Advertisement

ಲೋಕಾ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

05:26 PM Sep 06, 2019 | Naveen |

ಹರಪನಹಳ್ಳಿ: ಪಟ್ಟಣದ ತಾಲೂಕು ಕಚೇರಿ ರಾಜೀವಗಾಂಧಿ ಸಭಾಂಗಣದಲ್ಲಿ ಗುರುವಾರ ಲೋಕಾಯುಕ್ತ ಸಿಪಿಐ ವಂಸತ್‌ ವಿ.ಅಸೋದೆ ಮತ್ತು ಏರಿಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ನಂತರ ಸಭೆ ನಡೆಸಿದರು.

Advertisement

ಹಾರಕನಾಳು, ಗುಂಡಗತ್ತಿ ಗ್ರಾಮ ಪಂಚಾಯಿತಿ, ಪುರಸಭೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 10 ದೂರು ಸಲ್ಲಿಕೆಯಾದವು. ಹಗರಿಗಜಾಪುರ ಗ್ರಾಮದ ರೈತ ಸುರೇಶ್‌ 1968ರಿಂದಲೂ ನಾನು ಭೂಮಿ ಉಳಿಮೆ ಮಾಡುತ್ತ ಬಂದಿದ್ದೇನೆ. ಆದರೆ ಈಗ ಏಕಾಏಕಿ ಬೇರೆಯವರ ಹೆಸರಿಗೆ ಬದಲಾವಣೆಯಾಗಿದೆ ಎಂದು ದೂರಿದಾಗ ನಾವು ಕಾನೂನು ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಿದ್ದೇವೆ. ನಿಮಗೆ ಯಾವುದೇ ರೀತಿ ಅನುಮಾನಗಳು ಇದ್ದಲ್ಲಿ ಮೇಲಧಿಕಾರಿಗಳಿಗೆ ದೂರು ನೀಡಬಹುದು ಎಂದು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಸಮಜಾಯಿಷಿ ನೀಡಿದರು.

ಹಾರಕನಾಳು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಶಶಿಕುಮಾರನಾಯ್ಕ, ಗ್ರಾಪಂ ಉಪಾಧ್ಯಕ್ಷ ನಾಗರಾಜ್‌ ಅವರು, ಹಾರಕನಾಳು ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ 14ನೇ ಹಣಕಾಸು ಯೋಜನೆಯ 23ರಿಂದ 24ಲಕ್ಷರೂ. ಕ್ರಿಯಾಯೋಜನೆಗೆ ಅನುಮೋದನೆಗೆ ಕಳಿಸಿದ್ದೇವೆ. ಆದರೆ ಇಲ್ಲಿಯವರಿಗೂ ಬಳ್ಳಾರಿ ಜಿಲ್ಲೆಯ ಸಿಇಓ ನಮಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ಚುನಾಯಿತ ಪ್ರತಿನಿಧಿಗಳನ್ನು ಹಾಗೂ ಸಾರ್ವಜನಿಕರನ್ನು ಅನುಮಾನಸ್ಪದವಾಗಿ ನೋಡುತ್ತಾರೆ ಎಂದು ದೂರಿದರು.

ನೀವು ನಮಗೆ ದೂರು ನೀಡಿ, ನಾವು ಸಿಇಓ ಅವರ ಜೊತೆ ಮಾತನಾಡುತ್ತೇವೆ. ನೀವು ಯಾವುದೇ ಕೆಲಸ ಕಾರ್ಯಕ್ರಮಗಳನ್ನು ಮಾಡಿದರೂ ಸಾರ್ವಜನಿಕರಿಗೆ ಅನುಕೂಲವಾಗುವಂಥ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ಲೋಕಯುಕ್ತ ಸಿಪಿಐ ವಸಂತ ವಿ. ಅಸೋಧೆ ಪ್ರತಿಕ್ರಿಯೆ ನೀಡಿದರು. ಮಧ್ಯ ಪ್ರವೇಶಿಸಿದ ತಾಪಂ ಇಓ ಮಮತ ಹೊಸಗೌಡರ್‌ ಅವರು, 14ನೇ ಹಣಕಾಸು ಅನುದಾನ ಈ ಹಿಂದೆ ಹರಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆಯಲ್ಲಿದ್ದಾಗ ವರ್ಷಕ್ಕೆ ಒಂದು ಭಾರಿ ಹಣ ಬಿಡುಗಡೆ ಆಗುತ್ತಿತ್ತು. ಆದರೆ ಈಗ ತಾಲೂಕು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿರುವುದರಿಂದ 14ನೇ ಹಣಕಾಸು ಅನುದಾನ ವರ್ಷಕ್ಕೆ ಎರಡು ಭಾರಿ ಬಿಡುಗಡೆಯಾಗುತ್ತಿದೆ. ಆ ಅನುದಾನದಲ್ಲಿ ಗ್ರಾಮೀಣ ಭಾಗದಲ್ಲಿರುವ ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ತೋಗರಿಕಟ್ಟಿ ಗ್ರಾಮ ಪಂಚಾಯಿತಿ ಗೋವೇರಹಳ್ಳಿ ರಮೇಶ್‌ ಅವರು ನಮ್ಮ ಗ್ರಾಮದ ರುದ್ರಭೂಮಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಲಿಖೀತವಾಗಿ ದೂರು ನೀಡಿದರೆ ಮಾತ್ರ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ. ಇಲ್ಲವಾದಲ್ಲಿ ಏನು ಮಾಡಲು ಸಾಧ್ಯವಾಗಲ್ಲ ಎಂದು ಲೋಕಾಯುಕ್ತ ಸಿಪಿಐ ವಸಂತ ವಸೋದೆ ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌, ಲೋಕಾಯುಕ್ತ ಸಿಪಿಐ ಏರಿಸ್ವಾಮಿ, ಇಓ ಮಮತ ಹೊಸಗೌಡರ್‌, ಉಪತಹಶೀಲ್ದಾರ್‌ ರವಿ, ಹನುಮಂತಪ್ಪ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next