Advertisement

ಹರಕೆಹೊತವರ ಬೆನ್ನ ಮೇಲೆ ಪೂಜಾರಿ ನಡಿಗೆ

05:28 PM Dec 23, 2019 | Naveen |

ಹರಪನಹಳ್ಳಿ: ದೇವರ ಕೇಲುಗಳನ್ನು ಹೊತ್ತ ಪೂಜಾರಿಗಳ ಪಾದಸ್ಪರ್ಶದಿಂದ ಖಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿಂದ ಭಾನುವಾರ ಬೆಳಗ್ಗೆ ಮೈಕೊರೆಯುವ ಚಳಿಯಲ್ಲೂ ಸಾಲಾಗಿ ಮಲಗಿದ್ದ ಸಹಸ್ರಾರು ಭಕ್ತರ ಬೆನ್ನ ಮೇಲೆ ಪೂಜಾರಿಗಳು ನಡೆದುಕೊಂಡು ಹೋಗುವ ವಿಶಿಷ್ಟ ಆಚರಣೆ ನಡೆಯಿತು.

Advertisement

ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಪ್ರತಿ ವರ್ಷ ಜರುಗುವ ದಂಡಿನ ದುರುಗಮ್ಮದೇವಿ ಜಾತ್ರೆ ಅಂಗವಾಗಿ ಭಾನುವಾರ ಬೆಳಗಿನ ಜಾವ ದೇವಸ್ಥಾನದಿಂದ ದಂಡಿನ ದುರುಗಮ್ಮದೇವಿಯನ್ನು 2 ಕಿ.ಮೀ. ದೂರವಿರುವ ಹೊಳೆ(ಹೊಂಡ) ಗಂಗಾ ಪೂಜೆ ಮುಗಿಸಿಕೊಂಡು ದೇವಿಯ ಕೇಲು (ಪೂಜಾ ಸಾಮಗ್ರಿಗಳುಳ್ಳ ಮಡಿಕೆ) ಹೊತ್ತ ಇಬ್ಬರು ಪೂಜಾರಿಗಳು ದಾರಿ ಮಧ್ಯೆ ಸಾಗಿದಾಗ ಬೋರಲಾಗಿ ಮಲಗಿದ್ದ ಎಲ್ಲ ಜಾತಿಯ ಭಕ್ತರ ಮೈಮೇಲೆ ನಡೆಯುತ್ತ ಮುಂದೆ ಸಾಗಿದರು.

ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ದಂಡಿನ ದುರುಗಮ್ಮ ದೇವಿಯು ಹೊಳೆ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಹಿಂದಿರುವಾಗ ದೇವಿಗೆ ಅಪಾರ ಸಂಖ್ಯೆಯಲ್ಲಿ ಬಲಿ ಕೊಡಲಾಗುತ್ತಿದ್ದ ಪದ್ಧತಿಗೆ ಪೊಲೀಸರು ಬ್ರೇಕ್‌ ಹಾಕಿದ್ದರು. ದೇವಿಯ 3 ದಿನದ ಜಾತ್ರೆಯಲ್ಲಿ ದೇವಸ್ಥಾನಕ್ಕೆ ಬಂದ ಅಕ್ಕಿ, ಹಾಲು, ಮೊಸರು ಶೇಖರಿಸಲಾಗಿತ್ತು.

ಭಾನುವಾರ ಸಂಜೆ ವೇಳೆಗೆ ಜಾತಿ, ಮತ, ಮೇಲು-ಕೀಳು ಎನ್ನದೇ ದೇವಸ್ಥಾನದ ಮುಂಭಾಗ ಆವರಣದಲ್ಲಿ ದುರ್ಗಿಯರ ಊಟ ಎನ್ನುವ ಹೆಸರಿನಲ್ಲಿ ಎಲ್ಲ ಸಮುದಾಯವರು ಸಹಪಂಕ್ತಿಯಲ್ಲಿ ಪ್ರಸಾದ ಸೇವಿಸುವುದು ಜಾತ್ರೆ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next