Advertisement

ಟಿಕೆಟ್ ಪಡೆಯಲು ಆಕಾಂಕ್ಷಿಗಳ ಕಸರತ್ತು

11:40 AM May 10, 2019 | Naveen |

ಹರಪನಹಳ್ಳಿ: ಲೋಕಸಭೆ ಚುನಾವಣೆಯ ಜಿದ್ದಾಜಿದ್ದಿ ಕೊನೆಗೊಂಡ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಪುರಸಭೆಯ ಗದ್ದುಗೆ ಏರಲು ಪೈಪೋಟಿಗಿಳಿದರೆ, ಸ್ಪರ್ಧಾಕಾಂಕ್ಷಿಗಳು ಪುಟಿದೇಳುವ ಮೂಲಕ ಮತ್ತೂಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿಗೆ ಕಣ ಸಿದ್ಧವಾಗಿದೆ.

Advertisement

ಕಳೆದ ಪುರಸಭೆ ಚುನಾವಣೆಯಲ್ಲಿ ಒಟ್ಟು 27 ಸ್ಥಾನಗಳಲ್ಲಿ 7 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ಕಾಂಗ್ರೆಸ್‌ ಪಕ್ಷವು ಬಿಎಸ್ಸಾರ್‌, ಕೆಜೆಪಿ, ಪಕ್ಷೇತರ ಬೆಂಬಲದೊಂದಿಗೆ ಪಕ್ಷದ ಆಂತರಿಕ ಒಪ್ಪಂದದಂತೆ 3 ಜನ ಅಧ್ಯಕ್ಷರೊಂದಿಗೆ ಆಡಳಿತ ನಡೆಸಿತ್ತು. ನಂತರ ಬದಲಾದ ರಾಜಕೀಯ ಚಿತ್ರಣದಲ್ಲಿ ಬಿಜೆಪಿ ಅಧಿಕಾರದ ಗದ್ದುಗೇರಿ ಅಧಿಕಾರ ಅವಧಿ ಪೂರ್ಣಗೊಳಿಸಿದೆ. ಇದೀಗ ಪುನಃ ಬಿಜೆಪಿ ಮತ್ತು ಕಾಂಗ್ರೆಸ್‌ ಅಧಿಕಾರ ಪಡೆಯಲು ಹವಣಿಸುತ್ತಿವೆ.

ಆಕಾಂಕ್ಷಿಗಳ ದಂಡು: ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳಾಗಲು ಆಕಾಂಕ್ಷಿಗಳ ದಂಡು ಹೆಚ್ಚಾಗಿದೆ. ಪ್ರತಿ ವಾರ್ಡ್‌ಗಳಿಗೂ ಕನಿಷ್ಠ ಇಬ್ಬರಿಂದ ಮೂವರು ಆಕಾಂಕ್ಷಿಗಳಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇಂತಹ ವಾರ್ಡ್‌ನ ಪ್ರಬಲ ಆಕಾಂಕ್ಷಿ ಎಂದು ತಮ್ಮ ಮತ್ತು ಮುಖಂಡರ ಫೋಟೋ ಸಹಿತ ಹಾಕುತ್ತಿದ್ದಾರೆ. ಟಿಕೆಟ್ ಪಕ್ಕಾ ಎನ್ನುವಂತಹವರು ಆಯಾ ವಾರ್ಡ್‌ಗಳಲ್ಲಿ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಟಿಕೆಟ್ ನೀಡುವ ವಿಚಾರವು ಆಯಾ ಪಕ್ಷಗಳ ನಾಯಕರು, ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ. ನಾಮಪತ್ರ ಸಲ್ಲಿಸಲು ಮೇ 16 ಕೊನೆ ದಿನವಾಗಿದ್ದು, ಸ್ವಲ್ಪ ಯಾಮಾರಿದರೂ ಬೇರೆ ಯಾರಾದರೂ ಲಾಬಿ ಮಾಡಿ ಟಿಕೆಟ್ ಗಿಟ್ಟಿಸಿ ಬಿಡುತ್ತಾರೆ ಎಂಬ ಆತಂಕ ಆಕಾಂಕ್ಷಿಗಳಲ್ಲಿ ಇದೆ. ಹೀಗಾಗಿ ಸ್ಥಳೀಯ ಶಾಸಕರು, ಸಚಿವರು ಸೇರಿದಂತೆ ಮುಖಂಡರ ಮೇಲೆ ಒತ್ತಡ ಹೇರಿ ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾರೆ.

ಮೀಸಲಾತಿ ಬದಲು: ಹಾಲಿ ಸದಸ್ಯರ ವಾರ್ಡ್‌ಗಳಲ್ಲಿ ಮೀಸಲಾತಿ ಬಹುತೇಕ ಬದಲಾಗಿದೆ. ಹೀಗಾಗಿ ತಮ್ಮ ವಾರ್ಡ್‌ಗಳಲ್ಲೇ ಸ್ಪರ್ಧೆ ಮಾಡುವ ಅವಕಾಶ ಹಾಲಿಗಳಿಗೆ ಇಲ್ಲ.

ನೆರೆಹೊರೆಯ ಅಥವಾ ತಮ್ಮ ವರ್ಗಕ್ಕೆ ಅನುಕೂಲವಾಗಿರುವ ವಾರ್ಡ್‌ಗಳ ಮೇಲೆ ಹಾಲಿಗಳ ಕಣ್ಣು ಬಿದ್ದಿದೆ. ದೂರದ ವಾರ್ಡ್‌ ಆದರೂ ಪರವಾಗಿಲ್ಲ. ನಮಗೇ ಟಿಕೆಟ್ ಇರಲಿ ಎಂದು ಪಟ್ಟು ಹಿಡಿದು ಲಾಬಿ ನಡೆಸುವ ಯತ್ನವೂ ನಡೆದಿದೆ.

Advertisement

ಹಿರಿಯರು ಮತ್ತು ಯುವಕರನ್ನು ಸಮತೋಲದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅಗಲಿಕೆ ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಾಮಿಸಿದೆ. ಬಹುತೇಕ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ನಾಯಕರು ಮುಖಂಡರ ಸಭೆ ನಡೆಸಿಯೇ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆಗಳಿವೆ. ಆದರೆ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಮತ ಭುಗಿಲೇಳುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ. ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಕರುಣಾಕರರೆಡ್ಡಿ ಶಾಸಕರಾಗಿರುವುದರಿಂದ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ಅದರ ಸದುಪಯೋಗ ಪಡೆದುಕೊಂಡು ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಸಿದ್ಧತೆ ನಡೆಸಿದೆ. ಅಧಿಕಾರದಿಂದ ವಂಚಿತವಾದ ಕಾಂಗ್ರೆಸ್‌ ಪಕ್ಷವು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಾರಥ್ಯದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಮತ್ತೂಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಿದ್ದು, ವಾರ್ಡನ ಹಿರಿಯರು, ಪಕ್ಷದ ಪ್ರಮುಖರು ಸೂಚಿಸುವ ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕಿಳಿಸಲು ರಣತಂತ್ರ ರೂಪಿಸುತ್ತಿದೆ.

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next