Advertisement

ಕರಕುಶಲ ವಸ್ತು ಪ್ರದರ್ಶನ

11:36 AM Oct 26, 2018 | |

ಮೈಸೂರು: ಕರಕುಶಲ ಕರ್ಮಿಗಳಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನಗರದ ಜೆಎಸ್‌ಎಸ್‌ ಅರ್ಬನ್‌ಹಾತ್‌ನಲ್ಲಿ ಅ.26ರಿಂದ ನ.4ರವರೆಗೆ ಗಾಂಧಿ ಶಿಲ್ಪ ಬಜಾರ್‌ ಕರಕುಶಲ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಕರಕುಶಲ ಸೇವಾ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕ ಪಿ.ಶಶಿಧರ್‌ ತಿಳಿಸಿದರು. 

Advertisement

ದೆಹಲಿಯ ಕರಕುಶಲ ಅಭಿವೃದ್ಧಿ ಆಯುಕ್ತರ ಕಾರ್ಯಾಲಯ, ವಸ್ತ್ರ ಮಂತ್ರಾಲಯ ಹಾಗೂ ಜೆಎಸ್‌ಎಸ್‌ ಅರ್ಬನ್‌ ಹಾತ್‌ ಏರ್ಪಡಿಸಿರುವ ವಸ್ತುಪ್ರದರ್ಶನದಲ್ಲಿ ದೇಶದ ವಿವಿಧ ರಾಜ್ಯಗಳ ನೂರು ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಕುಶಲಕರ್ಮಿಗಳು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸುವುದು ವಸ್ತು ಪ್ತದರ್ಶನದ ಉದ್ದೇಶವಾಗಿದೆ. ಹತ್ತು ದಿನಗಳ ಕಾಲ ನಡೆಯುವ ವಸ್ತುಪ್ರದರ್ಶನ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಕಲಾಕೃತಿಗಳ ವೈಭವ: ಅರ್ಬನ್‌ ಹಾತ್‌ನಲ್ಲಿ ನಡೆಯುತ್ತಿರುವ ಗಾಂಧಿ ಶಿಲ್ಪ ಬಜಾರ್‌ ವಸ್ತುಪ್ರದರ್ಶನದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಟೆರ್ರಾಕೋಟಾ, ಪೇಪರ್‌ ಮೆಷೀ, ರತ್ನ ಕಂಬಳಿ, ಹತ್ತಿ ಜಮಕಾನೆ, ಅನುಕರಣೆ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಕಲಾಂಕರಿ ಚಿತ್ರಕಲೆ, ಚರ್ಮದ ವಸ್ತುಗಳು, ತಂಜಾವೂರು ಮತ್ತು ಮೈಸೂರು ಶೈಲಿಯ ಚಿತ್ರಕಲೆ ಸೇರಿದಂತೆ ಛತ್ತೀಸ್‌ಗಡ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತಿತರ ಕಡೆಗಳ ಆಕರ್ಷಕ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುತ್ತದೆ ಎಂದು ತಿಳಿಸಿದರು. 

ಇಂದು ಉದ್ಘಾಟನೆ: ನಗರದಲ್ಲಿ ನಡೆಯುವ ಗಾಂಧಿ ಶಿಲ್ಪ ಬಜಾರ್‌ ವಸ್ತು ಪ್ರದರ್ಶನವನ್ನು ಶುಕ್ರವಾರ ಸಂಜೆ 4ಕ್ಕೆ  ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ಉದ್ಘಾಟಿಸುವರು. ಇವರೊಂದಿಗೆ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರಮಠ, ಹಣಕಾಸು ಅಧಿಕಾರಿ ಎಸ್‌.ಪುಟ್ಟಸ್ವಾಮಿ, ಪತ್ರಕರ್ತ ರವಿ ಹೆಗಡೆ, ಪ್ರಮುಖರಾದ ಡಾ.ಸಿ. ರಂಗನಾಥಯ್ಯ, ಬಿ.ಆರ್‌.ಉಮಾಕಾಂತ್‌ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next