷಿಕರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡದೆ, ಪರಿಹಾರ ಧನದ ಬಗ್ಗೆಯೂ ತಿಳಿಸಿಲ್ಲ ಎಂದಿದ್ದಾರೆ ಸ್ಥಳೀಯರು.

ಭವಿಷ್ಯದ ಯೋಜನೆ ಸಾಕಾರ: ನಗರ, ಗ್ರಾಮಾಂತರ ಭಾಗದ ಭವಿಷ್ಯದ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕೈಗೊಂಡ ಯೋಜನೆ ಇದೀಗ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಇಲ್ಲಿ 3 ಮೀ. ಎತ್ತರಕ್ಕೆ ನೀರು ಸಂಗ್ರಹಿಸುವ ಅವಕಾಶವಿದೆ. ಆದರೆ ನದಿತೀರದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ನಾವು 2 ಮೀ. ನೀರು ಸಂಗ್ರಹಿಸಲಿದ್ದೇವೆ. ಸ್ಥಳೀಯರಿಗೆ ಸಾರಿಗೆ ಸಂಪರ್ಕದ ಜತೆ ಆಸುಪಾಸಿನ ಹಲವು ಗ್ರಾಮಗಳ ಜನರಿಗೆ ಸದಾ ಕುಡಿಯುವ ನೀರು ಪೂರೈಕೆ ಮಾಡುವುದು ಉದ್ದೇಶ. -ಯು.ಟಿ.ಖಾದರ್‌, ಶಾಸಕರು, ಮಂಗಳೂರು ವಿ.ಸಭಾ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next