Advertisement

ಪಾಕ್‌ ದುಸ್ಸಾಹಸಕ್ಕೆ ಕಠಿಣ ಪ್ರತ್ಯುತ್ತರ

11:42 PM Jul 13, 2019 | Team Udayavani |

ಹೊಸದಿಲ್ಲಿ: “ಪಾಕಿಸ್ಥಾನಿ ಸೇನೆ ನಡೆಸುವ ಯಾವುದೇ ದುಸ್ಸಾಹಸಕ್ಕೂ ನಾವು ಪ್ರತ್ಯುತ್ತರ ನೀಡುತ್ತೇವೆ. ಉಗ್ರವಾದಕ್ಕೆ ಸಂಬಂಧಿಸಿದ ಯಾವುದೇ ಕೃತ್ಯವನ್ನೂ ಸುಮ್ಮನೆ ಬಿಡಲ್ಲ.’ ಹೀಗೆಂದು ಪಾಕಿಸ್ಥಾನ ಮತ್ತು ಪಾಕ್‌ ಪ್ರೇರಿತ ಉಗ್ರಗಾಮಿಗಳಿಗೆ ಖಡಕ್‌ ಎಚ್ಚರಿಕೆ ನೀಡಿರುವುದು ಭೂಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌.

Advertisement

ಕಾರ್ಗಿಲ್‌ ಯುದ್ಧಕ್ಕೆ 20 ವರ್ಷಗಳು ಸಂದ ಹಿನ್ನೆಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜ| ರಾವತ್‌ ಈ ಮಾತುಗಳನ್ನಾಡಿದ್ದಾರೆ. “ಭಾರತೀಯ ಸಶಸ್ತ್ರ ಪಡೆಗಳು ನಮ್ಮ ಗಡಿ ಪ್ರದೇಶದ ಸಮಗ್ರತೆ ಕಾಪಾಡಿಕೊಳ್ಳಲು ಬದ್ಧತೆಯಿಂದ ನಿಂತಿವೆ. ಆಗಾಗ ದುಸ್ಸಾಹಸಕ್ಕೆ ಕೈಹಾಕುವ ಪಾಕಿಸ್ಥಾನಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಾಗುತ್ತದೆ. ಉರಿ ದಾಳಿ ಬಳಿಕ ನಡೆದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಬಾಲಕೋಟ್‌ನಲ್ಲಿ ನಡೆಸಲಾದ ದಾಳಿಯು ಭಯೋತ್ಪಾದನೆ ವಿರುದ್ಧದ ನಮ್ಮ ರಾಜಕೀಯ ಹಾಗೂ ಸೇನಾ ಬದ್ಧತೆಯನ್ನು ಪ್ರದರ್ಶಿಸಿದೆ’ ಎಂದು ರಾವತ್‌ ಹೇಳಿದ್ದಾರೆ.

ಅತಿಕ್ರಮಣ ಆಗಿಲ್ಲ: ಇದೇ ವೇಳೆ ಲಡಾಖ್‌ನ ಡೆಮ್‌ಚೋಕ್‌ ವಲಯದಲ್ಲಿ ಚೀನ ಸೇನೆ ಅತಿಕ್ರಮಣ ಮಾಡಿಲ್ಲ ಎಂದೂ ರಾವತ್‌ ಸ್ಪಷ್ಟಪಡಿಸಿದ್ದಾರೆ. ಜು. 6ರಂದು ದಲೈ ಲಾಮಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕೆಲವು ಟಿಬೆಟಿಯನ್ನರು ಟಿಬೆಟಿಯನ್‌ ಧ್ವಜ ಹಾರಿಸಿದ ಬೆನ್ನಲ್ಲೇ, ಕಳೆದ ವಾರ ಚೀನ ಯೋಧರು ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾವತ್‌ ಸ್ಪಷ್ಟನೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next