ಹರಪನಹಳ್ಳಿ: ಎಂ.ಪಿ.ರವೀಂದ್ರ ಪ್ರತಿಷ್ಠಾನ, ರವಿ ಯುವ ಶಕ್ತಿ ಪಡೆ ಹಾಗೂ ಎಂ.ಪಿ.ಪ್ರಕಾಶ್ ಮತ್ತು ಎಂ.ಪಿ.ರವೀಂದ್ರ ಅಭಿಮಾನಿ ಬಳಗದ ಸಹಯೋಗದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ತಾಲೂಕಿನ 5 ಗ್ರಾಮದ ಹಳ್ಳಿಯ ಜನರ ಮನೆ ಮನೆಗೆ ತೆರಳಿ ಸಿಹಿ ವಿತರಿಸಿದರು.
ತಾಲೂಕಿನ ಕಡಬಗೆರೆ, ಹಿಕ್ಕಿಂಗೇರೆ, ಜೋಷಿ ಲಿಂಗಾಪುರ, ಕಸವನಹಳ್ಳಿ, ಪಾವನಪುರ ಗ್ರಾಮಗಳ ಒಟ್ಟು 1500ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಗೌರಿ-ಹಬ್ಬದ ಅಂಗವಾಗಿ ಕಡೂಬು ಮತ್ತು ಬಟ್ಟಲು ಉಡುಗೊರೆಯಾಗಿ ನೀಡಲಾಗಿದೆ.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹಬ್ಬಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೇ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಉಂಟು ಮಾಡಲು ಶಕ್ತವಾಗುತ್ತದೆ. ವ್ಯಕ್ತಿ ಕೇವಲ ಬಾಹ್ಯ ಬದಲಾವಣೆಯಿಂದ ಅಭಿವೃದ್ಧಿ ಸಾಧಿಸಿದರೆ ಸಾಲದು ಪರಸ್ಪರ ಗೌರವಿಸುವ, ಪ್ರೀತಿಸುವ, ಆದರಿಸುವ, ಸತ್ಕರಿಸುವ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯ. ಇದು ಸಾಧ್ಯವಾಗಬೇಕಿದ್ದಲ್ಲಿ ಇಂಥ ಹಬ್ಬಗಳಿಂದ ಮಾತ್ರ ಸಾಧ್ಯ ಎಂದರು.
ತಾಪಂ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಮಲ್ಲಿಕಾರ್ಜುನ್, ಬಸವರಾಜ್, ಕವಿತಾ ಸುರೇಶ್, ಶಮೀವುಲ್ಲಾ, ನೇತ್ರಾವತಿ, ಉದಯಶಂಕರ್, ಮತ್ತೂರು ಬಸವರಾಜ್, ಹಿಕ್ಕಿಂಕೇರಿ ಕೆಂಚಪ್ಪ, ಪಾವನಪುರ ತಿಮ್ಮಣ್ಣ, ಜೋಶಿಲಿಂಗಾಪುರ ಲಕ್ಷ್ಮಣ, ಏಕಾಂತಪ್ಪ, ಬುಳ್ಳಪ್ಪ ಇತರರು ಹಾಜರಿದ್ದರು.