Advertisement

ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ರಸ್ತೆ ತಡೆ

11:10 AM Jul 21, 2019 | Naveen |

ಹರಪನಹಳ್ಳಿ: ತಾಲೂಕಿನ ಕಂಚೀಕೆರೆ-ಅರಸೀಕೆರೆ ಗ್ರಾಮಗಳ ನಡುವಿನ ರಾಜ್ಯ ಹೆದ್ದಾರಿ 151ರ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಅಖೀಲ ಭಾರತ ಯುವಜನ ಫೆಡರೇಷನ್‌ ಮತ್ತು ಆಲ್ ಇಂಡಿಯ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಪದಾಧಿಕಾರಿಗಳು ಶನಿವಾರ ಕಂಚೀಕೆರೆ ಗ್ರಾಮದ ಕಂಚೀಕೆರೆ ಮತ್ತು ಬೆಂಡಿಗೇರಿ ರಸ್ತೆ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಕಂಚೀಕೆರೆ ಗ್ರಾಮದಿಂದ ಅರಸೀಕೆರೆ ಮಾರ್ಗವಾಗಿ ತೆರಳುವ ರಸ್ತೆಯ ಗುಂಡಿಗಳಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ರಾಗಿ ಸಸಿ ನೆಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಂಚೀಕೆರೆ ಮತ್ತು ಬೆಂಡಿಕೇರಿ ರಸ್ತೆಯನ್ನು 3 ತಾಸು ಬಂದ್‌ ಮಾಡಿ ಪ್ರತಿಭಟನೆ ಮಾಡಿದ್ದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರದಾಡಬೇಕಾಯಿತು. ಎರಡು ಬದಿಯಲ್ಲಿ 1 ಕಿಮೀ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಹರಪನಹಳ್ಳಿ ಅತ್ಯಂತ ಹಿಂದುಳಿದ ತಾಲೂಕು ಹಣೆಪಟ್ಟಿ ಕಟ್ಟಿಕೊಂಡಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ. ತಾಲೂಕಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹಿಂದುಳಿದ ಎಂಬ ಹಣೆಪಟ್ಟಿ ಶಾಶ್ವತವಾಗಿ ಉಳಿದಿದೆ. ತಾಲೂಕಿನ ಅರಸೀಕೆರೆ- ಕಂಚೀಕೆರೆ ಗ್ರಾಮಗಳ ನಡುವಿನ ರಾಜ್ಯ ಹೆದ್ದಾರಿ 151ರ ರಸ್ತೆಯು ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ಈ ಮಾರ್ಗವು ದಾವಣಗೆರೆ ನಗರಕ್ಕೆ ಸಂಪರ್ಕವಾಗಿರುವುದರಿಂದ ಆಸ್ಪತ್ರೆಗೆ ಮತ್ತು ಮಾರುಕಟ್ಟೆಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಸದಾ ವಾಹನ ಸಂಚಾರದಿಂದ ಕೂಡಿರುವ ಈ ರಸ್ತೆಯು ಹಲವು ವರ್ಷಗಳಿಂದ ಪುನರ್‌ ನಿರ್ಮಾಣವಾಗದೆ ವಾಹನ ಸಂಚಾರರಿಗೆ ತೊಂದರೆಯಾಗಿದೆ ಎಂದು ದೂರಿದರು.

ಈ ಮಾರ್ಗದ ರಸ್ತೆ ಉದ್ದಕ್ಕೂ ದೊಡ್ಡ, ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ತೆರಳುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಹಲವಾರು ಜನರು ಪ್ರಾಣಾಪಾಯ ಮತ್ತು ಇತರೆ ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳು ಮಣ್ಣಿನ ರಾಡಿಯಿಂದ ಕೂಡಿದ್ದು, ಅನೇಕ ಅಪಘಾತಕ್ಕೆ ಕಾರಣವಾಗುತ್ತಿದೆ. ಇಂತಹ ಗಂಭೀರ ಸಮಸ್ಯೆಯನ್ನು ಮನಗಂಡು ಹಲವಾರು ಬಾರಿ ಹೋರಾಟ ಮಾಡಲಾಗಿದೆ. ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವಾರು ತಿಂಗಳು ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ರಸ್ತೆಯೇ ಸಾಕ್ಷಿಯಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಎಂ.ಲಿಂಗಪ್ಪ ಮತ್ತು ಉಪ ತಹಶೀಲ್ದಾರ್‌ ಫಾತಿಮ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆ ಎಇಇ ಎಂ.ಲಿಂಗಪ್ಪ ಅವರು 15 ದಿನದೊಳಗೆ ರಸ್ತೆ ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.

Advertisement

ಎಐವೈಎಫ್‌ ರಾಜ್ಯ ಸಂಚಾಲಕ ಎಚ್.ಎಂ. ಸಂತೋಷ್‌, ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್‌, ಎಐಎಸ್‌ಎಫ್‌ ರಾಜ್ಯ ಸಹ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್‌, ಕೋಟ್ರೇಶ್‌, ಕಂಚೀಕೆರೆ ಎಸ್‌. ಸುರೇಶ್‌, ಮುಖಂಡರಾದ ಎಂ.ಬಿ. ಅಂಜಿನಪ್ಪ, ಟಿ.ಕೆಂಚಪ್ಪ, ಕೆ.ಟಿ. ಮಂಜುನಾಥ, ಕೆ. ಜಕಣಾಚಾರಿ, ಕೆ.ಕಾಳಿಂಗಪ್ಪ, ಮಹಬೂಬ್‌, ಪಿ.ಹನುಮಂತಪ್ಪ, ಎಸ್‌.ಸುರೇಶ್‌, ಜಿ.ಹಾಲೇಶ್‌, ಡಿ.ಪಕ್ಕೀರಪ್ಪ, ಹಾಲೇಶ್‌, ಕೆ.ಪ್ರಭು, ಟಿ.ಬಸವರಾಜ್‌, ಎ.ಅಸಲಾಂ, ಜಿ.ಪ್ರವೀಣ, ನಾಗರಾಜ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next